ಅತ್ಯಾಚಾರ ಆರೋಪ:ಲೋಕೇಶ್ವರ ಮಹಾರಾಜ ಸ್ವಾಮೀಜಿ ಅರೆಸ್ಟ್

Spread the love

ಬೆಳಗಾವಿ: ಈಗಿನ ಸಮಾಜದಲ್ಲಿ ಯಾರನ್ನ ನಂಬೋದು ಬಿಡೋದು ಒಂದೂ ಅರ್ಥ ಆಗುತ್ತಿಲ್ಲ.ಸ್ವಾಮೀಜೀನೇ ನೀಚ ಕೆಲಸ ಮಾಡಿದಾಗ‌ ಹೀಗೆ ಅನ್ನಿಸೋದು ಸಹಜ ತಾನೆ

ನೋಡಿ ಇದಕ್ಕೆ ಇಲ್ಲೊಂದು ಉದಾಹರಣೆ ಇದೆ. ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮೇಖಳಿಯ ರಾಮಮಂದಿರದ ಲೋಕೇಶ್ವರ ಮಹಾರಾಜ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆಯ ಲಾಡ್ಜ್‌ ವೊಂದರಲ್ಲಿ 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದರ ಬಗ್ಗೆ ಬಾಗಲಕೋಟೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಬಾಗಲಕೋಟೆ ಪೊಲೀಸರು ಮೂಡಲಗಿ ಠಾಣೆಗೆ ವರ್ಗಾಯಿಸಿದ್ದರು. ಮೂಡಲಗಿ ಪೊಲೀಸರು ಮೇಖಳಿಯ ರಾಮಮಂದಿರಕ್ಕೆ ಆಗಮಿಸಿ ಲೋಕೇಶ್ವರ ಮಹಾರಾಜ ಸ್ವಾಮೀಜಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.

ಬಾಲಕಿಗೆ 17 ವರ್ಷ ಆಗಿದ್ದು ಆಕೆ ಹುಷಾರಿಲ್ಲದೇ ಇದ್ದಾಗ ಪೋಷಕರು ಆಕೆಯನ್ನು ಆಗಾಗ ಮಠಕ್ಕೆ ತಂದು ಬಿಟ್ಟು ಹೋಗುತ್ತಿದ್ದರು. ವಾರಗಟ್ಟಲೇ ಮಗಳನ್ನು ಸ್ವಾಮೀಜಿಯ ಸುಪರ್ದಿಗೆ ಒಪ್ಪಿಸಿ ಮಠದಲ್ಲೇ ಬಿಡುತ್ತಿದ್ದರು.

ಮೇ 13 ರಂದು ಮೂಡಲಗಿ ವ್ಯಾಪ್ತಿಯ ಭಕ್ತರ ಮಗಳನ್ನು ಡ್ರಾಪ್ ಕೊಡುವ ನೆಪದಲ್ಲಿ ರಾಯಚೂರಿಗೆ ಕರೆದೊಯ್ದಿದ್ದ ಸ್ವಾಮೀಜಿ,ಅಲ್ಲಿ ಲಾಡ್ಜ್‌ನಲ್ಲಿ ವಾಸ್ತವ್ಯ ಹೂಡಿ, ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ.

ಮೇ 15ರಂದು ರಾತ್ರಿ ಮತ್ತೆ ಬಾಗಲಕೋಟೆಗೆ ಕರೆದುಕೊಂಡು ಹೋಗಿ, ಲಾಡ್ಜ್‌ನಲ್ಲಿ ವಾಸ್ತವ್ಯ ಹೂಡಿದ್ದು ಅಲ್ಲೂ ಕೂಡಾ ಮತ್ತೆ ಅತ್ಯಾಚಾರ ಮಾಡಿದ್ದರೆಂಬ ಆರೋಪ ಕೇಳಿ ಬಂದಿತ್ತು. ಅತ್ಯಾಚಾರದ ಬಗ್ಗೆ ಯಾರ ಬಳಿಯಾದರೂ ಹೇಳಿದರೆ ಕೊಲೆ ಮಾಡುವುದಾಗಿ ಸ್ವಾಮೀಜಿ ಬೆದರಿಕೆ ಹಾಕಿದ್ದರು ಎಂದು ತಿಳಿದುಬಂದಿದೆ.

ಬಾಗಲಕೋಟೆಯ ಲಾಡ್ಜ್‌ನಲ್ಲಿ ಅತ್ಯಾಚಾರ ನಡೆಸಿದ ಬಳಿಕ ಬಾಲಕಿಯನ್ನು ಸ್ವಾಮೀಜಿ ಮಹಾಲಿಂಗಪುರದ ಬಸ್‌ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದ. ಬಸ್‌ ನಿಲ್ದಾಣದಲ್ಲಿ ತಂದೆ ಹಾಗೂ ಸಂಬಂಧಿಕರು ಇರುವುದನ್ನು ಕಂಡ ಯುವತಿ, ಅವರ ಬಳಿ ಹೋಗಿ ಸ್ವಾಮೀಜಿಯ ಕೃತ್ಯದ ಬಗ್ಗೆ ವಿಷಯ ತಿಳಿಸಿದ್ದಾಳೆ.

ಆಗ ಬಾಲಕಿಯ ಪೋಷಕರು ಬಾಗಲಕೋಟೆ ಮಹಿಳಾ ಠಾಣೆಗೆ ದೂರು ನೀಡಿದ್ದರು. ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಸರ್ಕಾರಿ ಭೂಮಿಯಲ್ಲಿ ಲೋಕೇಶ್ವರ ಸ್ವಾಮೀಜಿ ರಾಮಮಂದಿರ ನಿರ್ಮಿಸಿದ್ದು,ಇದೇ ಮಠದಲ್ಲೇ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.