ಗಣಪತಿ ಹಬ್ಬದ ಕಾರ್ಯಕ್ರಮಗಳು ಪರಸ್ಪರ ಅನ್ಯೂನತೆಗೆ ಸಹಕಾರಿ:ಗಣೇಶ್

ಮೈಸೂರು, ಸೆ.2: ಮೈಸೂರಿನ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಸಾಂಪ್ರದಾಯಿಕವಾಗಿ ವಿಜೃಂಭಣೆಯಿಂದ ನಾಲ್ಕನೇ ವರ್ಷದ ಗಣೇಶೋತ್ಸವ ನಡೆಯಿತು.‌

ಐದು ದಿನಗಳ ಕಾಲ ನಡೆದ ಈ ಗಣೇಶೋತ್ಸವದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಮಹಿಳೆಯರಿಗೆ, ಪುರುಷರಿಗೆ, ದಂಪತಿಗಳಿಗೆ ಹಾಗೂ ಮಕ್ಕಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗಿದವು.

ರಾಜ್ಯಮಟ್ಟದ ರಂಗೋಲಿ ಕಲಾವಿದೆ ಭಾರತ ವಿಕಾಸ ಪರಿಷತ್ ಖಜಾಂಚಿ ಕೌಸಲ್ಯ ರಂಗೋಲಿ ಸ್ಪರ್ಧೆಗೆ ತೀರ್ಪುಗಾರರಾಗಿ ಭಾಗವಹಿಸಿದ್ದರು.

ರಂಗೋಲಿ ಸ್ಪರ್ಧೆ ಹಾಗೂ ಇತರ ಆಟಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ಆರ್. ಗಣೇಶ್ ಬಹುಮಾನ ವಿತರಣೆ ಮಾಡಿದರು.

ಈ ವೇಳೆ ಅಧ್ಯಕ್ಷರಾದ ಗಣೇಶ್ ಮಾತನಾಡಿ ಗಣಪತಿ ಹಬ್ಬದ ಕಾರ್ಯಕ್ರಮಗಳು ಬಡಾವಣೆಯಲ್ಲಿ ಪರಸ್ಪರ ಅನ್ಯೂನತೆ, ಸಹಕಾರ ಪಡೆಯುವಲ್ಲಿ ನೆರವಾಗಿದೆ ಎಂದು ಹೇಳಿದರು.

ಗಣಪತಿ ಹಬ್ಬದ ಸಾರ್ವಜನಿಕ ಆಚರಣೆಗಳಿಂದ ನಮ್ಮಲ್ಲಿ ಇರುವ ಅಂತರಗಳು ಕಡಿಮೆಯಾಗಿ ಒಗ್ಗಟ್ಟಿನಿಂದ ಬದುಕಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಗಣೇಶ ಮೂರ್ತಿ ವಿಸರ್ಜನೆ ವೇಳೆ ಮೆರವಣಿಗೆ ಮೂಲಕ ಶೋಭಾಯಾತ್ರೆ ಮಾಡಿ ಪ್ರತಿ ಮನೆಯಲ್ಲೂ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ಆರ್. ಗಣೇಶ್, ಉಪಾಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿ ಪುನೀತ್, ನಾಗಭೂಷಣ ಆಚಾರ್, ಮಂಜುನಾಥ್, ಮೋಹನ್ ಕುಮಾರ್, ರಚನಾ ಪಾರ್ಶ್ವನಾಥ್ , ಪೂಜಾ ಎನ್ ಸೇರಿದಂತೆ ಬಡಾವಣೆಯ ನಿವಾಸಿಗಳು ಹಾಜರಿದ್ದರು.