ಮೈಸೂರು: ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಸಿಟಿ ಇಂಪ್ರೂವ್ಮೆಂಟ್ ಟ್ರಸ್ಟ್ ಬೋರ್ಡ್ ಮಾಜಿ ಅಧ್ಯಕ್ಷ ಡಿ.ಮಾದೇಗೌಡರಿಗೆ ಏ.೧೩ ರಂದು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಡಿ.ಮಾದೇಗೌಡ ಅಭಿನಂದನಾ ಸಮಿತಿ ವತಿಯಿಂದ ಏ.೧೩ ರಂದು ಸಂಜೆ ೪ ಗಂಟೆಗೆ ಕಲಾಮಂದಿರದಲ್ಲಿ ಅಭಿನಂದನೆ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆಯ ಉಘೇ ಮಾದೇಗೌಡ್ರುಗೆ ಸಮಾರಂಭ ಏರ್ಪಡಿಸಲಾಗಿದೆ.
ಇಂದು ಕಾರ್ಯಕ್ರಮದ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು.
ಮೈಸೂರಿನ ವಿಜಯನಗರದಲ್ಲಿರುವ ಯೋಗನರಸಿಂಹಸ್ವಾಮಿ ದೇವಾಲಯದ ಮುಂಭಾಗ ಆಶ್ರಯ ಮನೆಯ ರೀತಿಯಲ್ಲಿ ವಿಶೇಷವಾಗಿ ಸಿದ್ಧಗೊಂಡಿದ್ದ ಉಘೇ ಮಾದೇಗೌಡ್ರುಗೆ ಪ್ರಚಾರ ವಾಹನಕ್ಕೆ ಮೈಸೂರು ಮಿತ್ರ,ಸ್ಟಾರ್ ಆಫ್ ಮೈಸೂರ್ ಪತ್ರಿಕೆಗಳ ಸಂಸ್ಥಾಪಕರಾದ ಕೆ.ಬಿ.ಗಣಪತಿ ಅವರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಗಣಪತಿ ಅವರು, ಡಿ.ಮಾದೇಗೌಡ್ರು ತಮ್ಮ ಆದರ್ಶ ಜೀವನದ ಮೂಲಕ ಮೈಸೂರಿನ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.
ಈ ಹಿಂದೆ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆಯವರು ರಾಜಕಾರಣಿಗಳು ಮೌಲ್ಯ ಆಧಾರಿತ ರಾಜಕೀಯ ಮಾಡಬೇಕು ಎಂದು ಹೇಳಿದಂತೆ ಮಾದೇಗೌಡರು ಜೀವನ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಸಿಐಟಿಬಿ ಸದಸ್ಯರಾಗಿದ್ದ ಕೆಂಪೇಗೌಡರು ವಿಶ್ವಮಾನವ ಜೋಡಿ ರಸ್ತೆ ನಿರ್ಮಾಣ ಮಾಡಿದರೆ, ಬಿ.ಎನ್.ಕೆಂಗೇಗೌಡರು ದೇವರಾಜ ಅರಸು ರಸ್ತೆ, ಸರಸ್ವತಿಪುರಂ ನಿರ್ಮಾಣ ಮಾಡಿದ್ದಾರೆ. ಆದರೆ ಮಾದೇಗೌಡರು, ವಿಜಯನಗರ, ರಾಮಕೃಷ್ಣನಗರ, ವಿವೇಕಾನಂದ ನಗರ, ಹೆಬ್ಬಾಳ ಬಡಾವಣೆಯನ್ನು ನಿರ್ಮಾಣ ಮಾಡುವ ಮೂಲಕ ಎಲ್ಲರಿಗಿಂತಲೂ ಹೆಚ್ಚು ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು.
ರಾಮಕೃಷ್ಣನಗರದ ಪರಮಹಂಸ ವೃತ್ತ ನಿರ್ಮಾಣವಾಗಲು ಅವರೇ ಕಾರಣ ಎಂದು ಗಣಪತಿ ಅವರು ತಿಳಿಸಿದರು.
ಕುವೆಂಪುನಗರದ ರಸ್ತೆಗಳಿಗೆ ಕುವೆಂಪು ಅವರ ಕಾವ್ಯಗಳ ಹೆಸರು ನಾಮಕರಣ ಮಾಡಿದ್ದಾರೆ. ಸಿದ್ದಾರ್ಥ ಬಡಾವಣೆಗೂ ಅನೇಕ ಹೆಸರುಗಳನ್ನು ನಾಮಕರಣ ಮಾಡುವ ಮೂಲಕ ಜನರನ್ನು ಒಳ್ಳೆ ಮಾರ್ಗದಲ್ಲಿ ಕೊಂಡಯ್ಯಲು ಪ್ರೇರಣೆಯಾಗಿದೆ. ಇವರ ಸೇವೆ ಮರೆಯಲು ಸಾಧ್ಯವಿಲ್ಲ ಎಂದು ಗಣಪತಿಯವರು ತಿಳಿಸಿದರು.
ಇತ್ತೀಚೆಗೆ ಕರ್ನಾಟಕದ ಎಂಎಲ್ಎ ಒಬ್ಬರು ಹಣದ ಮೂಲಕ ಶ್ರೀಮಂತರಾಗಿದ್ದಾರೆ. ಅದರೆ ಮಾದೇಗೌಡರು ತಮ್ಮ ನೈತಿಕತೆ, ಪ್ರಾಮಾಣಿಕತೆ ಮೂಲಕ ಶ್ರೀಮಂತರಾಗಿದ್ದಾರೆ , ಮಾದೇಗೌಡರು ಹಿಂದೂ ವೇದದಲ್ಲಿ ನಮೋದಿಸಿರುವಂತೆ ೧೨೦ ವರ್ಷ ಪೂರೈಸಲಿ ಎಂದು ಶುಭಕೋರಿದರು.
ಮಾದೇಗೌಡರು ಮಾತನಾಡಿ, ಭರತ ಖಂಡದಲ್ಲಿ ಕಿಂಚಿತ್ತು ಉಪಕಾರ ಮಾಡಿದರೂ ಸ್ಮರಿಸುತ್ತಾರೆ. ಅದರಂತೆ ಜನರು ನಾನು ಮಾಡಿದ ಸಣ್ಣ ಸೇವೆಯನ್ನು ಇಂದಿಗೂ ಸ್ಮರಿಸುತ್ತಾರೆ. ಅದನ್ನು ಕಂಡಾಗ ಬಹಳ ಸಂತೋಷವಾಗುತ್ತದೆ ಎಂದು ಸಂತಸದಿಂದ ತಿಳಿಸಿದರು.
ಗಾಂಧೀಜಿ ಅವರು ಹೇಳಿದಂತೆ ವಸತಿ, ಊಟ, ಶಿಕ್ಷಣ ಮುಖ್ಯವಾಗಿ ದೇಶದ ಪ್ರತಿಯೊಬ್ಬ ನಾಗರೀಕರಿಗೂ ಒದಗಿಸಬೇಕು. ಅದರೆ ಇಂದು ವಸತಿ ನಿರೀಕ್ಷಿತ ಮಟ್ಟದಲ್ಲಿ ಸಿಗುತ್ತಿಲ್ಲ. ಅಂದು ರಾಮಕೃಷ್ಣ ಹೆಗ್ಗಡೆ ಅವರು ನೀಡಿದ ಪ್ರೇರಣೆಯಿಂದ ನಾನು ಅಷ್ಟು ಕೆಲಸ ಮಾಡಲು ಸಾಧ್ಯವಾಯಿತು ಎಂದು ಸ್ಮರಿಸಿದರು.
ನಂತರ ಯೋಗನರಸಿಂಹಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಶ್ರೀನಿವಾಸ್ ಮಾತನಾಡಿ, ಇಂದು ಪ್ರಚಾರ ಮಾಡಲು ಸಾಕಷ್ಟು ಆಯಾಮಗಳಿವೆ, ಆದರೂ ವಿಶೇಷ ವಾಹನ ಮೂಲಕ ಪ್ರಚಾರ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ. ಈ ವಾಹನ ಮೈಸೂರಿನ ಪ್ರತಿಯೊಂದು ಬಡಾವಣೆಗೆ ತಲುಪಬೇಕು. ಶಿಕ್ಷಕರು ವಿದ್ಯಾರ್ಥಿಗಳ ನಡುವೇ ಹೇಗೆ ಬಾಂದವ್ಯವಿದೆಯೊ ಹಾಗೇ ಆಶ್ರಯ ಮನೆಗಳ ಫಲಾನುಭಾವಿಗಳು ಕಾರ್ಯಕ್ರಮಕ್ಕೆ ಬಂದು ಕೃತಜ್ಞತೆ ಸಲ್ಲಿಸಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅಭಿನಂದನಾ ಸಮಿತಿ ಅಧ್ಯಕ್ಷ ಲಯನ್ ಎಂ.ವಿ.ದೇವಿಪ್ರಸಾದ್, ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ, ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ವಿಜಯನಗರ ಮಂಜು, ಕುಮಾರ್ ಗೌಡ, ಕಾಂಗ್ರೆಸ್ ಮುಖಂಡ ಮಂಚೇಗೌಡನ ಕೊಪ್ಪಲು ರವಿ ಮತ್ತಿತರರು ಉಪಸ್ಥಿತರಿದ್ದರು.