ರಾಮನಗರ: ಪರಿಸರ ನಿಯಮ ಉಲ್ಲಂಘನೆ ಆರೋಪದ ಮೇಲೆ ಜಾಲಿವುಡ್ ಸ್ಟುಡಿಯೋಸ್ಗೆ ಬೀಗ ಬಿದ್ದಿದ್ದು ಬಿಗ್ ಬಾಸ್ 12 ಶೋ ಗೆ ಬಿಗ್ ಶಾಕ್ ಎದುರಾಗಿದೆ.
ಬಿಗ್ ಬಾಸ್ ಶೊ ನಡೆಯುತ್ತಿರುವ ಜಾಗಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಬೀಗ ಹಾಕಿ ಕಾನೂನು ಹೋರಾಟ ಮಾಡುವಂತೆ ಸೂಚಿಸಿದ್ದಾರೆ.
ನಿಯಮ ಮೀರಿ ಜಾಲಿವುಡ್ ಸ್ಟುಡಿಯೋಸ್ ನಡೆಸುತ್ತಿರುವ ಬಗ್ಗೆ ನೋಟಿಸ್ ನೀಡಲಾಗಿತ್ತು. ಆದರೂ ನಿಯಮ ಪಾಲನೆ ಮಾಡದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮಂಗಳವಾರ ಸಂಜೆ ಸ್ಟುಡಿಯೋಸ್ಗೆ ಭೇಟಿ ನೀಡಿ ಬೀಗ ಹಾಕಿದ್ದಾರೆ.
ರಾಮನಗರ ತಹಶೀಲ್ದಾರ್ ತೇಜಸ್ವಿನಿ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಜಾಲಿವುಡ್ ಒಳಗೆ ಪರಿಶೀಲನೆ ನಡೆಸಿದರು.
ನೋಟಿಸ್ ತೆಗೆದುಕೊಳ್ಳಲು ಜಾಲಿವುಡ್ ಆಡಳಿತ ಮಂಡಳಿ ನಿರಾಕರಿಸಿ ಕೆಲ ಸಮಯ ವಾದ ಮಾಡಿ ಚರ್ಚಿಸಿದರು. ಆಗ ಜಾಲಿವುಡ್ ಸ್ಟುಡಿಯೋಸ್ ಸಿಬ್ಬಂದಿಯನ್ನು ತಹಶೀಲ್ದಾರ್ ತರಾಟೆಗೆ ತೆಗೆದುಕೊಂಡರು. ನೋಟಿಸ್ ಸ್ವೀಕರಿಸೋದಕ್ಕೆ ಬರಲು ಅರ್ಧ ಗಂಟೆ ಬೇಕಾ ಎಂದು ಗರಂ ಆದರು, ಕೂಡಲೇ ಜಾಲಿವುಡ್ ಸ್ಟುಡಿಯೋ ಕ್ಲೋಸ್ ಮಾಡುವಂತೆ ಸೂಚನೆ ನೀಡಿದರು.
ಕೊನೆಗೆ ಜಾಲಿವುಡ್ ಆಡಳಿತ ಮಂಡಳಿ ನೋಟಿಸ್ ಸ್ವೀಕರಿಸಿತು. ನಾಳೆಯಿಂದ ಜಾಲಿವುಡ್ ಸ್ಟುಡಿಯೋಸ್ ಯಾವುದೇ ಕಾರ್ಯಾಚರಣೆ ಮಾಡಬಾರದು ಎಂದು ಅಧಿಕಾರಿಗಳು ಕಡಕ್ ಎಚ್ಚರಿಕೆ ನೀಡಿದರು.
ಎಲ್ಲಾ ರೀತಿಯ ಕಾರ್ಯಚಟುವಟಿಕೆ ಸ್ಥಗಿತ ಮಾಡುವಂತೆ ಸೂಚನೆ ನೀಡಿ ಜಾಲಿವುಡ್ ಸ್ಟುಡಿಯೋಸ್ ಗೆ ಸ್ವತಃ ತಾವೇ ನಿಂತು ತಹಶೀಲ್ದಾರ್ ಬೀಗ ಹಾಕಿಸಿದರು.
ಈ ವೇಳೆ ಒಂದು ಗಂಟೆಗೂ ಹೆಚ್ಚು ಹೊತ್ತು ನಿರ್ದೇಶಕರು ಪರಿಸರ ಹಾಗೂ ಕಂದಾಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಏನಾಯಿತು ಎಂಬುದನ್ನು ಮನವರಿಕೆ ಮಾಡಿಕೊಡಲು ಯತ್ನಿಸಿದರೂ ಪ್ರಯೋಜನವಾಗಿಲ್ಲ.
ಬಿಗ್ ಬಾಸ್ ಶೊ ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.