ಮೈಸೂರು: ದಸರಾ ಕವಿಗೋಷ್ಠಿಯ ಪಂಚ ಕಾವ್ಯೋತ್ಸವದಲ್ಲಿ ಸಮಷ್ಟಿ ಕವಿಗೋಷ್ಠಿ ಹೊಸ ವೈಶಿಷ್ಟ್ಯವಾಗಿದೆ ಎಂದು ಹಿರಿಯ ಸಾಹಿತಿ ಡಾ. ಎಚ್. ಎಸ್. ಶಿವಪ್ರಕಾಶ್ ಅವರು ಹೇಳಿದರು.
ಸಮಷ್ಟಿ ಕವಿಗೋಷ್ಠಿಯು ಭಾವೈಕ್ಯತೆಯ ಸಾಮರಸ್ಯ ಕಲ್ಪಿಸುವ ವೇದಿಕೆಯಾಗಿದೆ ಎಂದು ತಿಳಿಸಿದರು.
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ದಸರಾ ಕವಿಗೋಷ್ಠಿ ಉಪಸಮಿತಿ ವತಿಯಿಂದ ನಗರದ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿರುವ ಸಮಷ್ಟಿ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಬಾರಿ ಪ್ರಪ್ರಥಮವಾಗಿ ಸಮಷ್ಟಿ ಬಹುಭಾಷ ಕವಿಗೋಷ್ಠಿಯನ್ನು ಆಯೋಜಿಸಿರುವುದು ಬಹಳ ಸಂತೋಷವಾಗಿದೆ ಎಂದು ಹೇಳಿದರು.
ಕಾವ್ಯಕ್ಕೆ ಭಾಷೆ ಒಂದು ಮಾಧ್ಯಮವಷ್ಟೆ. ಸಂವೇದನೆ ಎಂಬುದು ಎಲ್ಲಾ ಭಾಷೆಗಳಲ್ಲಿಯೂ ಸಮಾನ ಬಹುಭಾಷೆಯ ಈ ಸಮ್ಮಿಲನ ಉದ್ಯಾನವನದಲ್ಲಿ ಅಲಂಕರಿಸಿದ ಬಗೆಬಗೆಯ ಹೂಗಳಿದ್ದಂತೆ ಎಂದು ಬಣ್ಣಿಸಿದರು.
ಇಷ್ಟು ವರ್ಷದಲ್ಲಿ ನಡೆದ ದಸರಾ ಕವಿಗೋಷ್ಠಿಯಲ್ಲಿ ಈ ವರ್ಷದ ಸಮಷ್ಟಿ ಕವಿಗೋಷ್ಠಿ ಮಾದರಿಯಾಗಿದೆ, ಜಾಗತಿಕವಾಗಿ ಈ ಕವಿಗೋಷ್ಠಿ ನಡೆಯಬೇಕು ಎಂದು ಸಲಹೆ ನೀಡಿದರು.
ಕವಿಗೋಷ್ಠಿಯಲ್ಲಿ ಬಹತೇಕ ಎಲ್ಲಾ ಭಾಷೆಗಳಲ್ಲೂ ಕವನಗಳನ್ನು ವಾಚಿಸಿದ್ದು ವಿಶೇಷವಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜ. ನಾ. ತೇಜಶ್ರೀ ಅವರು ಮಾತನಾಡಿ,
ಪ್ರಸ್ತುತ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರಕ್ಕೆ ತೊಡಕು ಉಂಟಾಗುತ್ತಿದೆ. ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಹೆಚ್ಚಾಗುತ್ತಿದೆ.
ಯಾವ ಭಾಷೆ ನಮ್ಮ ಮನಸ್ಸುಗಳನ್ನು ಬೆಸೆಯಬೇಕಾಯಿತೋ ಅದೇ ಭಾಷೆ ನಮ್ಮ ಮನಸ್ಸಿನ ಸುತ್ತ ಗೋಡೆಗಳನ್ನು ನಿರ್ಮಿಸಿದೆ. ಇದು ಈ ಕಾಲದ ದುರಂತ. ಎಲ್ಲಿ ಭಾಷೆ ಕೆಡುತ್ತದೋ ಅಲ್ಲಿ ಬದುಕು ಕೆಡುತ್ತದೆ ಎಂದು ಆತಂಕ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾರಾಣಿ ಕ್ಲಸ್ಟರ್ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕರಾದ ಪ್ರೊ. ಕೆ. ವೈ. ನಾರಾಯಣಸ್ವಾಮಿ ಅವರು ಮಾತನಾಡಿ, ಸಮಷ್ಟಿ ಕವಿಗೋಷ್ಠಿಯು ದಸರಾ ಕವಿಗೋಷ್ಠಿಯ ಮೊದಲ ಪ್ರಯೋಗವಾಗಿದೆ. ಇದು ಸಮಾಜಕ್ಕೆ ಒಂದು ಬಳುವಳಿಯಾಗಿ ಮುಂದಿನ ಪೀಳಿಗೆಯೂ ಇದನ್ನು ಬೆಳೆಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳಾದ ಶಿವಸ್ವಾಮಿ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಬಿ. ಜೆ. ವಿಜಯ್ ಕುಮಾರ್, ಕವಿಗೋಷ್ಠಿ ಉಪ ಸಮಿತಿ ಕಾರ್ಯಾಧ್ಯಕ್ಷರಾದ ಪ್ರೊ.ಎನ್.ಕೆ.ಲೋಲಾಕ್ಷಿ, ಉಪ ವಿಶೇಷಾಧಿಕಾರಿ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಕಾರ್ಯದರ್ಶಿ ಸಿ.ಕೃಷ್ಣ, ಅಧಿಕಾರೇತರ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತಿತರರು ಹಾಜರಿದ್ದರು.