ಸಿನಿಮಾಗಳು ಮನರಂಜನೆಗಷ್ಟೇ ಅಲ್ಲ ಶಿಕ್ಷಣದ ಮಾಧ್ಯಮವಾಗಲಿ:ಬಿ.ಸುರೇಶ್

ಮೈಸೂರು: ಸಿನಿಮಾಗಳು ಮನರಂಜನೆಗಷ್ಟೇ ಸೀಮಿತವಾಗದೆ ಸಾಮಾಜಿಕ ಜವಾಬ್ದಾರಿಯುಳ್ಳ ಶಿಕ್ಷಣದ ಮಾಧ್ಯಮವಾಗಬೇಕು ಎಂದು ಖ್ಯಾತ ನಿರ್ದೇಶಕ ಬಿ.ಸುರೇಶ್ ಸಲಹೆ ನೀಡಿದರು.

ನಗರದ ಮಾನಸಗಂಗೋತ್ರಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಮೈಸೂರು ವಿವಿ ಮತ್ತು ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಸಂಸ್ಥೆ ಸಹಭಾಗಿತ್ವದಲ್ಲಿ ನಡೆದ ಪತ್ರಿಕೋದ್ಯಮದ ಉದಯೋನ್ಮುಖ ಪ್ರವೃತ್ತಿಗಳು ಕುರಿತ ಆರು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಿನಿಮಾ ಕೇವಲ ಮನರಂಜನೆಯಲ್ಲ. ಹಿಂದೆ ಸೀಮಿತ ತಂತ್ರಜ್ಞಾನವಿದ್ದರೂ ಸಮಾಜದ ವಾಸ್ತವಗಳನ್ನು ಪ್ರತಿಬಿಂಬಿಸುವ ಅರ್ಥಪೂರ್ಣ ಸಿನಿಮಾಗಳು ಹೆಚ್ಚಾಗಿ ಬರುತ್ತಿದ್ದವು. ಆದರೆ ಇತ್ತೀಚೆಗೆ ಅಂತಹ ಸಿನಿಮಾಗಳ ಸಂಖ್ಯೆ ವಿರಳ ವಾಗಿದೆ. ಸಿನಿಮಾ ಮನರಂಜನೆ ಜೊತೆಗೆ ಸಮಾಜಕ್ಕೆ ಶಿಕ್ಷಣ ನೀಡುವ ಪರಿಣಾಮಕಾರಿ ಮಾಧ್ಯಮವಾಗಬೇಕು ಎಂದು ಹೇಳಿದರು.

ಇಂದಿನ ಮಾಧ್ಯಮಗಳು ವಿಶ್ವಾಸಾರ್ಹತೆ ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಾಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಬೇಕು ಎಂದು ಸುರೇಶ್ ತಿಳಿಸಿದರು.
ನಂತರ ಗೋಷ್ಠಿಯಲ್ಲಿ ವರದಿಗಾರ ರಾಮ್ ಮಾತನಾಡಿ, ಸುದ್ದಿ ನೀಡುವ ಆತುರದಲ್ಲಿ ನಿಖರತೆಯನ್ನು ಮರೆಯಬಾರದು. ಟಿಆರ್‌ಪಿ ಹಪಾಹಪಿ ಹಾಗೂ ಸಾಮಾಜಿಕ ಮಾಧ್ಯಮಗಳ ಸುಳ್ಳುಸುದ್ದಿಗಳ ಅಬ್ಬರದ ನಡುವೆ ಸತ್ಯನಿಷ್ಠ ವರದಿಗಾರಿಕೆಯೇ ಮಾಧ್ಯಮದ ಅಸ್ತಿತ್ವವನ್ನು ಉಳಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಿಭಾಗದ ಮುಖ್ಯಸ್ಥರಾದ ಪ್ರೊ. ಎನ್. ಮಮತ, ಪ್ರೊ. ನಿರಂಜನ ವಾನಳ್ಳಿ, ಅತಿಥಿ ಉಪನ್ಯಾಸಕರಾದ ಡಾ.ಕುಮಾರಸ್ವಾಮಿ ಹಾಗೂ ಡಾ.ಬಿ.ಸಿ.ಸಂಜಯ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಸಂವಾದದ ಮೂಲಕ ಹಲವು ವಿಷಯಗಳನ್ನು ಚರ್ಚಿಸಿದರು.