ಮೈಸೂರು: ನಂಜನಗೂಡಿನಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬೇಸತ್ತು ಸಾಲಗಾರರು ಗ್ರಾಮವನ್ನೇ ತೊರೆಯುತ್ತಿದ್ದಾರೆ.
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ, ರಾಂಪುರ, ಕುರಿಹುಂಡಿ, ಶಿರಮಳ್ಳಿ, ಕಗ್ಗಲೂರು ಹೆಗ್ಗಡಹಳ್ಳಿ, ಮುದ್ದಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಕುಟುಂಬಗಳಲ್ಲಿದಗದವರು ಗ್ರಾಮ ತೊರೆಯುತ್ತಿದ್ದಾರೆ.
ಮನೆಗಳ ಮುಂಭಾಗದಲ್ಲಿ ನಾಮಫಲಕಗಳನ್ನ ಅಳವಡಿಸಿ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಎಂಬ ಜನ ಆರೋಪಿಸಿದ್ದಾರೆ.
ಬಲವಂತವಾಗಿ ಸಾಲ ಕೊಡುತ್ತಿರುವ ಕೆಲ ಮೈಕ್ರೋ ಫೈನಾನ್ಸ್ಗಳು ನಂತರ ವಸೂಲಿಗೆ ಅನ್ಯ ಮಾರ್ಗಗಳನ್ನು ಹಿಡಿದು ಕಿರುಕುಳ ಕೊಡುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಬಗ್ಗೆ ಗ್ರಾಮದ ಕಾಂಗ್ರೆಸ್ ಮುಖಂಡ ಹುಚ್ಚಯ್ಯ ಮಾತನಾಡಿ,ಇತ್ತೀಚೆಗೆ ಮೈಕ್ರೋ ಫೈನಾನ್ಸ್ಗಳ ಹಾವಳಿ ಹೆಚ್ಚಾಗಿದೆ. ಶಿರಮಳ್ಳಿ ಗ್ರಾಮದಲ್ಲಿ ಕನಿಷ್ಠ 15 ಕುಟುಂಬಗಳು ಗ್ರಾಮ ತೊರೆದಿವೆ ಎಂದು ಹೇಳಿದರು.
ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ಕೊಡುವಾಗ ಅವರಿಗೆ ಸಾಲ ತೀರಿಸುವ ಸಾಮರ್ಥ್ಯ ಇದೆಯೇ ಎಂದು ನೋಡದೇ ಮಿತಿಮೀರಿ ಸಾಲ ಕೊಡುತ್ತಿವೆ.ಅವರುಗಳು ಸಾಲ ತೀರಿಸಲಾಗದೇ ಊರು ಬಿಟ್ಟು ಹೋಗುತ್ತಿದ್ದಾರೆ. ಮೈಕ್ರೋ ಫೈನಾನ್ಸ್ಗಳು ಸಾಲಗಾರರಿಗೆ ಮಾನಸಿಕವಾಗಿ ತುಂಬಾ ಹಿಂಸೆ ನೀಡುತ್ತಿವೆ ಎಂದು ಅವರು ಆರೋಪಿಸಿದರು.
ಮೈಕ್ರೋ ಫೈನಾನ್ಸ್ ವ್ಯವಸ್ಥೆಯನ್ನು ನಿಯಂತ್ರಿಸಬೇಕೆಂದು ಸರ್ಕಾರಕ್ಕೆ ಹುಚ್ಚಯ್ಯ ಮನವಿ ಮಾಡಿದರು.
ರಾಂಪುರ ಗ್ರಾಮದ ಹಲವು ಮಹಿಳೆಯರು ಮಾತನಾಡಿ, ನಮಗೆ ಮೈಕ್ರೋ ಫೈನಾನ್ಸ್ನವರು ತುಂಬ ಹಿಂಸೆ ಕೊಡುತ್ತಿದ್ದಾರೆ. ಹಗಲು – ರಾತ್ರಿ ಎನ್ನದೆ ಮನೆಗೆ ಬಂದು ಹಣ ಕಟ್ಟುವ ತನಕ ಮನೆ ಬಿಟ್ಟು ಹೋಗೋದಿಲ್ಲ ಅಂತ ಇಲ್ಲೇ ಕುಳಿತಿರುತ್ತಾರೆ, ನಮಗೆ ಹಣ ಕಟ್ಟಲಾಗುತ್ತಿಲ್ಲ, ಪರಿಹಾರ ಕೊಡಸಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.