ವಕ್ಫ್ ಅಕ್ರಮದ ಬಗ್ಗೆ ವರದಿ ತಯಾರಿಸಿದ್ದಅನ್ವರ್ ಮಾಣಿಪ್ಪಾಡಿಗೆ ಬೆದರಿಕೆ ಕರೆ

ಮಂಗಳೂರು,ಏ.4: ವಕ್ಫ್ ಬಿಲ್ ಅಂಗೀಕಾರ ಆಗಿರುವ ಹಿನ್ನೆಲೆ ವಕ್ಫ್ ಅಕ್ರಮದ ಬಗ್ಗೆ ವರದಿ ತಯಾರಿಸಿದ್ದ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರಿಗೆ ಬೆದರಿಕೆ ಕರೆಗಳು ಬಂದಿವೆ.

ಕಳೆದ ಎರಡು ಮೂರು ದಿನಗಳಿಂದ ನಿರಂತರ ಇಂಟರ್‌ನೆಟ್ ಕಾಲ್ ಮೂಲಕ ಬೆದರಿಕೆ ಬರುತ್ತಿದೆ.

ಕನ್ನಡ, ಇಂಗ್ಲಿಷ್, ಉರ್ದು, ಮರಾಠಿ ಭಾಷೆಗಳಲ್ಲಿ ಬೆದರಿಕೆ ಹಾಕುತ್ತಿದ್ದಾರೆ. ನಿನ್ನನ್ನು ಬಿಡುವುದಿಲ್ಲ, ನಿನ್ನ ವರದಿಯಿಂದ ತೊಂದರೆಯಾಗಿದೆ ಎಂದು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಅನ್ವರ್ ತಿಳಿಸಿದ್ದಾರೆ.

ಅನ್ವರ್ ಮಾಣಿಪ್ಪಾಡಿ, ನೀನು ಬಹಳಷ್ಟು ನಾಯಕರು, ವ್ಯಕ್ತಿಗಳ ವಿರುದ್ಧ ತಪ್ಪು ಮಾಹಿತಿ ಕೊಟ್ಟಿದ್ದೀಯ. ಎಲ್ಲರೂ ನೊಂದಿದ್ದಾರೆ. ಯಾರು ಕೂಡ ನಿನ್ನನ್ನು ಕ್ಷಮಿಸಲ್ಲ. ನಿಮ್ಮನ್ನು ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರಂತೆ.

ನನ್ನ ಕಸಿನ್ ಒಬ್ಬರು ಪೊಲೀಸ್ ಆಫೀಸರ್. ನನಗೆ ಕರೆ ಮಾಡಿ ಜೋಪಾನವಾಗಿರಪ್ಪ, ಮನೆಯಿಂದ ಹೊರಗಡೆ ಒಬ್ಬನೇ ಹೋಗಬೇಡ ಅಂತ ಸಲಹೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ನನ್ನ ವರದಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರ ಹೆಸರನ್ನು ಉಲ್ಲೇಖಿಸಿದ್ದೇನೆ. ಕಲಬುರಗಿಯಲ್ಲಿ ದೊಡ್ಡ ದೊಡ್ಡ ಮಾಲ್, ಬಿಲ್ಡಿಂಗ್‌ಗಳಿವೆ. ಅವರ ಹೆಸರಲ್ಲಿ ಅಲ್ಲದಿದ್ದರೂ, ಬೇರೆಯವರ ಹೆಸರಲ್ಲಿ ಒತ್ತುವರಿಯಾಗಿದೆ, ಬಹುಪಾಲು ಬೇನಾಮಿ ಆಸ್ತಿ ಎಂದು ತಿಳಿಸಿದ್ದಾರೆ.

ಸಂಸತ್‌ನಲ್ಲಿ ಅಂಗೀಕಾರವಾದ ವಕ್ಫ್ ತಿದ್ದುಪಡಿ ಮಸೂದೆ ಈಗ ದೇಶಾದ್ಯಂತ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ವಕ್ಫ್ ವಿಚಾರದಲ್ಲಿ ವರದಿ ತಯಾರಿಸಿದ್ದ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಗೆ ಬೆದರಿಕೆ ಕರೆಗಳು ಬಂದಿವೆ.

ಚರ್ಚೆ ವೇಳೆ ಕರ್ನಾಟಕದ ವಕ್ಫ್ ಒತ್ತುವರಿ ಕುರಿತು ಅನ್ವರ್ ಮಾಣಿಪ್ಪಾಡಿ ವರದಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಸ್ತಾಪಿಸಿದ್ದನ್ನು ಸ್ಮರಿಸಬಹುದಾಗಿದೆ.

ವಕ್ಫ್ ಅಕ್ರಮದ ಬಗ್ಗೆ ವರದಿ ತಯಾರಿಸಿದ್ದಅನ್ವರ್ ಮಾಣಿಪ್ಪಾಡಿಗೆ ಬೆದರಿಕೆ ಕರೆ Read More

ವಿಜಯೇಂದ್ರ ಮೇಲಿನ ಸಿಎಂ ಆರೋಪ ಸುಳ್ಳು: ಮಾಣಿಪ್ಪಾಡಿ

ಮಂಗಳೂರು: ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ಮೌನವಾಗಿರಲು ವಿಜಯೇಂದ್ರ ಅವರು 150 ಕೋಟಿ ಆಫರ್ ಮಾಡಿದ್ದರೆಂಬ ಸಿಎಂ ಸಿದ್ದರಾಮಯ್ಯ ಆರೋಪ ಸುಳ್ಳು ಎಂದು ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ತಿಳಿಸಿದ್ದಾರೆ.

ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಮುಚ್ಚಿ ಹಾಕಲು ಕಾಂಗ್ರೆಸ್‌ನವರೇ ಕೋಟಿ,ಕೋಟಿ ಹಣ ನೀಡುವ ಆಫರ್ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಸಿಎಂ ಸಿದ್ದರಾಮಯ್ಯನವರು ಮಾಡಿದ ಆರೋಪ ಸುಳ್ಳು, ವಿಜಯೇಂದ್ರ ಯಾವುದೇ ರೀತಿಯ ಹಣದ ಬೇಡಿಕೆ ನೀಡಿಲ್ಲ, ಸರ್ಕಾರ ತನಿಖೆ ಮಾಡಬೇಕೆಂದು ವಿಜಯೇಂದ್ರ ಅವರನ್ನು ಯಡಿಯೂರಪ್ಪ ಸಿಎಂ ಆಗಿದ್ದಾಗ ಒತ್ತಾಯಿಸಿದ್ದೆ. ಆದರೆ, ಹಣದ ಬೇಡಿಕೆ ಇಟ್ಟಿಲ್ಲ. ಈ ವರದಿಯನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ ಎಲ್ಲರ ವಿರುದ್ಧ ಕಿಡಿಕಾರಿದ್ದು ಸತ್ಯ. ಸಿಎಂ ಸಿದ್ದರಾಮಯ್ಯನವರು ಹೇಳಿದ ಹಾಗೇನೆ ಸಿಬಿಐಗೆ ವಹಿಸಲಿ ಎಲ್ಲ ಹೊರ ಬರುತ್ತದೆ ಎಂದು ‌ಹೇಳಿದರು.

ವಕ್ಫ್ ವರದಿಯನ್ನು ಮುಚ್ಚಿ ಹಾಕಲು ಕಾಂಗ್ರೆಸ್‌ನವರೇ ನನಗೆ ಹಣದ ಆಮಿಷ ಒಡ್ಡಿದ್ದರು. 2012ರಿಂದಲೂ ಶುರು ಮಾಡಿ ಮರ‍್ನಾಲ್ಕು ವರ್ಷಗಳಿಂದ ಆಫರ್ ನೀಡುತ್ತಾ ಬಂದಿದ್ದರು. ನಾನು ಬೈದು ಕಳುಹಿಸಿದೆ ಎಂದು ಮಾಣಿಪ್ಪಾಡಿ ಹೊಸ ಬಾಂಬ್ ಸಿಡಿಸಿದರು.

ಪ್ರಧಾನ ಮಂತ್ರಿಗಳಿಗೂ ವರದಿ ಸಂಬಂಧ ಬಹಳಷ್ಟು ಪತ್ರಗಳನ್ನು ಬರೆಯಲಾಗಿದೆ, ಕೇಂದ್ರ ಸರ್ಕಾರ ಇದನ್ನು ಪರಿಗಣಿಸಿ ತನಿಖಾ ಸಂಸ್ಥೆಗೆ ಹಸ್ತಾಂತರಿಸಬೇಕು ಎಂದು ಕೇಳಿಕೊಂಡಿದ್ದೆ ಎಂದು ತಿಳಿಸಿದರು.

ನಮ್ಮ ವಕ್ಫ್ ನ ಒಟ್ಟು ಆಸ್ತಿ 50 ಸಾವಿರ ಎಕರೆ ಇದ್ದಾಗ, ಅದರಲ್ಲಿ 27-28 ಸಾವಿರ ಎಕರೆ ಕಬಳಿಕೆ ಆಗಿ ಬಾಕಿ ಉಳಿದಿದ್ದು 23 ಸಾವಿರ ಎಕರೆ. ಆಗ ಸಿದ್ದರಾಮಯ್ಯ ಅವರು 1,60,000 ಎಕರೆಗೆ ನೋಟಿಸ್ ಕೊಡ್ತಾರೆ ಬೇರೆ ಬೇರೆ ರೈತರಿಗೆ.

ಇದು ಯಾಕೆ ಗೊತ್ತಾ ಮುಸ್ಲಿಂ ಮತ್ತು ಹಿಂದೂಗಳ ನಡುವೆ ಕಿಡಿ ಹೊತ್ತಿಸಿ ಅವರಿಬ್ಬರು ಹೊಡೆದಾಡಿಕೊಳ್ಳಲಿ ಅಂತಾ.

ಅವರು ಅಷ್ಟು ಸತ್ಯವಂತರಾಗಿದ್ದರೆ ಒಮ್ಮೆ ನೋಟಿಸ್ ಕೊಟ್ಟವರು ಹಿಂದಕ್ಕೆ ಯಾಕೆ ಪಡೆದುಕೊಳ್ತಾರೆ ಕೇವಲ 23-24 ಸಾವಿರ ಎಕರೆ ಇರಬೇಕಾದರೆ, 1,60,000 ಎಕರೆಗೆ ಹೇಗೆ ನೋಟಿಸ್ ಕೊಟ್ಟರು ಎಂದು ಮಾಣಿಪ್ಪಾಡಿ ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರಿಗೆ ಕಿಂಚಿತ್ತಾದರೂ ಅಲ್ಪಸಂಖ್ಯಾತರ ಮೇಲೆ ಪ್ರೀತಿ ಇದ್ದರೆ, ಆ ಸಮುದಾಯಕ್ಕೆ ಏನಾದರು ಮಾಡಬೇಕೆಂಬ ಮನಸ್ಸಿದರೆ ನಾನು ಕೊಟ್ಟ ವರದಿಯನ್ನು ಸಿಬಿಐ ತನಿಖೆಗೆ ಹಸ್ತಾಂತರ ಮಾಡಲಿ ಎಂದು ಅನ್ವರ್ ಮಾಣಿಪ್ಪಾಡಿ ಒತ್ತಾಯಿಸಿದರು.

ವಿಜಯೇಂದ್ರ ಮೇಲಿನ ಸಿಎಂ ಆರೋಪ ಸುಳ್ಳು: ಮಾಣಿಪ್ಪಾಡಿ Read More