ಮೈಸೂರು: ಶೋಷಿತ ವರ್ಗದ ನಾಯಕ ಸಿದ್ದರಾಮಯ್ಯ ಅವರ ಬಗೆಗೆ ಇಲ್ಲಸಲ್ಲದ ಮಾತುಗಳನ್ನಾಡುತ್ತಿರುವ ಮಾಜಿ ಸಂಸದ ಪ್ರತಾಪ ಸಿಂಹ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ರೇಖಾ ಶ್ರೀನಿವಾಸ್ ಕಿಡಿ ಕಾರಿದ್ದಾರೆ.
ಬಿಜೆಪಿಯಿಂದ ತಿರಸ್ಕೃತ ಗೊಂಡು ಮೂಲೆಗುಂಪಾ ಗಿರುವ ಪ್ರತಾಪ ಸಿಂಹ ಅವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಅದಕ್ಕಾಗಿಯೇ ತಲೆ ಬುಡವಿಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ವ್ಯಂಗ್ಯವಾಡಿದ್ದಾರೆ.
ಕನ್ನಡ ನಾಡಿನ ಎಲ್ಲ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಬುದ್ಧ, ಬಸವ, ಕನಕ ಅಂಬೇಡ್ಕರರ ಸಿದ್ಧಾಂತ ಗಳೊಂದಿಗೆ ಬಹುಕೋಟಿ ಜನರ ಆಶಯದೊಂದಿಗೆ ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಸರ್ವರಿಗೂ ಸಮಬಾಳು ಸರ್ವರಿಗೊ ಸಮಪಾಲು ಎನ್ನುವ ಸಿದ್ಧಾಂತವನ್ನು ಇಟ್ಟುಕೊಂಡು ಸಿದ್ದರಾಮಯ್ಯ ಅವರು ಶುದ್ಧಹಸ್ತದೊಂದಿಗೆ ಆಡಳಿತ ಚುಕ್ಕಾಣಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕರೋನಾ ಸಂದರ್ಭದಲ್ಲಿ ಎಷ್ಟೋ ಅನಾಥ ಹಿಂದೂಗಳ ಶವ ಸಂಸ್ಕಾರವನ್ನು ಎಷ್ಟೋ ಮುಸ್ಲಿಂ ಜನರು ನೆರವೇರಿಸಿದ್ದಾಗ ಪ್ರತಾಪ ಸಿಂಹ ಅವರು ಎಲ್ಲಿ ಹೋಗಿದ್ದರು. ರಾಜ್ಯದಲ್ಲಿ ಅಂದು ಬಿಜೆಪಿ ಸರಕಾರ ಕರೋನಾ ಹೆಸರಿನಲ್ಲಿ ಲೂಟಿ ಮಾಡಿದಾಗ ಅವರ ಕಾಳಜಿ ಎಲ್ಲಿ ಹೋಗಿತ್ತು. ಇದೆಲ್ಲವನ್ನು ನೋಡಿದರೆ ಕೈಲಾಗದವರು ಮೈ ಪರಚಿಕೊಂಡಂತೆ ಎಂಬ ಗಾದೆ ಮಾತು ನೆನಪಿಗೆ ಬರುತ್ತಿದೆ ಎಂದು ರೇಖಾ ಶ್ರೀ ನಿವಾಸ್ ಲೇವಡಿ ಮಾಡಿದ್ದಾರೆ.