12ನೆ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಸಾಮಾಜಿಕ ಕ್ರಾಂತಿಯ ರೂವಾರಿ ಬಸವಣ್ಣ:ಸಂದೀಪ್
ಮೈಸೂರು: ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆದ ಸಾಮಾಜಿಕ ಕ್ರಾಂತಿಯ ರೂವಾರಿ ಬಸವಣ್ಣನವರು ಎಂದು ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷರಾದ ಸಂದೀಪ್ ತಿಳಿಸಿದರು.
ಶ್ರೀರಾಮ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮ ದಲ್ಲಿ
ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಜ್ಜಿಗೆ ವಿತರಣೆ ಮಾಡಿ ನಂತರ ಅವರು ಮಾತನಾಡಿದರು.

ಅಲ್ಲಮಪ್ರಭು, ಅಕ್ಕಮಹಾದೇವಿ, ಮಡಿವಾಳಮಾಚಯ್ಯ, ನೂಲಿ ಚಂದಯ್ಯ ಮುಂತಾದ ಶಿವಶರಣರ ಕಾಲದಲ್ಲಿಯೇ ಜೀವಿಸಿದ್ದ ಜಗಜ್ಯೋತಿ ಬಸವಣ್ಣನವರ ಪ್ರಭಾವದ ಕಾರಣ ಆ ಕಾಲವನ್ನು ಬಸವಯುಗವೆಂದೇ ಕರೆಯುತ್ತಾರೆ ಎಂದು ಹೇಳಿದರು.
ವೈಶಾಖ ಶುದ್ಧ ತದಿಗೆಯಂದು, ಲಿಂಗಾಯತ ಸ್ಥಾಪಕರಾದ ಬಸವಣ್ಣನವರ ಜನ್ಮದಿನವನ್ನು ಬಸವ ಜಯಂತಿಯಾಗಿ ಆಚರಿಸಲಾಗುತ್ತದೆ. ಬಸವ ಜಯಂತಿಯು ಲಿಂಗಾಯತರ ಹಾಗೂ ಸರ್ವಧರ್ಮೀಯರ ಅತ್ಯಂತ ಪ್ರಮುಖ ಹಬ್ಬ. ಕರ್ನಾಟಕದಾದ್ಯಂತ ಇದನ್ನು ಬಹಳ ವೈಭವ ಹಾಗೂ ಉಲ್ಲಾಸದಿಂದ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಬಸವಣ್ಣನವರು ಸಮಾಜದಲ್ಲಿ ಜಾತಿ, ವರ್ಣ, ಲಿಂಗ ಭೇದ ಎಂಬುದು ಇಲ್ಲ, ನಾವೆಲ್ಲರೂ ಸಮಾನರು ಎಂದು ಸಮಾಜಕ್ಕೆ ಸಂದೇಶ ಸಾರಿದವರು,ಆದ್ದರಿಂದಲೇ ಬಸವೇಶ್ವರರನ್ನು ಬಸವಣ್ಣ, ಬಸವ, ವಿಶ್ವಗುರು ಎಂದು ಕರೆಯಲಾಗುತ್ತದೆ.
ಕಾವ್ಯದ ಮೂಲಕ ಸಾಮಾಜಿಕ ಜಾಗೃತಿಯನ್ನು ಪಸರಿಸಲು ಆರಂಭಿಸಿದರು. ಬಿಜ್ಜಳನ ಸಾಮ್ರಾಜ್ಯದ ಮುಖ್ಯಮಂತ್ರಿಯಾಗಿ, ಬಸವಣ್ಣ ಅನುಭವ ಮಂಟಪವನ್ನು ಪ್ರಾರಂಭಿಸಿದರು, ಇದು ನಂತರ ಎಲ್ಲಾ ವರ್ಗದ ಜನರಿಗೆ ಜೀವನದ ಆಧ್ಯಾತ್ಮಿಕ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸುವ ಕೇಂದ್ರವಾಯಿತು. ಬಸವೇಶ್ವರರ ಸಾಕ್ಷರತಾ ಕೃತಿಗಳು ವಚನ ಸಾಹಿತ್ಯವನ್ನು ಒಳಗೊಂಡಿವೆ ಎಂದು ಸಂದೀಪ್ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಚಂದ್ರಶೇಖರ್, ಮುಖಂಡರಾದ ಅಂಬಳೆ ಶಿವಣ್ಣ, ಕೆ ಆರ್ ಬ್ಯಾಂಕ್ ಭಾಸ್ಕರ್, ಮಹೇಶ್ ಅರಸ್, ಶಿವಣ್ಣ, ಧರ್ಮೇಂದ್ರ, ಪ್ರಭು, ನಾಗಣ್ಣ, ಮಹದೇವಸ್ವಾಮಿ, ಚಂದ್ರಶೇಖರ್, ಪ್ರವೀಣ್, ತೀರ್ಥ, ಪಾಪಣ್ಣ , ಧನುಷ್, ರಾಕೇಶ್, ಭಾನು ಕುಮಾರ್, ಸುರೇಂದರ್, ರಮೇಶ್, ಸಂತೋಷ್ ಉಪಸ್ಥಿತರಿದ್ದರು.
12ನೆ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಸಾಮಾಜಿಕ ಕ್ರಾಂತಿಯ ರೂವಾರಿ ಬಸವಣ್ಣ:ಸಂದೀಪ್ Read More