ದಸರಾ ನಮ್ಮ ಹಿರಿಯರು ನಮಗಾಗಿ ನೀಡಿದಂತಹ ದೊಡ್ಡ ಉತ್ಸವ-ಶ್ರೀವತ್ಸ

Spread the love

ಮೈಸೂರು: ದಸರಾ ಎಂಬುದು ನಮ್ಮ ಹಿರಿಯರು ನಮಗಾಗಿ ನೀಡಿದಂತಹ ದೊಡ್ಡ ಉತ್ಸವ,ಈ ಉತ್ಸವವು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.

ಮೈಸೂರು ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಆಯೋಜಿಸಲಾಗಿದ್ದ, ರಂಗೋಲಿ ಸ್ಪರ್ಧೆ ಉದ್ಘಾಟಿಸಿ ಶಾಸಕರು ಮಾತನಾಡಿದರು.

ದಸರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಕಲಾವಿದರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಿ ಅವರ ಕಲಾ ಪ್ರತಿಭೆಗೆ ಪ್ರೋತ್ಸಾಹ ನೀಡಲಾಗುತ್ತದೆ, ಅದೇ ರೀತಿ ಮಹಿಳೆಯರಿಗೆ ಏರ್ಪಡಿಸಿರುವ ರಂಗೋಲಿ ಸ್ಪರ್ಧೆಯಲ್ಲಿ 100 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿರುವುದು ಖುಷಿಯ ವಿಷಯ ಎಂದು ಹೇಳಿದರು.

ರoಗೋಲಿ ತಲತಲಾಂತರಗಳಿoದ ಬಂದ ಕೆಲೆ,ಹಿಂದೆ ಕೇವಲ ಮಹಿಳೆಯರಿಗಷ್ಟೇ ಸೀಮಿತವಾಗಿದ್ದ ಈ ಕಲೆ ಇಂದು ವಿವಿಧ ರೂಪ ತಾಳಿ ಪುರುಷರು ರಂಗೋಲಿಯಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದರು.

ಹಳ್ಳಿಗಳಲ್ಲಿ ಮಹಿಳೆಯರು ಜನಪದ ಗೀತೆಗಳನ್ನು ಹಾಡುತ್ತಾ ಸಗಣಿಯನ್ನು ಚಿಮ್ಮಿ ಅದರ ಮೇಲೆ ರಂಗೋಲಿ ಬಿಡುವಂಥದ್ದು, ನಗರಗಳಲ್ಲಿ ಮನೆಯ ಮುಂದಿನ ಸೌಂದರ್ಯವನ್ನು ಹೆಚ್ಚಿಸಲು ರಂಗೋಲಿ ಬಿಡುವ ದೃಶ್ಯಗಳು ಎಲ್ಲರ ಕಣ್ಮನ ಸೆಳೆಯುತ್ತವೆ ಎಂದರು.

ಇಂದು ರಂಗೋಲಿಯ ವಿಶಿಷ್ಟ ರೂಪ ಹಾಗೂ ಅದರ ಮಹತ್ವವನ್ನು ತಿಳಿಸಲು ಮೈಸೂರು ದಸರಾದಂತಹ ದೊಡ್ಡ ಮಹೋತ್ಸವದಲ್ಲಿ ಸ್ಪರ್ಧೆ ಮಾಡುತ್ತಿರುವುದರಿಂದ ಎಷ್ಟೋ ರಂಗೋಲಿ ಪ್ರತಿಭೆಗಳ, ಚಿತ್ರಕಲಾ ಕಲಾವಿದರ ಪ್ರತಿಭೆ ಅನಾವರಣಗೊಳ್ಳುತ್ತಿದೆ. ಸೋಲು-ಗೆಲುವಿನ ನಿರೀಕ್ಷೆ ಬಿಟ್ಟು ಪ್ರತಿಯೊಬ್ಬ ಸ್ಪರ್ಧಿಯು ತಮ್ಮಲ್ಲಿರುವ ಕಲೆಯನ್ನು ಪ್ರಸ್ತುತ ಪಡಿಸಲು ಮುಂದಾಗಬೇಕೆಂದು ಶ್ರೀವತ್ಸ ಶುಭ ಹಾರೈಸಿದರು.

ಮೈಸೂರಿನ ಇಬ್ಬರು ಕಲಾವಿದರು ಏಪ್ರಿಲ್ 14 ರಂದು ಇದೇ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ರಂಗೋಲಿಯಲ್ಲಿ ಅಂಬೇಡ್ಕರ್ ಚಿತ್ರವನ್ನು ಬಿಡಿಸಿದ್ದು, ರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಕುವೆಂಪು ನಗರ ಪಾರ್ಕ್ನಲ್ಲಿ 120 ಅಡಿಯ ರಾಮ ಮಂದಿರ ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿದ್ದಂತಹ ಸಂದರ್ಭಗಳು ರಂಗೋಲಿಯ ಮಹತ್ವ ಹಾಗೂ ಸೌಂದರ್ಯವನ್ನು ತಿಳಿಸುತ್ತವೆ ಎಂದರು.

ರಾಜ್ಯಾದಂತ ಆಗಮಿಸಿದ್ದ ಮಹಿಳೆಯರು ಮೈಷಾಸುರ, ಅಂಬಾರಿಯನ್ನು ಹೊತ್ತಿರುವ ಆನೆಯ ಚಿತ್ರ, ಬಸವ ಮತ್ತು ಶಿವ, ಲಿಂಗ ಸಮಾನತೆಯನ್ನು ಉತ್ತೇಜಿಸೋಣ ಎಂಬ ವಿಷಯದ ಮೇಲೆ, ಮಹಿಳೆಯ ಮೇಲೆ ಆಗುತ್ತಿರುವ ಅತ್ಯಾಚಾರ ತಡೆಗಟ್ಟುವುದು ಸೇರಿದಂತೆ ಬಣ್ಣದ ಬಣ್ಣದ ರಂಗೋಲಿ ಬಿಡಿಸಿ ಸಂಭ್ರಮಿಸಿದರು.

ಸ್ಪರ್ಧೆಯಲ್ಲಿ ಮೂರು ಬಹುಮಾನ, ಮೂರು ಸಮಾಧಾನಕರ ಬಹುಮಾನ ಮತ್ತು ಭಾಗವಹಿಸಿದವರೆಲ್ಲರಿಗೂ ಪ್ರಶಸ್ತಿ ಪತ್ರಗಳನ್ನು ಅ.8 ರಂದು ನೀಡಲಾಗುತ್ತದೆ.