ಮೈಸೂರು: ದಸರಾ ಮತ್ತು ನವರಾತ್ರಿ ಪ್ರಾರಂಭವಾದಾಗಿನಿಂದ ಮೈಸೂರಿನ ಅಗ್ರಹಾರದ ನವಗ್ರಹ ದೇವಸ್ಥಾನದಲ್ಲಿ ತಾಯಿ ಪಾರ್ವತಿಗೆ ವಿಶಿಷ್ಟ ಅಲಂಕಾರ ಮತ್ತು ವಿಶೇಷ ಪೂಜೆ ನೆರವೇರಿಸುತ್ತಾ ಬರಲಾಗಿದೆ.
ನಗರದ ಅಗ್ರಹಾರ ಕೆ ಆರ್ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ ದೇವಾಲಯದಲ್ಲಿ ನವರಾತ್ರಿಯ ವಿಶೇಷ ಪೂಜಾಕಾರ್ಯಗಳು ಅದ್ದೂರಿಯಾಗಿ ನೆರವೇರುತ್ತಿದೆ.
ಶಿವಾರ್ಚಕರಾದ ಎಸ್.ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ಪ್ರತಿದಿನ ತಾಯಿ ಪಾರ್ವತಿಗೆ ವಿಶೇಷ ಅಲಂಕಾರ ಮತ್ತು ಪೂಜಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ.
ನವರಾತ್ರಿ ಒಂಬತ್ತನೇ ದಿನವಾದ ಮಂಗಳವಾರ ರಾತ್ರಿ ತಾಯಿ ಸೌಮ್ಯಮೂರ್ತಿಯಾಗಿ ಪ್ರಶಾಂತವಾಗಿ ಕಾಣುತ್ತಿದ್ದಾಳೆ.
ಸೋಮವಾರ ರಕ್ಕಸನನ್ನು ಕೊಂದು ವಿಜೃಂಬಿಸಿದ್ದ ತಾಯಿ ಮಂಗಳವಾರ ರಾತ್ರಿ ಮಹಾ ಗೌರಿಯಾಗಿ ಎಲ್ಲರನ್ನೂ ಆಶೀರ್ವದಿಸುತ್ತಿದ್ದಾಳೆ.
ನವರಾತ್ರಿಯಲ್ಲಿ ದುಷ್ಟ ಶಕ್ತಿಯನ್ನು ಸಂಹಾರ ಮಾಡಲೆಂದೇ ಆದಿಶಕ್ತಿಯು ಒಂಬತ್ತು ಅವತಾರಗಳನ್ನು ಎತ್ತುತ್ತಾಳೆ.ಕಡೆಗೆ ರಕ್ಕಸನನ್ನು ಸಂಹರಿಸಿ ವಿಜೃಂಬಿಸುತ್ತಾಳೆ.ಇದೀಗ ವಿಜಯ ಮಾತೆ ಪಾರ್ವತಿ ಸೌಮ್ಯ ಸ್ವರೂಪಿಯಾಗಿ ಕಂಗೊಳಿಸುತ್ತಿದ್ದಾಳೆ.
ಬೆಳ್ಳಿಯ ಕಿರೀಟ,ತ್ರಿಶೂಲ ಧಾರಿಯಾಗಿದ್ದಾಳೆ. ವಿವಿಧ ಬಗೆಯ ಹೂಗಳು,ಚಂಡು ಹೂವಿನ ಹಾರ,ಸೇವಂತಿಗೆ ಮಾಲೆ,ತುಳಸಿ ಮಾಲೆ ಧರಿಸಿ ಕೇಸರಿ ಬಣ್ಣದ ರೇಷ್ಮೆ ಸೀರೆ ಉಟ್ಟು ಸರ್ವಾಲಂಕಾರ ಭೂಶಿತಳಾಗಿ ಕಂಗೊಳಿಸುತ್ತಿದ್ದಾಳೆ ತಾಯಿ ಪಾರ್ವತಿ.ಅಷ್ಟುಚಂದದ ಅಲಂಕಾರ ಮಾಡಿದ್ದಾರೆ ಅಭಿನಂದನ್.
ನೂರಾರು ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆದು, ಪೂಜಿಸಿ ಪುನೀತರಾಗುತ್ತಿದ್ದಾರೆ.