ಅವೈಜ್ಞಾನಿಕ ನೀತಿಯಿಂದ ಅಬಕಾರಿ ಉದ್ಯಮಕ್ಕೆ ಸಂಕಷ್ಟ-ಅಶೋಕ್

ಬೆಂಗಳೂರು: ಅವೈಜ್ಞಾನಿಕ ನೀತಿಗಳ ಮೂಲಕ ಅಬಕಾರಿ ಆದಾಯದ ಮೂಲಕ್ಕೆ ಕೊಡಲಿ ಪೆಟ್ಟು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕರಾದ ಆರ್. ಅಶೋಕ್ ಕಿಡಿಕಾರಿದ್ದಾರೆ.

ಅವೈಜ್ಞಾನಿಕ ಆರ್ಥಿಕ ನೀತಿಗಳಿಂದ ದಿವಾಳಿ ಸ್ಥಿತಿ ತಲುಪಿರುವ ರಾಜ್ಯ ಸರ್ಕಾರ ಸಂಪನ್ಮೂಲ ಸಂಗ್ರಹಕ್ಕೆ ಅನುಸರಿಸುತ್ತಿರುವ ಮಾರ್ಗ ಉದ್ಯಮಕ್ಕೆ ಮಾರಕವಾಗಿದೆ ಎಂದು ಟೀಕಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅಶೋಕ್, ದರ ಮತ್ತು ಸನ್ನದು ಶುಲ್ಕ ಏರಿಕೆಗೂ ಒಂದು ಮಾನದಂಡ ಇರುತ್ತದೆ. ಆದರೆ ಒಂದೇ ವರ್ಷದಲ್ಲಿ ಮದ್ಯ ಮಾರಾಟ ಮತ್ತು ಸನ್ನದು ಶುಲ್ಕವನ್ನು ಅಡ್ಡಾದಿಡ್ಡಿ ಹೆಚ್ಚಿಸುತ್ತಿರುವುದರಿಂದ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ.

ಬಜೆಟ್ ನಲ್ಲಿ ಯಾವುದೇ ತೆರಿಗೆ ಹಾಕಿಲ್ಲ ಎಂದು ಬೆನ್ನು ತಟ್ಟಿಕೊಂಡು ನಂತರದಲ್ಲಿ ಆಲ್ಕೊಹಾಲ್ ದರಗಳನ್ನು ಯದ್ವಾತದ್ವಾ ಹೆಚ್ಚಿಸಿದ್ದಾರೆ. ಅದರಲ್ಲೂ ಬಿಯರ್ ದರವನ್ನು ವರ್ಷದಲ್ಲಿ ಎರಡೂ – ಮೂರು ಸಲ ಹೆಚ್ಚಿಸಲಾಗಿದೆ. ಗ್ರಾಹಕರಿಗೆ ದೊಡ್ಡ ಹೊರೆ ಹೊರಿಸಲಾಗಿದೆ. ಮದ್ಯಪ್ರಿಯರು ಪ್ರತಿಭಟಿಸುವುದಿಲ್ಲ ಎಂಬ ಕಾರಣಕ್ಕೆ ಇಂತಹ ಕ್ರಮ ಅನುಸರಿಸುವುದು ಒಳ್ಳೆಯದಲ್ಲ ಎಂದು ಅಶೋಕ್ ಹೇಳಿದ್ದಾರೆ.

ಸರಿಯಾದ ಆರ್ಥಿಕ ಶಿಸ್ತು ಮತ್ತು ಸಿದ್ಧತೆಗಳಿಲ್ಲದೆ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಇದರಿಂದ ಅಭಿವೃದ್ಧಿ ಕಾರ್ಯಕ್ರಮಗಳು ಸ್ಥಗಿತ ಗೊಂಡಿವೆ. ಬೊಕ್ಕಸ ಬರಿದಾಗಿ ಸರ್ಕಾರ ದಿವಾಳಿಯಾಗಿದೆ ಎಂದು ಟೀಕಿಸಿದ್ದಾರೆ.

ಇದನ್ನು ಹೇಗಾದರೂ ಸರಿಪಡಿಸಿಕೊಳ್ಳಲು ಹೆಣಗುತ್ತಿರುವ ಸರ್ಕಾರ, ಸಿಕ್ಕ ಸಿಕ್ಕ ಎಲ್ಲ ವಸ್ತುಗಳ ದರ ಹೆಚ್ಚಳ ಮಾಡಿದೆ. ಆದರೂ ಪರಿಸ್ಥಿತಿ ಸುಧಾರಿಸುತ್ತಿಲ್ಲ ಎಂದು ಟೀಕಿಸಿದ್ದಾರೆ

ಮದ್ಯ ಉತ್ಪಾದನೆ, ಬಾಟ್ಲಿಂಗ್, ಮಾರಾಟ ಮಳಿಗೆಗಳು ಸೇರಿ ಎಲ್ಲ ಸ್ವರೂಪದ ಶುಲ್ಕಗಳನ್ನು ಶೇಕಡಾ ನೂರರಷ್ಟು ಹೆಚ್ಚಳಕ್ಕೆ ಮುಂದಾಗಿದೆ. ಇದಕ್ಕಾಗಿ ಅಬಕಾರಿ ಕಾನೂನುಗಳಿಗೆ ತಿದ್ದುಪಡಿ ಮಾಡಿ ಕರಡು ನಿಯಮಗಳ ಅಧಿಸೂಚನೆಯನ್ನು ಪ್ರಕಟಿಸಿದೆ. ಜುಲೈ 1 ರಿಂದ ಪರಿಷ್ಕೃತ ದರಗಳು ಜಾರಿಗೊಳ್ಳಲಿವೆ. ಆ ಮೂಲಕ ಉದ್ಯಮದ ನಾಶಕ್ಕೆ ಮೊಳೆ ಹೊಡೆದಂತಾಗಲಿದೆ ಎಂದಿದ್ದಾರೆ.

ಉದ್ಯಮದ ಹಿತದೃಷ್ಟಿಯಿಂದ ಸರ್ಕಾರ ಅವೈಜ್ಞಾನಿಕ ಕ್ರಮಗಳನ್ನು ಬಿಟ್ಟು ಉದ್ಯಮ, ಮಾರಾಟಗಾರರು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳಬೇಕು. ಸನ್ನದು ಶುಲ್ಕ ಪರಿಷ್ಕರಣೆಯನ್ನು ಮರು ಪರಿಶೀಲಿಸಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ.

ಅವೈಜ್ಞಾನಿಕ ನೀತಿಯಿಂದ ಅಬಕಾರಿ ಉದ್ಯಮಕ್ಕೆ ಸಂಕಷ್ಟ-ಅಶೋಕ್ Read More

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಎಲ್ ನಾಗೇಂದ್ರ ಕಿಡಿ

ಮೈಸೂರು,ಏ. 2: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ ಎಂದು ಮೈಸೂರು ನಗರ ಬಿಜೆಪಿ ಘಟಕದ ಅಧ್ಯಕ್ಷ ಎಲ್ ನಾಗೇಂದ್ರ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಏಪ್ರಿಲ್ 1ರಂದು ಮತ್ತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ರಾಜ್ಯದ ಜನರನ್ನು ಮೂರ್ಖರನ್ನಾಗಿ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಹಾಲಿನ ದರ ಮತ್ತಷ್ಟು ದುಬಾರಿಯಾಗಿದೆ, ಮಂತ್ರಿಗಳು ಲೂಟಿಯಲ್ಲಿ ತೊಡಗಿದ್ದಾರೆ. ಮಂತ್ರಿಗಳ ಮೇಲೆ ಸಿಎಂ ಸಿದ್ದರಾಮಯ್ಯಗೆ ಹಿಡಿತವಿಲ್ಲದಂತಾಗಿದೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರ ಮುಸ್ಲಿಮರ ತುಷ್ಠೀಕರಣದಲ್ಲಿ ತೊಡಗಿದೆ, ಸಂವಿಧಾನಕ್ಕೆ ವಿರುದ್ಧವಾಗಿ ಮುಸ್ಲಿಮರಿಗೆ ಪ್ರತ್ಯೇಕವಾಗಿ ಮೀಸಲಾತಿ ಜಾರಿಗೊಳಿಸುವ ಮೂಲಕ ವಿಭಿನ್ನ ಧೋರಣೆ ತಳೆದಿದೆ. ಮುಸ್ಲಿಮರಿಗೆ ನೀಡಿರುವ ಮೀಸಲಾತಿ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಒಪಿಡಿ ಶುಲ್ಕ ಹೆಚ್ಚಳ ಮಾಡಲಾಗಿದೆ. ಇದೇ ರೀತಿ ಜನನ ಮರಣ ಪ್ರಮಾಣ ಪತ್ರಗಳನ್ನು ನೀಡಲು ಹೆಚ್ಚಿನ ಶುಲ್ಕ ನಿಗದಿ ಮಾಡಲಾಗಿದೆ. ಉಚಿತವಾಗಿ ನೀಡಬೇಕಾದ ವೈದ್ಯಕೀಯ ಸೇವೆಗಳಿಗೆ ದರ ನಿಗದಿ ಮಾಡಿರುವುದು ಸರಿಯಲ್ಲ ಎಂದು ನಾಗೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷ ಸೋಲಿನ ಭೀತಿಯಿಂದ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ನಡೆಸುತ್ತಿಲ್ಲ, ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಕಾಂಗ್ರೆಸ್ ಗೆ ಸೋಲಿನ ಭೀತಿ ಕಾಡುತ್ತಿದೆ ಹಾಗಾಗಿಯೇ ಮೈಸೂರು ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದೆ ಎಂದು ಟೀಕಿಸಿದರು.

ಪಾಲಿಕೆಗೆ ಚುನಾವಣೆ ‌‌ನಡೆಸದೆ ಹೋದುದರಿಂದ ಕೇಂದ್ರದ ಅನುದಾನ ವಾಪಸ್ ಹೋಗಿದೆ,ಇದು ಇವರ ಆಡಳಿತ ಎಂದು ಎಲ್ ನಾಗೇಂದ್ರ ವ್ಯಂಗ್ಯವಾಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಎಲ್ ನಾಗೇಂದ್ರ ಕಿಡಿ Read More

ಹಾಲಿನ ದರ ಏರಿಕೆ ಖಂಡಿಸಿಕರ್ನಾಟಕ ಸೇನಾ ಪಡೆ ಸದಸ್ಯರ ಪ್ರತಿಭಟನೆ

ಮೈಸೂರು: ರಾಜ್ಯ ಸರ್ಕಾರ ಅತೀ ಅಗತ್ಯ ವಸ್ತುಗಳಾದ ಹಾಲಿನ ದರ ಹಾಗೂ ವಿದ್ಯುತ್ ದರವನ್ನು ಏರಿಕೆ ಮಾಡಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಸದಸ್ಯರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು

ಯುಗಾದಿ ಸಂಭ್ರಮದಲ್ಲಿರುವ ರಾಜ್ಯದ ಜನರಿಗೆ ರಾಜ್ಯ ಸರ್ಕಾರ ಹಾಲು ಹಾಗೂ ವಿದ್ಯುತ್ ಶಾಕ್ ನೀಡಿದೆ ಎಂದು ಪ್ರತಿಭಟನಾ ನಿರತರು ಕಿಡಿಕಾರಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ತಮ್ಮ ಬಿಟ್ಟಿ ಭಾಗ್ಯಗಳಿಗೆ ಹಣ ಹೊಂದಿಸಲು ಅತಿ ಅಗತ್ಯ ವಸ್ತುಗಳ ಬೆಲೆ ಏರಿಕೆಗಳನ್ನು ಮಾಡಿದ್ದು, ಜನರು ಜೀವನ ನಡೆಸುವುದೇ ಕಷ್ಟಕರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಹಗರಣಗಳಲ್ಲಿ ತೊಡಗಿ ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸುತ್ತಿಲ್ಲ, ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯದೆ ಒಳ ಜಗಳಗಳಲ್ಲೇ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಕೆಎಸ್ಆರ್ಟಿಸಿ ಮತ್ತು ಬೆಂಗಳೂರು ಮೆಟ್ರೋ ದರ ಏರಿಕೆ ಮಾಡಿದ ಬೆನ್ನಲ್ಲೇ ನಂದಿನಿ ಹಾಲು, ವಿದ್ಯುತ್ ದರವನ್ನು ಏರಿಕೆ ಮಾಡುತ್ತಿರುವುದು ಅತ್ಯಂತ ನೋವಿನ ಸಂಗತಿ ಆಗಿದೆ ಎಂದು ತೇಜೇಶ್ ಲೋಕೇಶ್ ಗೌಡ ಹೇಳಿದರು.

ಕಳೆದ ಫೆಬ್ರವರಿ ತಿಂಗಳಲ್ಲಿ ನಂದಿನಿ ಹಾಲಿಗೆ ಪ್ರತಿ ಲೀಟರ್ ಗೆ 2 ರೂ ಏರಿಕೆ ಮಾಡಿದ್ದ ಸರ್ಕಾರ ಮತ್ತೆ ಈಗ 4 ರೂ ಬೆಲೆ ಏರಿಕೆ ಮಾಡಿದೆ. ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನತೆಗೆ ಗಾಯದ ಮೇಲೆ ಬರೆ ಎಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನೆಯ ಯಜಮಾನಿಗೆ ಬಿಟ್ಟಿ ಭಾಗ್ಯಲಕ್ಷ್ಮಿ ಭಾಗ್ಯ ತಿಂಗಳಿಗೆ 2,000 ಕೊಟ್ಟು ಹಾಲು ಇನ್ನಿತರ ಪದಾರ್ಥಗಳ ಬೆಲೆ ಏರಿಕೆ ಮೂಲಕ ಅವರಿಂದಲೇ ತಿಂಗಳಿಗೆ 4000 ವಸೂಲಿ ಮಾಡಿ ನೀಡುತ್ತಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಮಹಾನ್ ದುರ್ಭಾಗ್ಯ, ಬಡ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಸರ್ಕಾರಕ್ಕೆ ಕಿಂಚಿತ್ತಾದರೂ ಕನಿಕರವಿದ್ದರೆ ಕೂಡಲೇ ಹಾಲಿನ ದರ ಏರಿಕೆ ಹಾಗೂ ವಿದ್ಯುತ್ ದರ ಏರಿಕೆ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು.

ಪ್ರಭುಶಂಕರ್ ಎಂ ಬಿ, ಗೋಲ್ಡನ್ ಸುರೇಶ್, ಪ್ರಜೀಶ್ , ಸಿಂದುವಳ್ಳಿ ಶಿವಕುಮಾರ್, ವರಕೂಡು ಕೃಷ್ಣೇಗೌಡ,, ಕೃಷ್ಣಪ್ಪ , ಶಿವಲಿಂಗಯ್ಯ, ಮಧುವನ ಚಂದ್ರು, ವೇಣುಗೋಪಾಲ್ ಕೆ, ಹನುಮಂತಯ್ಯ, ನೇಹ ಭಾಗ್ಯಮ್ಮ, ಬಸವರಾಜು, ಬೋಗಾದಿ ಸಿದ್ದೇಗೌಡ, ನಾಗರಾಜು , ರಘು ಅರಸ್, ಎಳನೀರು ರಾಮಣ್ಣ, ರವಿ ಒಲಂಪಿಯಾ, ದರ್ಶನ್ ಗೌಡ, ಪ್ರದೀಪ್ ಆರ್ ಆನಂದ್, ತ್ಯಾಗರಾಜ್, ರವಿ ನಾಯಕ್, ಕುಮಾರ್, ನಾರಾಯಣ ಗೌಡ, ರವೀಶ್ , ರಾಮಕೃಷ್ಣೇಗೌಡ, ವಿಷ್ಣು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಹಾಲಿನ ದರ ಏರಿಕೆ ಖಂಡಿಸಿಕರ್ನಾಟಕ ಸೇನಾ ಪಡೆ ಸದಸ್ಯರ ಪ್ರತಿಭಟನೆ Read More