ಮೈಸೂರು: ಮೈಸೂರು ತಾಲ್ಲೂಕು ವ್ಯಾಪ್ತಿಯಲ್ಲಿ ಕೆರೆ,ಕಟ್ಟೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿಸಲು ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಶಾಸಕ ಜಿ.ಟಿ.ದೇವೇಗೌಡ ತಾಕೀತು ಮಾಡಿದರು.
ಏತನೀರಾವರಿ ಯೋಜನೆ ಮೂಲಕ ತುಂಬಿಸಬೇಕಿರುವ ಎಲ್ಲಾ ಕೆರೆಗಳನ್ನೂ ಭರ್ತಿ ಮಾಡಬೇಕು ಎಂದು ಸೂಚಿಸಿದರು. ನಗರಪಾಲಿಕೆ ವಲಯ ಮೂರರ ಕಚೇರಿ ಸಭಾಂಗಣದಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶಾಸಕರು, ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲಾ ಕೆರೆಗಳು,ಕಟ್ಟೆಗಳನ್ನು ತುಂಬಿಸಲು ಅನುದಾನ ಬಿಡುಗಡೆ ಮಾಡಿಸಲಾಗಿದೆ. ಸಕಾಲದಲ್ಲಿ ಕಾಮಗಾರಿಗಳನ್ನು ಮುಗಿಸಬೇಕು ಎಂದು ಆದೇಶಿಸಿದರು.
ಉಳಿದ ಕೆರೆಗಳನ್ನು ತುಂಬಿಸಲು ಡಿಪಿಆರ್ ತಯಾರಿಸಿ ಸಲ್ಲಿಸಿ ಎಂದು ಹೇಳಿದ ಜಿಟಿಡಿ, ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸಬೇಕಾದರೆ ಕೆರೆಗಳನ್ನು ತುಂಬಿಸಬೇಕು.ಹಾಗಾಗಿ, ಯಾವುದೇ ಕೆರೆಗಳು ಪೂರ್ಣವಾಗಿ ತುಂಬಿಲ್ಲ ಎಂಬ ದೂರು ಬರಬಾರದು,ಪೈಪ್ಲೈನ್ ಕೊನೆಯ ತನಕವೂ ಇರಬೇಕು ಎಂದು ಸೂಚಿಸಿದರು.
ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಅಜರುದ್ದೀನ್ ಮಾತನಾಡಿ,ಗುಂಗ್ರಾಲ್ ಛತ್ರ,ಒಡೆಯರ ಕಟ್ಟೆ, ದೊಡ್ಡೇಗೌಡನಕಟ್ಟೆ, ಹೊನ್ನಯ್ಯನಕಟ್ಟೆ ಕೆರೆಗಳನ್ನು ತುಂಬಿಸಲು ೧೪ ಕೋಟಿ ರೂ.ಮಂಜೂರಾಗಿದೆ, ಶೀಘ್ರದಲ್ಲೇ ಕಾಮಗಾರಿ ಮುಗಿಯಲಿದೆ.ಒಡೆಯರ ಕೆರೆ ದೊಡ್ಡದು,ಏತನೀರಾವರಿ ಯೋಜನೆ ಮೂಲಕ ನೀರು ತುಂಬಿಸಬೇಕಿರುವುದರಿಂದ ಎರಡು-ಮೂರು ದಿನಗಳಲ್ಲಿ ಮೋಟಾರ್ ಅಳವಡಿಸಲಾಗುತ್ತದೆ. ನಂತರ, ಚಾಲನೆ ಕೊಡಬಹುದು ಎಂದು ಅಧಿಕಾರಿಗಳು ಹೇಳಿದರು.
ಲಿಂಗಾಂಬುದಿಪಾಳ್ಯ,ಅಯ್ಯಜಯ್ಯನಕೆರೆ, ಕೇರ್ಗಳ್ಳಿ ಕೆರೆಯನ್ನು ಶುಚಿಗೊಳಿಸಿ ನೀರು ತುಂಬಿಸಲು ಕೆಲವು ಕಾಮಗಾರಿ ನಡೆಸಬೇಕಿದೆ.ಕೆರೆಗಳಿಗೆ ನೇರವಾಗಿ ಪೈಪ್ಲೈನ್ ತೆಗೆದುಕೊಂಡು ಹೋಗಬೇಕಿರುವುದರಿಂದ ಪ್ರತ್ಯೇಕವಾದ ಡಿಪಿಆರ್ ತಯಾರಿಸಲಾಗುತ್ತಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿ.ಟಿ ದೇವೇಗೌಡರು, ಕೆರೆಗಳನ್ನು ಸಂರಕ್ಷಣೆಮಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು,ನೀವು ಪ್ರಸ್ತಾವನೆ ಸಲ್ಲಿಸುವ ಯೋಜನೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು,ಸಣ್ಣನೀರಾವರಿ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಒಪ್ಪಿಗೆ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.
ಗುತ್ತಿಗೆದಾರರಿಗೆ ಏನಾದರೂ ಬಾಕಿ ಅನುದಾನ ಪಾವತಿಸುವುದು ಇದ್ದರೆ ಕ್ಲಿಯರ್ ಮಾಡಿ. ಶೀಘ್ರದಲ್ಲೇ ಚಾಲನೆ ಕೊಡೋಣ ಎಂದು ಹೇಳಿದರು.
ದೇವಿಕೆರೆಯಲ್ಲಿ ತುಂಬಿರುವ ಹೂಳುತೆಗೆಯಲಾಗಿತ್ತು. ವಿದ್ಯುತ್ ದೀಪ, ರಸ್ತೆ ಮೊದಲಾದ ಕಾಮಗಾರಿಗಳನ್ನು ಮುಂದುವರಿಸಲು ಅರಮನೆ ವತಿಯಿಂದ ಅನುಮತಿ ಪಡೆಯಬೇಕಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆ ಅಧೀಕ್ಷಕ ಅಭಿಯಂತರ ಪ್ರಶಾಂತ್, ಕಾರ್ಯಪಾಲಕ ಅಭಿಯಂತರ ಅಜರುದ್ದೀನ್, ಈಶ್ವರ್,ವೇಣುಗೋಪಾಲ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.