ಮನೆಗೆಲಸದಾಕೆ ಮೇಲೆ ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ

ಬೆಂಗಳೂರು: ಮನೆಗೆಲಸದಾಕೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ದೋಷಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಕೆ.ಆರ್ ನಗರದಲ್ಲಿ ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿ, ಶಿಕ್ಷೆ ಪ್ರಮಾಣ ಕಾಯ್ದಿರಿಸಿತ್ತು.

ಸರ್ಕಾರಿ ಪರ ವಕೀಲರಾಗಿ ಎನ್. ಜಗದೀಶ್, ಅಶೋಕ್ ನಾಯಕ್ ಹಾಗೂ ಪ್ರಜ್ವಲ್ ರೇವಣ್ಣ ಪರ ವಕೀಲರಾದ ನಳಿನಿ ಮಾಯಾಗೌಡ ಅವರು ವಾದ ಪ್ರತಿವಾದ ಮಂಡಿಸಿದರು. ವಾದ ಪ್ರತಿವಾದದ ಬಳಿಕ ನ್ಯಾ. ಗಜಾನನ ಭಟ್‌ ಅವರ ಪೀಠ ಶಿಕ್ಷೆ ಪ್ರಮಾಣವನ್ನು ಶನಿವಾರ ಪ್ರಕಟಿಸಿದೆ.

ಐಪಿಸಿ ಸೆಕ್ಷನ್ 376 (2) (K), 376 (2) (N) ಅಡಿಯಲ್ಲಿ ಜೀವಾವಧಿ ಶಿಕ್ಷೆ ಜತೆಗೆ 5 ಲಕ್ಷ ರೂ. ದಂಡವನ್ನು ನ್ಯಾಯಾಲಯ ವಿಧಿಸಿದೆ.

ಅಲ್ಲದೆ ಸಂತ್ರಸ್ತೆಗೆ 7 ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ,ಈಗಿನಿಂದಲೇ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್‌ ಆದೇಶಿಸಿದೆ.

ದೋಷಿ ಎಂದು ತೀರ್ಪು ಹೊರಬೀಳುತ್ತಿದ್ದಂತೆ ಪ್ರಜ್ವಲ್‌, ಹಾಸನ ಜಿಲ್ಲೆಗೆ ಸಾಕಷ್ಟು ಮಾಡಿದ್ದೇನೆ, ಚುನಾವಣೆಗೆ 6 ದಿನ ಮುಂಚಿತವಾಗಿ ಈ ವಿಡಿಯೋ ರಿಲೀಸ್‌ ಮಾಡಿದ್ದಾರೆ. ನಾನು ಮಹಿಳೆಯ ಅತ್ಯಾಚಾರ ಮಾಡಿದ್ದರೆ ಆಕೆಯ ಸಹೋದರಿ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದರಾ ಎಂದು ಕಣ್ಣೀರು ಹಾಕಿದರು.

ಸಾಕಷ್ಟು ವರ್ಷಗಳ ಹಿಂದೆ ನಡೆದಿದೆ ಅಂತ ಹೇಳಿದ್ದಾರೆ. ವಿಡಿಯೋ ಬಂದ ಮೇಲೆ ಮಹಿಳೆ ಹೊರಗೆ ಬಂದು ದೂರು ನೀಡಿದ್ದಾಳೆ. ನನ್ನ ಕುಟುಂಬವನ್ನೇ ನಾನು ಬಿಟ್ಟಂತೆ ಆಗಿಹೋಗಿದೆ. ಅಪ್ಪ, ಅಮ್ಮನನ್ನ 6 ತಿಂಗಳಿಂದ ನೋಡಿಲ್ಲ. ದೋಷಿ ಅಂತ ಹೇಳಿದ್ದೀರಿ, ನ್ಯಾಯಾಲಯದ ಆದೇಶಕ್ಕೆ ತಲೆ ಬಾಗುತ್ತೇನೆ. ಶಿಕ್ಷೆ ನೀಡುವಾಗ ನನ್ನ ಕುಟುಂಬವನ್ನ ಪರಿಗಣಿಸಿ ಅಂತ ನ್ಯಾಯಾಧೀಶರ ಎದುರು ಪ್ರಜ್ವಲ್‌ ಕಣ್ಣೀರಿಟ್ಟು ಮನವಿ ಮಾಡಿದ್ದರು.

ನಾನು ರಾಜಕೀಯವಾಗಿ ಬೇಗ ಬೆಳೆದಿದ್ದೇ ತಪ್ಪಾಯ್ತು,ಎಸ್‌ಐಟಿ ನಂಬರ್ ನೀಡಿದ್ದರೂ ಯಾರು ದೂರು ನೀಡಲಿಲ್ಲ, ನಾನು ಕಾಲೇಜಿನಲ್ಲಿ ಮೆರಿಟ್ ವಿದ್ಯಾರ್ಥಿ ಆಗಿದ್ದೆ ನನ್ನನ್ನ ದುರುದ್ದೇಶದಿಂದ ಸಿಲುಕಿಸಿದರು ಎಂದು ಪ್ರಜ್ವಲ್ ನೊಂದು ಕಣ್ಣೀರು ಹಾಕುತ್ತಲೇ ನುಡಿದರು.

ಮನೆಗೆಲಸದಾಕೆ ಮೇಲೆ ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ Read More

ಕೆಲಸದಾಕೆ ಮೇಲೆ ಅತ್ಯಾಚಾರ ಪ್ರಕರಣ:ಪ್ರಜ್ವಲ್ ರೇವಣ್ಣ ದೋಷಿ

ಬೆಂಗಳೂರು,ಆ.1: ಕೆ.ಆರ್.ನಗರದಲ್ಲಿ ಕೆಲಸದಾಕೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ನ್ಯಾ. ಗಜಾನನ ಭಟ್‌ ಅವರಿದ್ದ ಪೀಠ ಪ್ರಜ್ವಲ್‌ ದೋಷಿ ಎಂದು ತೀರ್ಪು ಪ್ರಕಟಿಸಿದ್ದು, ಈ ವೇಳೆ ಪ್ರಜ್ವಲ್‌ ರೇವಣ್ಣ ಕೋರ್ಟ್‌ ಹಾಲ್‌ನಲ್ಲಿ ಹಾಜರಿದ್ದರು.

ಈ ಪ್ರಕರಣದ ಅಂತಿಮ ವಿಚಾರಣೆ ಜುಲೈ 30 ರಂದು ನಡೆದಿತ್ತು,ಸರ್ಕಾರದ ಪರ ವಕೀಲ ಎನ್ ಜಗದೀಶ್ ಹಾಗೂ ಅಶೋಕ್ ನಾಯಕ್ ಹಾಗೂ ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ಜಿ ಅವರುಗಳು ಹಾಜರಿದ್ದರು.

ತೀರ್ಪು ಕಾಯ್ದಿರಿಸಿದ್ದ ಕೋರ್ಟ್‌ ಮೊಬೈಲ್ ಸಾಕ್ಷ್ಯ, ತಾಂತ್ರಿಕ ಸಾಕ್ಷ್ಯಗಳ ಬಗ್ಗೆ ಸ್ಪಷ್ಟನೆ ಕೇಳಿತ್ತು. ಇದರೊಂದಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಗ್ಗೆ ನ್ಯಾಯಾಧೀಶರು ಕೆಲ ಮಾಹಿತಿ ಕೇಳಿ ಆಗಸ್ಟ್‌ 1‌ಕ್ಕೆ ಮುಂದೂಡಿತ್ತು.

ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಭವಿಷ್ಯದ ದೃಷ್ಟಿಯಿಂದಲೂ ಈ ತೀರ್ಪು ಮಹತ್ವ ಪಡೆದಿತ್ತು.

ಕೆ.ಆರ್ ನಗರ ಸಂತ್ರಸ್ತೆ ಪ್ರಕರಣದಲ್ಲಿ ಪ್ರಜ್ವಲ್ ವಿರುದ್ಧ ಅತ್ಯಾಚಾರ, ಅಪಹರಣ ಕೇಸ್ ದಾಖಲಾಗಿತ್ತು. ಮನೆಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ನಂತರ ವಿಷಯ ಹೊರಗೆ ಬರುತ್ತೆ ಎಂದು ತಿಳಿದು ಸಂತ್ರಸ್ತೆಯನ್ನ ರೇವಣ್ಣ, ಭವಾನಿ, ಸತೀಶ್ ಬಾಬು ಸೇರಿದಂತೆ 9 ಜನ ಸೇರಿ ಅಪಹರಿಸಿದ್ದರು.

ಬಳಿಕ ಆಕೆಯನ್ನು ಹುಣಸೂರು ಬಳಿಯ ತೋಟದ ಮನೆಯೊಂದರಲ್ಲಿ ಕೂಡಿ ಹಾಕಲಾಗಿತ್ತು. ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ ಬಳಿಕ ನಿರೀಕ್ಷಣಾ ಜಾಮೀನು ಪಡೆದಿದ್ದರು.

ಆನಂತರ ಸಂತ್ರಸ್ತೆಯನ್ನು ರಕ್ಷಿಸಿದ ಎಸ್‌ಐಟಿ, ಆಕೆಯ ಹೇಳಿಕೆ ದಾಖಲು ಮಾಡಿ ಪ್ರಕರಣ ದಾಖಲಿಸಿತ್ತು,ಆಕೆಯ ಹೇಳಿಕೆ ಆಧರಿಸಿ, ತನಿಖೆ ಮಾಡಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ಬಳಿಕ ಪ್ರಜ್ವಲ್ ರೇವಣ್ಣ ಮೊಬೈಲ್‌ನಲ್ಲಿ ಸಂತ್ರಸ್ತೆಯನ್ನು ಬೆತ್ತಲುಗೊಳಿಸಿ ಬಲವಂತವಾಗಿ ಲೈಂಗಿಕ ಕಿರುಕುಳ ನೀಡಿದ್ದ ವಿಡಿಯೋ ಪತ್ತೆಯಾಗಿತ್ತು,ಅಲ್ಲದೆ ಎಫ್‌ಎಸ್‌ಎಸ್ ಮೂಲಕ ವಿಡಿಯೋ ತುಣುಕಿನಲ್ಲಿರುವುದು ಪ್ರಜ್ವಲ್ ರೇವಣ್ಣ ಎನ್ನುವುದು ಕೂಡಾ ಸಾಬೀತಾಗಿದ್ದು,ನ್ಯಾಯಾಲಯ ಇದನ್ನೆಲ್ಲ ಪರಿಗಣಿಸಿ ಪ್ರಜ್ವಲ್ ದೋಷಿ ಎಂದು ತೀರ್ಪು ನೀಡಿದೆ.ಆದರೆ‌ ಇನ್ನೂ ಶಿಕ್ಷೆಯ ಪ್ರಮಾಣ ಪ್ರಕಟಿಸಿಲ್ಲ.

ಕೆಲಸದಾಕೆ ಮೇಲೆ ಅತ್ಯಾಚಾರ ಪ್ರಕರಣ:ಪ್ರಜ್ವಲ್ ರೇವಣ್ಣ ದೋಷಿ Read More