ಮೈಸೂರು: ಸಾಂಸ್ಕೃತಿಕ ನಗರಿ ಎಂಬ ಹೆಸರಿಗೆ ತಕ್ಕಂತೆ ಮೈಸೂರಿನ ಕುಟುಂಬವೊಂದು ಪುಂಗನೂರು ಎಂಬ ದೇಸಿ ಹಸುಗಳನ್ನು ಸಾಂಪ್ರದಾಯಿಕವಾಗಿ
ಸಾಕುತ್ತಿದ್ದು ಎಲ್ಲರ ಗಮನ ಸೆಳೆದಿದ್ದಾರೆ.
ಶಾರದಾ ವಿಲಾಸ ಕಾಲೇಜಿನ ಹಿಂಬಾಗದ ಕೆ ಆರ್ ವನಂ ಎಂಬಲ್ಲಿ ಮಧುಸೂದನ ತಾತಾಚಾರ್ಯ ಮತ್ತು ಕುಟುಂಬದವರು
3 ವರ್ಷಗಳಿಂದ ಪುಂಗನೂರು ಎಂಬ ಆಂದ್ರ ಪ್ರದೇಶ ಮೂಲದ ದೇಸಿ ಹಸುಗಳನ್ನು ಸಾಕುತ್ತಿದ್ದಾರೆ.
ಮೂರು ಹಸು ಮತ್ತು ಎರಡು ಕರುಗಳನ್ನು ಮನೆಯ ಕಾರ್ ಶೆಡ್ನಲ್ಲಿ ಇಟ್ಟುಕೊಂಡಿದ್ದು ಕಾರ್ ಶೆಡ್ ಅನ್ನು ಕೌ ಶೆಡ್ ಆಗಿ ಪರಿವರ್ತಿಸಿದ್ದಾರೆ.

ಈ ಪುಂಗನೂರು ಗ್ರಾಮದ ವಿಶೇಷ ಹಸುಗಳ ಹಾಲಿನಿಂದ ತಿರುಪತಿ ತಮ್ಮಪ್ಪನಿಗೆ ಅಭಿಷೇಕ ನೆರವೇರಿಸಲಾಗತ್ತದಂತೆ.ಇಂತಹ ಹಸು ಮೈಸೂರಿನಲ್ಲಿರುವುದು ನಮ್ಮ ಹೆಮ್ಮೆ.

ಸಿರಿ, ನಿಧಿ, ಸಿಹಿ ಎಂಬ ಹಸುಗಳು ಮತ್ತು ಸಿರಿಯ ಮಗಳು ಭುವಿ ಮತ್ತು ನಿಧಿಯ ಮಗಳಾದ ಸ್ವಾತಿ ಎಂಬ ಕರುಗಳನ್ನು ಸಾಕುತ್ತಿದ್ದು, ಇತ್ತೀಚೆಗಷ್ಟೇ ಎರಡೂ ಕರುಗಳಿಗೆ ತೊಟ್ಟಿಲು ಶಾಸ್ತ್ರವನ್ನು ನೆರವೇರಿಸಿದ್ದಾರೆ.

ಮಕ್ಕಳಂತೆ, ಮನೆಯ ಸದಸ್ಯರಂತೆ ಹಸುಗಳನ್ನು ಸಾಕುವ ವಿಶಿಷ್ಟ ಸಂಸ್ಕೃತಿಯು ನಮ್ಮ ದೇಶದಲ್ಲಿದೆ. ಅದರಂತೆ ನಾವು ಮನೆಯ ಮಕ್ಕಳಂತೆ ಹಸುಗಳನ್ನು ನೋಡಿಕೊಳ್ಳುತ್ತೇವೆ, ಮಾತೃ ಸ್ವರೂಪವಾದ, ಮುಕ್ಕೋಟಿ ದೇವತೆಗಳು ವಾಸಸ್ಥಾನವಾದ ಗೋವುಗಳ ಸೇವೆ ಮಾಡಿಕೊಂಡು ಬಂದಿದ್ದೇವೆ ಎಂದು ಗೋ ಪೋಷಕರಾದ ಮಧುಸೂದನ್ ತಾತಾಚಾರ್ಯ ಹೇಳಿದ್ದಾರೆ.
ಬಂಧುಗಳು, ಕುಟುಂಬದವರು, ಹಿತೈಷಿಗಳು, ನೆರೆಹೊರೆಯವರು, ಗೋಭಕ್ತರು, ಸ್ನೇಹಿತರ ಸಹಕಾರ ಮತ್ತು ಪ್ರೋತ್ಸಾಹದೊಂದಿಗೆ ಹರಿ ಬ್ರಹ್ಮ ಗೋ ಸೇವಾ ಟ್ರಸ್ಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ತಲಕಾಡಿನ ಹೊಸಬೀದಿಯಲ್ಲಿರುವ ತಮ್ಮ ಪೂರ್ವಿಕರ ಮನೆಯಲ್ಲಿ 10 ವರ್ಷಗಳಿಂದ ಗೋಶಾಲೆಯನ್ನು ನಡೆಸುತ್ತಿದ್ದಾರೆ.

ದೇಸಿ ತಳಿಗಳಾದ ಒಂಗೋಲ್, ತಾರ್ ಪಾರ್ಕರ್, ಗೀರ್, ಬರಗೂರು,ಸಾಹಿವಾಲ್ ತಳಿಗಳನ್ನು ಇಲ್ಲಿ ಉಳಿಸಿ ಪೋಶಿಸಲಾಗುತ್ತಿದೆ ಎಂದು ಮಧುಸೂದನ್ ತಾತಾಚಾರ್ಯ ಮಾಹಿತಿ ನೀಡಿದ್ದಾರೆ.
ಉತ್ಕೃಷ್ಟ ಗುಣಮಟ್ಟದ ಹಾಲನ್ನು ಕೊಡುವ ಆರೋಗ್ಯಕರ ವಾತಾವರಣವನ್ನು ನಿರ್ಮಿಸುವ, ವಿಶೇಷ ಲಕ್ಷಣಗಳಿಂದ ಕೂಡಿದ ಸುಂದರ ರೂಪವುಳ್ಳ ನಮ್ಮ ಭಾರತೀಯ ಗೋ ತಳಿಗಳು ಮನುಕುಲದ ನಿರ್ಲಕ್ಷ್ಯದ ಕಾರಣ ಇಂದು ಅಳಿವಿನ ಅಂಚಿಗೆ ಬಂದಿದೆ.

ಕೇವಲ ಹಾಲು ಉತ್ಪಾದನೆ ಮತ್ತು ಹಣ ಸಂಪಾದನೆಯನ್ನು ಗುರಿಯಾಗಿ ಇಟ್ಟುಕೊಳ್ಳದೆ ದೇಸಿ ಗೋವುಗಳನ್ನು ಸ್ವತ: ಬೆಳೆಸುವುದು ಹಾಗೂ ಅವುಗಳನ್ನು ಬೆಳೆಸುವ ಗೋಶಾಲೆಗಳಿಗೆ ಎಲ್ಲ ರೀತಿಯ ಸಹಕಾರ ನೀಡುವುದು ಸಮಾಜವು ಒಗ್ಗಟ್ಟಿನಿಂದ ಮಾಡಬೇಕಾದ ಜವಾಬ್ದಾರಿಯುತ ಕೆಲಸವಾಗಿದೆ.

ನಮ್ಮ ದೇಶದ ಗೋವುಗಳ ಸಂಪತ್ತನ್ನು ಉಳಿಸಿ, ಬೆಳೆಸಿ, ಆರೋಗ್ಯಕರ ಸಮಾಜವನ್ನು ನಿರ್ಮಿಸುವ ಹಾದಿಯಲ್ಲಿ ನಾವೆಲ್ಲರೂ ಸಾಗೋಣ ಎಂದು ಹೇಳುತ್ತಾರೆ ಮಧುಸೂದನ್ ತಾತಾಚಾರ್ಯ ಅವರು.