ಒಡಿಶಾ ದಿಂದ ಮೈಸೂರಿಗೆ ಸಾಗಿಸುತ್ತಿದ್ದ32.156 ಕೆಜಿ ಗಾಂಜಾ ವಶ

ಮೈಸೂರು: ಒಡಿಶಾ ರಾಜ್ಯದಿಂದ ಮೈಸೂರಿಗೆ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 32.156 ಕೆಜಿ ನಿಷೇಧಿತ ಗಾಂಜಾವನ್ನು ಮೈಸೂರಿನ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸಿಸಿಬಿ ಪೊಲೀಸರು ದಾಳಿ ನಡೆಸಿ ಕಾರು ಮತ್ತು ಮಾಲನ್ನು ವಶಕ್ಕೆ ಪಡೆದುಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ಒಡಿಶಾ ರಾಜ್ಯದ ಮಿಥುನ್ ದಾಲಿ (36)ಮತ್ತು ಬಬೂಲಾ ಮದಿ (33)ಎಂಬವರನ್ನು ಬಂಧಿಸಿ ಮಾರುತಿ ಕಾರು ಮತ್ತು ಕಾರಿನಲ್ಲಿದ್ದ ಗಾಂಜಾ ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಇಬ್ಬರು ಆರೋಪಿಗಳು ಅಂತರ್‌ರಾಜ್ಯ ಪೆಡ್ಲರ್‌ಗಳಾಗಿದ್ದು, ಗಾಂಜಾವನ್ನು ಮೈಸೂರಿನಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಏಪ್ರಿಲ್ ೩೦ ರಂದು ರಾತ್ರಿ ೭ ಗಂಟೆಗೆ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ಕಿಚೌಕದ ೨ನೇ ಕ್ರಾಸ್‌ನಲ್ಲಿರುವ ಬಾಂಬೆ ಟಿಫಾನಿಸ್ ಡಿಲಕ್ಸ್ ಲಾಡ್ಜ್‌ಗೆ ಸೇರಿದ ಪಾರ್ಕಿಂಗ್ ಜಾಗದಲ್ಲಿ ಈ ಕಾರು ನಿಂತಿತ್ತು.

ಇದರಲ್ಲಿ ಎಲ್ಲಿಂದಲೋ ತಂದ ಗಾಂಜಾವನ್ನು ಮೈಸೂರಿನಲ್ಲಿ ಮಾರಾಟ ಮಾಡಲು ಆರೋಪಿಗಳು ಪ್ರಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದರು.

ಮೈಸೂರು ನಗರ ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು ಹಾಗೂ ಸಿಸಿಬಿ ಎಸಿಪಿ ಮಹಮ್ಮದ್ ಶರೀಫ್ ರಾವುತರ್ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ಶಬ್ಬಿರ್ ಹುಸೇನ್, ಪಿಎಸ್‌ಐ ಲೇಪಾಕ್ಷ, ಕೆ.ರಾಜು ಕೋನಕೇರಿ, ಸುಪ್ರಿಯಾ ಮತ್ತು ಎಎಸ್‌ಐ
ನಾಗೇಶ್, ಸತೀಶ್ ಹಾಗೂ ಸಿಬ್ಬಂದಿಗಳಾದ ರವಿಕುಮಾರ್, ಮಧುಕುಮಾರ್, ಅನಿಲ್, ಪುರುಷೋತ್ತಮ್,
ಮೋಹನಾರಾಧ್ಯ, ದೇವರಾಜು, ದೊಡ್ಡಗೌಡ, ರಾಜು, ಶ್ರೀನಿವಾಸ, ಹಾಗೂ ಮಮತ ಅವರುಗಳು ದಾಳಿಯಲ್ಲಿಯಲ್ಲಿ ಪಾಲ್ಗೊಂಡಿದ್ದರು.

ಈ ಸಂಬಂಧ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.