ರಾ. ಹೆದ್ದಾರಿ ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಡಿಪಿಆರ್ ಸಿದ್ಧ: ಮಂಜುನಾಥ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಬೆಂಗಳೂರು-ದಿಂಡಿಗಲ್ (ಕೊಳ್ಳೇಗಾಲ) ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಲು ಡಿಪಿಆರ್ ಸಿದ್ದವಾಗಿದೆ. ಅಂಡರ್ ಪಾಸ್ ಕಾಮಗಾರಿ ಕೂಡಾ ಡಿಪಿಆರ್‌ನಲ್ಲಿ ಸೇರಿದೆ
ಎಂದು ‌ಹನೂರು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ಮೇಲ್ಸೇತುವೆ ಕಾರ್ಯವನ್ನು ಡಿಪಿಆರ್‌ನಲ್ಲಿ ಸೇರಿಸಿಕೊಳ್ಳುವಂತೆ ಸಲಹೆ ಮಾಡಿದ್ದೇನೆ, ನಾಲ್ಕು ಜಂಕ್ಷನ್ ಗಳಿದ್ದು ಸತ್ತೇಗಾಲ ಜಂಕ್ಷನ್ ಕೊಳ್ಳೇಗಾಲದಿಂದ ಬರುವ ಸತ್ತೇಗಾಲ ಪ್ರವೇಶದ್ವಾರ ಹೆದ್ದಾರಿಯ ಬೈಪಾಸ್ ತಿರುವಿನಿಂದ ಉಗನಿಯ ರಸ್ತೆವರೆಗೆ ಫ್ಲೈ ಓವರ್ ಆಗಿ ಅಲ್ಲಿ 2 ಅಂಡರ್ ಪಾಸ್ ಆದಾಗ ಸಮಸ್ಯೆ ಬಗೆಹರಿದು ಅಪಘಾತಗಳಾಗುವುದು ತಪ್ಪಲಿದೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಜೊತೆ ತಾಲ್ಲೂಕಿನ ನರೀಪುರ ಹಾಗೂ ಸತ್ತೇಗಾಲದ ಬಳಿ ರಾಷ್ಟ್ರೀಯ ಹೆದ್ದಾರಿ ಪರಿಶೀಲನೆ ನಡೆಸಿ ಶಾಸಕರು ಮಾತನಾಡಿದರು.

ಈ ವೇಳೆ ಸತ್ತೇಗಾಲ ಗ್ರಾಮಸ್ಥರು ನಾವು ಜೂನ್ ತಿಂಗಳಲ್ಲಿ ಶಾಸಕರು, ಜಿಲ್ಲಾಧಿ ಕಾರಿಗಳು ಹಾಗೂ ಎನ್‌ಹೆಚ್ ಅಧಿಕಾರಿಗಳಿಗೆ ಸತ್ತೇಗಾಲ ರಸ್ತೆಯಲ್ಲಿ ಹಿಂದೆ ಅಪಘಾತಗೊಂಡು ಹತ್ತಾರು ಮಂದಿ ಪ್ರಾಣ ಕಳೆದುಕೊಂಡಿರುವ ಬಗ್ಗೆ ಗಮನಕ್ಕೆ ತರಲಾಗಿದೆ. ಇಲ್ಲಿಯವರೆಗೂ ಎರಡು ಕಡೆ ಹಂಪ್ಸ್ ಬಿಟ್ಟರೆ ಯಾವುದೇ ಸಮಸ್ಯೆ ಬಗೆ ಹರಿದಿಲ್ಲ. ನಾವು ಹೆದ್ದಾರಿಗೆ ಭೂಮಿ ಕೊಟ್ಟಿದ್ದೇವೆ, ಆದರೆ ಇಂದು ನಮ್ಮ ಜಮೀನಿಗೆ ನಾವು ಇಳಿಯಲು ಆಗುತ್ತಿಲ್ಲ, ಸಮಸ್ಯೆ ಬಗೆ ಹರಿಯುವವರೆಗೂ ನಾವು ಟೋಲ್ ಸಂಗ್ರಹ ಮಾಡಲು ಬಿಡುವುದಿಲ್ಲ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳ್ಳಬೇಕೆಂದು ಆಗ್ರಹಿಸಿದರು.

ಆಗ ಶಾಸಕರು, ತಕ್ಷಣಕ್ಕೆ ಮೇಲ್ಲೇತುವೆ ನಿರ್ಮಿಸಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳು ಡಿಪಿಆರ್ ತಯಾರು ಮಾಡಿ ಸರ್ಕಾರದ ಅನುಮೋದನೆ ಪಡೆಯಬೇಕಾಗಿದೆ. ಕನಿಷ್ಠ ಆರು ತಿಂಗಳಾದರೂ ಕಾಲಾವಕಾಶ ಬೇಕು. ಅಲ್ಲಿಯವರೆಗೆ ಸುರಕ್ಷಿತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಶಾಸಕ ಮಂಜುನಾಥ್ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಎನ್‌,ಹೆಚ್ ಅಧಿಕಾರಿಗಳಿಗೆ ನಿಮಗೆ ನಾವು ಇದಕ್ಕಿಂತ ಹೆಚ್ಚು ಸಹಾಯ ಮಾಡಲು ಆಗುವುದಿಲ್ಲ. ಆದಷ್ಟು ಬೇಗ ಕಾಮಗಾರಿ ಮುಗಿಸಿ ಸಮಸ್ಯೆ ಬಗ್ಗೆ ಹರಿಸಿ ಶಾಶ್ವತ ಪರಿಹಾರಕ್ಕಾಗಿ ಹೆದ್ದಾರಿಗೆ ಮೇಲ್ಲೇತುವೆ ನಿರ್ಮಿಸಬೇಕು, ಗ್ರಾಮಕ್ಕೆ ಸಂಪರ್ಕ ಕಲಿಸಲು ಅಂಡರ್ ಪಾಸ್ ರಸ್ತೆ ಕಲ್ಪಿಸಬೇಕೆಂದು ಸೂಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ  ಎಂ.ಆರ್.ಮಂಜುನಾಥ್ ಅವರು ಈ ಹೆದ್ದಾರಿ 2012-13ರಲ್ಲಿ ವಿನ್ಯಾಸವಾಗಿ ಕಾಮಗಾರಿ ಪ್ರಾರಂಭಿಸಿ ಅರ್ಧಕ್ಕೆ ಬಿಟ್ಟು ಹೋಗಿದ್ದರಿಂದ ಇಷ್ಟೆಲ್ಲ ಸಮಸ್ಯೆ ಅವಘಡಕ್ಕೆ ಕಾರಣವಾಗಿದೆ ಕಳೆದ ಹತ್ತು ವರ್ಷಗಳಿಂದ ದಟ್ಟಣೆ ವೇಗವಾಗಿ ಬೆಳೆಯುತ್ತಿರುವುದರಿಂದ ನಾಲ್ಕು ಪಥದ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ವಿಸ್ತೃತ ವರದಿ ಸಿದ್ಧವಾಗುತ್ತಿದೆ ಎಲ್ಲಾ ಘಟನೆಗಳಾಗಿರುವು ದರಿಂದ ಸೂಕ್ಷ್ಮವಾಗಿ ಗಮನಿಸಿ ಈ ”ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೆ ಏರಿಸಲು ಡಿಪಿಆರ್ ಸಿದ್ದವಾಗಿದೆ, ನಾಲ್ಕು ಜಂಕ್ಷನ್ ಗಳಿದ್ದು ಸತ್ತೇಗಾಲ ಜಂಕ್ಷನ್ ಕೊಳ್ಳೇಗಾಲದಿಂದ ಬರುವ ಸತ್ತೇಗಾಲ ಪ್ರವೇಶದ್ವಾರ ಹೆದ್ದಾರಿಯ ಬೈಪಾಸ್ ತಿರುವಿನಿಂದ ಉಗನಿಯ ರಸ್ತೆವರೆಗೆ ಫ್ಲೈ ಓವರ್ ಆಗಿ ಅಲ್ಲಿ 2 ಅಂಡರ್ ಪಾಸ್ (ಕೆಳಸೇತುವೆ) ಆದಾಗ ಈ ಸಮಸ್ಯೆ   ಬಗೆಹರಿದು ಅಪಘಾತಗಳಾಗುವುದು ತಪ್ಪಲಿದೆ. ಹಾಗೆಯೇ ಉಪ್ಪಾರರ ಬೀದಿಯ ರಸ್ತೆ, ಅವರು ಈ ಅಂಡರ್ ಪಾಸ್ ನಲ್ಲೇ ಓಡಾಡಿಕೊಂಡರೆ ಸಮಸ್ಯೆ ಬರುವುದಿಲ್ಲ ಆಗ ಯಾವುದೇ ಅಪಘಾತಗಳು ಸಂಭವಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

10 ದಿನದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ಹೇಳಿದ್ದೇವೆ. ಏನಾಗಬೇಕು ಎಂಬುದನ್ನು ಲಿಸ್ಟ್ ಮಾಡಿ ಸ್ಪೀಡ್ ಬ್ರೇಕರ್ ಹಾಕಿದ್ದಾರೆ, ವಿದ್ಯುತ್ ದೀಪಗಳನ್ನು ಅಳವಡಿಸುವ ಕಾರ್ಯ ಬಾಕಿ ಇದ್ದು ಅದನ್ನು ಮಾಡಿಕೊಡುವಂತೆ ಒತ್ತಾಯ ಮಾಡಿದ್ದೇನೆ. ಬಾಕಿ ಇರುವುದನ್ನು ಮುಗಿಸಬೇಕು ಎಂದು ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾಗಾಗಿ ಮಾಡುತ್ತಾರೆ ಮಾಡದೇ ಹೋದರೆ ಇದೇ 14ರಂದು ಡಿಸಿ ವರ್ಚುಯಲ್ ಸಭೆ ತೆಗೆದುಕೊಳ್ಳಲು ಸೂಚಿಸಿದ್ದೇನೆ ಅಲ್ಲಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ ಎಂದು ಮಂಜುನಾಥ್ ತಿಳಿಸಿದರು.

ಈ ಸಂದರ್ಭದಲ್ಲಿ ಕೊಳ್ಳೇಗಾಲ ಉಪವಿಭಾಗಧಿಕಾರಿ ದಿನೇಶ್ ಕುಮಾರ್ ಮೀನಾ,ತಹಸೀಲ್ದಾರ್ ಬಸವರಾಜು, ಎನ್‌.ಹೆಚ್ ಅಧಿಕಾರಿಗಳಾದ ಚಾರುಲತಾ ಜೈನ್, ವಿಶ್ವ, ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಸೆಸ್ಕ್ ಎಇಇ ರಾಜು, ಲೋಕೋಪಯೋಗಿ ಎಇಇ ಪುರುಷೋತ್ತಮ್, ನೀರಾವರಿ ಇಲಾಖೆಯ  ಎಇಇ ರಾಮಕೃಷ್ಣ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ರಾ. ಹೆದ್ದಾರಿ ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಡಿಪಿಆರ್ ಸಿದ್ಧ: ಮಂಜುನಾಥ್ Read More

ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ:ಪತ್ನಿ,ಪ್ರಿಯತಮನಿಗೆ ಜೀವಾವಧಿ ಶಿಕ್ಷೆ

ಚಾಮರಾಜನಗರ/ಕೊಳ್ಳೇಗಾಲ: ವಿವಾಹಿತೆ ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು ಆತನ ಜತೆ‌ ಸೇರಿ ಪತಿಯನ್ನು ಕೊಂದಿರುವುದು ಸಾಬೀತಾದ ಹಿನ್ನೆಲೆಯಲ್ಲಿ
ಕೊಳ್ಳೇಗಾಲ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.

ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಗುಂಡಿಮಾಳ ಗ್ರಾಮದ ರಾಜಶೇಖರಮೂರ್ತಿ ಕೊಲೆಯಾದ ದುರ್ದೈವಿ.

ಆರೋಪಿಗಳಾದ ರಾಜಶೇಖರ್ ಅವರ ಪತ್ನಿ ನಂದಿನಿ ಮತ್ತು ಆಕೆಯ ಪ್ರಿಯಕರ ದಿನಕರನಿಗೆ ಅಪರ ಜಿಲ್ಲಾ ಮತ್ತು ಸತ್ರ‌ ನ್ಯಾಯಾಲಯದ ನ್ಯಾಧೀಶರಾದ‌ ಟಿ.ಸಿ.ಶ್ರೀಕಾಂತ್ ಅವರು ಜೀವಾವಧಿ ಶಿಕ್ಷೆ ಮತ್ತು ದಂಡವನ್ನು ವಿಧಿಸಿದ್ದಾರೆ.

ವಿವರ:
ರಾಜಶೇಖರಮೂರ್ತಿ ಅವರೊಂದಿಗೆ ನಂದಿನಿ ಮದುವೆಯಾಗಿ ಕಳೆದ 13 ವರ್ಷಗಳಿಂದ ಸಂಸಾರ ನಡೆಸುತ್ತಾ ಪ್ರಾರಂಭದಲ್ಲಿ ಅನ್ನೋನ್ಯವಾಗಿದ್ದಳು.

ನಂತರ ದಿನಕರನೊಂದಿಗೆ ಆಕ್ರಮ ಸಂಬಂಧವನ್ನಿಟ್ಟುಕೊಂಡಿದ್ದಳು. ಇದೇ ವಿಚಾರಕ್ಕೆ ಗಲಾಟೆಯಾಗಿ ಗ್ರಾಮದ ಮುಖಂಡರ ಸಮಕ್ಷಮದಲ್ಲಿ 2-2-2021 ಮತ್ತು 20-4-2021 ರಂದು ನ್ಯಾಯ ಪಂಚಾಯ್ತಿ ಸೇರಿಸಿ ಪ್ರತ್ಯೇಕ ಒಪ್ಪಂದ ಮಾಡಿಸಿ ಒಟ್ಟು 3 ಒಪ್ಪಂದ ಪತ್ರಗಳನ್ನು ಮಾಡಿಸಲಾಗಿತ್ತು.

ಆದರೂ ನಂದಿನಿ ಮತ್ತು ದಿನಕರ ಪುನಃ ಸಂಪರ್ಕದಲ್ಲಿದ್ದರು.23-06-2021 ರಂದು ರಾಜಶೇಖರಮೂರ್ತಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ದಿನಕರ ಮನೆಗೆ ಬಂದಿದ್ದಾನೆ.

ಸ್ವಲ್ಪ ಹೊತ್ತಿನಲ್ಲೇ ರಾಜಶೇಖರಮೂರ್ತಿ ಕೂಡಾ ಮನೆಗೆ ಬಂದಿದ್ದಾರೆ. ಆಗ ನಂದಿನಿ ಮತ್ತು ದಿನಕರ ಜೊತೆಯಲ್ಲಿ ಇದ್ದುದ್ದನ್ನು ನೋಡಿ ಆಕ್ರೋಶಗೊಂಡು ದಿನಕರನ ಮೇಲೆ ಗಲಾಟೆ ಮಾಡಿದ್ದಾರೆ.

ಆಗ ನಂದಿನಿ ಮನೆಯಲ್ಲಿದ್ದ ಖಾರದ ಪುಡಿಯನ್ನು ಗಂಡನ ಕಣ್ಣಿಗೆ ಎರಚಿ ಮಮ್ಮಟ್ಟಿಗೆ ಹಾಕುವ ಕಾವಿನಿಂದ ರಾಜಶೇಖರಮೂರ್ತಿ ಅವರ ತಲೆಗೆ ಹೊಡೆದಿದ್ದಾಳೆ. ನಂತರ ದಿನಕರ ಕೂಡಾ ಅದೇ‌ ಕಾವು ಪಡೆದು ರಾಜಶೇಖರಮೂರ್ತಿ ಅವರ ಮುಖಕ್ಕೆ ಹೊಡೆದಾಗ ಆತ ಪ್ರಜ್ಞೆ ತಪ್ಪಿ ನೆಲದ ಮೇಲೆ ಕುಸಿದು ಬಿದ್ದಿದ್ದಾರೆ.ಅವರ ಮೂಗಿನಿಂದ ರಕ್ತ ಬಂದುದನ್ನು ಕಂಡು ಆರೋಪಿಗಳಿಬ್ಬರೂ ಈ ಕೃತ್ಯವನ್ನು ಮರೆಮಾಚುವ ಸಲುವಾಗಿ ರಾಜಶೇಖರಮೂರ್ತಿಯ ಕೈ ಕಾಲು ಹಿಡಿದು ವಾಸದ ಮನೆಯ ಹಿಂಭಾಗದಲ್ಲಿರುವ ಟಾಯ್ಲೆಟ್ ಗುಂಡಿಯಲ್ಲಿ ತಲೆ ಕೆಳಗಾಗಿ ಹಾಕಿ ಟಾಯ್ಲೆಟ್ ಗುಂಡಿಯ ಸಿಮೆಂಟ್ ಪ್ಲೇಟನ್ನು ಮುಚ್ಚಿಬಿಟ್ಟಿದ್ದಾರೆ.

ಜತೆಗೆ ರಾಜಶೇಖರಮೂರ್ತಿಯ ಬಟ್ಟೆಗಳು, ಹಲ್ಲೆಗೆ ಉಪಯೋಗಿಸಿದ ಕಾವು ನೆಲದ ಮೇಲೆ ಬಿದ್ದಿದ್ದ ರಕ್ತವನ್ನು ಶ್ಯಾಂಪು ಪ್ಯಾಟ್ ಬಳಸಿ ಬಟ್ಟೆಗಳನ್ನು ಸುಟ್ಟು ಹಾಕಿದ್ದಾರೆ.

ನಂತರ ನಂದಿನಿ ಧರಿಸಿದ್ದ ನೈಟಿಯನ್ನು ಒಗೆದು ಸಾಕ್ಷಿ ನಾಶಪಡಿಸಿ ಮಾರನೇ ದಿನ ಏನೂ ತಿಳಿಯದವಳಂತೆ ರಾಜಶೇಖರಮೂರ್ತಿ ಕೆಲಸಕ್ಕೆ ಹೋಗಿದ್ದಾನೆಂದು ಆತನ ತಂದೆ ತಾಯಿಗೆ ತಿಳಿಸಿದ್ದಾಳೆ.

ರಾಜಶೇಖರಮೂರ್ತಿ ಅವರ ಸಹೋದರಿಯ ಮಕ್ಕಳನ್ನು ಬಳಸಿಕೊಂಡು ಟಾಯ್ಲೆಟ್ ಗುಂಡಿಗೆ ಮಣ್ಣು ಹಾಕಿ ಮುಚ್ಚಿದ್ದಾರೆ.

ಒಂದೆರಡು ದಿನವಾದರೂ ಮಗ ಕಾಣದೆ ಹೋದಾಗ ರಾಜಶೇಖರಮೂರ್ತಿ ಅವರ ತಂದೆ ಮಗ ಕಾಣೆಯಾದ ಬಗ್ಗೆ ಠಾಣೆಗೆ ದೂರನ್ನು ನೀಡಿದ್ದಾರೆ.

ನಂತರ ಮನೆಯ ಹಿಂಭಾಗ ಟಾಯ್ಲೆಟ್ ಗೊಂಡಿಯ ಸುತ್ತ ದುರ್ವಾಸನೆ ಬರುತ್ತಿದ್ದನ್ನು ಗಮನಿಸಿ ಅನುಮಾನದಿಂದ ಗುಂಡಿಯ ಸಿಮೆಂಟ್ ಪ್ಲೇಟನ್ನು ಗ್ರಾಮಸ್ಥರ ಸಮ್ಮುಖದಲ್ಲಿ ತೆಗೆಸಿ ನೋಡಿದಾಗ ರಾಜಶೇಖರಮೂರ್ತಿಯ ಶವ ಕೊಳೆತ ಸ್ಥಿತಿಯಲ್ಲಿದ್ದುದು ಕಂಡುಬಂದಿದೆ.

ನಂತರ ಮಗನ ಕೊಲೆಯಾದ ಬಗ್ಗೆ ತಂದೆ ನೀಡಿದ ದೂರಿನ ಆಧಾರದಲ್ಲಿ ತನಿಖಾಧಿಕಾರಿ ಸಂತೋಷ್ ಕಶ್ಯಪ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.

ಈ ಪ್ರ ರಣದಲ್ಲಿ ಎ 1 ಆರೋಪಿ ನಂದಿನಿ,ಎ2 ಆರೋಪಿ ದಿನಕರ ವಿರುದ್ಧ ನ್ಯಾಯಾಲಯ ವಿಚಾರಣೆ ನಡೆಸಿ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಆರೋಪಿಗಳಿಬ್ಬರಿಗೂ ಜೀವಾವಧಿ ಶಿಕ್ಷೆ ಮತ್ತು 50,000 ರೂ ದಂಡ ವಿಧಿಸಿ ತೀರ್ಪು ನೀಡಿದೆ.

ಸಿ.ಡಿ ಗಿರೀಶ್, ಸರ್ಕಾರಿ ಅಭಿಯೋಜಕರು, ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಳ್ಳೇಗಾಲ ಇವರು ಸರ್ಕಾರದ ಪರವಾಗಿ, ವಾದ ಮಂಡಿಸಿದರು.

ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ:ಪತ್ನಿ,ಪ್ರಿಯತಮನಿಗೆ ಜೀವಾವಧಿ ಶಿಕ್ಷೆ Read More

ಮಾದಪ್ಪನ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸಕ್ಕೆ ತೆರೆ

ಹನೂರು: ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಾದಪ್ಪನ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ ಕೊನೆಯ ದಿನ ಭಕ್ತಸಾಗರವೇ ಹರಿದು ಬಂದಿತ್ತು.

ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಅಂದು ಬೆಳಿಗ್ಗೆ 9:15 ರಿಂದ 9:55 ರ ಗಂಟೆಯಲ್ಲಿ ಸಲ್ಲುವ ಶುಭ ಲಗ್ನದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವು ಜರುಗಿತು.

ಸಂಜೆ 6:30 ರಲ್ಲಿ ಸಾಲೂರು ಮಠದ ಪೀಠಧ್ಯಕ್ಷರಾದ ಡಾ. ಶಾಂತಮಲ್ಲಿಕಾರ್ಜುನ ಸ್ವಾಮಿ, ಪ್ರಾಧಿಕಾರದ ಕಾರ್ಯದರ್ಶಿ ಎ ಇ ರಘು, ಡಿವೈಎಸ್ಪಿ ಧರ್ಮೇಂದ್ರ ಸೇರಿದಂತೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ತೆಪ್ಪೋತ್ಸವ ನಡೆಯಿತು.

ತೆಪ್ಪೋತ್ಸದ ವೇಳೆ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದರು.ತೆಪ್ಪೋತ್ಸವದ ಬಳಿಕ ದೀಪಾವಳಿ ಜಾತ್ರೆಗೆ ತೆರೆ ಬಿದ್ದಿತು.

ಮಾದಪ್ಪನ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸಕ್ಕೆ ತೆರೆ Read More

ಕಾವೇರಿ ವನ್ಯಜೀವಿ ವಿಭಾಗದಲ್ಲಿ ಜಿಂಕೆ ಬೇಟೆ : ವ್ಯಕ್ತಿ ವಿರುದ್ಧ ಪ್ರಕರಣ

ಚಾಮರಾಜನಗರ: ತೋಟದಲ್ಲಿ ಜಿಂಕೆ ಬೇಟೆಯಾಡಿ ಮಾಂಸವನ್ನು ಬೇರ್ಪಡಿಸಿ ಚರ್ಮವನ್ನು ಅಲ್ಲಿಯೇ ಬಿಸಾಡಿ ಹೋಗಿದ್ದ ವ್ಯಕ್ತಿಯ ಮೇಲೆ ಕಾವೇರಿ ವನ್ಯಜೀವಿ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಹನೂರು ತಾಲೂಕಿನ ಅಜ್ಜಿಪುರ ಗ್ರಾಮದ ನಾಗರಾಜು ( 40) ಎಂಬಾತನ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಕಾವೇರಿ ವನ್ಯ ಧಾಮದ ಕಾಂಪಾರ್ಮೆಂಟ್ 40ರ ಹನೂರು ವನ್ಯಜೀವಿ ವಲಯ ಶಾಗ್ಯ ಶಾಖೆಯ ಎಲ್ಲೇಮಾಳ ವ್ಯಾಪ್ತಿಯ ಅಜ್ಜಿಪುರ ಗ್ರಾಮದ ಸರ್ವೆ ನಂಬರ್ 442/2ರ ಜಮೀನಿನಲ್ಲಿ ಜಿಂಕೆಯನ್ನು ಬೇಟೆಯಾಡಿ ಅದರ ದೇಹವನ್ನು ತುಂಡರಿಸಿ ಮಾಂಸವನ್ನ ಬೇರ್ಪಡಿಸಿ ಜಿಂಕೆಯ ಚರ್ಮವನ್ನು ಅಲ್ಲಿಯೇ ಬಿಟ್ಟು ಹೊಗಲಾಗಿತ್ತು.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಜಿಂಕೆ ಬೇಟೆಯಾಡಿದ ಅಜ್ಜಿಪುರ ಗ್ರಾಮದ ನಾಗರಾಜು ಎಂಬಾತನನ್ನ ಗುರುತಿಸಿ ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುರೇಂದ್ರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮರಿಸ್ವಾಮಿ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ನಿರಂಜನ್ ಅವರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ಗೋಪಾ ಅವರು ಪ್ರಕರಣ ದಾಖಲು ಮಾಡಿದ್ದಾರೆ.

ಕಾವೇರಿ ವನ್ಯಜೀವಿ ವಿಭಾಗದಲ್ಲಿ ಜಿಂಕೆ ಬೇಟೆ : ವ್ಯಕ್ತಿ ವಿರುದ್ಧ ಪ್ರಕರಣ Read More

ಬೈಕ್ ಗೆ ಬಸ್ ಡಿಕ್ಕಿ: ಇಬ್ಬರು ಯುವಕರು ಸಾವು

ಚಾಮರಾಜನಗರ: ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ತಾಳಿಬೆಟ್ಟ ಕ್ರಾಸ್ ನಲ್ಲಿ ನಡೆದಿದೆ.

ಬೆಂಗಳೂರು ಮೂಲದ ಪ್ರದೀಪ್ (20) ಹಾಗೂ ಭವೀಶ್ (21) ಮೃತಪಟ್ಟ ನತದೃಷ್ಟರು.

ಈ ನತದೃಷ್ಟ ಯುವಕರು ಬೆಂಗಳೂರಿನಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದರು. ಈ ವೇಳೆ ಮಲೆ ಮಹದೇಶ್ವರ ಬೆಟ್ಟದಿಂದ ಮೈಸೂರಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ.

ಸ್ಥಳಕ್ಕೆ ರಾಂಪುರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೈಕ್ ಗೆ ಬಸ್ ಡಿಕ್ಕಿ: ಇಬ್ಬರು ಯುವಕರು ಸಾವು Read More

ಕ್ಯಾನ್ಸರ್ ಪೀಡಿತ ಬಾಲಕನ ನೆರವಿಗೆ ಮನವಿ

ಹನೂರು: ಆಟವಾಡುತ್ತಾ ಬೆಳೆಯಬೇಕಾದ ಮಗು ಈಗ ಆಸ್ಪತ್ರೆಗೆ ಅಲೆಯುವಂತಾಗಿದೆ,ಎಳವೆಯಲ್ಲೇ ಈ ಮಗುವಿಗೆ ಮಾರಣಾಂತಿಕ ಕಾಯಿಲೆ ಕಿತ್ತುತಿನ್ನುತ್ತಿದೆ.

ಹನೂರು ತಾಲ್ಲೂಕಿನ ಅಜ್ಜಿಪುರ ಗ್ರಾಪಂ ವ್ಯಾಪ್ತಿಯ ದೊಮ್ಮನಗದ್ದೆ ಗ್ರಾಮದ ಮುರುಗ ಮತ್ತು ಪ್ರಿಯಾಂಕ ದಂಪತಿಯ ಪುತ್ರ ಪ್ರಜ್ವಲ್‌ ಬ್ಲಡ್ ಕ್ಯಾನ್ಸ‌ರ್ ನಿಂದ ಬಳಲುತ್ತಿದ್ದು ಪೋಷಕರು ದುಖಿಃಸುತ್ತಿದ್ದಾರೆ.

ಈಗಿನ್ನೂ 1ನೇ ತರಗತಿಯಲ್ಲಿ ಪ್ರಜ್ವಲ್ ವ್ಯಾಸಂಗ ಮಾಡುತ್ತಿದ್ದು ಮೊಳಕೆಯಲ್ಲೆ ಅವನ ಬಾಳು ಕಮರಿಹೋಗುವಂತಾಗಿದೆ.

ಈಗಾಗಲೆ ಮನೆಯಲ್ಲಿದ್ದ ಚಿನ್ನ ಮಾರಿ ಹಾಗೂ ಸಂಬಂಧಿಕರಿಂದ ಸಾಲ ತಂದು ಚಿಕಿತ್ಸೆ ಕೊಡಿಸಲಾಗುತ್ತಿದೆ,ಆದರೆ ಪೋಷಕರು ಕಡು ಬಡವರಾಗಿರುವುದರಿಂದ ದಾನಿ ಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

ಈಗಾಗಲೇ ಬಾಲಕನಿಗೆ ಚಿಕಿತ್ಸೆ ಪ್ರಾರಂಭಿಸಲಾಗಿದೆ,ಆದರೆ ಇನ್ನೂ ಹೆಚ್ಚಿನ ಚಿಕಿತ್ಸೆಗೆ ಹಣದ ಅವಶ್ಯಕತೆ ಇರುವುದರಿಂದ ದಾನಿಗಳು ಸಹಾಯ ಮಾಡಬೇಕೆಂದು ಪೊಷಕರು ಕೋರಿದ್ದಾರೆ.

ಮುರುಗ ಮತ್ತು ಪ್ರಿಯಾಂಕ ಅವರಿಗೆ ಇಬ್ಬರು ಮಕ್ಕಳಿದ್ದು ಪ್ರಜ್ವಲ್ ಮೊದಲನೆಯ ಮಗ.

ಈ ಬಗ್ಗೆ ಎಪ್ರಜ್ವಲ್ ತಂದೆ ಮುರುಗ ಮಾತನಾಡಿ, ನಾವು ಕಡು ಬಡವರಾಗಿದ್ದು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಇಬ್ಬರು ಮಕ್ಕಳಲ್ಲಿ ಹಿರಿಯ ಮಗ ಪ್ರಜ್ವಲ್‌ಗೆ ಕ್ಯಾನ್ಸ‌ರ್ ಕಾಣಿಸಿಕೊಂಡಿದೆ ಏನು ಮಾಡುವುದೆಂದು‌ ದಿಕ್ಕು ತೋಚದಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಪ್ರಜ್ವಲ್ ಹಾಗೂ ತಾಯಿ ಪ್ರಿಯಾಂಕ ಅವರ ಹೆಸರಿನಲ್ಲಿ ರಾಮಾಪುರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಜಂಟಿ ಖಾತೆ ತೆರೆಯಲಾಗಿದ್ದು, ಖಾತೆ ಸಂಖ್ಯೆ 44308824080 ಇದಕ್ಕೆ ಅಥವಾ ಫೋನ್ ಪೇ ಸಂಖ್ಯೆ 8150858595ಕ್ಕೆ ಸಹಾಯ ಮಾಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಕ್ಯಾನ್ಸರ್ ಪೀಡಿತ ಬಾಲಕನ ನೆರವಿಗೆ ಮನವಿ Read More

ಹನೂರು ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜುನಾಥ್ ಚಾಲನೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಮೇಗಲದೊಡ್ಡಿ, ಜಾಗೇರಿ ಸೇರಿದಂತೆ ಹನೂರು ವಿಧಾನಸಭಾ ಕ್ಷೇತ್ರದ ವಿವಿದೆಡೆ ಸುಮಾರು 75 ಲಕ್ಷ ರೂಗಳ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹನೂರು ಶಾಸಕ ಎಂ.ಆರ್.ಮಂಜುನಾಥ್ ಗುದ್ದಲಿ ಪೂಜೆ ನೆರವೇರಿಸಿದರು.

ಅಲ್ಪಸಂಖ್ಯಾತರ ಅಭಿವೃದ್ಧಿ ಅನುದಾನದಡಿ ಮೇಗಲದೊಡ್ಡಿ ಗ್ರಾಮದಿಂದ ಪ್ರಕಾಶ್ ಪಾಳ್ಯದವರೆಗೆ ಕೊಳ್ಳೇಗಾಲ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಗ್ರಾಮದ ಮುಖ್ಯ ರಸ್ತೆಗೆ ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ಡಾಂಬರು ರಸ್ತೆ, ಚರಂಡಿ, ಹಾಗೂ ಸೇತುವೆ
ನಿರ್ಮಾಣ ಕಾಮಗಾರಿ, ಜಾಗರಿಯ ಫಾಸ್ಕಲ್ ನಗರದ ಅಲ್ಪಸಂಖ್ಯಾತರ ಬೀದಿಯಲ್ಲಿ 15 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ ಹಾಗೂ ಬಂಡಳ್ಳಿ ಗ್ರಾಮದ ಅಲ್ಪಸಂಖ್ಯಾತರ ಬೀದಿಯಲ್ಲಿ ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಂ.ಆರ್.ಮಂಜುನಾಥ್, ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಲ್ಪಸಂಖ್ಯಾತರ ಬೀದಿಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಈ ಗ್ರಾಮದಲ್ಲಿ ಸುಮಾರು 75 ಲಕ್ಷ ರೂ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಅಲ್ಪಸಂಖ್ಯಾತರಲ್ಲದೆ ಕ್ಷೇತ್ರದ ಎಲ್ಲಾ ಸಮುದಾಯದ ಜನರಿಗೂ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮೇಗಲದೊಡ್ಡಿ ಗ್ರಾಮಸ್ಥರು ಗ್ರಾಮದಲ್ಲಿ ಪುರುಷ ಹಾಗೂ ಮಹಿಳಾ ಸ್ವಸಹಾಯ ಸಂಘಗಳಿದ್ದು ಸಂಘದ ಸದಸ್ಯರು ಅಭಿವೃದ್ಧಿ ಚಿಂತನೆ ಕುರಿತು ಚರ್ಚಿಸಲು ಸಭಾಭವನವನ್ನು ನಿರ್ಮಿಸಿ ಕೊಡುವಂತೆ ಶಾಸಕರಿಗೆ ಲಿಖಿತ ಮನವಿ ಸಲ್ಲಿಸಿದರು.

ಈ ವೇಳೆ ಪ್ರಕಾಶ್ ಪಾಳ್ಯ ಚರ್ಚ್ ಫಾದರ್ ಸಿರಿಲ್ ಸಗಯ್ ರಾಜು, ಮುಖಂಡರಾದ ಬಂಡಳ್ಳಿ ಜೆಸ್ಸಿಂಗ್ ಪಾಷ, ವಿಜಯಕುಮಾರ್, ಸಿಂಗಾನಲ್ಲೂರು ರಾಜಣ್ಣ, ಆಂಥೋಣಿ ಚಿಕ್ಕಲ್ಲೂರು ಪಿ.ಡಿ.ಒ ಶಿವಕುಮಾರ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

ಹನೂರು ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜುನಾಥ್ ಚಾಲನೆ Read More

ಸಿ.ಸಿ ರಸ್ತೆ, ಚರಂಡಿ ಕಾಮಗಾರಿಗೆ ಶಾಸಕಮಂಜುನಾಥ್ ಗುದ್ದಲಿ ಪೂಜೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ,ಏ.6: ತಾಲೂಕಿನ ಸತ್ತೇಗಾಲ ಗ್ರಾಮದ ಸಿಎಂ ಸಮುದ್ರದ ಎಜೆ ಕಾಲೋನಿಯಲ್ಲಿ 50 ಲಕ್ಷ ರೂ ವೆಚ್ಚದ ಸಿ.ಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಹನೂರು ಶಾಸಕ ಎಂ.ಆರ್. ಮಂಜುನಾಥ್ ಗುದ್ದಲಿ ಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು ಸಮಾಜ ಕಲ್ಯಾಣ ಇಲಾಖೆಯ ಎಸ್ ಸಿ ಪಿ ಅನುದಾನದಲ್ಲಿ ಸಿಎಂ ಸಮುದ್ರ ಎ.ಜೆ.ಕಾಲೋನಿಯಲ್ಲಿ ಸಿ.ಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಕಾಮಗಾರಿಗೆ 50 ಲಕ್ಷ ರೂ ಮಂಜೂರಾಗಿದ್ದು 16 ಲಕ್ಷ ಬಿಡುಗಡೆಯಾಗಿದೆ ಎಂದು ಹೇಳಿದರು.

ಇಷ್ಟೇ ಅಲ್ಲದೆ ಕಾಲೋನಿಗೆ ಇನ್ನೂ ಸಾಕಷ್ಟು ಕಾಮಗಾರಿಗಳ ಅವಶ್ಯಕತೆ ಇದ್ದು ಮುಂದೆ ಹಂತ ಹಂತವಾಗಿ ಕಾಲೋನಿಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಈ ಗ್ರಾಮದ ಅಭಿವೃದ್ಧಿಗೆ ಎರಡು ಕೋಟಿ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಒಂದು ಕೋಟಿಗೂ ಹೆಚ್ಚು ಅನುದಾನ ಈ ಪಂಚಾಯಿತಿಗೆ ಮಂಜೂರಾಗಿದ್ದು 35 ಲಕ್ಷ ರೂ. ಬಿಡುಗಡೆಯಾಗಿದೆ ಇನ್ನು 10 ಲಕ್ಷ ರೂ. ಅನುದಾನ ಬಿಡುಗಡೆಯಾಗಬೇಕು. ಪ್ರತಿ ಗ್ರಾಮಕ್ಕೂ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕರು ಆಶ್ವಾಸನೆ ನೀಡಿದರು.

ಸಾಮಾನ್ಯ ಅನುದಾನ ನಂಬಿಕೊಂಡರೆ ಕೆಲಸ ಆಗುವುದಿಲ್ಲ ವಿಶೇಷ ಅನುದಾನವನ್ನು ತಂದು ಕೆಲಸ ಮಾಡಬೇಕಿದೆ ಎಂದ ಮಂಜುನಾಥ್, ಗುಣಮಟ್ಟದ ಕೆಲಸ ಮಾಡಿ ಯಾವುದೇ ಕಾರಣಕ್ಕೂ ರಾಜೀ ಸಂದಾನಕ್ಕೆ ಅವಶಕಾವಿಲ್ಲ. ಮಾಡಿರುವ ಕಾಮಗಾರಿಗಳ ವಿವರದ ಫೋಟೋಗಳನ್ನು ಗ್ರೂಪ್ ಮಾಡಿ ಅಪ್ಲೋಡ್ ಮಾಡಿ ಎಂದು ಚಿಕ್ಕಲಿಂಗಯ್ಯ ರವರಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಭವನ ಕಾಮಗಾರಿಗೆ ಪದೇ ಪದೇ ತೊಡಕಾಗುತ್ತಿದೆ. ಹಾಗೂ ಸರ್ಕಾರ ಜಾಗ ಗುರುತಿಸಿದೆ ಆದರೆ ಅಂತ್ಯಸಂಸ್ಕಾರ ಮಾಡಲು ಜೇನು ಹುಳುವಿನ ಕಾಟ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು.

ಅಧ್ಯಕ್ಷ ಎಂ.ಮಲ್ಲೇಶ್, ಉಪಾಧ್ಯಕ್ಷೆ ಸುವರ್ಣ, ಸದಸ್ಯರಾದ ದೇವಿಕಾ, ಕವಿತಾ, ಗೋವಿಂದ, ಶಾಂತಕುಮಾರಿ ಅರ್ಚಕರಾದ ಚಿಕ್ಕರವಳಿ, ಕಾಂತಣ್ಣ ಹಾಗೂ ಗ್ರಾಮಸ್ಥರು ಮತ್ತು ಕೆ.ಆರ್.ಎ.ಡಿ.ಎಲ್ ಎಇಇ ಚಿಕ್ಕಲಿಂಗಯ್ಯ ಹಾಜರಿದ್ದರು.

ಸಿ.ಸಿ ರಸ್ತೆ, ಚರಂಡಿ ಕಾಮಗಾರಿಗೆ ಶಾಸಕಮಂಜುನಾಥ್ ಗುದ್ದಲಿ ಪೂಜೆ Read More

7800 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಯೋಜನೆ ಅನುಷ್ಠಾನ:ಮಂಜುನಾಥ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಬಹುನಿರೀಕ್ಷಿತ ತೆಳ್ಳನೂರು ಶಾಖಾ ನಾಲೆಯ 7800 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕವಾಗಿ ನೀರೊದಗಿಸುವ ಯೋಜನೆ ಅನುಷ್ಠಾನ ಗೊಳಿಸಿ 2026 ಕ್ಕೆ ಈ ಭಾಗದ ರೈತರ 2 ಬೆಳೆಗಳಿಗೆ ನೀರು ಹರಿಸುತ್ತೇನೆ ಎಂದು ಹನೂರು ಶಾಸಕ ಎಂ.ಆರ್. ಮಂಜುನಾಥ್ ಭರವಸೆ ನೀಡಿದರು.

ತಾಲ್ಲೂಕಿನ ತೆಳ್ಳನೂರು ಶಾಖಾ ನಾಲೆ ವ್ಯಾಪ್ತಿಯ 7800 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಸಂಬಂಧ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ದೇವಸ್ಥಾನದ ಆವರಣದಲ್ಲಿ ನೀರಾವರಿ ಇಲಾಖೆ  ಆಯೋಜಿಸಿದ್ದ ತೆಳ್ಳನೂರು ಹಾಗೂ ಚಿಕ್ಕಲ್ಲೂರು ಗ್ರಾ.ಪಂ. ವ್ಯಾಪ್ತಿಯ ರೈತರ ಹಿತಾಸಕ್ತಿ ಸಭೆಯಲ್ಲಿ ರೈತರ ಅಭಿಪ್ರಾಯಗಳನ್ನು ಆಲಿಸಿ ಶಾಸಕರು ಮಾತನಾಡಿದರು.

ಈ ಭಾಗದ ರೈತರು ಬಹಳ ಶ್ರಮಜೀವಿಗಳು, ಆದರೆ ಬೆಳೆ ಬೆಳೆಯಲು ನೀರಿಲ್ಲ,ಕಬಿನಿ ಬಲದಂಡೆ ನಾಲೆ ವ್ಯಾಪ್ತಿಯ 7800 ಎಕರೆ ಅಚ್ಚುಕಟ್ಟು ಜಮೀನುಗಳಲ್ಲಿ ಬೋರ್ವೆಲ್ ಮೂಲಕ ಅಂತರ್ ಜಲ ಹರಿಸಿ ಬೆಳೆ ಬೆಳೆಯಲಾಗುತ್ತಿದೆ ಇದನ್ನು ಬದಲಾಯಿಸಬೇಕು, ರೈತರ ಎರಡು ಬೆಳೆಗಳಿಗೆ ಕಬಿನಿ ನಾಲೆ ನೀರು ಕೊಡಬೇಕೆಂಬ ತೀರ್ಮಾನ ಮಾಡಿ,ಕಾರ್ಯರೂಪಕ್ಕೆ ತರಲು ಹೊರಟಿದ್ದೇನೆ ಎಂದು ಹೇಳಿದರು.

ತೆಳ್ಳನೂರು ಶಾಖಾ ನಾಲೆಯನ್ನೇ ನಂಬಿ ಬದುಕುತ್ತಿರುವ ರೈತರಿಗೆ ಸಂಪೂರ್ಣವಾಗಿ ಕಾಲುವೆ ನೀರಿನ ಸೌಲಭ್ಯ ತಲುಪಿಲ್ಲ, ಕೆಲವು ಲೋಪದೋಷಗಳಿಂದ ಸಮಸ್ಯೆ ಉಂಟಾಗಿದೆ. ಇದನ್ನು ಪರಿಹರಿಸಿ ಈ ಭಾಗದ ರೈತರ ಹಿತಕಾಯಬೇಕೆಂಬ ಉದ್ದೇಶದಡಿ ರೈತರ ಸಭೆ ಕರೆದಿದ್ದೇವೆ. ಈ ಯೋಜನೆ ಅನುಷ್ಠಾನ ಗೊಂಡರೆ ಕೃಷಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

2025-26 ನೇ ಸಾಲಿನ ವರ್ಷಕ್ಕೆಈ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿದ್ದೇನೆ. ಅಗತ್ಯವಿರುವ ಅನುದಾನವನ್ನು ಸರ್ಕಾರದಿಂದ ತರುತ್ತೇನೆ, ಸಭೆಯಲ್ಲಿ ರೈತರು,ಜನರಿಂದ ಉತ್ತಮ ಸಹಕಾರ ದೊರೆತಿದೆ ಎಂದು ಮಂಜುನಾಥ್ ತಿಳಿಸಿದರು.

7800 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದ ಗಿಸುವ ಈ ಯೋಜನೆ ಕಾರ್ಯ ತ್ವರಿತವಾಗಿ ಆಗಲಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಧಿಕಾರಿಗಳಿಗೆ ರೈತರು ಪರಿಹಾರ ಪಡೆಯುವ ನಿಟ್ಟಿನಲ್ಲಿ ಸೂಕ್ತ ದಾಖಲೆಗಳನ್ನು ನೀಡಿ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

357 ಫಲಾನುಭವಿಗಳ ದಾಖಲಾತಿಗಳ ಅಗತ್ಯವಿದ್ದು ಇದೀಗ 97 ಫಲಾನುಭವಿಗಳ ದಾಖಲೆಗಳನ್ನು ಕಲೆ ಹಾಕಲಾಗಿದೆ, ಉಳಿದವರು ಸಹ ದಾಖಲೆ ನೀಡಿದರೆ ಯೋಜನೆ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ, ಎಲ್ಲಾ ಫಲಾನುಭವಿಗಳಿಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆ ಯಲ್ಲೆ ಬೆಲೆ ನಿಗಧಿಪಡಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಈ ಭಾಗದ ರೈತರ ಸಮಸ್ಯೆಯನ್ನು ಬಗೆಹರಿಸೋಣ ಎಂದರೆ ಕೆರೆ ನೀರು ತುಂಬಿಸಿ ಎಂದು ಹೇಳುತ್ತಾರೆ. ಆದರೆ ಈ ಭಾಗದಲ್ಲಿ ನೀರು ಸಂಗ್ರಹಿಸುವಂತಹ ಯಾವುದೇ ದೊಡ್ಡ ಕೆರೆಗಳಿಲ್ಲ ಇಲ್ಲಿ ನಾಲೆಗಳು ಹಾಯ್ದು ಹೋಗುವ ಸ್ಥಳಗಳಲ್ಲಿ ಕೃಷಿಗೆ ಯೋಗ್ಯವಲ್ಲದ ಜಮೀನುಗಳಿದ್ದರೆ ಆ ಸ್ಥಳಗಳಲ್ಲಿ ಕೆರೆಗಳನ್ನು ನಿರ್ಮಿಸಿ ನೀರು ಸಂಗ್ರಹಣೆ ಮಾಡಲು ಆದ್ಯತೆ ನೀಡಿ ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಹಾಗೆಯೇ ಸುತ್ತಮುತ್ತಲ ಗ್ರಾಮಗಳಲ್ಲಿ ಕೃಷಿಗೆ ಯೋಗ್ಯವಲ್ಲದ ಜಮೀನುಗಳಿದ್ದರೆ ಅಲ್ಲಿ ಕರೆ ನಿರ್ಮಿಸಿ ಅಂತರ್ಜಲ ಹೆಚ್ಚುವಂತೆ ಪ್ರಯತ್ನಿಸೋಣ.

ನೀರು ಹಸಿರು ಕಂಡರೆ ಪ್ರಾಣಿಗಳು ಕಾಡಿನಿಂದ ನಾಡಿಗೆ ಬರುತ್ತವೆ. ಅರಣ್ಯದೊಳಗೆ ನೀರಿನ ಸೆಲೆ ಇರುವ ಕಡೆ ಒಂದು ಬೋಲ್ (ಕೆರೆ) ಮಾಡಲು ಅನುಮತಿ ಪಡೆಯಲು ಯತ್ನಿಸಿದ್ದೇನೆ. ಇದು ಯಶಸ್ವಿಯಾಗಿ ಅರಣ್ಯದೊಳಗೇ ನೀರು ಸಿಕ್ಕರೆ ಯಾವುದೇ ಪ್ರಾಣಿ ಹೊರಗೆ ಬರುವುದಿಲ್ಲ. ಹಾಗೆ ಇದರಿಂದ ಅರಣ್ಯದಂಚಿನ ರೈತರ ಜಮೀನುಗಳ ಅಂತರ್ಜಲ ಹೆಚ್ಚಲಿದೆ ಎಂದು ಶಾಸಕ ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ಕಬಿನಿ ಕಾರ್ಯಪಾಲಕ ಅಭಿಯಂತರ ಈರಣ್ಣ ಮಾತನಾಡಿ, ಈ ಯೋಜನೆ ಅನುಷ್ಠಾನಕ್ಕೆ 287.19  ಎಕರೆ ಪ್ರದೇಶವನ್ನು ಭೂಸ್ವಾಧೀನ ಪಡಿಸಿಕೊಳ್ಳಬೇಕಿದೆ. ಅದರಲ್ಲಿ 219 .44 ಎಕರೆ ಭೂಸ್ವಾಧೀನವಾಗಿದೆ. ಉಳಿದ 67.75 ಎಕರೆ ಭೂಸ್ವಾಧೀನ ಆಗಬೇಕಿದೆ, ನೀರು ಪೂರೈಸುವ ವಿಚಾರವಾಗಿ ಶಾಸಕರೊಂದಿಗೆ ಚರ್ಚೆಸಿದ್ದು 2025-26 ನೇ ಸಾಲಿನ ವರ್ಷಕ್ಕೆ ಈ ಯೋಜನೆ ಅನುಷ್ಠಾನಗೊಂಡು ಈ ಭಾಗದ ರೈತರ ಕೃಷಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಶಾಸಕ ಎಂ.ಆರ್.ಮಂಜುನಾಥ್ ಸಭೆ ಕರೆದಿದ್ದಾರೆ, ಇದೀಗ 97 ಫಲಾನುಭವಿಗಳ ದಾಖಲೆಗಳನ್ನು ಪಡೆದಿದ್ದೇವೆ. ಉಳಿದವರು ದಾಖಲೆ ನೀಡಬೇಕೆಂದು ಮನವಿ ಮಾಡಿದರು.

ಭೂಸ್ವಾಧೀನ ಪ್ರಕ್ರಿಯೆ ವಿಚಾರವಾಗಿ ರೈತ ದೇವರಾಜು ಮಾತನಾಡಿ, ಹಿಂದೆ ಸರ್ವೇ ನಡೆಸಿದ ರೀತಿಯಲ್ಲಿ ಕಾಲುವೆ ತೋಡಿಸಿಲ್ಲ,ಹಾಗಾಗಿ ನೈಜ ಫಲಾನು ಭವಿಗಳಿಗೆ ಪರಿಹಾರ ಸಿಗದಂತೆ ಆಗಿದೆ. ಆದ್ದರಿಂದ ಅಧಿಕಾರಿಗಳು ಪರಿಶೀಲಿಸಬೇಕು ರೈತರಿಗಿರುವ ಗೊಂದಲ ನಿವಾರಿಸಬೇಕು ಎಂದು ಕೋರಿದರು.

ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಶೇ.60 ರಷ್ಟು ಫಲಾನುಭವಿಗಳು ಬೆಂಗಳೂರಿನಲ್ಲಿದ್ದಾರೆ ಅವರಿಂದ ದಾಖಲೆ ಪಡೆದು ಜರೂರಾಗಿ ಪರಿಹಾರ ಕೊಡಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಭೂ ಸ್ವಾದಿನ ಇಲಾಖೆಯ ವ್ಯವಸ್ಥಾಪಕ ರವಿಚಂದ್ರ ಅವರು ಪರಿಹಾರ ನೀಡುವ ಪ್ರಕ್ರಿಯೆಯ ಮಾಹಿತಿ ನೀಡಿದರು.

ಸಭೆಯಲ್ಲಿ ಕಬಿನಿ ಇಲಾಖೆ ಎ.ಇ.ಇ ಈರಣ್ಣ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ, ಕೊತ್ತನೂರು ಪಿಡಿಒ ಶಿವಕುಮಾರ್, ತೆಳ್ಳನೂರು ಪಿಡಿಒ ಶೋಭಾರಾಣಿ , ಸದಸ್ಯರಾದ ಚಿಕ್ಕದೊಡ್ಡಯ್ಯ, ಅರುಣೇಶ್, ರವಿ, ರಾಜಮ್ಮ ಮತ್ತಿತರು ಪಾಲ್ಗೊಂಡಿದ್ದರು.

7800 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಯೋಜನೆ ಅನುಷ್ಠಾನ:ಮಂಜುನಾಥ್ Read More

ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಲ್ಯಾಪ್ ಟಾಪ್ ವಿತರಣೆ

ಕೊಳ್ಳೇಗಾಲ: ಗ್ರಾಮ ಪಂಚಾಯಿತಿ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ(VRW) ಶಾಸಕ ಎಂ.ಆರ್.ಮಂಜುನಾಥ್
ಲ್ಯಾಪ್ ಟಾಪ್ ವಿತರಸಿದರು.

ತಾ.ಪಂ. ನ 2023-24 ನೇ ಸಾಲಿನ ವಿಶೇಷಚೇತನರ ಶೇ.5 ರಷ್ಟು ಅನುದಾನದಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಪಾಳ್ಯ ಹೋಬಳಿ ವ್ಯಾಪ್ತಿಯ 9 ಗ್ರಾಮ ಪಂಚಾಯಿತಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಮಂಜುನಾಥ್ ರವರು 
ಲ್ಯಾಪ್ ಟಾಪ್ ವಿತರಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಉಚಿತ ಲ್ಯಾಪ್ ಟಾಪ್ ವಿತರಣೆ ಕಾರ್ಯಕ್ರಮದಲ್ಲಿ 9 ಮಂದಿ ವಿಕಲಚೇತನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಫಲಾನುಭವಿಗಳಿಗೆ ಶಾಸಕರು ಲ್ಯಾಪ್ ಟಾಪ್ ವಿತರಣೆ ಮಾಡಿದರು.

ಶಾಂತರಾಜು ಪಾಳ್ಯ, ಸುನಿಲ್ ಚಿಕ್ಕಲ್ಲೂರು, ಮಹಾದೇವಸ್ವಾಮಿ ಕೊಂಗರಹಳ್ಳಿ, ದೀಪಕ್ ತೆಳ್ಳನೂರು, ಮೋಹನ್ ಕುಮಾರ್ ಧನಗೆರೆ, ನಾಗರಾಜು ಸಿಂಗನಲ್ಲೂರು, ಸುಮತಿ ಸತ್ತೇಗಾಲ, ಶಿವಕುಮಾರಿ ಮದುವನಹಳ್ಳಿ, ಆಶಾ ದೊಡ್ಡಿಂದುವಾಡಿ ಗ್ರಾಮ ಪಂಚಾಯಿತಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾಗಿದ್ದು ಇವರೆಲ್ಲರೂ ಉಚಿತ ಲ್ಯಾಪ್ ಟಾಪ್ ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ಆರ್.ಮಂಜುನಾಥ್ ಅವರು ಈಗ ಉಚಿತ ಲ್ಯಾಪ್ ಟಾಪ್ ವಿತರಿಸಲಾಗಿದೆ. ಮುಂದೆ ವಿಶೇಷ ಚೇತರು ಕುಳಿತುಕೊಳ್ಳಲು ಕುರ್ಚಿ, ಟೇಬಲ್ ಹಾಗೂ ಇನ್ನಿತರ ಪರಿಕರಗಳನ್ನು ವಿತರಿಸಲಾಗುವುದು. ಇದರ ಸದುಪಯೋಗ ಪಡೆದುಕೊಂಡು ಮತ್ತಷ್ಟು ಸೇವೆ ಮಾಡುವಂತೆ ಸಲಹೆ ನೀಡಿದರು.

ಈ ಸಂಧರ್ಭದಲ್ಲಿ ತಹಶಿಲ್ದಾರ್ ಬಸವರಾಜು, ತಾಲ್ಲೂಕು ಪಂಚಾಯತ್ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಎಂ.ಆರ್.ಡಬ್ಲ್ಯೂ ಕವಿರತ್ನ ಹಾಜರಿದ್ದರು.

ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಲ್ಯಾಪ್ ಟಾಪ್ ವಿತರಣೆ Read More