ತಂಗಿ ನಿಶ್ಚಿತಾರ್ಥಕ್ಕೆ ಅಡುಗೆ ಸಾಮಗ್ರಿ ತರಲುಹೋದ ಯುವಕ ಹಳ್ಳಕ್ಕೆ ಬಿದ್ದು ಕೋಮಾ

Spread the love

ಮೈಸೂರು: ತಂಗಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಅಡುಗೆ ಸಾಮಗ್ರಿ ತರಲು ತೆರಳಿದ ಯುವಕ ರಸ್ತೆ ಕಾಮಗಾರಿ ನಡೆಯುತ್ತಿದ್ದ ಭಾರಿ ಹಳ್ಳಕ್ಕೆ ಬಿದ್ದು ಕೋಮಾಗೆ ಹೋದ ಘಟನೆ ನಂಜನಗೂಡಿನಲ್ಲಿ‌ ನಡೆದಿದೆ.

ಜಿಲ್ಲೆಯ ನಂಜನಗೂಡು ತಾಲೂಕು ಹುಲ್ಲಹಳ್ಳಿಯ ಹೆಡಿಯಾಲ ಗ್ರಾಮದ ವೀರಭದ್ರಸ್ವಾಮಿ ಕೋಮಾಗೆ ಹೋಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ.

ಕಾಮಗಾರಿ ನಡೆಸುವ ವೇಳೆ ಯಾವುದೇ ಸುರಕ್ಷಿತಾ ಕ್ರಮ ಕೈಗೊಳ್ಳದ ಗುತ್ತಿಗೆದಾರ ಗೋವಿಂದೇಗೌಡ ವಿರುದ್ದ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೀರಭದ್ರಸ್ವಾಮಿ ಹೆಡಿಯಾಲ ಗ್ರಾಮದಿಂದ ಹುಲ್ಲಹಳ್ಳಿಗೆ ಪಲ್ಸರ್ ಬೈಕ್ ನಲ್ಲಿ ತೆರಳುತ್ತಿರುವಾಗ, ಮಾದಾಪುರ ಹಾಗೂ ಕಾರ್ಯ ಗ್ರಾಮದ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಡೆಕ್ ಕಾಮಗಾರಿ ನಡೆಯುತ್ತಿದ್ದ ಭಾರಿ ಹಳ್ಳಕ್ಕೆ ಉರುಳಿ ಬಿದ್ದಿದ್ದಾನೆ.

ಕಾಮಗಾರಿಗೆಂದು ಅಳವಡಿಸಿದ್ದ ಕಬ್ಬಿಣದ ರಾಡ್ ಗಳು ಕಣ್ಣು ಹಾಗೂ ತಲೆ ಭಾಗವನ್ನ ಚುಚ್ಚಿ ಗಾಯಗೊಳಿಸಿದೆ.
ಭಾರಿ ಪ್ರಮಾಣದ ಹಳ್ಳ ತೆಗೆಯುವ ವೇಳೆ ಗುತ್ತಿಗೆದಾರ ಯಾವುದೇ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳದ ಹಿನ್ನಲೆ ಘಟನೆ ಸಂಭವಿಸಿದೆ ಎಂದು ಆರೋಪಿಸಿ ವೀರಭದ್ರಸ್ವಾಮಿ ತಂದೆ ಬಸವ ಲಿಂಗಪ್ಪ ಹುಲ್ಲಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.