ಮೈಸೂರು: ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲೆಂದು ಪ್ರಾರ್ಥಿಸಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ವತಿಯಿಂದ 101 ತೆಂಗಿನ ಕಾಯಿ ಈಡುಗಾಯಿ ಒಡೆಯಲಾಯಿತು.
ಸೋಮವಾರ ಬೆಳಿಗ್ಗೆ ಮೈಸೂರಿನ ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ಸಂಘದ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ನೇತೃತ್ವದಲ್ಲಿ 101 ತೆಂಗಿನ ಕಾಯಿ ಈಡುಗಾಯಿ ಒಡೆದು ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ತೇಜೇಶ್ ಲೋಕೇಶ್ ಗೌಡ ಅವರು, ಡಿ ಕೆ ಶಿವಕುಮಾರ್ ಅವರು ಪಕ್ಷಕ್ಕಾಗಿ ತಮ್ಮ ತನು ಮನ ಧನವನ್ನು ಅರ್ಪಿಸಿದ್ದಾರೆ. ಪಕ್ಷದ ಶಿಸ್ತಿನ ಸಿಪಾಯಿ ಆಗಿರುವ ಅವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವುದರಲ್ಲಿ ಬಹಳ ಶ್ರಮ ವಹಿಸಿದ್ದಾರೆ. ಆದ್ದರಿಂದ ಕಾಂಗ್ರಸ್ ಹೈ ಕಮಾಂಡ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಈ ಕೂಡಲೇ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಅವರು ವಲಸಿಗರಾಗಿ ಕಾಂಗ್ರೆಸ್ ಗೆ ಬಂದು ಡಿ ಕೆ ಶಿವಕುಮಾರ್ ಅವರ ಬೆಂಬಲದಿಂದಲೇ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಈಗ ಡಿ.ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಟ್ಟು ತಮ್ಮ ಗೌರವವನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಈಡುಗಾಯಿ ಒಡೆದು ಪೂಜೆ ಸಲ್ಲಿಸಿದ ವೇಳೆ ಬೋಗಾದಿ ಸಿದ್ದೇಗೌಡ, ಸಿಂದುವಳ್ಳಿ ಶಿವಕುಮಾರ್, ವರಕೂಡು ಕೃಷ್ಣೇಗೌಡ, ಪ್ರಭಾಕರ್ , ಗಿರೀಶ್ , ಹನುಮಂತಯ್ಯ, ನೇಹಾ, ಎಳನೀರು ರಾಮಣ್ಣ, ಹೊನ್ನೇಗೌಡ , ಜೋತಿ, ಮಂಜುಳಾ, ಸುಜಾತಾ, ಶಿವರಾಂ , ಕೃಷ್ಣಪ್ಪ , ಸುಬ್ಬೇಗೌಡ , ದರ್ಶನ್ ಗೌಡ, ಶಿವರಾಜ್, ಕುಮಾರ್, ರವೀಶ್, ಗಣೇಶ್ ಪ್ರಸಾದ್, ನಾಗರಾಜ್ ಸೇರಿದಂತೆ ಅನೇಕ ಡಿಕೆಶಿ ಅಭಿಮಾನಿಗಳು ಹಾಜರಿದ್ದರು.
ಮೈಸೂರು: ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಮೈಸೂರು ಜಿಲ್ಲಾ ಮಹಿಳಾ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಾಡಿನ ಸಮುದಾಯದ ಹೆಮ್ಮೆಯ ಯಶೋಧರ ದಾಸಪ್ಪನವರ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ಮೈಸೂರಿನ ಹೋಟೆಲೊಂದರಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಲಲಿತಾ ಜಿ.ಟಿ ದೇವೇಗೌಡ ಅವರು ಉದ್ಘಾಟನೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಯಶೋಧರ ದಾಸಪ್ಪನವರ ಕೊಡುಗೆ ನಮ್ಮ ರಾಜ್ಯಕ್ಕೆ ಅಪಾರ, ಸ್ವಾತಂತ್ರ್ಯಕ್ಕೂ ಮುಂಚೆ ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ್ಯ ಚಳವಳಿಯಲ್ಲಿ ಯಶೋಧನಾ ದಾಸಪ್ಪನವರು ಭಾಗವಹಿಸಿ ನಮ್ಮ ನಾಡಿನ ಮಂಚೂಣಿ ಮಹಿಳಾ ನಾಯಕರಾಗಿದ್ದರು ಎಂದು ಸ್ಮರಿಸಿದರು.
ನಾಡಿನ ಶಾಸಕರಾಗಿ, ಸಚಿವರಾಗಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ರಾಜ್ಯಕ್ಕೆ ಹಲವಾರು ನೂತನ ಕೊಡುಗೆಗಳನ್ನು ನೀಡಿದ್ದರು.ಇಂತವರ ದಿನಾಚರಣೆಯನ್ನು ಅಖಿಲ ಕರ್ನಾಟಕ ಒಕ್ಕಲಿಗ ಸಂಘ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಲಲಿತಾ ಜಿ.ಟಿ.ದೇವೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ಯಶೋಧರ ದಾಸಪ್ಪನವರ ಸೊಸೆ ಸರೋಜ ತುಳಸಿ ದಾಸಪ್ಪ ಮಾತನಾಡಿ ರಾಜ್ಯ ಕಂಡಂತಹ ಅತ್ಯದ್ಭುತ ನಾಯಕ ಹೋರಾಟಗಾರ, ಕೊಡುಗೈ ದಾನಿ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಸಂಸ್ಥಾಪಕ ಕೆ. ಹೆಚ್ ರಾಮಯ್ಯನವರ ಮೊದಲನೇ ಮಗಳಾದ ಯಶೋಧರ ದಾಸಪ್ಪನವರು ರಾಜ್ಯದಲ್ಲಿ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ನೂತನವಾಗಿ ಸ್ಥಾಪಿಸಿದ್ದರು ಎಂದು ತಿಳಿಸಿದರು.
ಅದರಲ್ಲೂ ವಿಶೇಷವಾಗಿ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ರಾಜ್ಯದ ಮಹಿಳೆಯರು, ಮಕ್ಕಳ ನೋವು ನಲಿವುಗಳನ್ನು ಅರಿತು ಪ್ರಪ್ರಥಮ ಬಾರಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆ ಸ್ಥಾಪನೆಯಾಗಲು ಕಾರಣಕರ್ತರಾದರು. ಈಗಿನ ಮಹಿಳೆಯರು ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ಬದುಕಬೇಕು ಎಂದು ಸಲಹೆ ನೀಡಿದರಲ್ಲದೆ ನಾನು ಅವರ ಸೊಸೆಯಾಗಿರುವುದು ನನಗೆ ಬಹಳ ಹೆಮ್ಮೆ ಇದೆ ಎಂದು ಹೇಳಿದರು.
ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜಿ ಗಂಗಾಧರ್ ಮಾತನಾಡಿ ನಾಡಿನ ಮೊಟ್ಟ ಮೊದಲ ಮಹಿಳಾ ಸಚಿವರಾಗಿದ್ದ ಯಶೋಧರ ದಾಸಪ್ಪನವರ ಕೊಡುಗೆಗಳನ್ನು ಸ್ಮರಿಸಿದರು.
ರಾಜ್ಯ ಸರ್ಕಾರ ಮಹಿಳಾ ಮತ್ತು ಮಕ್ಕಳ ಇಲಾಖೆಯ ಯಾವುದಾದರೂ ಒಂದು ಪ್ರಮುಖ ಯೋಜನೆಗೆ ಶ್ರೀಮತಿ ಯಶೋಧರ ದಾಸಪ್ಪನವರ ಹೆಸರು ಇಡಬೇಕು ಮತ್ತು ಮೈಸೂರಿನ ಒಂದು ಪ್ರಮುಖ ವೃತ್ತಕ್ಕೆ ಅವರ ಹೆಸರಿಡಬೇಕು ಎಂದು ಒತ್ತಾಯಿಸಿದರು.
ವಿವಿಧ ಕ್ಷೇತ್ರಗಳ ಮಹಿಳಾ ಸಾಧಕರಾದ ಕ್ರೀಡಾ ಕ್ಷೇತ್ರ- ಕುಮಾರಿ ರಕ್ಷಿತಾ ಕೃಷ್ಣಪ್ಪ, ನಟನೆ- ಕ್ಷೇತ್ರದ ಗೀತಾ ಮೋಂಟಡ್ಕ, ರಾಜಕೀಯ ಕ್ಷೇತ್ರ- ಮೋದಾಮಣಿ, ಉದ್ಯಮ ಕ್ಷೇತ್ರ- ಗೀತಾ ರುಕ್ಮಾಂಗದ, ಸಮಾಜ ಸೇವೆ- ಗೀತಾ ಪುಟ್ಟಸ್ವಾಮಿ, ರಾಜಕೀಯ ಕ್ಷೇತ್ರ- ಮೂಡಾ ಎಸ್ ಲಕ್ಷ್ಮೀದೇವಿ, ಕನ್ನಡ ಸಂಘಟನೆ ಕ್ಷೇತ್ರ- ಸುಜಾತಾ ಕೃಷ್ಣ ಸಿ.ಜೆ, ಸಹಕಾರ ಕ್ಷೇತ್ರ- ಸುಶೀಲ ನಂಜಪ್ಪ ಅವರಿಗೆ ರಾಷ್ಟ್ರಕವಿ ಕುವೆಂಪುರವರ ಸುಪುತ್ರಿ ತಾರಿಣಿ ಚಿದಾನಂದ್ ಅವರು ಶ್ರೀಮತಿ ಯಶೋಧರ ದಾಸಪ್ಪ ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಅಧ್ಯಕ್ಷೆ ಲತಾ ರಂಗನಾಥ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೈಸೂರು ಮಹಾನಗರ ಪಾಲಿಕೆ ಮಾಜಿ ಉಪ ಮಹಾಪೌರರಾದ ಶಾಂತಕುಮಾರಿ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಉಪಸ್ಥಿತರಿದ್ದರು.
ಮೈಸೂರು: ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ವತಿಯಿಂದ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಭೈರವೈಕ್ಯ ಪೂಜ್ಯ ಜಗದ್ಗುರು ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ರವರ 80ನೇ ಜಯಂತೋತ್ಸವ ಆಚರಿಸಲಾಯಿತು
ಅಗ್ರಹಾರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ. ಎನ್ ಮಂಜೇಗೌಡ ಅವರು ಪುಷ್ಪ ನಮನ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಅನ್ನದಾಸೋಹ ಮತ್ತು ಅಕ್ಷರ ದಾಸೋಹದ ಮೂಲಕ ಎಲ್ಲಾ ವರ್ಗದ, ಸಮುದಾಯದ, ಬಡ ಜನರ ಸೇವೆಯನ್ನು ಮಾಡಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಿದವರು ಶ್ರೀ ಬಾಲಗಂಗಾಧರನಾಥ ಗುರುಗಳು ಎಂದು ಸ್ಮರಿಸಿದರು.
ದೇಶಾದ್ಯಂತ ಸುಮಾರು 545 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಕೋಟ್ಯಂತರ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ. ಜಗತ್ತು ಕಂಡ ಮಹಾನ್ ಪುರುಷರಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಒಬ್ಬರು,ಸ್ವಾಮೀಜಿಯವರ ಕೊಡುಗೆ ನಾಡಿಗೆ ಅಪಾರ ಎಂದು ಬಣ್ಣಿಸಿದರು.
ರಾಜ್ಯಾಧ್ಯಕ್ಷ ಸಿ.ಜಿ ಗಂಗಾಧರ್ ಮಾತನಾಡಿ, ಸ್ವಾಮೀಜಿಯವರು ಆದಿಚುಂಚನಗಿರಿ ಮಹಾಸಂಸ್ಥಾನ ಮಠವನ್ನು ಬಹಳ ಬೃಹತ್ ರೀತಿಯಲ್ಲಿ ಕಟ್ಟಿ, ಚಿನ್ನದ ಗರಿಯನ್ನಾಗಿ ಮಾಡಿ, ಪ್ರತಿ ನಿತ್ಯ ಅಲ್ಲಿಗೆ ಆಗಮಿಸುವ ಭಕ್ತಾದಿಗಳಿಗೆ ಕಾಲಭೈರವೇಶ್ವರ ದರ್ಶನದ ಜೊತೆಗೆ ನಿತ್ಯ ದಾಸೋಹವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಹಿಂದುಳಿದ ವರ್ಗ, ದಲಿತರು ಸೇರಿದಂತೆ ಪ್ರತಿಯೊಂದು ಸಮುದಾಯದವರಿಗೂ, ದೀಕ್ಷೆಕೊಟ್ಟು ಮಠಗಳನ್ನು ಸ್ಥಾಪಿಸಲು ಸಹಾಯ ಮಾಡಿದವರು, ರಾಮಜನ್ಮಭೂಮಿಗಾಗಿ ಹೋರಾಟ ಮಾಡಿದ ಮಹಾನ್ ಗುರುಗಳು ಎಂದು ಬಣ್ಣಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಯಶಸ್ವಿ ಎಸ್ ಸೋಮಶೇಖರ್ ಅವರು ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಕೆ.ವಿ ಶ್ರೀಧರ್, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಉಪಾಧ್ಯಕ್ಷ ಶಿವಲಿಂಗಯ್ಯ, ಮಹಿಳಾ ಅಧ್ಯಕ್ಷೆ ಲತಾ ರಂಗನಾಥ್, ಯಶ್ವಂತ್, ಸಂಜಯ್ ಕೆ, ಸುಬ್ಬೆಗೌಡ, ಕೃಷ್ಣಪ್ಪ, ನೇಹಾ, ಪದ್ಮ, ಲಕ್ಷ್ಮೀ ಶಿವರಾಜ್, ಭಾಗ್ಯಮ್ಮ, ದರ್ಶನ್ ಗೌಡ, ರವಿವಲಂಪಿಯ, ರಾಮಕೃಷ್ಣೇಗೌಡ, ಪ್ರಭಾಕರ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮೈಸೂರು: ಅವೈಜ್ಞಾನಿಕ ಜಾತಿಗಣತಿ ಹೆಸರಿನಲ್ಲಿ ಸಮಾಜದ,ಸಮುದಾಯಗಳ ಸ್ವಾಸ್ಥ್ಯವನ್ನು ಕದಡಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿಗಳಿಗೆ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದಿಂದ ಮನವಿ ಸಲ್ಲಿಸಲಾಯಿತು.
ಜಾತಿ ಗಣತಿ ಅತ್ಯಂತ ಸೂಕ್ಷ್ಮ ವಿಷಯವಾಗಿ ಪರಿವರ್ತನೆಯಾಗಿದೆ. ರಾಜ್ಯ ಸರ್ಕಾರದ ಜಾತಿಗಣತಿ ನಮ್ಮ ಸಮುದಾಯವನ್ನು ಒಡೆಯಲು ಮಾಡಿದಂತಿದೆ. ಕಾಂತರಾಜು ಆಯೋಗದಿಂದ ಪ್ರತಿ ಮನೆಗೆ ಹೋಗಿ ವಿವರವನ್ನು ಕಲೆ ಹಾಕಿಲ್ಲ ಎಂದು ಹೇಳಲಾಗುತ್ತಿದೆ ಹೀಗೆ ಎಲ್ಲಾ ಮನೆಗಳಿಗೂ ಹೋಗದೆ, ಕಲೆ ಹಾಕಿರುವ ವಿವರಗಳಿಂದ ಕೂಡಿರುವ ಈ ವರದಿಯು ಅವೈಜ್ಞಾನಿಕವಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿ ಸಂಘದವರು ದೂರಿದರು.
ನಮ್ಮ ರಾಜ್ಯದಲ್ಲಿ ಆಧಾರ್ ಕಾರ್ಡ್ ವಿವರಗಳ ಪ್ರಕಾರ ಸುಮಾರು 6 ಕೋಟಿ 90 ಲಕ್ಷ ಜನಸಂಖ್ಯೆ ಇದೆ. ಆದರೆ ಸಮಿತಿಯ ವರದಿಯಲ್ಲಿ 5 ಕೋಟಿ 40 ಲಕ್ಷ ಜನಸಂಖ್ಯೆ ಎಂದು ವರದಿ ಆಗಿದೆ ಇದು ನಿಜಕ್ಕೂ ಬೇಸರದ ಸಂಗತಿಯಾಗಿದೆ, ಈ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದರೆ, ಒಕ್ಕಲಿಗ ಸಮುದಾಯ ಹಾಗೂ ಇನ್ನೂ ಹಲವಾರು ಸಮುದಾಯಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಸಂಘದ ಸದಸ್ಯರು ದೂರಿದರು.
ಇದಕ್ಕೆ ಅನವಶ್ಯಕವಾದ ಆತುರ ಬೇಡ, ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ನಿಮ್ಮ ನಿರ್ಧಾರವನ್ನು ಮರುಪರಿಶೀಲನೆ ಮಾಡಿ, ವೈಜ್ಞಾನಿಕ, ವಸ್ತುನಿಷ್ಠ, ಪಾರದರ್ಶಕವಾಗಿ ಜಾತಿಗಣತಿಯನ್ನು ಮಾಡಬೇಕು ಎಂದು ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯ ಅಧ್ಯಕ್ಷ ಸಿ.ಜಿ ಗಂಗಾಧರ್ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಒತ್ತಾಯಿಸಿದರು.
ಒಂದು ವೇಳೆ ಈ ಅಪೂರ್ಣವಾದ ಹಾಗೂ ಅವೈಜ್ಞಾನಿಕವಾದ ಕಾಂತರಾಜು ವರದಿಯನ್ನು ಸರ್ಕಾರವು ಅಂಗೀಕರಿಸಿದರೆ, ನಮ್ಮ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ವತಿಯಿಂದ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾಧ್ಯಕ್ಷರುಗಳ ನೇತೃತ್ವದಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಆದ್ದರಿಂದ ಈ ವರದಿಯನ್ನು ಸರ್ಕಾರ ಈ ಕೂಡಲೇ ಕೈ ಬಿಟ್ಟು, ವೈಜ್ಞಾನಿಕವಾಗಿ ಪುನಃ ಹೊಸದಾಗಿ ಪ್ರತಿ ಮನೆಗೆ ತೆರಳಿ ವಿವರಗಳನ್ನು ಕಲೆ ಹಾಕಿ ವರದಿಯನ್ನು ತೆಗೆದುಕೊಳ್ಳಬೇಕು, ಯಾವ ಜನಾಂಗಕ್ಕೂ ಅನ್ಯಾಯವಾಗಬಾರದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯ ಅಧ್ಯಕ್ಷ ಸಿ.ಜಿ ಗಂಗಾಧರ್ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ನೇತೃತ್ವದಲ್ಲಿ ಶಿವಲಿಂಗಯ್ಯ, ಸುಬ್ಬೆಗೌಡ ಹಾಗೂ ಹನುಮಂತಯ್ಯ ಮನವಿ ಸಲ್ಲಿಸಿದರು.