ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕಠಿಣ ತಯಾರಿ ಅತ್ಯಗತ್ಯ:ಡಾ. ಎಂ. ಬಿ ಬೋರಲಿಂಗಯ್ಯ

Spread the love

ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕಠಿಣ ತಯಾರಿ ಅತ್ಯಗತ್ಯ ಎಂದು ದಕ್ಷಿಣ ವಲಯ ಪೊಲೀಸ್ ಉಪ ಮಹಾನಿರೀಕ್ಷಕ ಡಾ. ಎಂ. ಬಿ ಬೋರಲಿಂಗಯ್ಯ ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ 50 ದಿನಗಳ ಐಎಎಸ್‌ ಹಾಗೂ ಕೆಎಎಸ್ ಪರೀಕ್ಷಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯೋಗ ಮಾರುಕಟ್ಟೆಯಲ್ಲೀಗ ಸ್ಪರ್ಧೆ ಹೆಚ್ಚಿದೆ. ಯಾವುದೇ ಜಾಬ್ ನೋಟಿಫಿಕೇಷನ್ ಪ್ರಕಟವಾಗಲಿ ಇರುವುದು ಕೆಲವೇ ಹುದ್ದೆಗಳಾಗಿದ್ದರೂ ಸಾವಿರ, ಲಕ್ಷ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿರುತ್ತಾರೆ,ಸರ್ಕಾರಿ ನೌಕರಿಗಿರುವ ಸೆಳೆತನ ಅಂತದ್ದು ಎಂದು ಅಭಿಪ್ರಾಯ ಪಟ್ಟರು.

ಕಠಿಣ ಪರಿಶ್ರಮ ಇದ್ದರೆ ಇಂತಹ ಉದ್ಯೋಗಗಳನ್ನು ನೀವು ಪಡೆಯಬಹುದು ಎಂದು‌ ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಾನು ಕೂಡ ಹಳ್ಳಿಯಲ್ಲಿಯೇ ಹುಟ್ಟಿ ಬೆಳೆದು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ‌ ಓದಿ ಯುಪಿಎಸ್ಸಿ ಪರೀಕ್ಷೆ ತಯಾರಿಗೆ ದೆಹಲಿಗೆ ಹೋಗಿದ್ದೆ. ಇಲ್ಲಿ ಬಹುತೇಕರು ಗ್ರಾಮೀಣ ಭಾಗದವರೇ ಇದ್ದೀರಿ ಶ್ರಮಪಟ್ಟು ಓದಿ ಎಂದು ಸಲಹೆ ನೀಡಿದರು.

ಪ್ರಸ್ತುತ ಪರೀಕ್ಷೆ ತಯಾರಿಗೆ ದೆಹಲಿಗೆ ಹೋಗಬೇಕೆಂದಿಲ್ಲ, ಮೈಸೂರಿನ ಕೆಎಸ್ಒಯು ನಡೆಸುತ್ತಿರುವ ತರಬೇತಿಯು ಅತ್ಯುತ್ತಮ ತರಬೇತಿ ಕೇಂದ್ರವಾಗಿದೆ ಎಂದು ಬೋರಲಿಂಗಯ್ಯ ತಿಳಿಸಿದರು.

ಹಾರ್ಡ್ ವರ್ಕ್ ಜೊತೆಗೆ ಓದಿನಲ್ಲಿ ತಯಾರಿ ಇರಲಿ,ಜತೆಗೆ ನಿದ್ರೆಯು ಮುಖ್ಯ. ನಿದ್ದೆಗೆಟ್ಟು ಓದುವುದು ಬೇಡ,ಎಲ್ಲದಕ್ಕೂ ಸಮಯಪಾಲನೆ ಇದ್ದರೆ ಒಳಿತು, ತಯಾರಿ ಸಮಯದಲ್ಲಿ ವಿದ್ಯಾರ್ಥಿಗಳು ಗುಂಪು ರಚಿಸಿಕೊಂಡು ಆಯ್ಕೆವಾರು ವಿಷಯಗಳನ್ನು ಚರ್ಚಿಸಿ ಸಾಧ್ಯವಾದಷ್ಟು ಸಾಮಾಜಿಕ ಜಾಲತಾಣದ ಗೀಳಿನಿಂದ ‌‌ದೂರವಿದ್ದು, ದೈನಂದಿನ ದೈಹಿಕ ಚಟುವಟಿಕೆ ಕಡೆಗೆ ಗಮನಹರಿಸಿ ಎಂದು ತಿಳಿಹೇಳಿದರು.

ಮೈಸೂರು ಮಹಾನಗರ ಪಾಲಿಕೆ ಉಪ ಆಯುಕ್ತ ಜಿ.ಎಸ್ ಸೋಮಶೇಖರ್ ಮಾತನಾಡಿ, ಪರೀಕ್ಷೆ ಎದುರಿಸುವುದಕ್ಕೆ ದೃಢ ಮನಸ್ಸು ಇರಬೇಕು, ಆತ್ಮವಿಶ್ವಾಸ, ಸಮಯಪಾಲನೆ, ನೆನಪಿನ ಶಕ್ತಿ, ಪರೀಕ್ಷೆ ಬರೆಯುವ ತಂತ್ರ ಕಲಿತರೆ ಗೆಲುವು ನಿಮ್ಮದೆ ಎಂದು ಹೇಳಿದರು.

ಪರೀಕ್ಷೆ ಬಗ್ಗೆ ತಿಳಿವಳಿಕೆ ಇರಬೇಕು. ಪಠ್ಯಕ್ರಮ, ಪರೀಕ್ಷೆ ಮಾದರಿ, ಹಿಂದಿನ ವರ್ಷದ ಪ್ರಶ್ನೆಪ್ರತ್ರಿಕೆಗಳ ಅಧ್ಯಯನದ ಜೊತೆಗೆ ಪ್ರತಿ ನಿತ್ಯ ದಿನಪತ್ರಿಕೆ, ನಿಮ್ಮಿಷ್ಟದ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ ಎಂದು ಸಲಹೆನೀಡಿದರು.

ಕುಲಪತಿ ಪ್ರೊ.ಶರಣಪ್ಪವಿ.ಹಲಸೆ ಅವರು ಮಾತನಾಡಿ, ವಿದ್ಯಾರ್ಥಿಗಳು ಸತತ ಪ್ರಯತ್ನ ಪಟ್ಟು ಓದಬೇಕು. ನಿಮ್ಮ ನಿರಂತರ ಪ್ರಯತ್ನದಿಂದ ಎಲ್ಲವೂ ಸಾಧ್ಯ. ಶಿಕ್ಷಣ ಉದ್ಯೋಗದ ಜೊತೆಗೆ ಶಿಸ್ತನ್ನು ಕಲಿಸುತ್ತದೆ ಎಂದು ಹೇಳಿದರು.

ಕುಲಸಚಿವ ಪ್ರೊ.ಕೆ.ಬಿ ಪ್ರವೀಣ ಅವರು ಮಾತನಾಡಿ, ವಿದ್ಯಾರ್ಥಿಗಳು ಹಾರ್ಡ್ ವರ್ಕ್ ಜೊತೆಗೆ ಸ್ಮಾರ್ಟ್ ವರ್ಕ್ ಮಾಡಬೇಕು. ಆಸೆ ಪಟ್ಟು ಓದಿ. ವಿವಿಯ ಆವರಣದಲ್ಲಿ ಎಲ್ಲಾ ರೀತಿಯ ಸೌಕರ್ಯಗಳಿವೆ. ಇವುಗಳನ್ನು ಉಪಯೋಗಿಸಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪರೀಕ್ಷಾಂಗ ಕುಲಸಚಿವ ಪ್ರೊ. ಹೆಚ್.ವಿಶ್ವನಾಥ್, ಹಣಕಾಸು ಅಧಿಕಾರಿ ಪ್ರೊ. ನಿರಂಜನ್‌ ರಾಜ್‌, ಅಧ್ಯಯನ ಕೇಂದ್ರದ ಡೀನ್‌ ಪ್ರೊ. ರಾಮನಾಥಂ ನಾಯ್ಡು, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್‌ ಹೊನ್ನೂರ್‌, ಗಣೇಶ್‌ ಕೆ.ಜಿ. ಕೊಪ್ಪಲ್‌, ಇದ್ದರು.

ಕಾರ್ಯಕ್ರಮದಲ್ಲಿ ದಕ್ಷಿಣವಲಯದ ಪೊಲೀಸ್ ಉಪ ಮಹಾನಿರೀಕ್ಷಕ ಡಾ.ಎಂ.ಬಿ ಬೋರಲಿಂಗಯ್ಯ ಮತ್ತು ಮಹಾನಗರ ಪಾಲಿಕೆಯ ಉಪ ಆಯುಕ್ತ ಜಿ.ಎಸ್ ಸೋಮಶೇಖರ್ ಅವರನ್ನು ಕರಾಮುವಿ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.