ಬೆಂಗಳೂರು: ಡಿಆರ್ಐ ಅಧಿಕಾರಿಗಳು ಹಲ್ಲೆ ಮಾಡಿ ಬಲವಂತವಾಗಿ ಸಹಿ ಹಾಕಿಸಿದ್ದಾರೆ,ನನಗೆ ಸರಿಯಾಗಿ ಊಟ ಕೊಟ್ಟಿಲ್ಲ, ನಿದ್ದೆ ಮಾಡಲು ಬಿಟ್ಟಿಲ್ಲ…ಹೀಗೆ ಚಿನ್ನಕಳ್ಳ ಸಾಗಣೆ ಆರೋಪಿ ರನ್ಯಾ ಬಾಂಬ್ ಸಿಡಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಿಂದಲೇ ಡಿಆರ್ಐ ಎಡಿಜಿಗೆ ಪತ್ರ ಬರೆದ ನಟಿ, ಅಧಿಕಾರಿಗಳು ನನಗೆ ಮಾತನಾಡಲು ಬಿಡದೇ 10 ರಿಂದ 15 ಬಾರಿ ನನ್ನ ಮೇಲೆ ಕೈ ಮಾಡಿದ್ದಾರೆ. ಕೇಸ್ನಲ್ಲಿ ತಂದೆ ಹೆಸ್ರು ಸಿಲುಕಿಸ್ತೀವಿ ಅಂತ ಬೆದರಿಸಿ ಹೊಡೆದು ಸ್ಟೇಟ್ಮೆಂಟ್ಗೆ 40 ಬಿಳಿ ಹಾಗೂ ಟೈಪಿಂಗ್ ಇರುವ ಹಾಳೆ ಮೇಲೆ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
14 ಕೆಜಿ ಚಿನ್ನ ತಂದಿದ್ದಾಗಿ ಸುಳ್ಳು ಕೇಸ್ ದಾಖಲಿಸಿದ್ದಾರೆ ನಾನು ಚಿನ್ನ ಸಾಗಿಸಿಲ್ಲ,ನನಗೆ ಏನೂ ಗೊತ್ತಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ರನ್ಯಾ ರಾವ್ ಕೇಸ್ನಿಂದ ಏರ್ಪೋರ್ಟ್ ಅಧಿಕಾರಿಗಳು, ಸಿಬ್ಬಂದಿಗೂ ಢವಢವ ಶುರುವಾಗಿದೆ. ಈಗಿರುವ, ಹಿಂದೆ ಕೆಲಸದಲ್ಲಿದ್ದವರಿಗೂ ಚಿನ್ನದ ಕಂಟಕ ಎದುರಾಗಿದೆ. ರನ್ಯಾ ಟ್ರಾವೆಲ್ ವೇಳೆ ಚೆಕ್ ಮಾಡಿರಲಿಲ್ವಾ? ಅಥವಾ ಯಾರಾದ್ರೂ ಚೆಕ್ ಮಾಡದಂತೆ ನಿರ್ದೇಶಿಸಿದ್ರಾ ಎಂಬ ಬಗ್ಗೆ ತನಿಖೆ ನಡೆಯುವ ಸಾಧ್ಯತೆ ಇದೆ.
ಚಿನ್ನ ಕಳ್ಳಸಾಗಣೆ ಕೇಸ್ನಲ್ಲಿ ಡಿಜಿಪಿ ರಾಮಚಂದ್ರರಾವ್ ವಿಚಾರಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಈ ಕೇಸ್ನಲ್ಲಿ ತನಿಖಾಧಿಕಾರಿ ಆಗಿರುವ ಗೌರವ್ ಗುಪ್ತಾ,ಡಿಐಜಿ ವಂಶಿಕೃಷ್ಣ ವಿಚಾರಣೆ ಮಾಡಲಿದ್ದಾರೆ.
ಡಿಜಿಪಿ ರಾಮಚಂದ್ರರಾವ್ ಈ ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದು, ಕಡ್ಡಾಯ ರಜೆ ಮೇಲೆ ತೆರಳಲು ಸರ್ಕಾರ ಸೂಚನೆ ನೀಡಿದೆ. ಎಡಿಜಿಪಿ ಶರತ್ ಚಂದ್ರ ಅವರಿಗೆ ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿರ್ಮಾಣ ಸಂಸ್ಥೆಯ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿದೆ.
ಇದೇ ವೇಳೆ ರನ್ಯಾ ಚಿನ್ನ ಸಾಗಾಟದಲ್ಲಿ ಕಿಂಗ್ಪಿನ್ ಆಗಿದ್ದ ತರುಣ್ ಕೊಂಡೂರು ರಾಜ್ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆಯಿತು. ಈ ವೇಳೆ ಜಾಮೀನಿಗೆ ಡಿಆರ್ಐ ಪರ ವಕೀಲ ಪಿಪಿ ಮಧು ರಾವ್ ಆಕ್ಷೇಪಣೆ ಸಲ್ಲಿಸಿದ್ದಾರೆ.
ತರುಣ್ ರಾಜುಗೆ ವಿಚಾರಣಾಧೀನ ಕೈದಿ 2487 ಎಂಬ ನಂಬರ್ ನೀಡಲಾಗಿದೆ.