ಕೆರೆ ಒತ್ತುವರಿ ಮಾಡಿ ಲೇಔಟ್;ಹುಣಸೂರುಬಸವನಕಟ್ಟೆ ನುಂಗುತ್ತಿದ್ದಾರೆ ಪ್ರಭಾವಿಗಳು!

ಹುಣಸೂರು: ಪ್ರಭಾವಿ ವ್ಯಕ್ತಿಗಳು ನಗರ ಪ್ರದೇಶಗಳಲ್ಲಿ ಜನರ ಜೀವನಾಡಿಗಳಾಗಿದ್ದ ಕೆರೆಗಳನ್ನು ನುಂಗಿ ನೀರು ಕುಡಿದದ್ದಾಯಿತು ಇದೀಗ ಗ್ರಾಮಾಂತರ ಪ್ರದೇಶಗಳ ಸರದಿ!.

ಹುಣಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ ಅರಸು ಅವರ ಕಾಲದಲ್ಲಿ ಸಮೃದ್ಧವಾಗಿದ್ದ ಬಹಳಷ್ಟು ಕೆರೆಗಳು ಈಗ ಮಾಯವಾಗಿದೆ.

ಇದೀಗ ಮತ್ತೊಂದು ಕೆರೆಯನ್ನು ಇನ್ನಿಲ್ಲದಂತೆ ಮಾಡಲು ಖಾಸಗಿ ವ್ಯಕ್ತಿಗಳು ಮುಂದಾಗಿದ್ದಾರೆ, ಇದಕ್ಕೆ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಣಸೂರು ತಾಲೂಕು ಹನಗೋಡು ಹೋಬಳಿ,ಉಮಾತ್ತೂರು ಗ್ರಾಮದ ಬಸವನಕಟ್ಟೆ ಕರೆ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಕೆರೆಯನ್ನು ನಾಶಪಡಿಸುತ್ತಿದ್ದಾರೆ ಎಂದು ಅವರು‌ ಆರೋಪಿಸಿದ್ದಾರೆ.

ಹನಗೋಡು ಹೋಬಳಿ,ಉಮತೂರು ಗ್ರಾಮ ಸರ್ವೆ ನಂಬರ್ 28 ಹಂಚ್ಯಾ ಹಾಗೂ 1ನೇ ಪಕ್ಷಿರಾಜ ಪುರದ ಮಧ್ಯದಲ್ಲಿ ಬರುವ ಬಸವನಕಟ್ಟೆ ಕೆರೆಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ನಿವೇಶನಗಳನ್ನು ಮಾಡುತ್ತಿದ್ದಾರೆ,ಹಾಗಾಗಿ ಕೆರೆ ಬಹುತೇಕ ನಾಶವಾಗುತ್ತಿದೆ.

ಎರಡುವರೆ ಎಕರೆ ವಿಶಾಲವಾದ ಬಸವನಕಟ್ಟೆ ಒತ್ತುರಿಯಾಗಿ ಈಗ ಅರ್ಧ ಎಕರೆಗೆ ಬಂದು ನಿಂತಿದೆ ಇನ್ನೇನು ನಿವೇಶನಗಳನ್ನು ಮಾಡಿ ಮನೆ ಲೇಔಟ್ ಮಾಡುವುದಷ್ಟೇ ಬಾಕಿ ಇದೆ.

ಬಸವನಕಟ್ಟೆ ಕೆರೆಯಿಂದ ಸುತ್ತಮುತ್ತಲ ಐದಾರು ಗ್ರಾಮಗಳ ಜಾನುವಾರುಗಳಿಗೆ ಕುಡಿಯಲು ನೀರು ಉಪಯೋಗಿಸಲಾಗುತ್ತಿತ್ತು. ಜೊತೆಗೆ ಅಡಿಕೆ ಬಾಳೆ, ತೆಂಗು ಮತ್ತಿತರ ಗಿಡ ಮರಗಳಿಗೂ ಇದೇ ಬಸವನ ಕಟ್ಟೆಯಿಂದ ನೀರನ್ನು ರೈತರು ಉಪಯೋಗಿಸುತ್ತಿದ್ದರು.

ನೀರಿರುವ ಕೆರೆಯನ್ನೇ ನುಂಗುತ್ತಿರುವ ಖಾಸಗಿ ವ್ಯಕ್ತಿಗಳ ಹಿಂದೆ ಯಾರಿದ್ದಾರೋ ತಿಳಿಯದು.ಲೇಔಟ್ ಮಡಲು, ನಿವೇಶನಗಳನ್ನು ಮಾಡಲು ಪರ್ಮಿಶನ್ ಕೊಟ್ಟವರು ಯಾರು?
ಪರ್ಮಿಷನ್ ಕೊಟ್ಟ ಅಧಿಕಾರಿಗೆ ಬಸವನಕಟ್ಟೆಯಿಂದ ಬಹಳಷ್ಟು ಗ್ರಾಮಗಳಿಗೆ ಉಪಯೋಗವಾಗುತ್ತದೆ ಎಂಬ ಸಣ್ಣ ಪರಿಜ್ಞಾನ ಇರಲಿಲ್ಲವೇ ಎಂಬುದು ಯಕ್ಷಪ್ರಶ್ನೆಯಾಗಿದೆ.

ಒಟ್ಟಾರೆ ಜನ ಜಾನುವಾರುಗಳಿಗೆ ಅಗತ್ಯವಾಗಿರುವ ಬಸವನ ಕಟ್ಟೆಯನ್ನು ಒತ್ತುವರಿ ಮಾಡಿಕೊಂಡು ನಿವೇಶನ ಮಾಡಲಾಗುತ್ತಿದ್ದು ಇನ್ನೇನು ಲೇಔಟ್ ಪ್ರಾರಂಭವಾಗಿಬಿಡುತ್ತದೆ,ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಮೈಸೂರು ಜಿಲ್ಲಾಧಿಕಾರಿಗಳನ್ನು ಚೆಲುವರಾಜು ಒತ್ತಾಯಿಸಿದ್ದಾರೆ.

ಬಸವನ ಕಟ್ಟೆ ಕೆರೆ ಒತ್ತುವರಿ ಮಾಡಿ ನಿವೇಶನ ಮಾಡಲು ಮತ್ತು ಲೇಔಟ್ ಮಾಡಲು ಸಹಿ ಹಾಕಿ ಕೊಟ್ಟಿರುವ ಅಧಿಕಾರಿಗಳೆಲ್ಲರ ಮೇಲೂ ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಚೆಲುವರಾಜು ಎಚ್ಚರಿಸಿದ್ದಾರೆ.

ಹೀಗೆ ಹುಣಸೂರಿನ ಎಲ್ಲ ಕರೆಗಳನ್ನು ನುಂಗುತ್ತಾ ಹೋದರೆ ಮುಂದೆ ಜನ ಜಾನುವಾರುಗಳು ಬದುಕುವುದು ಬೇಡವೇ ಮೂಕ ಪ್ರಾಣಿಗಳು ಯಾರ ಬಳಿ ಹೋಗಿ ನ್ಯಾಯ ಕೇಳಬೇಕು ಎಂದು ಅವರು ಕಿಡಿ ಕಾರಿದ್ದಾರೆ.

ಕೆರೆ ಒತ್ತುವರಿ ಮಾಡಿ ಲೇಔಟ್;ಹುಣಸೂರುಬಸವನಕಟ್ಟೆ ನುಂಗುತ್ತಿದ್ದಾರೆ ಪ್ರಭಾವಿಗಳು! Read More

ಹನಗೋಡಿನಲ್ಲಿ ಕೆಟ್ಟು ಕೆರ ಹಿಡಿದ ಶುದ್ಧ ಕುಡಿಯುವ ನೀರಿನ ಘಟಕಗಳು

ಹುಣಸೂರು: ಹುಣಸೂರು ತಾಲೂಕು ಹನುಗೋಡಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿ ಎರಡು ವರ್ಷಗಳಾಗಿದ್ದು ಸ್ಥಳೀಯರಿಗೆ ತೀವ್ರ ತೊಂದರೆಯಾಗಿದೆ.

ಅದರಲ್ಲೂ ಹನಗೋಡು ಸರ್ಕಾರಿ ಆಸ್ಪತ್ರೆ ಮತ್ತು ಗ್ರಾಮ ಪಂಚಾಯಿತಿ ಕಚೇರಿಗಳು ಪಕ್ಕದಲ್ಲೇ ಇದ್ದು ಇದಕ್ಕೆ ಹೊಂದಿಕೊಂಡಂತೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ.

ಆಸ್ಪತ್ರೆಗೆ ಬರುವ ರೋಗಿಗಳು, ಅವರ ಕಡೆಯವರು, ಗ್ರಾಮ ಪಂಚಾಯಿತಿಗೆ ಬರುವ ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ಈ ಘಟಕ ಆಸರೆಯಾಗಿತ್ತು.

ಸುಮಾರು ಐದು ಆರು ಲಕ್ಷ ಖರ್ಚು ಮಾಡಿ ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ಇಲ್ಲಿ ಸ್ಥಾಪಿಸಲಾಗಿದೆ. ಆದರೆ ಸ್ಥಾಪನೆಯಾದ ಆರು ತಿಂಗಳಲ್ಲೇ ಇದು ಕೆಲಸ ನಿರ್ವಹಿಸುತ್ತಿಲ್ಲ, ಕೆಟ್ಟು ಹೋಯಿತು. ಆದರೆ ರಿಪೇರಿ ಮಾಡಬೇಕಾದವರು ಯಾರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಲೇ ಇಲ್ಲ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ತಾಲೂಕು ಅಧ್ಯಕ್ಷ ಚೆಲುವರಾಜು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯಿತಿಯ ಪಿಡಿಒ ಗಳನ್ನು ಕೇಳಿದರೆ ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ನಮಗೆ ನಿರ್ವಹಣೆ ಮಾಡಲು ಬಿಟ್ಟು ಕೊಟ್ಟಿಲ್ಲ ಎನ್ನುತ್ತಾರೆ,ಇಂಜಿನಿಯರ್ ಗಳನ್ನು ಕೇಳಿದರೆ ನಮಗೂ ಇದಕ್ಕೂ ಸಂಬಂಧವೇ ಎಂಬಂತೆ ಮಾತನಾಡುತ್ತಾರೆ ಎಂದು ಚಲುವರಾಜು ಹೇಳಿದ್ದಾರೆ.

ನೀರು‌ ಸರಬರಾಜು ಮಂಡಳಿಯವರು ಈ ಘಟಕಗಳನ್ನು ಸ್ಥಾಪಿಸಿದ ಮೇಲೆ ಅದನ್ನು ಗ್ರಾಮ ಪಂಚಾಯಿತಿ ಸುಪರ್ದಿಗೆ ಕೊಡಬೇಕಿತ್ತು, ಆದರೆ ಅವರು ಕೊಡಲಿಲ್ಲ ಇದರ ನಿರ್ವಹಣೆಯನ್ನೂ ಸರಿಯಾಗಿ ಮಾಡುತ್ತಿಲ್ಲ.

ಹನಗೋಡು ಹೋಬಳಿಯಲ್ಲಿ ಇನ್ನೂ ಹಲವು ಶುದ್ಧ ಕುಡಿಯುವ ನೀರಿನ ಘಟಕಗಳು ಹೀಗೆಯೇ ಕೆಟ್ಟು ಹೋಗಿವೆ.ಅಷ್ಟೇ ಅಲ್ಲಾ ಹುಣಸೂರು ತಾಲೂಕಿನಲ್ಲಿ ಸುಮಾರು 40 ರಿಂದ 50 ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿವೆ. ಆದರೆ ಯಾರೊಬ್ಬರೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಚಲುವರಾಜು ಆರೋಪಿಸಿದ್ದಾರೆ.

ಒಂದು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಐದರಿಂದ ಆರು ಲಕ್ಷ ವೆಚ್ಚವಾದರೆ ಇಂತಹ ಎಷ್ಟೋ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರ್ಕಾರ ಸ್ಥಾಪಿಸಲು ಲಕ್ಷಾಂತರ ಹಣ ನೀಡಿರುತ್ತದೆ. ಆದರೆ ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ.ಅಲ್ಲದೆ ರಿಪೇರಿ ಮಾಡಲೂ ಹಣ ನೀಡಲಾಗಿರುತ್ತದೆ, ಸರ್ಕಾರಕ್ಕೆ ನಷ್ಟ ಉಂಟು ಮಾಡುವುದು ಬಿಲ್ ಬರೆಸಿ ತಮ್ಮ ಜೇಬಿಗೆ ಹಣ ಬಿಡುವುದು ಅಧಿಕಾರಿಗಳ ಕಾಯಕವಾಗಿಬಿಟ್ಟಿದೆ ಎಂದು ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.

ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕ ನೋಡಿಕೊಳ್ಳುವವರು ಯಾರು? ನೀರು ಸರಬರಾಜ ಮಂಡಳಿಯವರ ಸುಪರ್ದಿಯಲ್ಲಿದ್ದರೆ ಇವುಗಳನ್ನು ಸರಿಪಡಿಸಿ ಸಂಬಂಧಪಟ್ಟ ಇಂಜಿನಿಯರ್ ಗಳು ಸರಿಯಾಗಿ ಕೆಲಸ ನಿರ್ವಹಣೆ ಮಾಡುವಂತೆ ನೋಡಿಕೊಳ್ಳಬೇಕು,ಇಲ್ಲಾ ಪಂಚಾಯಿತಿ ಸುಪರ್ದಿಗೆ ಬಿಟ್ಟು ಕೊಡಬೇಕು ಅವುಗಳ ನಿರ್ವಹಣೆಯನ್ನೂ ಅವರಿಗೆ ಬಿಡಬೇಕು ಎಂದು ಚೆಲುವರಾಜು ಒತ್ತಾಯಿಸಿದ್ದಾರೆ.

ಈ ಶುದ್ಧ ನೀರಿನ ಘಟಕಗಳನ್ನು ಕೆಲವು ಕಿಡಿಗೇಡಿಗಳು,ಕುಡುಕರು ಇನ್ನಷ್ಟು ಹಾಳು ಮಾಡಿದ್ದಾರೆ,ಕಸಕಡ್ಡಿ,ಬಾಟಲಿಗಳನ್ನು ಹಾಕಿ ಕಸದ‌ ತೊಟ್ಟಿಯಂತೆ ಮಾಡಿದ್ದಾರೆ ಇದರ ಬಗ್ಗೆಯೂ ಸಂಬಂದಪಟ್ಟ ಅಧಿಕಾರಿಗಳು ಗಮನ ಹರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಇನ್ನಾದರೂ ಈ ಶುದ್ಧ ಕುಡಿಯುವ ನೀರಿನ ಘಟಕಗಳು ಜನರ ನೀರಿನ ದಾಹ ನೀಗಿಸುವಂತೆ ಸಂಬಂಧಪಟ್ಟವರು ಮಾಡುತ್ತಾರಾ ಕಾದು ನೋಡಬೇಕಿದೆ.

ಹನಗೋಡಿನಲ್ಲಿ ಕೆಟ್ಟು ಕೆರ ಹಿಡಿದ ಶುದ್ಧ ಕುಡಿಯುವ ನೀರಿನ ಘಟಕಗಳು Read More