ಮೋಡಿ ಮಾಡಿದ ಪಾರಂಪರಿಕ ಟಾಂಗಾ ಸವಾರಿ:ಸು ಫ್ರಂ ಸೊ ನಟ ಚಾಲನೆ

ಮೈಸೂರು: ಶನಿವಾರ ಬೆಳ್ಳಂಬೆಳ್ಳಿಗೆ
ಇಪ್ಪತ್ತಕ್ಕೂ ಹೆಚ್ಚು ಟಾಂಗಾ ಗಾಡಿಗಳು ಶೃಂಗಾರಗೊಂಡು ಸಾಂಪ್ರದಾಯಿಕ‌ ಉಡುಗೆ ತೊಟ್ಟು ನವ ವಧುವರರಂತೆ‌ ಕಂಗೊಳಿಸುತ್ತಿದ್ದ ಜೋಡಿಗಳನ್ನು ಕೂರಿಸಿಕೊಂಡು ನಗರದ ಜನರನ್ನು ‌ಆಕರ್ಶಿಸಿ ಮೋಡಿ ಮಾಡಿದವು.

ಈ ವೇಳೆ ಜೋಡಿಗಳು ಅರಸರ ಇತಿಹಾಸ ಸಾರುವ ಪಾರಂಪರಿಕ‌ ಕಟ್ಟಡಗಳ ಕುರಿತು ಮಾಹಿತಿ ಹಂಚುವುದರ ಜೊತೆಗೆ ಮೈಸೂರಿನ ಜನರ ಕುತೂಹಲವನ್ನು ತಣಿಸಿದರು.

ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ರಂಗಚಾರ್ಲು ಪುರಭವನದ ಆವರಣದಲ್ಲಿ ಪಾರಂಪರಿಕ‌ ಕಟ್ಟಡ ಮತ್ತು ಇತಿಹಾಸದ ಮಾಹಿತಿ, ಪಾರಂಪರಿಕ‌ ಉಡುಗೆಗಳನ್ನು ಪ್ರಚಲಿತಗೊಳಿಸುವುದು ಹಾಗೂ ನಶಿಸಿ ಹೋಗುತ್ತಿರುವ ಪಾರಂಪರಿಕ ಟಾಂಗಾಗಳ ಉಳಿಸುವಿಕೆ ಉದ್ದೇಶದಿಂದ ಟಾಂಗಾ ಸವಾರಿ
ಆಯೋಜಿಸಲಾಗಿತ್ತು.

ಪಾರಂಪರಿಕ ಉಡುಗೊರೆಯನ್ನುಟ್ಟ ದಂಪತಿಗಳಿಗಾಗಿ ಟಾಂಗಾ ಸವಾರಿಗೆ ಇತ್ತೀಚಿನ ಕನ್ನಡ‌ ಪ್ರಸಿದ್ಧ ಸಿನಿಮಾ ಸು ಫ್ರಂ ಸೋ ಚಿತ್ರದ ನಟರು ಮತ್ತು ನಿರ್ದೇಶಕರಾದ ಪ್ರಕಾಶ್ ತುಮಿನಾಡು ದಂಪತಿ ಟಾಂಗಾ ಸವಾರಿ ಮಾಡುವ ಮೂಲಕ ಚಾಲನೆ ನೀಡಿದರು.

ಪಾರಂಪರಿಕ‌ ಉಡುಗೆಯೊಂದಿಗೆ ಟಾಂಗಾ ಸವಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ವಿವಿಧೆಡೆಯಿಂದ ದಂಪತಿಗಳು ಆಗಮಿಸಿ, ನಮ್ಮ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸಿದರು.

ಮೈಸೂರು ಪೇಟ, ಪಂಚೆ‌ ಮತ್ತು ಶಲ್ಯ ಧರಿಸಿ ಪತಿ ಸಿದ್ಧವಾಗಿದ್ದರೆ ರೇಷ್ಮೆ ಸೀರೆ, ಮಲ್ಲಿಗೆ ಮುಡಿದು ಪತ್ನಿ ತಯಾರಾಗಿದ್ದರು. ಉತ್ತರ ಕರ್ನಾಟಕ, ಕೊಡಗು, ಗೌಡರ ಶೈಲಿಯಲ್ಲಿಯೂ ಸಹ ಪಾಲ್ಗೊಂಡಿದ್ದ ದಂಪತಿಗಳು ತಮ್ಮ ಪರಂಪರೆಯನ್ನು ಬಿಂಬಿಸಿದರು, ಮದುವೆಗೆ ಸಿದ್ಧಗೊಂಡಿರುವಂತೆ ಸುಮಾರು 50 ಜೋಡಿಗಳು ಕಂಗೊಳಿಸುತ್ತಿದ್ದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಕಾಶ್ ತುಮಿನಾಡು ಅವರು, ಮೈಸೂರು ದಸರಾ ಮಹೋತ್ಸವ ವಿಶ್ವ ಮಟ್ಟದಲ್ಲಿ ಪ್ರಸಿದ್ಧಿಯಾಗಿದೆ, ಇಂದಿನ ಕಾರ್ಯಕ್ರಮ ನಾಡಿನ‌ ಆಚಾರ ಮತ್ತು ಸಾಂಸ್ಕೃತಿಕ ವಿಚಾರವನ್ನು ಸಾರುವುದರೊಂದಿಗೆ ನಮ್ಮ ಯುವ ಪೀಳಿಗೆಯನ್ನು ಸೆಳೆಯಲಿದೆ‌ ಎಂದು ಹೇಳಿದರು.

ಪ್ರಸ್ತುತ ದೇವಸ್ಥಾನ ಅಥವಾ ಇನ್ನಾವುದೋ ಸಮಾರಂಭದಲ್ಲಿ ಮಾತ್ರ ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತಹ ಸಾಂಪ್ರದಾಯಿಕ ಉಡುಗೆ ತೊಡುಗೆ ಮತ್ತಷ್ಟು ಪ್ರಚಲಿತಗೊಳ್ಳಬೇಕಿದೆ ಎಂದು ತಿಳಿಸಿ, ಸು ಫ್ರಂ ಸೋ ಚಿತ್ರದ ಸಣ್ಣ ಡೈಲಾಗ್ ಹೊಡೆದರು‌.

ಟಾಂಗಾ ಸವಾರಿಯು ನಗರದ ಪ್ರಮುಖ ರಸ್ತೆಗಳಾದ ದೊಡ್ಡ ಗಡಿಯಾರ, ಅಂಬಾ ವಿಲಾಸ ಅರಮನೆ, ಕೃಷ್ಣರಾಜ ಒಡೆಯರ್ ವೃತ್ತ, ಲ್ಯಾನ್ಸ್ ಡೌನ್ ಕಟ್ಟಡ, ಜಗನ್ಮೋಹನ ಅರಮನೆ, ಮೈಸೂರು ನಗರ ಪಾಲಿಕೆ ರಸ್ತೆ ಮೂಲಕ ಸಾಗಿ, ಮಹಾರಾಜ ಸಂಸ್ಕೃತ ಪಾಠಶಾಲೆ, ಕಾಡಾ‌ ಕಚೇರಿ, ಗನ್ ಹೌಸ್ ವೃತ್ತದ ಮೂಲಕ ಹಾರ್ಡಿಂಜ್ ವೃತ್ತದಿಂದ ಪುರಭವನ ತಲುಪಿತು.

ಉದ್ಘಾಟನಾ ಸಮಾರಂಭದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ‌ ಇಲಾಖೆ ಆಯುಕ್ತರಾದ ದೇವರಾಜು, ಇತಿಹಾಸ ತಜ್ಞರಾದ ಡಾ.ಎನ್.ಎಸ್.ರಂಗರಾಜು,‌ ಡಾ.ಸೆಲ್ವ ಪಿಳ್ಳೆ ಅಯ್ಯಂಗಾರ್, ಉಪ‌ ನಿರ್ದೇಶಕರಾದ ಡಾ.ಸಿ.ಎನ್. ಮಂಜುಳಾ, ತಾರಕೇಶ್, ಅಂಬರೀಶ್ ಮತ್ತಿತರರು ಪಾಲ್ಗೊಂಡಿದ್ದರು.

ಮೋಡಿ ಮಾಡಿದ ಪಾರಂಪರಿಕ ಟಾಂಗಾ ಸವಾರಿ:ಸು ಫ್ರಂ ಸೊ ನಟ ಚಾಲನೆ Read More

ಅಮಿತ್ ಶಾ ಬಂಧನಕ್ಕೆ ಆಗ್ರಹಿಸಿಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರತಿಭಟನೆ

ಮೈಸೂರು: ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರ ಬಗ್ಗೆ ಅವಹೇಳನ ಮತ್ತು ದ್ವೇಷದ ಮಾತನ್ನಾಡಿರುವ ಕೇಂದ್ರಗೃಹ‌ ಸಚಿವ ಅಮಿತ್ ಷಾರನ್ನು ಸಂಸದ ಸ್ಥಾನದಿಂದ ವಜಗೊಳಿಸಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

ಮೈಸೂರಿನ ಟೌನ್ ಹಾಲ್ ಮುಂಭಾಗ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು,ಮತ್ತಿತರರು ಬೃಹತ್ ಪ್ರತಿಭಟನೆ ನಡೆಸಿ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿದರು,ಜತೆಗೆ ಯುಎಪಿಎ ಕಾಯ್ದೆಯಡಿ ಬಂಧಿಸಬೇಕೆಂದು ಆಗ್ರಹಿಸಿದರು.

ಸಂವಿಧಾನ ಶಿಲ್ಪಿ ವಿಶ್ವಜ್ಞಾನಿ ಡಾ. ಬಿ ಆರ್ ಅಂಬೇಡ್ಕರ್ ಅವರು ಸಮಾನತೆ, ಸಹಬಾಳ್ವೆ, ಭಾತೃತ್ವ, ಜಾತ್ಯತೀತ ಧರ್ಮ, ನಿರಪೇಕ್ಷ, ಸಂವಿಧಾನವನ್ನು ಈ ದೇಶಕ್ಕೆ ನೀಡಿದ್ದಾರೆ.

ಇಂತಹ ವಿಶ್ವ ಶ್ರೇಷ್ಠ ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವುದು ಸಂವಿಧಾನದ ಕರ್ತವ್ಯವನ್ನು ಗೌರವಿಸುವುದು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು ಆಡಳಿತ ನಡೆಸುವ ಸರ್ಕಾರಗಳ ಕರ್ತವ್ಯವಾಗಿದೆ ಎಂದು ಹೇಳಿದರು.

ಗೌರವಾನ್ವಿತ ಸಾಂವಿಧಾನಿಕ ಹುದ್ದೆ ಹೊಂದಿರುವ ಕೇಂದ್ರ ಸರ್ಕಾರದ ಗೃಹ ಮಂತ್ರಿ ಆಮಿತ್ ಶಾ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ರಾಜ್ಯಸಭೆಯಲ್ಲಿ ಅಸಹನೆ ಮತ್ತು ದ್ವೇಷದ ಮಾತ ನಾಡಿರುವುದು ಅವರ ವಿಕೃತ ಮನಸ್ಥಿತಿಗೆ ಸಾಕ್ಷಿಯಾಗಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿನಿಂದಲೂ ಸಂವಿಧಾನ ಸುಡುವ ಹಾಗೂ ಸಂವಿಧಾನ ಬದಲಿಸುವ ಹೇಳಿಕೆಗಳನ್ನು ನೀಡುತ್ತಾ, ಅಲ್ಪಸಂಖ್ಯಾತರು ಮತ್ತು ಶೋಷಿತ ಸಮುದಾಯಗಳ ವಿರುದ್ಧ ದ್ವೇಷ ಬಿತ್ತಿ ಅರಾಜಕತೆ ಸೃಷ್ಟಿಸಿ ಅಸಹನೆಯಿಂದಲೇ ರಾಜಕೀಯ ಮಾಡುತ್ತಾ ಅಧಿಕಾರಕ್ಕೆ ಬಂದಿರುವ ಬಿಜೆಪಿ ಮತ್ತು ಆರ್ ಎಸ್ ಎಸ್ ಸಂಘ ಪರಿವಾರದ ಮುಖ್ಯಸ್ಥರಾಗಿರುವ ಅಮಿತ್ ಶಾ ಅವರು ಹಿಂದೆ ಗುಜರಾತ್ ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಬೆಂಕಿ ಇಟ್ಟಿದ್ದರು. ನ್ಯಾಯಾಧೀಶರ ಕೊಲೆ ಪ್ರಕರಣದಲ್ಲಿ ಕ್ರಿಮಿನಲ್ ಅಪರಾಧಿಯಾಗಿ ಗಡಿಪಾರಾಗಿದ್ದವರು, ಅಂತವರು ಸಂಸದರಾಗಲು ಅರ್ಹತೆ ಇಲ್ಲ ಎಂದು ಒಕ್ಕೂಟದ ಮುಖಂಡರು ಕಿಡಿಕಾರಿದರು‌

ದೇಶದ ಕಾನೂನು ಸುವ್ಯವಸ್ಥೆ ಕಾಪಾಡುವ ಪ್ರಮುಖ ಹುದ್ದೆಯಾದ ಗೃಹ ಖಾತೆಯ ಜವಾಬ್ದಾರಿ ಹೊತ್ತಿರುವ ಶಾ ಅಸಮಾನತೆಯ ಮನಸ್ಕೃತಿ ಯನ್ನು ಜಾರಿಗೆ ತರಲು ಯತ್ನಿಸಿದ್ದಾರೆ,ಅಂಥವರ ಬೆಂಬಲಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಿಂತಿರುವುದನ್ನು ದಲಿತ ಸಂಘಟನೆಗಳು ತೀರ್ವವಾಗಿ ಖಂಡಿಸುತ್ತದೆ ಎಂದು ಕಾರವಾಗಿ ಘೋಷಣೆ ಕೂಗಿದರು.

ಅಂಬೇಡ್ಕರ್ ಅವರು ದೇಶದ ಹಾಗೂ ಎಲ್ಲ ವರ್ಗಗಳ ಅಸ್ಮಿತೆ.ಅವರ ಬಗ್ಗೆ ಅಂಬೇಡ್ಕರ್ ಅಂಬೇಡ್ಕರ್ ಎನ್ನುವುದು ಈಗ ಫ್ಯಾಷನ್ ಆಗಿದೆ. ಅಂಬೇಡ್ಕರನ್ನು ಸ್ಮರಿಸುವ ಬದಲು ದೇವರನ್ನು ಸ್ಮರಿಸಿದರೆ ಸ್ವರ್ಗಕ್ಕೆ ಹೋಗುತ್ತಿದ್ದಿರಿ ಎಂದು ಹಿರಿಯರ ಚಾವಡಿಯಾದ ರಾಜ್ಯಸಭೆಯಲ್ಲಿ ಅಮಿತ್ ಶಾ ಹೇಳಿರುವದನ್ನು ಇಡೀ ದೇಶ ಖಂಡಿಸಬೇಕು ಎಂದು ಮುಖಂಡರು ಕರೆನೀಡಿದರು.

ಇಂತಹ ಕೆಟ್ಟ ಹೇಳಿಕೆ ನೀಡಿ ಕೋಟ್ಯಂತರ ಭಾರತೀಯರನ್ನು ಅವಮಾನಿಸಿರುವ ಅಮಿತ್ ಶಾರನ್ನು ಸಂಸದ ಸ್ಥಾನದಿಂದ ವಜಾಗೊಳಿಸಿ ಯುಎಪಿಎ ಕಾಯ್ದೆಯಡಿ ಬಂಧಿಸಬೇಕೆಂದು ಆಗ್ರಹಿಸಿ ರಾಷ್ಟ್ರಪತಿಗಳಿಗೆ ಮನವಿ ರವಾನಿಸಲಾಯಿತು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ದೇವಗಳ್ಳಿ ಸೋಮಶೇಖರ್, ನಾ ದಿವಾಕರ್, ಕೆ ಆರ್ ಸುಮತಿ, ಸವಿತಾ ಮಲ್ಲೇಶ್, ಟಿ ಗುರುರಾಜ್, ರತಿ ಮೇಡಂ, ಕೆ ಆರ್ ಗೋಪಾಲಕೃಷ್ಣ, ಶಂಭುಲಿಂಗ ಸ್ವಾಮಿ, ಹರಕುಮಾರ್ ಸಣ್ಣಸ್ವಾಮಿ, ಕಲ್ಲಳ್ಳಿ ಕುಮಾರ್, ಗುರುಸ್ವಾಮಿ, ಕಾಮ್ರೆಡ್ ಜಗನ್ನಾಥ್, ಎಸ್. ಎಫ್.ಐ.ನ ಕಾಮ್ರೆಡ್‌ಗಳು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಅಮಿತ್ ಶಾ ಬಂಧನಕ್ಕೆ ಆಗ್ರಹಿಸಿಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರತಿಭಟನೆ Read More