ಬೆಂಗಳೂರು: ರಾಜ್ಯ ಸರ್ಕಾರ ಶಾಸಕರಿಗೆ ಬಿಡುಗಡೆ ಮಾಡಿರುವ 50 ಕೋಟಿ ಹಣವನ್ನು ಬೆಂಗಳೂರಿನ ಶಾಸಕರುಗಳು ಸ್ಥಳೀಯ ವಾರ್ಡ್ ಸಮಿತಿಗಳ ಶಿಫಾರಸ್ಸಿನ ಅನುಸಾರ ಸರಿಯಾಗಿ ಖರ್ಚು ಮಾಡಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ಈ ಕುರಿತು ಆಮ್ ಆದ್ಮಿ ಪಕ್ಷದ ಬೆಂಗಳೂರು ಸಂಘಟನಾ ಕಾರ್ಯದರ್ಶಿ ಅಶೋಕ್ ಮೃತ್ಯುಂಜಯ ಮಾತನಾಡಿದ್ದು, ಈಗಾಗಲೇ ಬೆಂಗಳೂರಿನಲ್ಲಿ ನಾನಾ ಸಮಸ್ಯೆಗಳಿವೆ. ಬಿಡುಗಡೆಯಾಗಿರುವ ಹಣ ಯಾವ ಮೂಲೆಗೂ ಸಾಲದು ಎಂದು ಹೇಳಿದರು.
ಬಿಬಿಎಂಪಿ ವಿಸರ್ಜನೆಯಾಗಿ 5 ವರ್ಷ ಆಗಿದೆ.ಪ್ರತಿಯೊಂದು ವಾರ್ಡ್ ಗಳಲ್ಲಿಯೂ ನಾಗರಿಕರುಗಳಿಗೆ ವಾಸಿಸಲು ಸಾಧ್ಯವೇ ಆಗದಂತಹ ಜ್ವಲಂತ ಸಮಸ್ಯೆಗಳು ಇವೆ. ಇವುಗಳನ್ನು ವಾರ್ಡ್ ಸಮಿತಿಯ ಸಭೆಯ ಮೂಲಕ ಚರ್ಚಿಸಿ ಆದ್ಯತೆ ಮೂಲಕ ಕೈಗೆತ್ತಿಕೊಳ್ಳಬೇಕು, ಅದನ್ನು ಬಿಟ್ಟು ಬೆಂಗಳೂರಿನ ಶಾಸಕರುಗಳು ತಮ್ಮ ಸಂಬಂಧಿಗಳಿಗೆ ಹಾಗೂ ಬೆಂಬಲಿಗರಿಗೆ ಗುತ್ತಿಗೆ ನೀಡುವ ಮೂಲಕ ಹಣವನ್ನು ಲಪಟಾಯಿಸುವ ತಂತ್ರಗಾರಿಕೆಯಲ್ಲಿ ತೊಡಗಬಾರದೆಂದು ಅಶೋಕ್ ಮೃತ್ಯುಂಜಯ ಆಗ್ರಹಿಸಿದರು.
ಈ ಬಗ್ಗೆ ಸರ್ಕಾರ ಕೆಲವೊಂದು ನಿಬಂಧನೆಗಳನ್ನು ಹೊರಡಿಸಬೇಕೆಂದು ಅವರು ಆಗ್ರಹಿಸಿದರು.