ಆಯುಷ್ಮಾನ್ ವ್ಯಾಪ್ತಿಗೆ ಹೃದಯಾಘಾತ, ಪಾರ್ಶ್ವವಾಯುಗೆ ಚಿಕಿತ್ಸೆ ತರಲು ಹೆಚ್.ಡಿ.ಡಿ ಒತ್ತಾಯ

ನವದೆಹಲಿ: ಆಯುಷ್ಮಾನ್ ಭಾರತ್ ಕಾರ್ಯಕ್ರಮದಡಿಯಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯುಗೆ ಚಿಕಿತ್ಸೆ ಪಡೆಯಲು ರಾಷ್ಟ್ರವ್ಯಾಪಿ ಯೋಜನೆ ರೂಪಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೋರಿದರು‌

ರಾಜ್ಯಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೃದಯಾಘಾತ ಮತ್ತು ಪಾರ್ಶ್ವವಾಯುನಿಂದ ಮರಣ ಹೊಂದುವವರು ಭಾರತದಲ್ಲಿ ಹೆಚ್ಚುತ್ತಿದ್ದಾರೆ. ಪ್ರತಿ ವರ್ಷ ನಾವು ಲಕ್ಷಾಂತರ ಜನರನ್ನು ಕಳೆದುಕೊಳ್ಳುತ್ತಿದ್ದೇವೆ ಮತ್ತು ದುರದೃಷ್ಟವಶಾತ್ ಶೇ.30ರಷ್ಟು ಹೃದಯಾಘಾತಗಳು 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಲ್ಲಿ ಸಂಭವಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶದಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿರುವ ಸಲುವಾಗಿ ತಾಲ್ಲೂಕು ಆಸ್ಪತ್ರೆಗಳಲ್ಲಿ 18,000 ಕ್ಕೆ ರಕ್ತ ಹೆಪ್ಪುಗಟ್ಟುವಿಕೆ ಕರಗಿಸುವ ಇಂಜೆಕ್ಷನ್‌ಗಳು ಲಭ್ಯವಾಗುವಂತೆ ಮಾಡಬೇಕು ಎಂದು
ಗೌಡರು ಮನವಿ ಮಾಡಿದರು.

ಆರಂಭಿಕವಾಗಿ ಆಯುಷ್ಮಾನ್ ಭಾರತ್ ಅಡಿಯಲ್ಲಿ ಆಂಜಿಯೋಪ್ಲ್ಯಾಸ್ಟಿ ಮತ್ತು ಸ್ಟಂಟ್ ಅಳವಡಿಸುವುದಕ್ಕಾಗಿ ರೋಗಿಗಳನ್ನು ಹತ್ತಿರದ ನಗರಗಳಿಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳಿದರು.

ಆಯುಷ್ಮಾನ್ ಭಾರತ್ ಅಡಿಯಲ್ಲಿ ಆಂಜಿಯೋಪ್ಲ್ಯಾಸ್ಟಿ ಒಳಗೊಳ್ಳಲ್ಪಟ್ಟಿದ್ದರೂ ಜೀವ ರಕ್ಷಕ ಔಷಧಿಗಳನ್ನು ಸಹ ಈ ಯೋಜನೆಯಲ್ಲಿ ಸೇರಿಸಬೇಕು ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ಎಂಬಿಬಿಎಸ್ ವೈದ್ಯರ ವೇತನ ಹೆಚ್ಚಳ ಮಾಡುವ‌ ಅಗತ್ಯವಿದೆ ಎಂದು ದೇವೇಗೌಡರು ಒತ್ತಾಯಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಪ್ರೋತ್ಸಾಹ ಧನ ನೀಡಬೇಕು. ಗ್ರಾಮೀಣ ಆರೋಗ್ಯವನ್ನು ನಾವು ಸುಧಾರಿಸದೇ ಇದ್ದರೆ, ನಮ್ಮ ಹಳ್ಳಿಗಳು ಸರಿಯಾದ ವೈದ್ಯಕೀಯ ಆರೈಕೆಯ ಕೊರತೆಯಿಂದ ಬಳಲುತ್ತಲೇ ಇರುತ್ತವೆ ಎಂದು ಎಚ್ಚರಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಮತ್ತು ದಾದಿಯರಿಗೆ ಕಡಿಮೆ ಸಂಬಳದ ಬಗ್ಗೆಯೂ ದೇವೇಗೌಡರು ಸರ್ಕಾರದ ಗಮನ ಸೆಳೆದರು.

ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ರಾಷ್ಟ್ರೀಯ ರೋಗನಿರೋಧಕ ಕಾರ್ಯಕ್ರಮದಲ್ಲಿ ಹೆಚ್ ಪಿ‌ವಿ ಲಸಿಕೆಯನ್ನು ಸೇರಿಸಬೇಕೆಂದು ದೇವೇಗೌಡರು ಮನವಿ ಮಾಡಿದರು.

ಸೇವೆಯಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ಸೇವೆಯನ್ನು ಸುಧಾರಿಸಲು, ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ವಿಶೇಷ ಕೇಂದ್ರಗಳನ್ನು ಸ್ಥಾಪಿಸುವ ಖಾಸಗಿ ಆಸ್ಪತ್ರೆಗಳಿಗೆ ಐದು ವರ್ಷಗಳ ತೆರಿಗೆ ವಿನಾಯಿತಿ ನೀಡುವಂತೆ ದೇವೇಗೌಡರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದರು.

ಆಯುಷ್ಮಾನ್ ವ್ಯಾಪ್ತಿಗೆ ಹೃದಯಾಘಾತ, ಪಾರ್ಶ್ವವಾಯುಗೆ ಚಿಕಿತ್ಸೆ ತರಲು ಹೆಚ್.ಡಿ.ಡಿ ಒತ್ತಾಯ Read More

ಸಂವಿಧಾನ ನನಗೆ ಎಲ್ಲವನ್ನೂ ಕೊಟ್ಟಿದೆ:ದೇವೇಗೌಡರ ಬಾವುಕ ನುಡಿ

ನವದೆಹಲಿ: ಅತ್ಯಂತ ಬಡ ರೈತನ ಮಗನಾದ ನನಗೆ ಈ ದೇಶದ ಸಂವಿಧಾನ ಎಲ್ಲವನ್ನೂ ಕೊಟ್ಟಿದೆ ಎಂದು ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಭಾವುಕರಾಗಿ ನುಡಿದರು.

ಭಾವಪೂರ್ಣವಾಗಿ ಮಾತನಾಡಿದ ಮಾಜಿ ದೇವೇಗೌಡರು, ಸಂವಿಧಾನದ ಬಲದಿಂದಲೇ ನಾನು ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗುವಂತೆ ಆಯಿತು ಎಂದು ಸ್ಮರಿಸಿದರು.

ಸಂವಿಧಾನವನ್ನು ಅಳವಡಿಸಿಕೊಂಡ 75 ವರ್ಷಗಳ ಸಂದರ್ಭದ ಪ್ರಯುಕ್ತ ರಾಜ್ಯಸಭೆಯಲ್ಲಿ ಭಾಷಣ ಮಾಡಿದ ಅವರು, ನಾನು ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಲು ಸಾಧ್ಯವಾಗಿದ್ದರೆ ಅದು ನಮ್ಮ ಸಂವಿಧಾನದಿಂದ ಮಾತ್ರ ಎಂದು ಹೇಳಿದರು.

ಕಳೆದ 75 ವರ್ಷಗಳ ಅವಧಿಯಲ್ಲಿ ಸಂವಿಧಾನದ ಚೌಕಟ್ಟಿನಲ್ಲಿ ಭಾರತದ ಬೆಳೆದ ರೀತಿ, ಮಾಡಿದ ಸಾಧನೆಗಳ ಬಗ್ಗೆ ಮಹತ್ವಪೂರ್ಣ ಅಂಶಗಳನ್ನು ತಿಳಿಸಿದರು.

ಆಧುನಿಕ ಭಾರತವನ್ನು ರೂಪಿಸುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿಯ ಸಂವಿಧಾನ ಅಸಾಧಾರಣ ಕೊಡುಗೆ ನೀಡಿದೆ. ಬಾಬಾ ಸಾಹೇಬರ ನೇತೃತ್ವದಲ್ಲಿ ರಚನೆಯಾದ ನಮ್ಮ ಸಂವಿಧಾನವು ಅನೇಕ ಒತ್ತಡಗಳು ಮತ್ತು ನಮ್ಮ ಕಾಲದ ರಾಜಕೀಯವನ್ನು ತಡೆದುಕೊಂಡು ನಿಂತಿದೆ ಎಂದು ಹೇಳಿದರು.

ತುರ್ತು ಪರಿಸ್ಥಿತಿ ಸಂದರ್ಭವನ್ನು ನೆನಪು ಮಾಡಿಕೊಂಡ ಮಾಜಿ ಪ್ರಧಾನಿಗಳು, ತುರ್ತು ಪರಿಸ್ಥಿತಿಯ ಕಾಲ ಕರಾಳ ಅವಧಿ, ಈ ರಾಷ್ಟ್ರದ ಬಹುತೇಕ ರಾಜಕೀಯ ವಿರೋಧಿಗಳೆಲ್ಲರೂ ಜೈಲು ಪಾಲಾದರು. ಸರಕಾರದ ವಿರುದ್ಧ ಟೀಕೆ ಮಾಡುತ್ತಿದ್ದವರನ್ನೆಲ್ಲ ಜೈಲಿಗೆ ಕಳುಹಿಸಲಾಯಿತು ಎಂದು ತಿಳಿಸಿದರು.

ನನ್ನನ್ನೂ ಜೈಲಿಗೆ ಕಳುಹಿಸಲಾಯಿತು,ನನ್ನ ಸೆರೆವಾಸವು ನನ್ನ ತಂದೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿ ಕುಟುಂಬದ ಮೇಲೆ ಮಾನಸಿಕ ಒತ್ತಡ ಉಂಟು ಮಾಡಿತು. ಅದೇ ನೋವಿನಲ್ಲೇ ತಂದೆಯವರು ವಿಧಿವಶರಾದರು ಎಂದು ದೇವೇಗೌಡರು ಭಾವುಕರಾದರು.

ನಮ್ಮ ಸಂವಿಧಾನ ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದು. ಅಂತಹ ಮಹೋನ್ನತ ಸಂವಿಧಾನವನ್ನು ನಾವು ಹೊಂದಿದ್ದೇವೆ ಎಂದು ದೇವೇಗೌಡರು ಬಣ್ಣಿಸಿದರು.

ನಾನು ಮೊದಲ ಬಾರಿಗೆ 13 ಪಕ್ಷಗಳ ಒಕ್ಕೂಟವನ್ನು ಮುನ್ನಡೆಸಿದ್ದೇನೆ. ಆ ಸರಕಾರದ ಆರ್ಥಿಕ ಸಾಧನೆಯ ಪ್ರಜಾಪ್ರಭುತ್ವದೆಡೆಗಿನ ಹೆಗ್ಗುರುತುಗಳನ್ನು ಗಮನಿಸಿದರೆ ನಮ್ಮ ಸಂವಿಧಾನದ ಶಕ್ತಿ ಎಂತದ್ದು ಎನ್ನುವುದು ಅರ್ಥವಾಗುತ್ತದೆ. ನಾನು ಅನುಸರಿಸಿದ ಸರಳ ನಿಯಮವೆಂದರೆ, ನೀವು ಸಂವಿಧಾನವನ್ನು ನಿಕಟವಾಗಿ ಮತ್ತು ನಿಷ್ಠೆಯಿಂದ ಅನುಸರಿಸಿದರೆ, ನಾವು ದೊಡ್ಡ ತಪ್ಪುಗಳನ್ನು ತಪ್ಪಿಸಬಹುದು ಎಂದು ‌ದೇವೇಗೌಡರು ಅಭಿಪ್ರಾಯ ಪಟ್ಟರು.

ಸಂವಿಧಾನದ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯಲು ನಿರಂತರ ಪ್ರಯತ್ನಗಳು ನಡೆಯಬೇಕು ಎಂದು ಕರೆ ನೀಡಿದರು.

ನಾವು ನಮ್ಮ ಸಂವಿಧಾನ ಅಳವಡಿಸಿಕೊಂಡ ಶತಮಾನೋತ್ಸವವನ್ನು ಆಚರಿಸೋಣ ಮತ್ತು ಈ ರಾಷ್ಟ್ರದ ಭವ್ಯ ಭವಿಷ್ಯದಲ್ಲಿ ಅದರ ಅನೇಕ ಶತಮಾನಗಳನ್ನು ಆಚರಿಸೋಣ ಎಂದು ತಿಳಿಸಿದರು.

ಸಂವಿಧಾನ ನನಗೆ ಎಲ್ಲವನ್ನೂ ಕೊಟ್ಟಿದೆ:ದೇವೇಗೌಡರ ಬಾವುಕ ನುಡಿ Read More