ಮೈಸೂರು: ಕರ್ನಾಟಕ ರಾಜ್ಯದ ನಾಡ ದೇವತೆಯಾಗಿ ಕನ್ನಡ ತಾಯಿ ಭುವನೇಶ್ವರಿ ದೇವಿ ಯನ್ನು ಅಧಿಕೃತವಾಗಿ ಘೋಷಣೆ ಮಾಡುವಂತೆ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಕೋರಿದ್ದಾರೆ.
ಪ್ರಸ್ತುತ ಚಾಮುಂಡೇಶ್ವರಿ ದೇವಿಯನ್ನು ನಾಡ ದೇವತೆಯಾಗಿ ಕರೆಯಲಾಗುತ್ತಿದೆ ಆದರೆ ಚಾಮುಂಡೇಶ್ವರಿ ದೇವಿಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ( ಬೀದರ್ ಇಂದ ಚಾಮರಾಜನಗರ ) ವರೆಗೂ ಹೆಚ್ಚಾಗಿ ಪೂಜಿಸುವುದು ಕಡಿಮೆ ಸುಮಾರು ನಾಲ್ಕು, ಐದು, ಜಿಲ್ಲೆಗಳಲ್ಲಿ ಹೆಚ್ಚಾಗಿ ಪೂಜಿಸುತ್ತಾರೆ. ಅಖಂಡ ಕರ್ನಾಟಕದಾದ್ಯಂತ ಕನ್ನಡಿಗರು ಕನ್ನಡ ತಾಯಿ ಭುವನೇಶ್ವರಿ ದೇವಿ ಯನ್ನು ಪೂಜಿಸಿ ಆರಾಧಿಸುತ್ತಿದ್ದಾರೆ,ರಾಜ್ಯ ಸರ್ಕಾರ ವಿಧಾನ ಸೌಧದಲ್ಲಿ ಕನ್ನಡ ತಾಯಿ ಭುವನೇಶ್ವರಿ ದೇವಿಯ ಭವ್ಯ ಪ್ರತಿಮೆ ಯನ್ನು ಸ್ಥಾಪಿಸಿರುವುದೇ ಸಾಕ್ಷಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ ಈಗಾಗಲೇ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕನಾಗಿ ವಿಶ್ವ ಗುರು ಬಸವಣ್ಣ ನವರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ ಆದ ಕಾರಣ ರಾಜ್ಯ ಸರ್ಕಾರ ಈ ಮೇಲಿನ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ಕೂಡಲೇ ನಾಡ ದೇವತೆಯಾಗಿ ಭುವನೇಶ್ವರಿ ದೇವಿಯನ್ನು ಅಧಿಕೃತವಾಗಿ ಘೋಷಣೆ ಮಾಡಬೇಕು ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.
ಮೈಸೂರು: ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರ ನಗರ ಮಂಡಲದಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ತಿರಂಗಾ ಯಾತ್ರೆಯನ್ನು ಬೈಕ್ ಜಾಥಾ ಮೂಲಕ ಹಮ್ಮಿಕೊಳ್ಳಲಾಯಿತು.
ವಿಜಯನಗರ ಮೂರನೇ ಹಂತದ ಸಂಗಮ ವೃತ್ತದ ಗಡಿಯಾರ ಗೋಪುರ ಮುಂಭಾಗ ಜಾಥಾಗೆ ಬಿಜೆಪಿ ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ.ರಘು ಹಾಗೂ ಯುವ ಮೋರ್ಚಾ ನಗರಾಧ್ಯಕ್ಷ ರಾಕೇಶ್ ಗೌಡ ಚಾಲನೆ ನೀಡಿದರು.
ನಂತರ ತ್ರಿವರ್ಣ ಧ್ವಜಗಳೊಂದಿಗೆ ಬೈಕ್ ಜಾಥಾ ಹೊರಡಿತು,ಬೋಗಾದಿ ಎರಡನೇ ಹಂತ, ಜನತಾ ನಗರ, ಮಾರುತಿ ಟೆಂಟ್, ನ್ಯೂ ಕಾಂತರಾಜ ಅರಸು ರಸ್ತೆ, ಶಾರದಾದೇವಿನಗರ, ರಾಮಕೃಷ್ಣನಗರದ ಮೂಲಕ ಸಾಗಿ ದಟ್ಟಗಳ್ಳಿಯ ನೇತಾಜಿ ವೃತ್ತದಲ್ಲಿ ಸುಭಾಷ್ ಚಂದ್ರ ಬೋಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸುವ ಮೂಲಕ ಮುಕ್ತಾಯವಾಯಿತು.
ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ನಗರ ಮಂಡಲದ ಅಧ್ಯಕ್ಷ ರಾಕೇಶ್ ಭಟ್, ಯುವ ಮೋರ್ಚಾ ಅಧ್ಯಕ್ಷ ಮಧು ಸೋಮಶೇಖರ್, ಹಿರಿಯ ಮುಖಂಡ ಅಂಕಲ್ ಶ್ರೀನಿವಾಸ್, ಯುವ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿಗಳಾದ ಸಚಿನ್, ಡಿ.ಲೋಹಿತ್, ಮೋರ್ಚಾದ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಚಂದನ್ ಗೌಡ, ಸಾಗರ್ ಸಿಂಗ್ ಉಪಾಧ್ಯಕ್ಷರಾದ ಸಿ. ರಾಘವೇಂದ್ರ, ಸೂರ್ಯ, ಮಧು ಪಾಲಿಕೆ ಮಾಜಿ ಸದಸ್ಯರಾದ ಲಕ್ಷ್ಮಿ ಕಿರಣ್, ಮಂಡಲದ ಪ್ರಧಾನ ಕಾರ್ಯದರ್ಶಿ ಈರೇಗೌಡ, ಆರ್ ಸೋಮಶೇಖರ್, ಉಪಾಧ್ಯಕ್ಷರಾದ ಹೆಚ್.ಜಿ ರಾಜಮಣಿ, ಶಿವು ಪಟೇಲ್, ಬಿ.ಸಿ ಶಶಿಕಾಂತ್, ನಾಗರಾಜ್ ಜನ್ನು, ಮೋರ್ಚಾಗಳ ನಗರ ಪದಾಧಿಕಾರಿಗಳಾದ ಎಸ್. ತ್ಯಾಗರಾಜ್, ವಿಜಯ ಮಂಜುನಾಥ್, ಕಿರಣ್ ಮಾದೇಗೌಡ, ಎನ್. ಪ್ರತಾಪ್, ಮಂಡಲ ಕಾರ್ಯದರ್ಶಿಗಳಾದ ವಿನುತಾ, ರಾಚಪ್ಪಾಜಿ, ಸೋಮಣ್ಣ, ಮೋರ್ಚಾಗಳ ಮುಖಂಡರಾದ ರಂಗೇಶ್, ಜಿ.ಲಕ್ಷ್ಮಿ, ಚಂದ್ರಶೇಖರಸ್ವಾಮಿ, ರಾಘವೇಂದ್ರ ಪ್ರಸಾದ್, ಟಿ. ರಾಜನಾಯಕ್, ದೇವರಾಜ್, ಮಂಜುಳಾ, ಪುಟ್ಟಮ್ಮಣ್ಣಿ, ರಮಾಬಾಯಿ, ಪ್ರೇಮಾ, ರೇವಣ್ಣಸಿದ್ದಯ್ಯ, ಶೋಭಾ ರವಿಶಂಕರ್, ವಾರ್ಡ್ ಅಧ್ಯಕ್ಷರಾದ ರವಿ ನಾಯಕಂಡ, ಬಸವಣ್ಣ, ಭಾರ್ಗವ್ ಗೌಡ, ಭೈರೇಗೌಡ, ಪ್ರವೀಣ್, ಗೋಪಾಲ್, ಕೃಷ್ಣ ಹೆಗಡೆ ಸೇರಿದಂತೆ ಹಲವಾರು ಮಂದಿ ಭಾಗವಹಿದ್ದರು.
ಮೈಸೂರು: ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಪ್ರಯುಕ್ತ ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ಮಹಿಳಾ ಮೋರ್ಚಾ ವತಿಯಿಂದ ಮಗ್ಗ ಯಂತ್ರದ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ರಾಮಕೃಷ್ಣನಗರದ ರಾಮಕೃಷ್ಣ ಸಾಂಸ್ಕೃತಿಕ ಹಾಗೂ ಕ್ರೀಡಾ ಪ್ರತಿಷ್ಠಾನದ ಆವರಣದಲ್ಲಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರದಲ್ಲಿ ಹತ್ತಿ ನೂಲನ್ನು ಮಗ್ಗದ ಯಂತ್ರದ ಮೂಲಕ ಸುಲಭವಾಗಿ ತಯಾರಿಸುವುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಡಲಾಯಿತು.
ಕಾರ್ಯಗಾರವನ್ನು ಉದ್ಘಾಟಿಸಿದ ಉದ್ಯಮಿ ಹಾಗೂ ಪತಕರ್ತರಾದ ಕೆ. ಮಧುಸೂದನ್ ಅವರು ಮಾತನಾಡಿ ಮನೆಯಲ್ಲಿಯೇ ಸ್ವಾವಲಂಬನೆಯಿಂದ ಮಗ್ಗದ ಕೆಲಸ ಮಾಡಬಹುದು, ತಿಂಗಳಿಗೆ 10,000 ಸಂಪಾದಿಸಬಹುದು, ಬಟ್ಟೆಗಳನ್ನು ಉತ್ಪಾದಿಸಿ ಉದ್ಯಮಗಳೊಂದಿಗೆ ಒಪ್ಪಂದ ಮಾಡಿಕೊಂಡರೆ ಹೆಚ್ಚಿನ ಅಭಿವೃದ್ಧಿಯಾಗಬಹುದು ಎಂದು ತಿಳಿಸಿದರು.
ಚಾಮುಂಡೇಶ್ವರಿ ನಗರ ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷರಾದ ಜಿ. ಲಕ್ಷ್ಮೀ ಮಾತನಾಡಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಪ್ರಯುಕ್ತ ಮಹಿಳೆಯರ ಸ್ವಾವಲಂಬನೆಗಾಗಿ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು, ಮಗ್ಗದ ಉದ್ಯಮದಿಂದ ಗ್ರಾಮೀಣ ಜನರು ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬಹುದು ಎಂದು ತಿಳಿಸಿದರು.
ರಾಮಕೃಷ್ಣ ಸಾಂಸ್ಕೃತಿಕ ಮತ್ತು ಕ್ರೀಡಾ ಪ್ರತಿಷ್ಠಾನದ ಅಧ್ಯಕ್ಷ ಬಸವಲಿಂಗಪ್ಪ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ ರಘು, ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ರಾಕೇಶ್ ಭಟ್, ಪಾಲಿಕೆ ಮಾಜಿ ಸದಸ್ಯೆ ಹೇಮಾ ಗಂಗಪ್ಪ, ಪ್ರಧಾನ ಕಾರ್ಯದರ್ಶಿ ಈರೇಗೌಡ , ಉಪಾಧ್ಯಕ್ಷರಾದ ಹೆಚ್.ಜಿ ರಾಜಮಣಿ, ಶಶಿಕಾಂತ, ಹಿರಿಯಣ್ಣ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಮಂಜುಳಾ, ಪುಟಮ್ಮಣ್ಣಿ, ಉಪಾಧ್ಯಕ್ಷರಾದ ರಮಾಬಾಯಿ, ಹೇಮಲತಾ, ರಾಧಾ ಮುತಾಲಿಕ್, ಸುಮಿತ್ರ, ಕಾರ್ಯದರ್ಶಿಗಳಾದ ಪದ್ಮ, ಸುಮಾ, ಚಂದ್ರಿಕಾ ಅಜಯ್ ಹಿರೇಮಠ್, ವಾರ್ಡ್ ಅಧ್ಯಕ್ಷರಾದ ಬಸವಣ್ಣ, ರವಿ ಉತ್ತಪ್ಪ, ಯುವ ಮೋರ್ಚಾದ ಚಂದನ್ ಗೌಡ, ಸಾಗರ್ ಸಿಂಗ್, ಸಿ. ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.
ಮುಂಜಾನೇಯಿಂದಲೇ ಸರದಿ ಸಾಲಿನಲ್ಲಿ ನಿಂತು ಸಹಸ್ರಾರು ಭಕ್ತರು ತಾಯಿಯ ದರ್ಶನ ಪಡೆದರು.
ಉತ್ಸವ ಮೂರ್ತಿಗೆ ವಿವಿಧ ಬಗೆಯ ಹೂವು ಹಾಗೂ ನವಿಲಿನ ಹಾರದ ಅಲಂಕಾರ ಮಾಡಲಾಗಿತ್ತು.
ದೇವಾಲಯದ ಆವರಣವನ್ನು ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಮುಂಜಾನೆ 4.30ರಿಂದಲೇ ಚಾಮುಂಡಿ ತಾಯಿಗೆ ವಿಶೇಷ ಪೂಜಾ ಕಾರ್ಯಗಳು ನೆರವೇರಿತು.
4ನೆ ಆಷಾಢ ಶುಕ್ರವಾರದ ಪ್ರಯುಕ್ತ ದೇವಿ ಚಾಮುಂಡೇಶ್ವರಿಯ ದರ್ಶನ ಪಡೆಯಲು ಚಾಮುಂಡಿ ಬೆಟ್ಟಕ್ಕೆ ಇಂದು ಬೆಳಗಿನಿಂದಲೇ ಭಕ್ತರು ಆಗಮಿಸಿತ್ತಲೇ ಇದ್ದಾರೆ.
ಬೆಳಗಿನ ಜಾವವೇ ಸಾವಿರಾರು ಭಕ್ತರು ಸಾವಿರ ಮೆಟ್ಟಿಲುಗಳನ್ನು ಹತ್ತಿ ಬಂದು ದೇವಿ ದರ್ಶನಕ್ಕೆ ಕಾದು ನಿಂತಿದ್ದರು.
ಮುಂಜಾನೆ ನಾಲ್ಕು ಗಂಟೆಗೆ ದೇವಿಕೆರೆಯಿಂದ ಜಲವನ್ನು ತಂದು ಚಾಮುಂಡೇಶ್ವರಿ ದೇವಿಗೆ ಅಭಿಷೇಕ ಮಾಡಿ ನಂತರ ಪಂಚಾಮೃತ ಅಭಿಷೇಕ ನೆರವೇರಿಸಿ ಆನಂತರ ವಿವಿಧ ಹೂವುಗಳಿಂದ ಅಲಂಕಾರ ಮಾಡಿ ಅಷ್ಟೋತ್ತರ, ಸಹಸ್ರನಾಮವನ್ನು ನೆರವೇರಿಸಿ ಮಹಾ ನೈವೇದ್ಯದ ನಂತರ ಮಹಾಮಂಗಳಾರತಿ ಮಾಡಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಇಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ರಾಜ್ಯ ಆಹಾರ ಖಾತೆ ಸಚಿವ ಮುನಿಯಪ್ಪ ಅವರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದರು.
ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರತಿ ವರ್ಷದಂತೆ ಈ ಬಾರಿಯೂ ಸಾವಿರ ಮೆಟ್ಟಿಲುಗಳನ್ನು ಬರಿಗಾಲಿನಲ್ಲಿಯೇ ಹತ್ತಿ ಬೆಟ್ಟಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು.
ಎಂದಿನಂತೆ ಭಕ್ತರಿಗೆ ಉಚಿತ ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗಿತ್ತು.ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಬಿಗಿ ಪೊಲೀಸ್ ಬಂದೋ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಮೈಸೂರು: ಮೈಸೂರಿನ ಸಿದ್ದಾರ್ಥ ನಗರ ಲಲಿತಮಹಲ್ ಗೇಟ್, ಫುಡ್ಸ್ಟ್ರೀಟ್ ಬಳಿ ವಿಷ್ಣು ಸೇನಾ ಸ್ನೇಹಿತರ ಗುಂಪು ಇಂದು ನಾಡ ಅಧಿ ದೇವತೆ ತಾಯಿ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿಯನ್ನು ಆಚರಿಸಿತು.
ಬೆಳಿಗ್ಗೆ ತಾಯಿ ಚಾಮುಂಡೇಶ್ವರಿ ದೇವಿ ಫೋಟೊ ಇಟ್ಟು ಕಳಶ ಪ್ರತಿಷ್ಟಾಪಿಸಿ ಪೂಜಾ ಕಾರ್ಯ ನೆರವೇರಿಸಿ ಮಹಾಮಂಗಳಾರತಿ ಮಾಡಿ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ನಂತರ ಸಾವಿರಾರು ಮಂದಿಗೆ ವಿಷ್ಣು ಸೇನಾ ಸ್ನೇಹಿತರ ಗುಂಪಿನ ವತಿಯಿಂದ ಅನ್ನಪ್ರಸಾದ ಮತ್ತು ಕೇಸರಿಬಾತ್ ಹಾಗೂ ಮಿಟಾಯಿ ವಿತರಿಸಲಾಯಿತು.
ಮೈಸೂರು: ನಾಡ ಅಧಿ ದೇವತೆ ಶ್ರೀ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ನಮಸ್ಕರಿಸಿ ಖ್ಯಾತ ಸಾಹಿತಿ ಹಂಪ ನಾಗರಾಜಯ್ಯ ಅವರು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ನೀಡಿದರು.
ಲೋಕಮಾತೆ ಚಾಮುಂಡೇಶ್ವರಿದೇವಿಗೆ ಮೊದಲು ನಮಸ್ಕರಿಸಿ, ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರನ್ನು ನೆನೆದು ಅವರು ಮಾತು ಆರಂಭಿಸಿದರು.
ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ. ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಗಣ್ಯರಿಗೆ ಅವರು ನಮಸ್ಕಾರ ತಿಳಿಸಿದರು.
ಸೆಪ್ಟೆಂಬರ್ 15 ರಂದು ತೆಂಕಣದ ಚಾಮರಾಜನಗರದಿಂದ ಬಡಗಣದ ಬೀದರವರೆಗೆ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವ ವಿಶ್ವದಾಖಲೆಯ ಮಾನವಸರಪಳಿಯನ್ನು ಆಯೋಜಿಸಿದ್ದು ಸಮಯೋಚಿತವೂ ಅಭಿನಂದನಾರ್ಹವೂ ಆಗಿದೆ ಎಂದು ತಿಳಿಸಿದರು.
ಸೇತುವೆಗಳನ್ನು ಧ್ವಂಸ ಮಾಡಿ ಕಂದರ ಪ್ರಪಾತಗಳನ್ನು ನಿರ್ಮಿಸುತ್ತಿರುವ ದುರಂತವನ್ನು ನಿವಾರಿಸಲು ಮನುಷ್ಯ ಮನುಷ್ಯರನ್ನು, ರಾಷ್ಟ್ರ ರಾಷ್ಟ್ರಗಳನ್ನು ಕೂಡಿಸುವ ಸರಪಳಿಗಳು ಇಂದಿನ ಜರೂರು ಎಂದು ಹೇಳಿದರು.
ಸಾಮಾನ್ಯ ಪ್ರಜೆಯೊಬ್ಬರು ಈ ನಾಡ ಹಬ್ಬ ಸಡಗರದ ಸರಣಿಯನ್ನು ಉದ್ಘಾಟಿಸುತ್ತಿರುವದು ಆ ಪರಿಕಲ್ಪನೆಯ ಮುಂದುವರಿಕೆಯಾಗಿದೆ, ಕಾರ್ಯಕ್ರಮದ ಉದ್ಘಾಟನೆಯನ್ನು, ನಮ್ಮ ನಾಡಿನ ಪ್ರಜೆಗಳ ಪರವಾಗಿ, ವಿನಯ ಮತ್ತು ಧನ್ಯತಾ ಭಾವದಿಂದ ನೆರವೇರಿಸುತ್ತಿದ್ದೇನೆ ಎಂದು ಹೇಳಿದರು.
ದಸರಾ ಹಬ್ಬ ಮತಧರ್ಮಗಳ ತಾರತಮ್ಯವಿರದೆ ಇಡೀ ನಾಡು ಆಚರಿಸುವ ಸರ್ವಜನಾಂಗದ ಹಬ್ಬ.
ನವರಾತ್ರಿಯ ತೆಂಕಣಗಾಳಿಗೆ ಮೈಸೂರು ಮೈಕೊಡವಿ, ಪೊರೆಬಿಟ್ಟು, ಶೃಂಗಾರಗೊಂಡು, ಕಂಗೊಳಿಸುತ್ತದೆ. ಮೈಸೂರೆಂದರೆ ದಸರ, ಜಂಬೂಸವಾರಿ ಎಂಬ ಮಾತು ಲೋಕಪ್ರಸಿದ್ಧಿ ಪಡೆದಿದೆ.
ದಸರ ಹಬ್ಬದ ಸಂದರ್ಭದಲ್ಲಿ ಹಿಂದಿನಿಂದ ಪ್ರೋತ್ಸಾಹಿಸುತ್ತಿದ್ದ ದೇಸಿ ಪರಂಪರೆಗಳಲ್ಲಿ ಕುಸ್ತಿಯೂ ಒಂದು. ಇನ್ನು ಮುಂದೆಯೂ ದೇಸೀ ಕ್ರೀಡೆಯಾದ ಕುಸ್ತಿಗೆ ಹೆಚ್ಚು ಪ್ರೋತ್ಸಾಹ ಕೊಡಬೇಕು ಎಂದು ಹಂಪನಾ ಸಲಹೆ ನೀಡಿದರು.
ಅಭೀಷ್ಟವರಪ್ರದಾಯಿನಿ ಎಂದು ಭಕ್ತರು ಆರಾಧಿಸುವ ದೇವಿ ಚಾಮುಂಡಾಂಬಿಕೆಗೆ ಪೊಡಮಟ್ಟು ಮೂರು ಬೇಡಿಕೆಗಳನ್ನು ಈಡೇರಿಸಿಕೊಡಬೇಕೆಂದು ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಬೇಡಿಕೆಗಳನ್ನು ಈ ವೇಳೆ ಹಂಪನಾ ಮುಂದಿಟ್ಟರು.
ಇಸ್ರೇಲ್-ಪ್ಯಾಲಸ್ಟೈನ್, ರಷಿಯಾ-ಉಕ್ರೈನ್ ಯುದ್ಧ ನಿಂತು, ನಿತ್ಯ ನಡೆಯುತ್ತಿರುವ ಅಮಾಯಕರ ಮಾರಣಹೋಮ ನಿಲ್ಲಲು ಆ ರಾಷ್ಟ್ರನಾಯಕರು ಕೂಡಲೆ ಜೀವಪರ ಕಾಳಜಿ ತೋರುವಂತೆ ಅವರಿಗೆ ಪ್ರೇರಣೆ ನೀಡಬೇಕು
ಹೆಣ್ಣು ಭ್ರೂಣ ಹತ್ಯೆ ತಡೆಯಲು ದೇವಿಯು ತಾಯಿತಂದೆಯರಿಗೆ ಸದ್ಭುದ್ಧಿ ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇನೆ.
ಬಹು ದೊಡ್ಡ ರಾಷ್ಟ್ರೀಯ ಸಮಸ್ಯೆಯಾದ ನಿರುದ್ಯೋಗ ಸಮಸ್ಯೆಯಿಂದ ಯುವಜನರು ಹತಾಶರಾಗಿದ್ದಾರೆ. ನಿರುದ್ಯೋಗ ನಿವಾರಣೆಗೆ ಆದ್ಯತೆಯಿತ್ತು ಕೇಂದ್ರ ಸರಕಾರವು ಕ್ರಮ ಕೈಗೊಳ್ಳುವಂತೆ ಪ್ರೇರೇಪಿಸಬೇಕೆಂದು ಯುವಜನತೆಯ ಪರವಾಗಿ ದೇವಿಯನ್ನು ಪ್ರಾರ್ಥಿಸುತ್ತೇನೆ.
ಕನ್ನಡ ನಾಡು ನುಡಿ ನೆಲ ಜಲ ಕಲೆ ಸಂಸ್ಕೃತಿ ಸಂರಕ್ಷಣೆಗಾಗಿ ಹೋರಾಡುವವರನ್ನು ಕೊಲೆಗಾರರಂತೆ ಕಾಣದೆ, ಪ್ರೀತಿ ಅಭಿಮಾನಗಳಿಂದ ಕಾಣುವಂತೆ ಆಡಳಿತಾಂಗಕ್ಕೆ ಪ್ರೇರಣೆ ಕೊಡುವಂತೆ ವಿನಂತಿಸುತ್ತೇನೆ.
ಚಾಮುಂಡಾಂಬೆಯು ಪರಸ್ಪರ ದೋಷಾರೋಪಣೆ, ವೈಯಕ್ತಿಕ ನಿಂದನೆ, ಅವಾಚ್ಯ ಶಬ್ದಗಳ ಬಳಕೆ ಪದ್ಧತಿ ನಿಂತು ಸಮಾಜಮುಖಿ ಚಿಂತನೆಯನ್ನು ಒಳಗೊಂಡು ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಹಮ್ಮಿಕೊಂಡಿರುವ ಯೋಜನೆ ಯೋಚನೆಗಳನ್ನು ನಿರೂಪಿಸುವಂತೆ ಸ್ಫೂರ್ತಿ ಕೊಡಬೇಕೆಂದು ಹಂಪನಾ ಪ್ರಾರ್ಥಿಸಿದರು.
ಕರ್ನಾಟಕದ ಜನರ ಪ್ರತಿನಿಧಿಯಾಗಿ ಈ ನಾಡ ಹಬ್ಬವನ್ನು ಸಂತೋಷದಿಂದ ಉದ್ಘಾಟಿಸಿದ್ದೇನೆ. ನನ್ನ 88 ವರ್ಷದ ದೀರ್ಘ ಜೀವನದಲ್ಲಿ ಮರೆಯಲಾಗದ ಮಧುರ ಸ್ಮೃತಿಯ ಕ್ಷಣಗಳನ್ನು ಕಲ್ಪಿಸಿಕೊಟ್ಟ ನಮ್ಮ ಹೆಮ್ಮೆಯ ಕರ್ನಾಟಕ ಸರಕಾರಕ್ಕೆ ಅಂತಃಕರಣ ತುಂಬಿದ ಕೃತಜ್ಞತೆಗಳು ಎಂದು ಹೇಳಿದರು.
ಒಟ್ಟು 71 ವರ್ಷಗಳ ಸ್ನೇಹದ ಸುಖ ನೀಡಿದ್ದಲ್ಲದೆ ಆರುವರ್ಷ ಸಹಪಾಠಿಯಾಗಿಯೂ 63 ವರ್ಷ ಮಡದಿಯಾಗಿಯೂ ನನ್ನನ್ನು ರೂಪಿಸಿದ ಮಹಾಶಿಲ್ಪಿ ನಾಡೋಜ ಪ್ರೊಫೆಸರ್ ಕಮಲಾ ಹಂಪನಾ ಅವರ ದಿವ್ಯ ನೆನಪಿಗೆ ನನಗೆ ಸಂದಿರುವ ಈ ಗೌರವವನ್ನು ಸಮರ್ಪಿಸುತ್ತೇನೆ ಎಂದು ಹಂಪಾ ನಾಗರಾಜಯ್ಯ ಹೇಳಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ, ಶಾಸಕರಾದ ಜಿ. ಟಿ ದೇವೇಗೌಡ, ಶ್ರೀ ವತ್ಸ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಗಣ್ಯರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ, ಸಾಂಸ್ಕೃತಿಕ ಕಲಾತಂಡಗಳ ಮೆರವಣಿಗೆಯೊಂದಿಗೆಯೊಂದಿಗೆ ಬರಮಾಡಿಕೊಳ್ಳಲಾಯಿತು.
ಗಣ್ಯರೆಲ್ಲರೂ ಚಾಮುಂಡೇಶ್ವರಿ ಸನ್ನಿಧಿಗೆ ತೆರಳಿ ದೇವಿ ದರ್ಶನ ಪಡೆದು ಪುನೀತರಾದರು.
ನಂತರ ವೇದಿಕೆಗೆ ಆಗಮಿಸಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.