ಮೈಸೂರು: ಪ್ರತಿಷ್ಠಿತ ಫೈನಾನ್ಸ್ ಗಳು ಹಾಗೂ ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಅಮಾಯಕರಿಗೆ ಲಕ್ಷಾಂತರ ರೂ ವಂಚಿಸಿದ್ದ ವ್ಯಕ್ತಿಯನ್ನು ಹುಲ್ಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾದನಹಳ್ಳಿ ಗ್ರಾಮದ ಸುನಿಲ್ ಬಂಧಿತ ಆರೋಪಿ.
ಆಕಳ ಗ್ರಾಮದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಸುನಿಲ್ ನನ್ನು ಬಂಧಿಸಿದ್ದಾರೆ.
ಕಲ್ಯಾಣಿ ಮೋಟಾರ್ಸ್ ನಲ್ಲಿ ಎಕ್ಸಿಕ್ಯುಟಿವ್ ಸೇಲ್ಸ್ ಮನ್ ಆಗಿ ಕೆಲಸ ಮಾಡುತ್ತಿದ್ದ ಸುನಿಲ್ ತನಗೆ ಪ್ರತಿಷ್ಠಿತ ಫೈನಾನ್ಸ್ ಗಳ ವ್ಯವಸ್ಥಾಪಕರು ಪರಿಚಯವಿದ್ದಾರೆ, ಲಕ್ಷಾಂತರ ರೂಪಾಯಿಗಳನ್ನು ಕಡಿಮೆ ಬಡ್ಡಿ ದರದಲ್ಲಿ ಕೊಡಿಸುತ್ತೇನೆ ಎಂದು ನಂಬಿಸಿದ್ದಾನೆ.
ಜೊತೆಗೆ ಹಣ ಕೊಡಿಸಿದರೆ ಅದಕ್ಕಾಗಿ ಕಮೀಷನ್ ಕೊಡಬೇಕೆಂದು ಹೇಳಿದ್ದಾನೆ.ಈತನ ಮಾತು ನಂಬಿದ ಅನೇಕ ಅಮಾಯಕರು ಕಮಿಷನ್ ನೀಡಿದ್ದಾರೆ.
ಸಾಕಷ್ಟು ಜನರಿಂದ ಹಣ ಪಡೆದಿದ್ದರೂ ಯಾವುದೇ ಸಾಲ ಕೊಡಿಸಿಲ್ಲವೆಂದು ದೂರಿದ್ದಾರೆ.
ಅಲ್ಲದೆ ಕಮೀಷನ್ ಹೆಸರಲ್ಲಿ ಸುಮಾರು 20 ಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದಾನೆಂದು ಹೇಳಲಾಗಿದೆ.