ಹಳೇ ಮೈಸೂರು ಅಭಿವೃದ್ಧಿಗೆ ಶ್ರಮಿಸಿದ ಸರ್.ಎಂ ವಿ- ಸಂದೇಶ್ ಸ್ವಾಮಿ

Spread the love

ಮೈಸೂರು: ಕೆಎಂಪಿಕೆ ಟ್ರಸ್ಟ್ ಹಾಗೂ ಜೀವಧಾರ ರಕ್ತನಿಧಿ ಕೇಂದ್ರದ ವತಿಯಿಂದ ಭಾರತರತ್ನ ದಿವಾನ್ ಸರ್. ಎಂ ವಿಶ್ವೇಶ್ವರಯ್ಯ ರವರ 165ನೇ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು.

ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸರ್. ಎಂ ವಿಶ್ವೇಶ್ವರಯ್ಯ ಅವರ ವೃತ್ತದಲ್ಲಿ ಸರ್.ಎಂ ವಿ ನೆನಪು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮಾಜಿ ಮಾಹಾಪೌರರಾದ ಸಂದೇಶ್ ಸ್ವಾಮಿ ಅವರು ಸರ್. ಎಂ ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಸಂದೇಶ್ ಸ್ವಾಮಿ ಅವರು, ಆಧುನಿಕ ಮೈಸೂರನ್ನು ವಿಶ್ವಮಟ್ಟದಲ್ಲಿ ಜನಪ್ರಿಯವಾಗಲು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೊತೆಯಲ್ಲಿ ಶಿಕ್ಷಣ, ಕೃಷಿ, ನೀರಾವರಿ, ಕೈಗಾರಿಕೆ, ಸಹಕಾರಿ, ತಂತ್ರಾಜ್ಞಾನ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಅತ್ಯಾಧುನಿಕ ಯೋಜನೆಗಳನ್ನು ಜಾರಿಗೆ ತರಲು ದಿವಾನ್ ಸರ್. ಎಂ ವಿಶ್ವೇಶ್ವರಯ್ಯ ಅವರ ಸೇವೆ ಸ್ಮರಣೀಯವಾದುದು ಎಂದು ಹೇಳಿದರು.

ಹಳೇಮೈಸೂರಿನ ಅಭಿವೃದ್ಧಿಗೆ ಶ್ರಮಿಸಿರುವ ಸರ್.ಎಂ ವಿಶ್ವೇಶ್ವರಯ್ಯ ಅವರನ್ನ ಇಂದಿನ ಯುವಪೀಳಿಗೆ ಸ್ಮರಿಸಬೇಕು ಎಂದು ಕರೆ ನೀಡಿದರು.

ಸರ್ ಎಂ ವಿ ಅವರ ಜನುಮ ದಿನವನ್ನು ವಿಶ್ವ ಅಭಿಯಂತರರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಆದರೆ ಮೈಸೂರಿನ ಜಿಲ್ಲಾಮಟ್ಟದಲ್ಲಿ ನಗರಪಾಲಿಕೆ ವತಿಯಿಂದ ಆಚರಿಸಲು ಮುಂದಾಗದಿರುವುದು ದುರಾದೃಷ್ಟಕರ ಎಂದು ‌ವಿಷಾಧಿಸಿದರು.

ಇನ್ನೇನು ದಸರಾ ಆಗಮಿಸುತ್ತಿರುವ ಸಂಧರ್ಭದಲ್ಲಿ ಜಂಬೂಸವಾರಿ ಹಾದುಹೋಗುವ ಮಾರ್ಗದಲ್ಲಿ ಸರ್.‌ಎಂ ವಿ ವೃತ್ತವಿದ್ದು ಚೆಸ್ಕಾಂ ದೀಪಾಲಂಕಾರ ಸಮಿತಿ ಆಕರ್ಷಕವಾಗಿ ಲೈಟಿಂಗ್ಸ್ ಮೂಲಕ ಸರ್.ಎಂ ವಿ ಅವರನ್ನ ಸ್ಮರಿಸಲಿ ಎಂದು ಸಂದೇಶ್ ಸ್ವಾಮಿ ಸಲಹೆ ನೀಡಿದರು.

ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಅವರು ಮಾತನಾಡಿ, ಶಾಲಾ ಮಟ್ಟದಲ್ಲಿ ಸರ್. ಎಂವಿ ಅವರ ಕೊಡುಗೆ ಸೇವಾ ಯೋಜನೆಗಳನ್ನ ಸ್ಮರಿಸಲು ಸರ್ಕಾರ ಮುಂದಾಗಬೇಕು ಎಂದು ತಿಳಿಸಿದರು.

ಬ್ರಿಟೀಷ್ ಸರ್ಕಾರ ಸರ್ ಎಂದು ಪದವಿ ನೀಡಿತು ಕೇಂದ್ರ ಸರ್ಕಾರ ಭಾರತರತ್ನ ನೀಡಿ ಗೌರವಿಸಿತು, ಸರ್.ಎಂ ವಿಶ್ವೇಶ್ವರಯ್ಯ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪ್ರತಿಮೆಯನ್ನ ಉದ್ಘಾಟಿಸಲು ವಿಶ್ರಾಂತಿ ಗೃಹದಿಂದ ಕಾರಿನಲ್ಲೆ ಬರದೆ ಸ್ವತಃ ಕಾಲ್ನಡಿಗೆಯಲ್ಲೇ ನಡೆದುಕೊಂಡು ಬಂದರು ಅವರ ಸರಳತೆ, ಸಮಯ ಪರಿಪಾಲನೆ ಇಂದಿನ ಯುವಸಮುದಾಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯರಾದ ಮ ವಿ ರಾಮಪ್ರಸಾದ್, ಅನಂತು, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್,ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅರ್ಚಕ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ, ನಿರೂಪಕ ಅಜಯ್ ಶಾಸ್ತ್ರಿ, ಕೆ ಆರ್ ಎಸ್ ವಿಜಯ್ ಕುಮಾರ್, ಸುಬ್ಬಯ್ಯ, ಸುಚೇಂದ್ರ, ಸೂರಜ್,ಸದಾಶಿವ್ ಮತ್ತಿತರರು ಹಾಜರಿದ್ದರು.