ಹಿಂದೂ ಧರ್ಮ, ಸಂಸ್ಕೃತಿ, ಪರಂಪರೆ ಎಂದರೆ ಕಾಂಗ್ರೆಸ್ ‌ಗೆ‌ ಯಾಕೆ ದ್ವೇಷ:ಅಶೋಕ್

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಹಿಂದೂ ಧರ್ಮ, ಭಾರತೀಯ ಸಂಸ್ಕೃತಿ, ಪರಂಪರೆ ಎಂದರೆ ಯಾಕಿಷ್ಟು ದ್ವೇಷ, ಅಸಡ್ಡೆ ಎಂದು‌ ಪ್ರತಿಪಕ್ಷ
ನಾಯಕ ಆರ್.ಅಶೋಕ್ ತೀಷ್ಣವಾಗಿ ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 144 ವರ್ಷಕ್ಕೊಮ್ಮೆ ಬರುವ ಮಹಾಕುಂಭಮೇಳದ ಈ ಪರಮ ಪವಿತ್ರ ಪರ್ವಕಾಲದಲ್ಲಿ ತ್ರಿವೇಣಿ ಸಂಗಮದಲ್ಲಿ ಒಮ್ಮೆ ಮಿಂದರೆ ಪಾಪಗಳೆಲ್ಲವೂ ಕಳೆಯುತ್ತದೆ, ಪುಣ್ಯ ಲಭಿಸುತ್ತದೆ ಎಂಬುದು ಕೋಟ್ಯಂತರ ಹಿಂದೂಗಳ ನಂಬಿಕೆಯಾಗಿದೆ.

ಭಾರತೀಯತೆ, ಸನಾತನ ಧರ್ಮದ ಬಗ್ಗೆ ಕಣಕಣದಲ್ಲೂ ದ್ವೇಷ ತುಂಬಿಕೊಂಡಿರುವ ನಕಲಿ ಗಾಂಧಿ ಕುಟುಂಬವನ್ನ ಓಲೈಸುವ ಭರದಲ್ಲಿ, ಶತಕೋಟಿ ಹಿಂದೂಗಳ ನಂಬಿಕೆಯನ್ನು ಯಾಕೆ ಅಪಮಾನಿಸುತ್ತೀರಿ
ಸನ್ಮಾನ್ಯ ಖರ್ಗೆ ಅವರೇ ಎಂದು ಕಾರವಾಗಿ ಪ್ರಶ್ನಿಸಿದ್ದಾರೆ.

ಹಜ್ ಯಾತ್ರೆ ಬಗ್ಗೆಯೋ, ರಂಜಾನ್ ಉಪವಾಸದ ಬಗ್ಗೆಯೋ ಈ ರೀತಿ ಟೀಕೆ ಮಾಡುವ ಧೈರ್ಯ ತೋರಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಲ್ಲಿ ಇನ್ನೊಬ್ಬರಿಗೆ ತೊಂದರೆಯಾಗದಂತೆ ಎಲ್ಲರಿಗೂ ತಮ್ಮ ತಮ್ಮ ಮತ, ಧರ್ಮ, ನಂಬಿಕೆಗಳನ್ನ ಆಚರಣೆ ಮಾಡುವ ಹಕ್ಕಿದೆ, ಸ್ವಾತಂತ್ರ್ಯವಿದೆ. ಗಂಗೆಯಲ್ಲಿ ಮಿಂದೇಳುವ ಆಚರಣೆಯನ್ನ ಪ್ರಶ್ನೆ ಮಾಡೋದು, ಹಿಂದೂ ಧರ್ಮಕ್ಕೆ ಮಾತ್ರವಲ್ಲ, ಸಂವಿಧಾನಕ್ಕೂ ಅಪಚಾರ ಮಾಡಿದಂತೆ ಎಂದು ಅಶೋಕ್ ಹೇಳಿದ್ದಾರೆ.