ನ.26 ರಂದು ಆಮ್ ಆದ್ಮಿ ಪಕ್ಷದ 14ನೇ ಸಂಸ್ಥಾಪನ ದಿನಾಚರಣೆ

ಬೆಂಗಳೂರು: ಆಮ್ ಆದ್ಮಿ ಪಕ್ಷದ 14ನೇ ಸಂಸ್ಥಾಪನಾ ದಿನಾಚರಣೆಯನ್ನು ನ. 26 ರಂದು ಆಚರಿಸಲಾಗುತ್ತಿದೆ.

ಈ‌ ಕುರಿತು ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಮಾತನಾಡಿ,ಸಂಸ್ಥಾಪನಾ ದಿನಾಚರಣೆಯನ್ನು
ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಬೆಂಗಳೂರಿನ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಡಗರದಿಂದ ಆಚರಿಸಲಾಗುವುದೆಂದು ತಿಳಿಸಿದರು.

ದೇಶದಲ್ಲಿ ಅವ್ಯಾಹತವಾಗಿ ಬೇರು ಬಿಟ್ಟಿರುವ ಭ್ರಷ್ಟ ಆಡಳಿತ ವ್ಯವಸ್ಥೆ, ಪಾರಂಪರಿಕ ಪಕ್ಷಗಳ ಕುಟುಂಬ ರಾಜಕಾರಣ , ಸ್ವಜನ ಪಕ್ಷಪಾತ, ಜನಸಾಮಾನ್ಯರಿಗೆ ಮೂಲಭೂತ ಹಕ್ಕುಗಳ ನಿರಾಕರಣೆ ಇವುಗಳ ವಿರುದ್ಧ ಕಳೆದ 13 ವರ್ಷಗಳ ಹಿಂದೆ ಉದಯಿಸಿದ ಆಮ್ ಆದ್ಮಿ ಪಕ್ಷವು ಕೇವಲ ರಾಜಕೀಯ ಪಕ್ಷವಾಗಿರದೆ ಜನಪರ ರಾಜಕೀಯ ಆಂದೋಲನವಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬ ಜನಸಾಮಾನ್ಯನು ಸಹ ರಾಜಕೀಯ ಹಕ್ಕುಗಳನ್ನು ಪಡೆಯಬೇಕೆಂಬುದೇ ಪಕ್ಷದ ಹೆಗ್ಗುರಿಯಾಗಿದೆ. ಜನಸಾಮಾನ್ಯನಿಂದಲೇ ಜನಸಾಮಾನ್ಯನ ಮೂಲಭೂತ ಸಮಸ್ಯೆಗಳೆಲ್ಲ ಪರಿಹಾರ ಆಗಬೇಕೆಂಬುದು ಪಕ್ಷದ ಆಶಯವಾಗಿದೆ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ನಮ್ಮ ಜನಪ್ರಿಯ ನಾಯಕ ಅರವಿಂದ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಪಕ್ಷವು ದೆಹಲಿ, ಪಂಜಾಬ್ ರಾಜ್ಯಗಳಲ್ಲಿ ಅಧಿಕಾರವನ್ನು ಸ್ಥಾಪಿಸಿ ಶಿಕ್ಷಣ, ಆರೋಗ್ಯ ಹಾಗೂ ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಕ್ರಾಂತಿಕಾರಕ ಮಾರ್ಪಾಡುಗಳನ್ನು ಮಾಡಿರುವುದು ನಮ್ಮ ಪಕ್ಷದ ಪ್ರಮುಖ ಸಾಧನೆಯಾಗಿದೆ ಎಂದು ವಿವರಿಸಿದರು.

ಮುಂಬರುವ ದಿವಸಗಳಲ್ಲಿ ಗುಜರಾತ್, ಗೋವಾ, ಕರ್ನಾಟಕ , ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಪಕ್ಷವು ಆಡಳಿತವನ್ನು ಸ್ಥಾಪಿಸುವುದರಲ್ಲಿ ಸಂಘಟನಾತ್ಮಕವಾಗಿ ಮುನ್ನಡೆಯನ್ನು ಸಾಧಿಸುತ್ತಿದೆ.

ಮುಂಬರುವ ದಿವಸಗಳಲ್ಲಿ ಪರಂಪರಾನುಗತ ಪಕ್ಷಗಳ ಸ್ಥಾಪಿತ ಹಿತಾಸಕ್ತಿಗಳನ್ನು ಮುರಿದು ದೇಶದ ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ವ್ಯವಸ್ಥೆಯನ್ನು ಮರು ಸ್ಥಾಪಿಸುವುದೇ ಪಕ್ಷದ ಪ್ರಮುಖ ಉದ್ದೇಶವಾಗಿದೆ ಎಂದು ಜಗದೀಶ್ ವಿ.ಸದಂ ತಿಳಿಸಿದರು.

ನಂತರ ಮಾತನಾಡಿದ ಪಕ್ಷದ ರಾಜ್ಯ ಖಜಾಂಚಿ ಪ್ರಕಾಶ್ ನೆಡುನಂಗಡಿ ಅವರು 14ನೇ ವರ್ಷದ ಸಂಸ್ಥಾಪನಾ ದಿನಾಚರಣೆ ನಿಮಿತ್ತ ರಾಜ್ಯದಲ್ಲಿಯೂ ಎಲ್ಲಾ ಕಡೆ ವಿಜೃಂಭಣೆಯಿಂದ ಆಚರಿಸಿ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಮಾದರಿಯಾಗಿ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಚಾರ ಸಮಿತಿ ಉಪಾಧ್ಯಕ್ಷ ಲಕ್ಷ್ಮಿಕಾಂತ ರಾವ್ ಉಪಸ್ಥಿತರಿದ್ದರು.

ನ.26 ರಂದು ಆಮ್ ಆದ್ಮಿ ಪಕ್ಷದ 14ನೇ ಸಂಸ್ಥಾಪನ ದಿನಾಚರಣೆ Read More