ಮಳೆಗೆ ಕುಸಿದುಬಿದ್ದ ಮೇಲ್ಛಾವಣಿ:ನೆರವಿಗೆ ದಾವಿಸದ ಅಧಿಕಾರಿಗಳು.

ನಂಜನಗೂಡು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಮನೆಯವರು ಗಾಯಗೊಂಡರೂ ಸಹಾಯಹಸ್ತ ನೀಡುವವರೇ ಇಲ್ಲದಂತಾಗಿದೆ.

ನಂಜನಗೂಡು ತಾಲೂಕಿನ ಹೊಸಹಳ್ಳಿ ಗ್ರಾಮದ ಮಲ್ಲಿಗಮ್ಮ ಎಂಬುವರಿಗೆ ಸೇರಿದ ವಾಸದ ಮನೆಯ ಛಾವಣಿ ಕುಸಿದಿದೆ,ಅದೃಷ್ಟವಶಾತ್ 7 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆದರೆ ಘಟನೆ ನಡೆದು ಮೂರು ದಿನಗಳಾದರೂ ಯಾವುದೇ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಇತ್ತ ತಿರುಗಿ ನೋಡಿಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

ಮನೆ ಕಳೆದುಕೊಂಡು ನಿರಾಶ್ರಿತರಾದ ಕುಟುಂಬದ ನೆರವಿಗೆ ತಾಲೂಕು ಆಡಳಿತ ಧಾವಿಸಿ,ಈ ಕುಟುಂಬಕ್ಕೆ ಪರ್ಯಾಯ ಆಸರೆ ಕಲ್ಪಿಸಿಕೊಡಬೇಕಿದೆ.

ಮಧ್ಯರಾತ್ರಿ ಮನೆಯವರು ಮಲಗಿದ್ದ ಭಾಗ ಹೊರತುಪಡಿಸಿ ಉಳಿದ ಭಾಗ ಕುಸಿದಿದೆ,ಹಾಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಶಿಥಿಲಗೊಂಡ ಮನೆ ಸರಿಪಡಿಸಿಕೊಡುವಂತೆ ಕಳೆದ ವರ್ಷದ ಪ್ರವಾಹದ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಮತ್ತು ರೆವಿನ್ಯೂ ಅಧಿಕಾರಿ ಗಮನಕ್ಕೆ ತಂದಿದ್ದೆವು, ದೇವಿರಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೂ ಮನವಿ ಪತ್ರ ನೀಡಿದ್ದೆವು ಎಂದು ಮನೆಯವರು ಬೇಸರ ತೋಡಿಕೊಂಡಿದ್ದಾರೆ.

ಕಳೆದ ವರ್ಷ ಪರಿಹಾರ ನೀಡುವುದಾಗಿ ತಿಳಿಸಿ ಭಾವಚಿತ್ರ ತೆಗೆದುಕೊಂಡು ಹೋದ ಕಂದಾಯ ಅಧಿಕಾರಿಗಳು ಪರಿಹಾರವನ್ನೂ ಕೊಡಲಿಲ್ಲ,ವಾಸದ ಮನೆಯ ಸೌಲಭ್ಯವನ್ನೂ ನೀಡಿಲ್ಲ.ಜೀವ ಹಾನಿ ಆಗಿದ್ದರೆ ಯಾರು ಹೊಣೆ ಎಂದು ಹೊಸಹಳ್ಳಿ ಗ್ರಾಮಸ್ಥರು ಮತ್ತು ಮನೆ ಕಳೆದುಕೊಂಡ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಶಾಸಕರು ಮತ್ತು ತಾಲೂಕು ಆಡಳಿತ ಎಚ್ಚೆತ್ತು ನಿರಾಶ್ರಿತರಾಗಿರುವ ಈ ಬಡ ಕುಟುಂಬಕ್ಕೆ ಆಸರೆ ನೀಡಬೇಕಿದೆ.

ಮಳೆಗೆ ಕುಸಿದುಬಿದ್ದ ಮೇಲ್ಛಾವಣಿ:ನೆರವಿಗೆ ದಾವಿಸದ ಅಧಿಕಾರಿಗಳು. Read More

ದಲಿತ ಮಹಿಳೆ ಕೊಲೆ:ನ್ಯಾಯಕ್ಕಾಗಿ ಆಗ್ರಹಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ನಂಜನಗೂಡು: ಗಟ್ಟವಾಡಿಯ ದಲಿತ ಮಹಿಳೆಯ ಕೊಲೆ ಖಂಡಿಸಿ ದೊಡ್ಡಕವಲಂದೆ ಗ್ರಾಮದಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯವರು ಪ್ರತಿಭಟನೆ ನಡೆಸಿದರು.

ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆಯ ಕೃಷ್ಣರಾಜಪುರ ಗ್ರಾಮದ ಸರ್ಕಲ್ ನಿಂದ ನಂಜನಗೂಡು ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಲ್ನಡಿಗೆ ಜಾಥಾ ನಡೆಸಿ, ದೊಡ್ಡ ಕವಲಂದೆ ಗ್ರಾಮದ ನಾಡ ಕಛೇರಿ ಮುಂಭಾಗದಲ್ಲಿ ಧರಣಿ ನಡೆಸಲಾಯಿತು.

ದಲಿತ ಸಂಘಟನೆಗಳ ಸಮನ್ವಯ ಸಮಿತಿ,ದಲಿತ ಹಕ್ಕುಗಳ ಸಮಿತಿ ಹಾಗೂ ವಿವಿಧ ದಲಿತ ಪರ ಸಂಘಟನೆಗಳ ಸದಸ್ಯರು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಗಟ್ಟವಾಡಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ಬಾಳೆ ಗಿಡಕ್ಕೆ ನೇಣು ಹಾಕಿದ್ದಾರೆ,
ಬಾಳೆ ಗಿಡಕ್ಕೆ ಯಾರಾದರೂ ನೇಣು ಹಾಕಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದರು.

ಪೊಲೀಸ್ ಸಿಬ್ಬಂದಿ ವಿಜಯ್ ಕುಮಾರ್ ಧಮ್ಕಿ ಹಾಕಿದ್ದಾರೆ, ಸಂವಿಧಾನ ಪೀಠಿಕೆಯನ್ನು ಸಹ ಪೊಲೀಸ್ ಠಾಣೆಯಲ್ಲಿ ಅಳವಡಿಸದೆ ಅಪಮಾನ ಮಾಡಿದ್ದಾರೆ. ರಕ್ಷಣೆ ನೀಡಬೇಕಾದ ಪೊಲೀಸರು ದಬ್ಬಾಳಿಕೆ ನಡೆಸುತ್ತಿರುವುದು ಬೇಸರ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಲಿತ ಮಹಿಳೆಯ ಕೊಲೆ ಪ್ರಕರಣ ನಡೆದು 11 ದಿನಗಳು ಕಳೆದರೂ ಕೂಡ ಆರೋಪಿಯ ಸಹಚರರನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ.ಈ ಕೊಲೆಯನ್ನು ಒಬ್ಬ ವ್ಯಕ್ತಿ ಮಾಡಲು ಸಾಧ್ಯವಿಲ್ಲ ಇದರ ಹಿಂದೆ ಆರೋಪಿಯ ಸಹಚರರು ಇದ್ದಾರೆ. ಈ ಕೂಡಲೇ ಸಹಚರರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಮೀಸಲು ಕ್ಷೇತ್ರದಲ್ಲಿ ನಿಂತು ಗೆದ್ದಿದ್ದಾರೆ,ಇದುವರೆಗೆ ಯಾರೂ ಬಂದು ಮಹಿಳೆಯ ಕುಟುಂಬಕ್ಕೆ ಸಾಂತ್ವಾನ ಹೇಳಿಲ್ಲ ಎಂದು ಕಿಡಿಕಾರಿದರು.

ಶಶಿಕಲಾ ಕುಟುಂಬಕ್ಕೆ ನ್ಯಾಯ ಸಿಗಬೇಕು, ಒಂದು ವಾರದಲ್ಲಿ ಇನ್ನುಳಿದ ಸಹಚರರನ್ನು ಬಂಧಿಸಬೇಕು. ಮೃತ ಮಹಿಳೆಯ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರವನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಸಮನ್ವಯ ಕಾರ್ಯಾಧ್ಯಕ್ಷ ಬಸವಟ್ಟಿಗೆ ನಾಗೇಂದ್ರ, ಗೌರವಾಧ್ಯಕ್ಷ ಗೀಕಹಳ್ಳಿ ಮಹದೇವಸ್ವಾಮಿ, ಬೊಕ್ಕಹಳ್ಳಿ ಮಹದೇವಸ್ವಾಮಿ, ಮಹದೇವ್, ಶಿವರಾಜ್, ಶಂಕರಪುರ ಮಹದೇವಸ್ವಾಮಿ, ದಲಿತ ಹಕ್ಕುಗಳ ಸಮಿತಿಯ ಕಾರ್ಯದರ್ಶಿ ರಾಜಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲಾ, ಗಟ್ಟವಾಡಿ ಮಹೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ದಲಿತ ಮಹಿಳೆ ಕೊಲೆ:ನ್ಯಾಯಕ್ಕಾಗಿ ಆಗ್ರಹಿಸಿ ದಲಿತ ಸಂಘಟನೆಗಳ ಪ್ರತಿಭಟನೆ Read More