ಮೈಸೂರು: ರಸ್ತೆ ಬದಿ ನಿಂತಿದ್ದ ಕಾರಿನ ಕಿಟಕಿಯ ಗಾಜು ಒಡೆದು ಕಳ್ಳರು, 48 ಲಕ್ಷ ರೂ. ಮೌಲ್ಯದ 385 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿದ್ದಾರೆ.
ಬೆಂಗಳೂರಿನ ನಿವಾಸಿ ರಾಜೇಶ್ ಎಂಬವರು ರಾತ್ರಿ ಊಟಕ್ಕೆ ರಸ್ತೆ ಬದಿ ವಾಹನ ನಿಲ್ಲಿಸಿ ತೆರಳಿದ್ದಾಗ ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ.
ಮೈಸೂರು-ಹುಣಸೂರು ಹೆದ್ದಾರಿ ಇಲವಾಲ ಬಳಿ ರಾತ್ರಿ ಈ ಘಟನೆ ನಡೆದಿದೆ.
ಬೆಂಗಳೂರಿನ ಖಾಸಗಿ ಕಂಪೆನಿಯ ಉದ್ಯೋಗಿ ರಾಜೇಶ್ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ವಿರಾಜಪೇಟೆಯಲ್ಲಿನ ಸಂಬಂಧಿಕರ ಮದುವೆಗೆ ಹೋಗಿ ಬರುತ್ತಿದ್ದರು
ಈ ವೇಳೆ ರಾತ್ರಿ ಊಟಕ್ಕಾಗಿ ಇಲವಾಲ ಬಳಿಯ ಹೋಟೆಲ್ ಎದುರು ವಾಹನ ನಿಲ್ಲಿಸಲು ಮುಂದಾಗಿದ್ದಾರೆ. ಹೋಟೆಲ್ ಎದುರು ಪಾರ್ಕಿಂಗ್ಗೆ ಅವಕಾಶ ಸಿಗದ ಕಾರಣ ಹೋಟೆಲ್ನಿಂದ ಸ್ವಲ್ಪ ದೂರದಲ್ಲಿ ರಸ್ತೆ ಬದಿ ವಾಹನ ನಿಲ್ಲಿಸಿ ಹೋಟೆಲ್ಗೆ ತೆರಳಿದ್ದಾರೆ.
ಹೋಟೆಲ್ನಲ್ಲಿ ಊಟ ಮುಗಿಸಿ ವಾಪಸ್ ಬರುವಷ್ಟರಲ್ಲಿ ದುಷ್ಕರ್ಮಿಗಳು ಕಾರಿನ ಬಲಭಾಗದ ಸೀಟಿನ ಗಾಜನ್ನು ಒಡೆದು ಕಾರಿನಲ್ಲಿದ್ದ ಬ್ಯಾಗ್ ಎತ್ತಿಕೊಂಡು ಪರಾರಿಯಾಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಇಲವಾಲ ಠಾಣೆ ಪೊಲೀಸರು, ಕಾರಿನ ಸುತ್ತ ಮುತ್ತ ಇರುವ ಸಿಟಿ ಟಿವಿ ಕ್ಯಾಮೆರಾ ಪರಿಶೀಲಿಸಿದರು.ಆದರೆ ಕತ್ತಲು ಇದ್ದುದ್ದರಿಂದ ಯಾವುದೇ ಸುಳಿವು ಸಿಕ್ಕಿಲ್ಲ.
ಇಲವಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
