ಮೈಸೂರು: ಕಳೆದ ವಾರದ ಹಿಂದೆಯಷ್ಟೆ ನಗರದ ಹೃದಯ ಭಾಗದಲ್ಲಿಯೇ ನಡೆದ ಸರಣಿ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಮೈಸೂರು ನಗರ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
ಮೈಸೂರು ಪೊಲೀಸ್ ರೌಡಿ ಪ್ರತಿಬಂಧಕ ದಳ ಕಾರ್ಯಾಚರಣೆ ನಡೆಸಿ ಕಾನೂನು ಬಾಹಿರ ಚಟುವಟಿಕೆ ತಡೆಯಲು ಕ್ರಮ ಕೈಗೊಂಡಿದೆ.
ಕಳೆದ ಎರಡು ದಿನಗಳಿಂದ ಮೈಸೂರು ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಶಂಕಿತ ರೌಡಿಗಳು ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುವ 691 ಮಂದಿಯನ್ನು ಗುರುತಿಸಿ ಅವರ ವಿರುದ್ಧ ಕೋಟ್ಪಾ ಕಾಯ್ದೆ ಮತ್ತು ಪೆಟ್ಟಿ ಕೇಸ್ನ್ನು ದಾಖಲಿಸಲಾಗಿದೆ.
ನಗರದಲ್ಲಿನ ಉದ್ಯಾನವನಗಳು, ಬಾರ್, ವೈನ್ ಸ್ಟೋರ್ ಗಳು, ಟೀ ಅಂಗಡಿಗಳು, ಹೋಟೆಲ್ಗಳು, ಬೀದಿ ಬದಿ ಅಂಗಡಿಗಳು ಸೇರಿ ಎಲ್ಲಾ ಸ್ಥಳಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ.
ಇದರೊಂದಿಗೆ ಮೈಸೂರಿನ ದೊಡ್ಡಕೆರೆ ಮೈದಾನ, ದಸರಾ ವಸ್ತುಪ್ರದರ್ಶನದ ಪಾರ್ಕಿಂಗ್ ಸ್ಥಳ, ಜ್ವಾಲಾಮುಖಿ ಪಾರ್ಕಿಂಗ್ ಸ್ಥಳ, ಉದ್ಯಾನವನ, ಆರ್.ಎಂ.ಸಿ ಬಸ್ ನಿಲ್ದಾಣ ಮುಂತಾದ ಸ್ಥಳಗಳಲ್ಲಿ ನಿರಂತರ ಪೊಲೀಸ್ ಕಾರ್ಯಾಚರಣೆ ಮಾಡಲಾಗುತ್ತಿದೆ.
ಕಾರ್ಯಾಚರಣೆ ವೇಳೆ 405 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಕೋಟ್ಪಾ ಕಾಯಿದೆಯಡಿ 204 ಪ್ರಕರಣ, ಕೆಪಿ ಕಾಯಿದೆಯಡಿ 487 ಪೆಟ್ಟಿ ಪ್ರಕರಣಗಳನ್ನು ದಾಖಲಿಸಲಾಗಿದೆ.ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಸಿಪಿಗಳಾದ ಬಿಂದು ಮಣಿ, ಸುಂದರ್ ರಾಜ್, ಎಲ್ಲಾ ಎಸಿಪಿಗಳು, ಠಾಣೆಗಳ ಇನ್ಸ್ ಪೆಕ್ಟರ್ ಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.