ಬಸವಣ್ಣನವರ ಆಶಯದಂತೆ ನಡೆಯಿರಿ,ಮೌಡ್ಯ ತೊರೆಯಿರಿ:ಸಿಎಂ ಕರೆ

ಮೈಸೂರು: ಬಸವಣ್ಣನವರ ಆಶಯಗಳೆಲ್ಲಾ ನಮ್ಮ ಸಂವಿಧಾನದಲ್ಲಿ ಅಡಕವಾಗಿವೆ. ಇದನ್ನು ಇಡೀ ಸಮಾಜ ಅರಿತುಕೊಳ್ಳಬೇಕು
ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.

ಸಿಎಂ,ಮೈಸೂರು ಸುತ್ತೂರಿನ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಗದ್ದುಗೆ ದರ್ಶನ ಪಡೆದರು.

ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಬಸವಣ್ಣನವರ ಆಶಯದಂತೆ ಜಾತಿ, ಧರ್ಮದ ಹೆಸರಿನ ಮನುಷ್ಯ ತಾರತಮ್ಯ ಹಾಗೂ ಮೌಡ್ಯಗಳನ್ನು ತೊರೆಯಬೇಕು ಎಂದು ತಿಳಿಸಿದರು.

ನಾನು ವೈಯುಕ್ತಿಕವಾಗಿ ಬಸವಣ್ಣನವರ ಅಪ್ಪಟ ಹಿಂಬಾಲಕ,ಹಾಗಾಗಿಯೇ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಫೋಟೋ ಕಡ್ಡಾಯಗೊಳಿಸಿದೆ ಎಂದು ಸಿದ್ದು ತಿಳಿಸಿದರು.

ವಿದ್ಯಾವಂತರೂ ಕರ್ಮ‌ಸಿದ್ಧಾಂತವನ್ನು ಆಚರಿಸುವ ದುರಂತವನ್ನು ನಾವು ಕಾಣುತ್ತೇವೆ. ಯಾವ ದೇವರೂ ಬಡವನಾಗಿರು, ಹಸಿದುಕೊಂಡಿರು, ಹರಿದ ಬಟ್ಟೆಯಲ್ಲಿರು ಎಂದು ಹಣೆಬರಹ ಬರೆಯುವುದಿಲ್ಲ. ಇಂತಹ ಮೌಡ್ಯವನ್ನು ವಿದ್ಯಾವಂತರೂ ಆಚರಿಸುತ್ತಿದ್ದಾರೆ. ಹೀಗೆ ಮಾಡಿದರೆ ಅವರ ವಿದ್ಯೆಗೆ ಗೌರವ ಬರುತ್ತಾ ಎಂದು ಸಿಎಂ ಪ್ರಶ್ನಿಸಿದರು.

ಜಾತಿ ಆಧಾರದಲ್ಲಿ ಮನುಷ್ಯನ ಯೋಗ್ಯತೆ ಅಳೆಯುವ ಪದ್ಧತಿಯನ್ನು ನಮ್ಮ ಸಂವಿಧಾನ ವಿರೋಧಿಸಿತು. ಪ್ರತಿಭೆ ಮತ್ತು ಸಾಮರ್ಥ್ಯ ಪ್ರತಿಯೊಬ್ಬರ ಸ್ವತ್ತು. ಅವಕಾಶಗಳು ಸಿಗಬೇಕಷ್ಟೆ. ಅವಕಾಶ ಸಿಕ್ಕಾಗ ಎಲ್ಲರ ಪ್ರತಿಭೆಯೂ ಹೊರಗೆ ಬರುತ್ತವೆ. ಇದಕ್ಕೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

ಸುತ್ತೂರು ಮಠ ಶಿಕ್ಷಣ ಮತ್ತು ಅನ್ನ ದಾಸೋಹ ನಡೆಸುತ್ತಾ ಇಡೀ ಸಮಾಜದ ಆಸ್ತಿಯಾಗಿದೆ. ಜಾತ್ಯತೀತ ಮೌಲ್ಯಗಳು ಸುತ್ತೂರು ಮಠದ ಮೌಲ್ಯಗಳೂ ಆಗಿವೆ ಎಂದು ಮುಖ್ಯ ಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಯಕ ಮತ್ತು ದಾಸೋಹ ಎರಡೂ ಬಸವಾದಿ ಶರಣರ ಆಶಯವಾಗಿತ್ತು. ಕಾಯಕ ಅಂದ್ರೆ ಉತ್ಪತ್ತಿ, ದಾಸೋಹ ಅಂದರೆ ವಿತರಣೆ ಎಂದು ಸಿಎಂ ವಿಶ್ಲೇಷಿಸಿದರು.

ಬರಿ ಬಾಯಿ ಮಾತಿನಲ್ಲಿ ಬಸವಣ್ಣ ಮತ್ತು ಅಂಬೇಡ್ಕರ್ ಅವರ ಆಶಯಗಳು ಜಾರಿ ಆಗುವುದಿಲ್ಲ. ಆಶಯಗಳಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಬೇಕು ಈ ಉದ್ದೇಶದಿಂದಲೇ ನಾವು ಗ್ಯಾರಂಟಿಗಳನ್ನು ಜಾರಿಗೊಳಿಸಿದೆವು ಸಿದ್ದರಾಮಯ್ಯ ತಿಳಿಸಿದರು.

ಬಡವರ ಆರ್ಥಿಕ ಅಸಹಾಯಕತೆಯನ್ನು ಶೋಷಿಸುವ ಮೈಕ್ರೋ ಫೈನಾನ್ಸ್ ಗಳ ಅತಿರೇಕದ ವಸೂಲಿ ನಿಯಂತ್ರಿಸಲು ಸುಗ್ರೀವಾಜ್ಞೆ ಮೂಲಕ ಕಠಿಣ ಕಾನೂನು ತರುತ್ತಿದ್ದೇವೆ ಎಂದು ಸಿದ್ದರಾಮಯ್ಯ ಕಡಕ್ಕಾಗಿ ಹೇಳಿದರು.

ಮೈಕ್ರೋ ಫೈನಾನ್ಸ್ ಗಳ ವಸೂಲಿ ಕ್ರಮಕ್ಕೆ ದಯವಿಟ್ಟು ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ,ಸರ್ಕಾರ ನಿಮ್ಮ ಜೊತೆಗಿದೆ ತೊಂದರೆ ಕೊಟ್ಟರೆ ಕಂಪ್ಲೇಂಟ್ ಕೊಡಿ,ತಕ್ಷಣ ಕಾನೂನು ಕ್ರಮ ತೆಗೆದುಕೊಳ್ಳುತೇವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ಬಸವಣ್ಣನವರ ಆಶಯದಂತೆ ನಡೆಯಿರಿ,ಮೌಡ್ಯ ತೊರೆಯಿರಿ:ಸಿಎಂ ಕರೆ Read More

ಬಸವಣ್ಣನವರ ಬಗ್ಗೆ ಯತ್ನಾಳ್ ಹೇಳಿಕೆಖಂಡಿಸಿದ:ಬಸವಯೋಗಿ ಪ್ರಭು ಸ್ವಾಮೀಜಿ

ಮೈಸೂರು: ಬಸವನಗೌಡ ಪಾಟೀಲ್ ಯತ್ನಾಳ ಎಂದು ಹೆಸರಿಟ್ಟುಕೊಂಡು ಬಸವಣ್ಣನವರ ಆಳ ಗೊತ್ತಿಲ್ಲದೆ ಅವರ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಶ್ರೀ ಬಸವಯೋಗಿಪ್ರಭುಸ್ವಾಮೀಜಿ ಎಚ್ಚರಿಸಿದ್ದಾರೆ.

ಪುರೋಹಿತ ಷಾಹಿಗಳ ಹಿಂಬಾಲಕರಂತೆ ಕಲ್ಯಾಣದ ಶರಣರಿಗೆ ಹಿಂಸೆ ಕೊಟ್ಟವರೊಂದಿಗೆ ಸೇರಿಕೊಂಡು ಲಿಂಗಾಯತ ಧರ್ಮದ ವಿರೋಧಿ ಬಸವನಗೌಡ ಪಾಟೀಲ್ ಯತ್ನಾಳ ರಾಜಕೀಯ ತೆವಲಿಗಾಗಿ ದ್ವೇಷದ ಹೇಳಿಕೆಗಳನ್ನು ನೀಡಿ ಮಾನವರ ನಡುವೆ ಸಂಘರ್ಷ ಹುಟ್ಟಿಸುವ ಮತ್ತು ಪ್ರಚೋದನಾ ಹೇಳಿಕೆ ನೀಡುತ್ತಿರುವ ಯತ್ನಾಳ ಬಸವಣ್ಣನವರ ಬಗ್ಗೆ ನೀಡಿರುವ ಹೇಳಿಕೆಯನ್ನು ಹಿಂಪಡೆಯುವ ಮೂಲಕ ನಾಡಿನ ಜನರಲ್ಲಿ ಕ್ಷಮೆ ಕೇಳಬೇಕು ಎಂದು
ಸ್ವಾಮೀಜಿ ಆಗ್ರಹಿಸಿದ್ದಾರೆ.

ಬಸವನಗೌಡ ಪಾಟೀಲ್ ಯತ್ನಾಳ್ ರ ನಾಲಿಗೆ ಜೊತೆ ಮೆದುಳು ಹಾಳಾಗಿರಬಹುದು ಎನಿಸುತ್ತಿದೆ, ಆದ್ದರಿಂದಲೇ ವಿಶ್ವಗುರು ಬಸವಣ್ಣನವರು ನದಿಗೆ ಜಿಗಿದರು ಎಂಬಂತೆ ಬುದ್ದಿಹೀನನಾಗಿ ಮಾತನಾಡಿದ್ದಾರೆ ಎಂದು
ಶ್ರೀ ಬಸವಯೋಗಿ ಪ್ರಭುಸ್ವಾಮೀಜಿ ಕಿಡಿಕಾರಿದ್ದಾರೆ.

ನಿಮ್ಮ ನಿಮ್ಮ ದ್ವೇಷದ ರಾಜಕಾರಣಕ್ಕಾಗಿ ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡುವುದು ಯತ್ನಾಳರಿಗೆ ಶೋಭೆ ತರುವುದಿಲ್ಲ, ಅಹಂಕಾರ ಹೆಚ್ಚಾದಾಗ ಜ್ಞಾನ ಹಾಳಾಗುತ್ತದೆ ಯಾತ್ನಾಳರಿಗೂ ನಾನತ್ವ ಹೆಚ್ಚಾಗಿ ಜ್ಞಾನ ಕೆಟ್ಟು ಅಜ್ಞಾನ ತುಂಬಿದೆ ಎನಿಸುತ್ತಿದೆ,ಕೂಡಲೆ ತಮ್ಮ ತಪ್ಪನ್ನು ತಿದ್ದಿಕೊಂಡು ನಾಡಿನ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಸ್ವಾಮೀಜಿ ಒತ್ತಾಯಿಸಿದ್ದಾರೆ.

ಬಸವಣ್ಣನವರ ಬಗ್ಗೆ ಯತ್ನಾಳ್ ಹೇಳಿಕೆಖಂಡಿಸಿದ:ಬಸವಯೋಗಿ ಪ್ರಭು ಸ್ವಾಮೀಜಿ Read More