ಮೈಸೂರು: ಹಗಲು ಹೊತ್ತಿನಲ್ಲೇ ಮನೆ ಬೀಗ ಮುರಿದು ಒಳನುಗ್ಗಿದ ಕಳ್ಳರು 80 ಗ್ರಾಂ ಚಿನ್ನ,ಬೆಳ್ಳಿ ಪದಾರ್ಥ ಮತ್ತು 1.40 ಲಕ್ಷ ಹಣ ದೋಚಿರುವ ಘಟನೆ ನಂಜನಗೂಡಿನ ಚಾಮುಂಡಿ ಟೌನ್ ಶಿಪ್ ನಲ್ಲಿ ನಡೆದಿದೆ.
ಖಾಸಗಿ ಕಂಪನಿ ಉದ್ಯೋಗಿ ಪುನೀತ್ ಕುಮಾರ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ.
ಮನೆ ಮಾಲೀಕರು ಬಂದರೂ ಹೆದರದ ಕಳ್ಳರು ಕಾರ್ ನಲ್ಲಿ ಪರಾರಿಯಾಗಿದ್ದಾರೆ.
ಸಿನಿಮೀಯ ಶೈಲಿಯಲ್ಲಿ ನಡೆದ ಕಳ್ಳತನಕ್ಕೆ ಚಾಮುಂಡಿ ಟೌನ್ ಶಿಪ್ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಕಾರಿನಲ್ಲಿ ಬಂದ ಕಳ್ಳರು ಬಾಗಿಲು ಮೀಟಿ ಕೃತ್ಯವೆಸಗಿದ್ದಾರೆ.
ದಂಪತಿಗಳಿಬ್ಬರು ಮನೆ ಮುಂಬಾಗಿಲು ಮತ್ತು ಗೇಟ್ಗೆ ಬೀಗ ಹಾಕಿ, ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು,ಇದನ್ನು ನೋಡಿದ್ದ ಕಳ್ಳರು ಹೊಂಚುಹಾಕಿ ಮನೆಯ ಹಿಂಬದಿಯ ಬಾಗಿಲನ್ನು ಮೀಟಿ ಒಳಗೆ ನುಗ್ಗಿ ಕಳವು ಮಾಡಿದ್ದಾರೆ.
ಒಬ್ಬ ಮನೆ ಮುಂಭಾಗ ಕಾರಿನಲ್ಲಿ ಕುಳಿತಿದ್ದರೆ ಮತ್ತೊಬ್ಬ ಹಿಂಬದಿ ಬಾಗಿಲು ಮುರಿದು ಒಳನುಗ್ಗಿರಬಹುದೆಂದು ಶಂಕಿಸಲಾಗಿದೆ.
ಮನೆಗೆ ವಾಪಸಾಗುವಾಗ ದಂಪತಿ ಮನೆ ಮುಂದೆ ಕಾರು ನಿಂತಿದ್ದು ನೋಡಿದ್ದಾರೆ,ಒಳಗೆ ಹೋಗುತ್ತಿದ್ದಂತೆ, ಕಾರಿನಲ್ಲಿದ್ದ ವ್ಯಕ್ತಿ ಮನೆಯೊಳಗಿದ್ದ ವ್ಯಕ್ತಿಗೆ ಸಿಗ್ನಲ್ ನೀಡಿದ್ದಾನೆ. ಈ ವೇಳೆ ಚಿನ್ನಾಭರಣ ಮತ್ತು ನಗದು ಜೊತೆ ಮನೆಯೊಳಗಿದ್ದ ವ್ಯಕ್ತಿ ಕಾಂಪೌಂಡ್ ಹಾರಿ ಓಡಿದ್ದಾನೆ.
ಅವರ ಕಣ್ಣ ಮುಂದೆಯೆ ಕೃತ್ಯ ನಡೆದರೂ ಏನೂ ಮಾಡಲಾಗಿಲ್ಲ.
ಸ್ಥಳಕ್ಕೆ ಡಿವೈಎಸ್ಪಿ ರಘು, ಎಸ್ಐ ರಘು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಶೀಘ್ರವೇ ಕಳ್ಳರನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.