ದಸರಾ ದೀಪಾಲಂಕಾರ ಸೌಂದರ್ಯ ಕಣ್ತುಂಬಿಕೊಂಡ ಸಿಎಂ

ಮೈಸೂರು: ದಸರಾ ಹಬ್ಬದ‌‌ ಪ್ರಯುಕ್ತ ಸೆಸ್ಕ್ ವತಿಯಿಂದ ಮಾಡಲಾಗಿರುವ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀಕ್ಷಿಸಿ ಖುಷಿಪಟ್ಟರು.

ಅಂಬಾರಿ ಬಸ್ಸಿನಲ್ಲಿ ಶುಕ್ರವಾರ ನಗರ ಪ್ರದಕ್ಷಿಣೆ ಹಾಕಿದ ಸಿಎಂ,ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ದೀಪಾಲಂಕಾರದ ಅದ್ಭುತ ಆಕರ್ಷಣೆಗೆ ಮನಸೋತು ಸಂತಸ‌ ವ್ಯಕ್ತಪಡಿಸಿದರು.

ನಗರದ ರಾಮಸ್ವಾಮಿ ವೃತ್ತದಿಂದ ಆರಂಭಿಸಿ, ಬಸವೇಶ್ವರ ವೃತ್ತ, ವಿದ್ಯಾಪೀಠ ವೃತ್ತ, ಹಾರ್ಡಿಂಜ್ ಸರ್ಕಲ್, ಕೆ.ಆರ್.ಸರ್ಕಲ್, ಆಯುರ್ವೇದ ಕಾಲೇಜು ವೃತ್ತ, ಬಂಬೂಬಜಾರ್ ರಸ್ತೆ, ಹೈವೇ ವೃತ್ತದ ಮೂಲಕ ಸಾಗಿ ಎಲ್ಐಸಿ ವೃತ್ತದ ವರೆಗೂ ದೀಪಾಲಂಕಾರ ವೀಕ್ಷಿಸಿದರು.

ಅಂಬಾರಿ ಬಸ್ ಮೂಲಕ ಸಿಟಿ ರೌಂಡ್ಸ್ ಹಾಕಿದ ಸಿಎಂ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಉಪಾಧ್ಯಕ್ಷರಾದ ಡಾ.ಪುಷ್ಪ ಅಮರನಾಥ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಜಿಪಂ ಸಿಇಒ ಯುಕೇಶ್ ಕುಮಾರ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು, ಅಧೀಕ್ಷಕ ಇಂಜಿನಿಯರ್ ಸುನೀಲ್, ಎಇಇ ಅನಿತಾ ಮತ್ತಿತರರು ಸಾತ್ ನೀಡಿದರು.

ದಸರಾ ದೀಪಾಲಂಕಾರ ಸೌಂದರ್ಯ ಕಣ್ತುಂಬಿಕೊಂಡ ಸಿಎಂ Read More

ದಸರಾ ಸಂಭ್ರಮದ ಜತೆಗೆ ಸುರಕ್ಷತೆ ಬಗ್ಗೆಯೂ ನಿಗಾವಹಿಸಿ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಅಳವಡಿಸಿರುವ ವಿದ್ಯುತ್‌ ದೀಪಾಲಂಕಾರಗಳನ್ನು ಕಣ್ತುಂಬಿಕೊಳ್ಳುವ ಜತೆಗೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡುವಂತೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ದಸರಾ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಮೈಸೂರಿನ ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅತ್ಯಾಕರ್ಷಕ ವಿದ್ಯುತ್‌ ದೀಪಾಲಂಕಾರ ಮಾಡಲಾಗುತ್ತಿದೆ.

ನಗರದ ಸೌಂದರ್ಯ ಹೆಚ್ಚಿಸುವ ಹಾಗೂ ದಸರೆಯ ಸಂಭ್ರಮ, ಸಡಗರವನ್ನು ಇಮ್ಮಡಿಗೊಳಿಸುವ ವಿದ್ಯುತ್‌ ದೀಪಾಲಂಕಾರ ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸುತ್ತಾರೆ. ಆದ್ದರಿಂದ ದೀಪಾಲಂಕಾರದ ಅಂದ ಕಣ್ತುಂಬಿಕೊಳ್ಳುವ ಸಂದರ್ಭದಲ್ಲಿ ಸುರಕ್ಷತೆಗೂ ಆದ್ಯತೆ ನೀಡುವುದು ಅತ್ಯಂತ ಅವಶ್ಯಕವಾಗಿದೆ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್‌ ರಾಜು ಮನವಿ ಮಾಡಿದ್ದಾರೆ.

ವಿದ್ಯುತ್‌ ಗ್ರಾಹಕರು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡುತ್ತಿರುವ ಸೆಸ್ಕ್‌ ವತಿಯಿಂದಲೂ ಸಾಕಷ್ಟು ಸುರಕ್ಷತಾ ಕ್ರಮ ಕೈಗೊಂಡು ದಸರಾ ದೀಪಾಲಂಕಾರ ಮಾಡಲಾಗಿದೆ. ಆದರೂ ಸುರಕ್ಷತೆಯ ಬಗ್ಗೆ ಹೆಚ್ಚಿನ ನಿಗಾವಹಿಸುವುದು ಸಾರ್ವಜನಿಕರ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

ಅದಕ್ಕಾಗಿ ಸಾರ್ವಜನಿಕರ ಸುರಕ್ಷತೆ ಕೆಲವು ಸಲಹೆಗಳನ್ನು ನೀಡಲಾಗಿದೆ.
ದೀಪಾಲಂಕಾರದ ಕಂಬಗಳನ್ನು ಮುಟ್ಟದೆ, ಅಂತರ ಕಾಯ್ದುಕೊಳ್ಳಿ,ದೀಪಾಲಂಕಾರದ ಕಂಬಗಳ ಹತ್ತಿರ ನಿಂತು ಫೋಟೋ,ವಿಡಿಯೋ ಶೂಟ್‌ ಮಾಡುವುದನ್ನು ತಪ್ಪಿಸಬೇಕು, ಮಳೆ ಸಂದರ್ಭದಲ್ಲಿ ವಿದ್ಯುತ್ ದೀಪಾಲಂಕಾರದ ಕಂಬಗಳ ಹತ್ತಿರ ಹೋಗದೆ ಎಚ್ಚರವಹಿಸಬೇಕು,ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ದೀಪಾಲಂಕಾರಕ್ಕಾಗಿ ಕಂಬಗಳನ್ನು ಅಳವಡಿಸಿದ್ದು, ಕೆಲವು ಕಡೆಗಳಲ್ಲಿ ದೀಪಾಲಂಕಾರದ ಪ್ರತಿಕೃತಿಗಳನ್ನು ಇರಿಸಲಾಗಿದೆ. ಆದ್ದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಇವುಗಳನ್ನು ಗಮನಿಸಿ ಸುರಕ್ಷಿತವಾಗಿ ಸಂಚರಿಸಬೇಕೆಂದು
ಸೆಸ್ಕ್ ಪರವಾಗಿ ಕೆ.ಎಂ. ಮುನಿಗೋಪಾಲ್‌ ರಾಜು‌ ಕೋರಿದ್ದಾರೆ‌.

ವಿದ್ಯುತ್‌ ಸಂಬಂಧಿತ ದೂರುಗಳಿದ್ದರೆ ಹಾಗೂ ದೀಪಾಲಂಕಾರದಿಂದ ತೊಂದರೆ ಆದಲ್ಲಿ 24×7 ಸಹಾಯವಾಣಿ 1912 ಸಂಪರ್ಕಿಸ‌ಬಹುದೆಂದು ತಿಳಿಸಲಾಗಿದೆ.

ದಸರಾ ಸಂಭ್ರಮದ ಜತೆಗೆ ಸುರಕ್ಷತೆ ಬಗ್ಗೆಯೂ ನಿಗಾವಹಿಸಿ Read More

ಈ ಬಾರಿಯ ದಸರಾ ದೀಪಾಲಂಕಾರ ಹೆಚ್ಚು ಆಕರ್ಶಕ-ಮುನಿಗೋಪಾಲ ರಾಜು

ಮೈಸೂರು: ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ದೀಪಾಲಂಕಾರ ಮತ್ತು ಡ್ರೋನ್ ಶೋ ಹೆಚ್ಚು ಆಕರ್ಷಣೀಯವಾಗಿ ಮಾಡಲು ಯೋಜನೆ ರೂಪಿಸಿಕೊಂಡಿದ್ದೇವೆ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲ ರಾಜು ತಿಳಿಸಿದರು.

ಈ ಕುರಿತು ಮಾಹಿತಿ ನೀಡಿದ ಅವರು, ಈ ಬಾರಿಯ ದಸರಾ ಮಹೋತ್ಸವದಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಮತ್ತಷ್ಟು ಮೆರಗು ನೀಡಲು ನಿರ್ಧರಿಸಿದ್ದೇವೆ, ಅರಮನೆ ದೀಪಾಲಂಕಾರಕ್ಕೆ ಪೂರಕವಾದ ಬಣ್ಣದಲ್ಲಿ ಮೈಸೂರು ನಗರದ ದೀಪಗಳು ಬೆಳಗಲಿವೆ ಎಂದು ಹೇಳಿದರು.

ಕಳೆದ ಬಾರಿಯಂತೆ ಈ ಬಾರಿಯೂ ಸುಮಾರು 136 ಕಿ.ಮೀ ರಸ್ತೆಗಳವರೆಗೆ ದೀಪಾಲಂಕಾರ ಮಾಡಲಾಗುತ್ತದೆ. ಸುಮಾರು 60ರಿಂದ 70 ಪ್ರತಿಕೃತಿಗಳನ್ನ ದೀಪಾಲಂಕಾರದಲ್ಲಿ ನಿರ್ಮಿಸುತ್ತಿದ್ದೇವೆ. ಈ ಬಾರಿ ದೀಪಾಲಂಕಾರದಲ್ಲಿ ವಿಶೇಷ ಅಂದರೆ ಕೊಲ್ಕತ್ತಾ ಮಾದರಿಯ ಮೂವಿಂಗ್ ಲೈಟ್ಸ್ ಪರಿಕಲ್ಪನೆ ಇದೆ, ಬೇರೆ ಬೇರೆ ಕಡೆಗಳಿಂದಲೂ ಆಕರ್ಷಣಿಯ ದೀಪಗಳನ್ನ ತರಿಸಲಾಗುತ್ತದೆ ಎಂದು ವಿವರಿಸಿದರು.

ದಸರಾ ಮಹೋತ್ಸವದಲ್ಲಿ ಡ್ರೋನ್ ಶೋ ಕೂಡಾ ಎಲ್ಲರ ಮನ ಸೆಳೆಯಲಿದೆ, ಕಳೆದ ವರ್ಷ 1500 ಡ್ರೋನ್ ಉಪಯೋಗಿಸಿದ್ದೆವು, ಈ ಬಾರಿ 3 ಸಾವಿರ ಡ್ರೋನ್ ಗಳನ್ನ ಬಳಸಿ ಬನ್ನಿಮಂಟಪದಲ್ಲಿ ಡ್ರೋನ್ ಶೋ ಮಾಡುತ್ತಿದ್ದೇವೆ . ತಾಯಿ ಚಾಮುಂಡೇಶ್ವರಿ, ದಸರಾ ಅಂಬಾರಿ ವಿವಿಧ ಆಕೃತಿಗಳನ್ನ ಮೂಡಿಸಲಾಗುತ್ತದೆ, ಈ ಕಾಮಗಾರಿಗಳಿಗೆ 9 ರಿಂದ 10 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಮುನಿಗೋಪಾಲ ರಾಜು ಮಾಹಿತಿ ನೀಡಿದರು.

ಈ ಬಾರಿಯ ದಸರಾ ದೀಪಾಲಂಕಾರ ಹೆಚ್ಚು ಆಕರ್ಶಕ-ಮುನಿಗೋಪಾಲ ರಾಜು Read More