ಮೈಸೂರು: ನಮ್ಮ ಸಂಪತ್ತು, ಅಂತಸ್ತು ಅಧಿಕಾರವನ್ನ ಯಾರಾದರೂ ಕಸಿದುಕೊಳ್ಳಬಹುದು ಆದರೆ ನಮ್ಮಲ್ಲಿರುವ ಜ್ಞಾನ ವಿದ್ಯೆ ಪದವಿಯನ್ನ ಯಾರೂ ಕಿತ್ತುಕೊಳ್ಳಲು ಆಗುವುದಿಲ್ಲ ಎಂದು ಕನ್ನಡ ಪ್ರೇಮಿ ಸೈಯದ್ ಇಸಾಕ್ ನುಡಿದರು.
ನಗರದ ಉದಯಗಿರಿಯಲ್ಲಿರುವ ಕನ್ನಡಪ್ರೇಮಿ ಸೈಯದ್ ಇಸಾಕ್ ಅವರ ಗ್ರಂಥಾಲಯದಲ್ಲಿ ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕೋಶ ಓದು ದೇಶ ನೋಡು ಅಭಿಯಾನದ ವೇಳೆ ಅವರು ಮಾತನಾಡಿದರು.

ಶಿಕ್ಷಣ ಎನ್ನುವುದು ದೇಶದ ಪ್ರತಿಯೊಂದು ಮಗುವಿಗೂ ಸಿಗಬೇಕು ಎಂದು ತಿಳಿಸಿದರು.
ನಮ್ಮ ಗ್ರಂಥಾಲಯಕ್ಕೆ ಜೀವಧಾರ ರಕ್ತನಿಧಿ ಕೇಂದ್ರದ ವತಿಯಿಂದ ಕಳೆದ ಒಂದು ವರ್ಷದಿಂದ ಕನ್ನಡ ದಿನಪತ್ರಿಕೆಗಳನ್ನ ಓದುಗರಿಗಾಗಿ ನೀಡುತ್ತಾ ಸೇವೆ ಸಲ್ಲಿಸುತ್ತ ಬಂದಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.
ಸರ್ಕಾರಿ ಕಾರ್ಯಕ್ರಮಗಳು,ಶುಭ ಸಮಾರಂಭಗಳು ಮತ್ತು ಹುಟ್ಟುಹಬ್ಬಗಳಲ್ಲಿ ಕನ್ನಡ ಪುಸ್ತಕಗಳನ್ನ ಉಡುಗರೆಯಾಗಿ ನೀಡುವ ಸಂಪ್ರದಾಯ ರೂಡಿಸಿಕೊಳ್ಳೊಣ ಇದರಿಂದ ನಾಡಿನ ಕವಿಗಳಿಗೆ ಸಾಹಿತಿಗಳಿಗೆ ಪ್ರೋತ್ಸಾಹಿಸ ಬಹುದಾಗಿದೆ ಎಂದು ಸೈಯದ್ ಇಸಾಕ್ ಮನವಿ ಮಾಡಿದರು.
ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರ ಮತ್ತು ಕೆಎಂಪಿಕೆ ಟ್ರಸ್ಟ್ ವತಿಯಿಂದ ಕವಿಗಳು ಸಾಹಿತಿಗಳು ಬರೆದಿರುವ ವಿವಿಧ ಪುಸ್ತಕಗಳು ಮತ್ತು ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಪಠ್ಯಪುಸ್ತಕಗಳನ್ನ ಸೈಯದ್ ಇಸಾಕ್ ಅವರ ಗ್ರಂಥಾಲಯಕ್ಕೆ ನೀಡಲಾಯಿತು.

ಈ ವೇಳೆ ಜೀವಧಾರ ಗಿರೀಶ್ ಅವರು ಮಾತನಾಡಿ ಕನ್ನಡ ಭಾಷೆಯ ಮಹತ್ವವನ್ನ ಮತ್ತು ಕರುನಾಡಿನ ಸಂಪತ್ತನ್ನ ಮುಂದಿನ ಯುವಪೀಳಿಗೆಗೆ ಪರಿಚಯಿಸುವಲ್ಲಿ ಗ್ರಂಥಾಲಯದ ಪಾತ್ರ ಪ್ರಮುಖವಾದುದು ಎಂದು ಹೇಳಿದರು.
ಇತ್ತೀಚಿನ ದಿನದಲ್ಲಿ ರಾಜಕೀಯ, ಜಾತಿ ವ್ಯವಸ್ಥೆ, ಧರ್ಮ ಸಂಘರ್ಷದ ನಡುವೆ ಕನ್ನಡ ಭಾಷಾ ಅಭಿಮಾನ ಕಳೆದು ಹೋಗುತ್ತಿದೆ ಇದು ಕನ್ನಡಿಗರಾಗಿ ನಾವು ನಮಗೆ ಮಾಡಿಕೊಳ್ಳುವ ಅಪಮಾನ ಎಂದು ತಿಳಿಸಿದರು.
ಸೈಯದ್ ಇಸಾಕ್ ಅವರ ನಾಲ್ಕು ದಶಕದ ಕನ್ನಡ ಸೇವೆ ಅಪಾರವಾದುದು, ಉದಯಗಿರಿಯಲ್ಲಿರುವ ಸೈಯದ್ ಇಸಾಕ್ ಅವರ ಗ್ರಂಥಾಲಯಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಮೈಸೂರು ನಗರಪಾಲಿಕೆ ವಿಶೇಷ ನೆರವು ಕಲ್ಪಸಿ ಶಾಶ್ವತ ಕನ್ನಡ ಗ್ರಂಥಾಯಲಯಕ್ಕೆ ಸಹಕಾರ ನೀಡಲಿ ಎಂದು ಗಿರೀಶ್ ಕೋರಿದರು.
ನಿಮ್ಮ ಮನೆಗಳಲ್ಲಿರುವ ಬಳಸಿದ ಹಳೇ ಪುಸ್ತಕಗಳನ್ನು ಗುಜರಿಗೆ ಹಾಕದೆ ಸೈಯದ್ ಇಸಾಕ್ ಅವರ ಗ್ರಂಥಾಲಯಕ್ಕೆ ನೀಡಿದರೆ ಓದುಗರಿಗೆ ಅನುಕೂಲವಾಗುತ್ತದೆ ಎಂದು ಗಿರೀಶ್ ಸಲಹೆ ನೀಡಿದರು.
ಮೈಸೂರು ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ ರಾಜ್, ನಗರ ಪಾಲಿಕೆ ಮಾಜಿ ಸದಸ್ಯ ರಘುರಾಜೇ ಅರಸ್, ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ದುರ್ಗಾ ಪ್ರಸಾದ್, ರಾಕೇಶ್, ಎಸ್ ಎನ್ ರಾಜೇಶ್ ಮತ್ತಿತರರು ಹಾಜರಿದ್ದರು.