ಸೈನಿಕರಂತೆ ಕೆಲಸ ನಿರ್ವಹಿಸುವ ಪತ್ರಿಕಾ ವಿತರಕರು-ನಾರಾಯಣಗೌಡ

ಮೈಸೂರು: ಬಿಸಿಲು, ಮಳೆ,ಗಾಳಿ, ಚಳಿ ಲೆಕ್ಕಿಸದೆ ಹಗಲು ರಾತ್ರಿ ವರ್ಷವಿಡಿ ಕೆಲಸ ನಿರ್ವಹಿಸುವ ಯೋಧರಂತೆ ಪತ್ರಿಕಾ ವಿತರಕರದು ಕೂಡ ತ್ಯಾಗದ ಕಾರ್ಯ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಶ್ಲಾಘಿಸಿದರು.

ನಗರದ ಚಾಮುಂಡಿಪುರಂನಲ್ಲಿ ಕೆಎಂಪಿ ಕೆ ಟ್ರಸ್ಟ್ ವತಿಯಿಂದ ಪತ್ರಿಕಾ ವಿತರಕರ ದಿನದ ಅಂಗವಾಗಿ ಹಿರಿಯ ಪತ್ರಿಕಾ ವಿತರಕರಾದ
ಓಂದೇವ,ಜವರಪ್ಪ, ನಾಗೇಶ್ ಕಾವ್ಯ ಪ್ರಿಯ, ಎಂ ಪಿ ಗುಂಡಪ್ಪ, ಶ್ರೀಕಾಂತ್, ಅವರನ್ನು ಸನ್ಮಾನಿಸಿ ಗೌರವ ಧನ ನೀಡಿ
ಮಾತನಾಡಿದರು.

ಮಾಜಿ ಪ್ರಧಾನಿ ಅಬ್ದುಲ್ ಕಲಾಮ್ ಅವರು ಸಹ ಪತ್ರಿಕಾ ವಿತರಕರಾಗಿ ಮೇಲ್ಮಟ್ಟಕ್ಕೆ ಬಂದವರು, ,ಪತ್ರಿಕಾ ವಿತರಕರನ್ನು ಕೀಳಾಗಿ ಕಾಣಬಾರದು, ವಿತರಕರು ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಾರೆ, ವಾಹನಗಳಿಂದ ಪತ್ರಿಕೆಗಳ ಬಂಡಲ್ ಗಳನ್ನು ಇಳಿಸಿಕೊಳ್ಳಲು, ವಿತರಕರಿಗೆ ಹಾಗೂ ಪತ್ರಿಕೆ ಹಾಕುವ ಹುಡುಗರಿಗೆ ಹಂಚಲು ಕಷ್ಟವಾಗುತ್ತದೆ ,ಸ್ವಲ್ಪ ಮಳೆ ಹನಿ ಬಿದ್ದರೂ ಪತ್ರಿಕೆ ಹಾಳಾಗುತ್ತದೆ ,ಆದ್ದರಿಂದ ಪತ್ರಿಕೆಗಳ ಹಂಚಿಕೆಗೆ ಮೈಸೂರು ನಗರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮೈಸೂರು ನಗರ ಪಾಲಿಕೆ ಶಾಶ್ವತವಾದ ಜಾಗ ಕಲ್ಪಿಸಿ ಕೊಡಬೇಕು ಎಂದು ಮನವಿ ಮಾಡಿದರು.

ಮೈಸೂರಿನ ವಸ್ತುಪ್ರದರ್ಶನ ಆವರಣ ಅಥವಾ ಟೌನ್ ಹಾಲ್ ಸೇರಿದಂತೆ ಇನ್ನಿತರ ಯಾವುದಾದರೂ ಸ್ಥಳದಲ್ಲಿ ಪತ್ರಿಕಾ ವಿತರಕರಿಗೆ ಶಾಶ್ವತ ಸ್ಥಳಾವಕಾಶವನ್ನು ಮೈಸೂರು ನಗರಪಾಲಿಕೆ ಮಾಡಿಕೊಡಬೇಕು ಹಾಗೂ ಸರ್ಕಾರ ಪತ್ರಿಕಾ ವಿತರಕರನ್ನು ಗುರುತಿಸಿ ರಾಜ್ಯಮಟ್ಟದ ಪ್ರಶಸ್ತಿ ನೀಡುವ ಮೂಲಕ ಅವರನ್ನು ಗೌರವಿಸಬೇಕು ಎಂದು ನಾರಾಯಣಗೌಡ ಕೋರಿದರು.

ಪತ್ರಿಕ ವಿತರಕರ ಸಂಘದ ಕಾರ್ಯದರ್ಶಿ ರವಿ,ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಜಿ ರಾಘವೇಂದ್ರ,ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಮೈಸೂರು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ರಮೇಶ್ ರಾಮಪ್ಪ, ಎಸ್ ಎನ್ ರಾಜೇಶ್, ಲೋಕೇಶ್, ದಿನೇಶ್ ಮತ್ತಿತರರು ಹಾಜರಿದ್ದರು.

ಸೈನಿಕರಂತೆ ಕೆಲಸ ನಿರ್ವಹಿಸುವ ಪತ್ರಿಕಾ ವಿತರಕರು-ನಾರಾಯಣಗೌಡ Read More

ಕೊಳ್ಳೇಗಾಲದಲ್ಲಿ ಪತ್ರಿಕಾ ದಿನಾಚರಣೆ ಯಶಸ್ವಿ

ಕೊಳ್ಳೇಗಾಲ: ಕೊಳ್ಳೇಗಾಲ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಂದು ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ತಾ.ಪಂ.ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಡಿ.ಸಿದ್ದರಾಜು ಅವರ ಅಧ್ಯಕ್ಷ ತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಶಾಸಕರು ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮ ಕ್ಷೇತ್ರವನ್ನು ಸಾರ್ವಜನಿಕರು ಹೆಚ್ಚು ಅವಲಂಬಿಸಿದ್ದಾರೆ. ಅದಕ್ಕೆ ತಕ್ಕಂತೆ ಪತ್ರಿಕೋದ್ಯಮ ಅತಿ ವೇಗವಾಗಿ ಜನರನ್ನು ಆಕರ್ಷಿಸಿ ಸುದ್ದಿ ಪ್ರಚಾರದಲ್ಲಿ ದಾಪುಗಾಲಿಟ್ಟಿದೆ. ಈ ನಡುವೆ ಎಲ್ಲೆಡೆ ಪತ್ರಿಕಾ ದಿನಾಚರಣೆಯನ್ನು ಪತ್ರಕರ್ತರು ಸಡಗರ ಸಂಭ್ರಮದಿಂದ ಆಚರಿಸುತ್ತಿರುವುದು ಹರ್ಷ ತಂದಿದೆ ಎಂದು ಹೇಳಿದರು.

ಪತ್ರಕರ್ತರು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸದಲ್ಲಿ ತಮ್ಮ ಜೀವನವನ್ನು ಸವೆಸುತ್ತಾರೆ. ಅದಕ್ಕಾಗಿಯೇ ಅವರಿಗೆ ಇತರ ಕ್ಷೇತ್ರಗಳಲ್ಲಿರುವವರು ಕೂಡ ಹೆಚ್ಚು ಗೌರವ ನೀಡುತ್ತಾರೆ.

ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಕ್ಷೇತ್ರಕ್ಕಿಂತಲೂ ಪತ್ರಿಕಾ ರಂಗಕ್ಕೆ ಹೆಚ್ಚು ಶಕ್ತಿಯಿದೆ. ಇದನ್ನು ನಿರೂಪಿಸಿರುವ ಹಿರಿಯ ಪತ್ರಕರ್ತರ ಹೆಸರನ್ನು ಉಳಿಸುವ ನಿಟ್ಟಿನಲ್ಲಿ ಕಿರಿಯ ಪತ್ರಕರ್ತರು ಸಾಗಬೇಕು. ಮೌಲ್ಯಾಧರಿತ ವೃತ್ತಿಯಲ್ಲಿ ತೊಡಗಿ ಜನರಿಗೆ ಸತ್ಯ ಸುದ್ದಿ ಸಮಾಚಾರಗಳನ್ನು ಕೊಡಬೇಕು. ಗಾಳಿ ಸುದ್ದಿಗಳಿಗೆ ಬೆಲೆ ನೀಡದೆ ಮಾಧ್ಯಮ ಕ್ಷೇತ್ರಕ್ಕೆ ಇನ್ನಷ್ಟು ಗೌರವ ತಂದುಕೊಡಬೇಕು ಎಂದು ಕಿವಿ ಮಾತು ಹೇಳಿದರು.

ಭವನ ನಿರ್ಮಾಣಕ್ಕೆ ಪೂರ್ಣ ಅನುಧಾನ:
ಕೊಳ್ಳೇಗಾಲ ಪಟ್ಟಣದಲ್ಲಿ ಪತ್ರಕರ್ತರ ಭವನ ನಿಮಾರ್ಣಕ್ಕಾಗಿ ಮಾಜಿ ಸಂಸದ ದಿ.ವಿ.ಶ್ರೀನಿವಾಸಪ್ರಸಾದ್ ಹಾಗೂ ಮಾಜಿ ಶಾಸಕ ಎನ್.ಮಹೇಶ್ ಅವರು ತಲಾ 5 ಲಕ್ಷ ಅನುದಾನವನ್ನು ನೀಡಿ ಬೇಸ್ ಮೆಟ್ ಕಟ್ಟಡ ನಿರ್ಮಿಸಲು ಸಹಕಾರಿಯಾಗಿದ್ದಾರೆ ಎಂದು ಶಾಸಕ ಎ.ಆರ್.ಕೆ ಸ್ಮರಿಸಿದರು.

ಈಗ‌ ನನ್ನ ಸರದಿ ಬಂದಿದ್ದು, ಮುಂದುವರೆದ ಕಾಮಗಾರಿಗೆ ತಗಲುವ ವೆಚ್ಚದ ಬಗ್ಗೆ ನಿರ್ಮಿತಿ ಕೇಂದ್ರದ ಅಧಿಕಾರಿಗಳೊಂದಿಗೆ ಚರ್ಚಿಸಿ, ರಾಜ್ಯ ಸರ್ಕಾರದಿಂದ ನನಗೆ ದೊರೆಯುವ ಅನುಧಾನ ಲಭ್ಯತೆ ಆಧರಿಸಿ ಪೂರ್ಣ ಪ್ರಮಾಣದಲ್ಲಿ ಕಟ್ಟಡ ನಿರ್ಮಿಸಿ ಲೋಕಾರ್ಪಣೆ ಮಾಡುವುದಾಗಿ ಭರವಸೆ ನೀಡಿದರು.  

ಸರ್ಕಾರದ ಸವಲತ್ತನ್ನು ಬಳಸಿಕೊಳ್ಳಿ:
ಪತ್ರಕರ್ತರು ಸಮಾಜದ ಎಲ್ಲಾ ಸಮಸ್ಯೆಗಳಿಗೆ ದಾರಿ ತೋರಿಸುವುದಲ್ಲಿ ತಮ್ಮ ಆರೋಗ್ಯದ ಕಡೆ ಗಮನ ನೀಡುವುದಿಲ್ಲ ಎಂದು ಶಾಸಕ ಎ.ಆರ್.ಕೆ ಅಭಿಪ್ರಾಯ ಪಟ್ಟರು.

ಇದನ್ನು ಅರಿತಿರುವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು, ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಪತ್ರಕರ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಧ್ಯಮ ಸಂಜೀವಿನಿ ಎಂಬ ಯೋಜನೆಯನ್ನು ತಂದಿದ್ದು, ಇದು ಜು.1 ರಿಂದ ರಾಜ್ಯದಲ್ಲಿ ಜಾರಿಯಾಗಿದೆ. ಈ ಸೌಲಭ್ಯ ಸೇರಿದಂತೆ ಉಚಿತ ಬಸ್ ಪಾಸ್ ಯೋಜನೆ ಹಾಗೂ ಸರ್ಕಾರದಿಂದ ದೊರೆಯುವ ಇತರ ಸವಲತ್ತುಗಳನ್ನು ಪತ್ರಕರ್ತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೃಷ್ಣಮೂರ್ತಿ ಸಲಹೆ ನೀಡಿದರು.

ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಬಿ.ಆರ್.ಮಹೇಶ್ ಮಾತನಾಡಿ, ಕೊಳ್ಳೇಗಾಲ ತಾ.ಪಂ ಇಒ ಆಗಿ ಕರ್ತವ್ಯ ನಿರ್ವಹಿಸಿದ ದಿನದಿಂದಲೂ ನಾನು ಕೊಳ್ಳೇಗಾಲದ ಪತ್ರಕರ್ತರ ಕಾರ್ಯ ವೈಖರಿಯನ್ನು ನೋಡಿದ್ದೇನೆ. ಸುದ್ದಿ ಬಿತ್ತರಿಸುವ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾರರು. ಹೆಚ್ಚು ಮೌಲ್ಯಾಧಾರಿತ ಸುದ್ದಿಗಳನ್ನು ಜನರಿಗೆ ಮುಟ್ಟಿಸುವಲ್ಲಿ ಮುಂದಿದ್ದಾರೆ. ನನ್ನ ವಿದ್ಯಾಬ್ಯಾಸ ಕಾಲದಿಂದ ಆರಂಭಗೊಂಡ ಪತ್ರಿಕೆ ಓದುವ ಅಭ್ಯಾಸ ಇಂದು ಅಧಿಕಾರಿಯಾಗಿದ್ದರೂ ಬಿಡಲಾಗುತ್ತಿಲ್ಲ. ಕಾರಣ, ದಿನ ಪತ್ರಿಕೆಗಳು ಭಾಷಾ ಹಿಡಿತ, ವ್ಯಕ್ತಿಯ ಸಾಮರ್ಥ್ಯ, ಸಾಹಿತ್ಯಭ್ಯಾಸವನ್ನು ನೀಡುವುದಲ್ಲದೇ ಅತ್ಯದ್ಭುತ ಜ್ಞಾನವನ್ನು ಕೊಡುತ್ತದೆ ಎಂದು ಬಣ್ಣಿಸಿದರು.

ಮೌಲ್ಯಾಧಾರಿತ ಪತ್ರಕರ್ತರ ಸಂಖ್ಯೆ ಕ್ಷೀಣ:
ಚಾ.ನಗರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ದೇವರಾಜ್ ಕಪ್ಪಸೋಗೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮೌಲ್ಯಾಧಾರಿತ ಪತ್ರಕರ್ತರ ಸಂಖ್ಯೆ ಕ್ಷೀಣಿಸುತ್ತಿದೆ. ಇದಕ್ಕೆ ಕಾರಣ ಪತ್ರಿಕೋಧ್ಯಮದ ದೇಯ್ಯೋದ್ದೇಶವನ್ನು ಹೆಚ್ಚು ಅರಿಯದಿರುವುದು ಎಂದು ಅಭಿಪ್ರಾಯಪಟ್ಟರು.

ವೃತ್ತಿ ನಿರತ ಪತ್ರಕರ್ತ ಸಮಾಜದಲ್ಲಿ ತನಗೆ ದೊರೆಯುವ ಗೌರವದ ತೃಪ್ತಿಯಿಂದಲೇ ಬದುಕುತ್ತಾರೆ. ಅಂತಹ ಪ್ರಾಮಾಣಿಕ ಪತ್ರಕರ್ತರು ಎಂದೆಂದು ಜನರ ಮನದಲ್ಲಿ ಉಳಿಯುತ್ತಾರೆ. ಏತನ್ಮಧ್ಯೆ, ಪತ್ರಕರ್ತರನ್ನು ಸಬಲಿಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಶ್ರಮಿಸುತ್ತಿದೆ. ಪತ್ರಕರ್ತರಿಗೆ ದೊರೆಯಬೇಕಾದ ನಿವೇಶನ, ವಸತಿ, ಆರೋಗ್ಯ ಸೇರಿದಂತೆ ಮೂಲ ಸೌಕರ್ಯವನ್ನು ಧಕ್ಕಿಸುವ ನಿಟ್ಟಿನಲ್ಲಿ ಸತತ ಪ್ರಯತ್ನದಲ್ಲಿದೆ. ಇದರಡಿಯಲ್ಲಿ ಜಿಲ್ಲಾ ಸಂಘಗಳು ಅವಿತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾ.ಪಂ. ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಗೂಳಿಪುರ ನಂದೀಶ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಸಿದ್ದರಾಜು ಮಾತನಾಡಿದರು.

ವೇದಿಕೆಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಡಿ.ನಟರಾಜು, ಜಿಲ್ಲಾ ನಿರ್ದೇಶಕ ಎನ್.ರಾಜೇಶ್ ಉಪಸ್ಥಿತರಿದ್ದರು.

ತಾಲೂಕು ಸಂಘದ ಉಪಾಧ್ಯಕ್ಷ ಎಂ.ಮರಿಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ಪವನ್ ಕುಮಾರ್, ಕಾರ್ಯದರ್ಶಿ ಎಂ.ಪಿ.ಮಹೇಶ್ ಸೇರಿದಂತೆ ಸಂಘದ ನಿರ್ದೇಶಕರಾದ ಎಸ್.ರಾಜಶೇಖರ್, ಎಸ್.ರಾಜು, ಚಂದ್ರಶೇಖರ್, ಅವೀನ್ ಪ್ರಕಾಶ್, ಪ್ರೇಮ್ ಸಾಗರ್, ಸಾಗರ್ ,ವಸಂತ್ ಕುಮಾರ್ .ಬಸಂತ್ ಮಲ್ಲಪ್ಪ.ಸುನಿಲ್, ಸಾಮ್.ಮಹೇಶ್. ಲಿಂಗರಾಜ್.ಚಂದ್ರು. ಹಾಗೂ ಇತರ ಪತ್ರಕರ್ತರು ಹಾಜರಿದ್ದರು.

ಇದೇ ವೇಳೆ ಕೊಳ್ಳೇಗಾಲ ತಾಲೂಕಿನ ಪತ್ರಕರ್ತರಾದ ಚಿಕ್ಕಮಾಳಿಗೆ, ಎನ್.ನಟರಾಜು, ಪಿ.ಜಗದೀಶ್ ಅವರನ್ನು ಸಂಘದಿಂದ ವಾರ್ಷಿಕ ಸೇವಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಕುಂತೂರು ಮೊಳೆ ರಾಜೇಂದ್ರ ನಟರಾಜ್ ಮಾಳಿಗೆ. ಚೇತನ್ ದೊರೆ.ಶೇಖರ್ ಬುದ್ಧ,ಹರ್ಷ ಮತ್ತಿತರತ ಪ್ರಮುಖ ಮುಖಂಡರು ಹಾಜರಿದ್ದರು.

ಕೊಳ್ಳೇಗಾಲದಲ್ಲಿ ಪತ್ರಿಕಾ ದಿನಾಚರಣೆ ಯಶಸ್ವಿ Read More

ಸಂವಿಧಾನದ ಮೌಲ್ಯ ಎತ್ತಿ ಹಿಡಿಯುವುದು ಪತ್ರಿಕಾ ವೃತ್ತಿಯ ಜವಾಬ್ದಾರಿ-ಸಿಎಂ

ಬೆಂಗಳೂರು, ಜು.1: ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ ಎಂದರೆ, ಸುಳ್ಳು ಸುದ್ದಿಗಳು ಹೆಚ್ಚಾಗಿವೆ ಎಂಬ ಅರ್ಥ ತಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಇಲಾಖೆ, ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ-2025 ಹಾಗೂ ನಿಜ ಸುದ್ದಿಗಾಗಿ ಸಮರ ಸಂವಾದವನ್ನು ಉದ್ಘಾಟಿಸಿ, ಪತ್ರಕರ್ತರ ಉಚಿತ ಬಸ್ ಪಾಸ್ ಮತ್ತು ಪತ್ರಕರ್ತರ ಆರೋಗ್ಯ ಸಂಜೀವಿನಿ ಯೋಜನೆಯನ್ನು ಉದ್ಘಾಟಿಸಿ ಸಿಎಂ ಮಾತನಾಡಿದರು.

ಊಹಾ ಪತ್ರಿಕೋದ್ಯಮ ಪತ್ರಿಕೋದ್ಯಮಕ್ಕೆ ಮತ್ತು ಸಮಾಜಕ್ಕೂ ಅಪಾಯ.ಮಾಧ್ಯಮ ಸ್ವತಂತ್ರವಾಗಿ, ನಿರ್ಭೀತಿಯಿಂದ ಸುದ್ದಿ ಮಾಡಬೇಕು ಎನ್ನುವುದರಲ್ಲಿ ನಂಬಿಕೆ ಇಟ್ಟುಕೊಂಡಿರುವವನು ನಾನು ಎಂದು ಹೇಳಿದರು.

ಜವಾಹರಲಾಲ್ ನೆಹರೂ ಅವರೂ ಇದನ್ನೇ ನಂಬಿದ್ದರು ಮತ್ತು ಪಾಲಿಸಿದ್ದರು. ಯಾವುದೇ ಚಾನಲ್ ಗಳು ನನ್ನ ಬಗ್ಗೆ ಎಷ್ಟು ಸುಳ್ಳು ಹೇಳಿದರೂ ನಾನು ಯಾರಿಗೂ ಫೋನ್ ಕೂಡ ಮಾಡುವುದಿಲ್ಲ ಎಂದು ಸಿಎಂ ತಿಳಿಸಿದರು.

ನನ್ನ ಕಾರಿನ ಮೇಲೆ ಕಾಗೆ ಕೂತಿದ್ದನ್ನು ಚರ್ಚೆ ನಡೆಸಿ ಮೂಢನಂಬಿಕೆ ಬಿತ್ತುವುದನ್ನು ಪತ್ರಿಕಾವೃತ್ತಿ ಎಂದು ಕರೆಯಬೇಕಾ, ಜನರನ್ನು ಮೌಡ್ಯಕ್ಕೆ ತಳ್ಳುವುದು ಪತ್ರಿಕಾ ವೃತ್ತಿಯಾ ಎಂದು ಸಿದ್ದು ಕಾರವಾಗಿ ಪ್ರಶ್ನಿಸಿದರು.

ನಾವು ಇವತ್ತು ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಮತ್ತು ಆರೋಗ್ಯ ಸಂಜೀವಿನಿ ಉದ್ಘಾಟಿಸಿ ಪತ್ರಕರ್ತರಿಗೆ ಅನುಕೂಲ ಒದಗಿಸಿದ್ದೇವೆ. ಇದನ್ನೆಲ್ಲ ನಮ್ಮ ಪರವಾಗಿ ಬರೆಯಲಿ ಎಂಬ ಕಾರಣದಿಂದ ಜಾರಿ ಮಾಡಿರುವುದಲ್ಲ. ಸತ್ಯ ಬರೆಯಿರಿ, ಜನರ ಪರವಾಗಿ, ಪ್ರಜಾಪ್ರಭುತ್ವದ ಪರವಾಗಿ ಇರಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

ಸ್ವಾತಂತ್ರ್ಯಪೂರ್ವದಲ್ಲಿ ಜನರನ್ನು ಎಚ್ಚರಿಸುವ, ಸ್ವಾತಂತ್ರ್ಯ ಹೋರಾಟದ ಪರವಾಗಿ ಪತ್ರಿಕೆಗಳು ಕೆಲಸ ಮಾಡಿದ್ದವು.
ಸಂವಿಧಾನದ ಮೌಲ್ಯಗಳು ಮತ್ತು ಸತ್ಯವನ್ನು ಮರೆಮಾಚುವ ಕೆಲಸ ಆಗಬಾರದು‌ ಎಂದು ಸಿಎಂ ಹೇಳಿದರು.

ಎಲ್ಲ ಜನರಿಗೂ ಸಮಾನ ಅವಕಾಶ ಮತ್ತು ಜಾತಿ-ವರ್ಗ ರಹಿತ ಸಮಾಜ ಸೃಷ್ಟಿಯಾಗಬೇಕು ಎನ್ನುವುದು ಸಂವಿಧಾನದ ಮೌಲ್ಯ, ಇದನ್ನು ಎತ್ತಿ ಹಿಡಿಯುವುದು ಪತ್ರಿಕಾ ವೃತ್ತಿಯ ಜವಾಬ್ದಾರಿ.

ದ್ವೇಷದ, ಪ್ರೀತಿಯಿಲ್ಲದ ಸಮಾಜ ಸೃಷ್ಟಿಸುವ ಪ್ರಯತ್ನವನ್ನ ಮಾಧ್ಯಮಗಳು ಬೆಂಬಲಿಸಬಾರದು.

ನನ್ನ ಮಾತುಗಳನ್ನು ಕೇವಲ ಪಕ್ಷದ ಚೌಕಟ್ಟಿನಲ್ಲಿ ಮಾತ್ರ ನೋಡದೆ ಸಮಾಜ ಮುಖಿಯಾಗಿ ಕೂಡ ನೋಡಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಹೇಳಿದರು.

ಸಂವಿಧಾನದ ಮೌಲ್ಯ ಎತ್ತಿ ಹಿಡಿಯುವುದು ಪತ್ರಿಕಾ ವೃತ್ತಿಯ ಜವಾಬ್ದಾರಿ-ಸಿಎಂ Read More