ಮೈಸೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಒಡಂಬಡಿಕೆ ಪತ್ರದ ಮೂಲಕ ಮಲೆ ಮಹದೇಶ್ವರ ಬೆಟ್ಟದ ಗುಡ್ಡಗಾಡು ಪ್ರದೇಶದ ಬುಡಕಟ್ಟು ಸಮುದಾಯದ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ನಿರ್ಮಿಸಲು 4.77 ಕೋಟಿ ನೀಡಲಿದೆ.
ಈ ಸಂಬಂಧ ಹೆಚ್ಎಎಲ್ ಮತ್ತು ಸಾಲೂರು ಮಠದ ನಡುವೆ ಒಪ್ಪಂದವಾಗಿದ್ದು, ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿ, ಸಮಾಜವನ್ನು ಉನ್ನತೀಕರಿಸಲು ಬಹಳ ಶ್ರಮವಹಿಸಿ ಈಗಲೂ ಈ ಪ್ರದೇಶದ ಜನಮಾನಸದಲ್ಲಿ ನೆಲೆಸಿರುವ ಪಟ್ಟದ ಶ್ರೀ ಗುರುಸ್ವಾಮಿಯವರ ‘ಪುಣ್ಯ ಸಂಸ್ಮರಣೋತ್ಸವ’ದ ಸಂದರ್ಭದಲ್ಲಿ ಈ ಘೋಷಣೆ ಮಾಡಲಾಗಿದೆ.
ಈ ಒಡಂಬಡಿಕೆ ಪತ್ರಕ್ಕೆ ಅಧಿಕೃತವಾಗಿ ಇದೇ ಶನಿವಾರ ಎಚ್ಎಎಲ್ ಮತ್ತು ಶ್ರೀ ಸಾಲೂರು ಮಠದ ಮಠಾಧೀಶ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರು ಸಹಿ ಹಾಕಿದರು.
ಇಂದಿನ ಆಧುನಿಕ ಡಿಜಿಟಲ್ ಯುಗದಲ್ಲೂ, ಮಲೆ ಮಹದೇಶ್ವರ ಬೆಟ್ಟ ಪ್ರದೇಶದ 18 ಹಳ್ಳಿಗಳು ವಿದ್ಯುತ್ ಮತ್ತು ರಸ್ತೆಯಂತಹ ಮೂಲಭೂತ ಸೌಕರ್ಯಗಳ ಕೊರತೆ ಅನುಭವಿಸುತ್ತಿವೆ.
ಇಲ್ಲಿನ ವಿದ್ಯಾರ್ಥಿಗಳಿಗೆ ಕಾಡಿನ ದಾರಿಯಲ್ಲಿ, ಬೆಟ್ಟಗಳನ್ನೇರಿ, ವಿದ್ಯಾಭ್ಯಾಸಕ್ಕಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾಗುವ ಅನಿವಾರ್ಯತೆ ಇದೆ. ಶೈಕ್ಷಣಿಕ ಅವಕಾಶಗಳ ಕೊರತೆಯಿಂದಾಗಿ ಬಹಳಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನೇ ನಿಲ್ಲಿಸಿದ್ದಾರೆ. ಆದರೆ, ಈಗ ನಿರ್ಮಾಣಗೊಳ್ಳಲಿರುವ ನೂತನ ವಸತಿ ನಿಲಯ ಶಿಕ್ಷಣ ವಂಚಿತ ಸಮುದಾಯಗಳಿಗೆ ಆಶಾಕಿರಣವಾಗಲಿದೆ.
ಮುಂದಿನ ಮೂರು ವರ್ಷಗಳ ಅವಧಿಯಲ್ಲಿ, ಶ್ರೀ ಮಲೆ ಮಹದೇಶ್ವರ ಸ್ವಾಮಿ ಕೃಪಾ ಶಿಕ್ಷಣ ಸಂಸ್ಥೆ ಎಚ್ಎಎಲ್ ಒದಗಿಸುವ ಹಣಕಾಸಿನ ನೆರವನ್ನು ಕಾರ್ಯರೂಪಕ್ಕೆ ತರಲಿದೆ.
ಆದರೆ, ನೂತನ ವಸತಿ ನಿಲಯ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಷ್ಟವನ್ನು ಪರಿಹರಿಸಲಿದ್ದು, ಅವರಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಠದ ವತಿಯಿಂದ ಈಗಾಗಲೇ ವಸತಿ ಶಿಕ್ಷಣ ಒದಗಿಸಲಾಗುತ್ತಿದೆ.ಎಚ್ಎಎಲ್ ಸಂಸ್ಥೆಯ ಉನ್ನತ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಎಚ್ಎಎಲ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ಡಿ ಕೆ ಸುನಿಲ್ ಎಚ್ಎಎಲ್ ತಂಡದ ನೇತೃತ್ವ ವಹಿಸಿದ್ದರು. ಅವರೊಡನೆ, ರವಿ ಕೆ (ಕಾರ್ಯಾಚರಣಾ ನಿರ್ದೇಶಕರು), ಬಿ ಸೇನಾಪತಿ (ಹಣಕಾಸು ನಿರ್ದೇಶಕರು), ಎಂ.ಜಿ ಬಾಲಸುಬ್ರಹ್ಮಣ್ಯ (ಮಾನವ ಸಂಪನ್ಮೂಲ ನಿರ್ದೇಶಕರು) ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಏರೋಸ್ಪೇಸ್ ಕ್ಷೇತ್ರದ ಸಂಸ್ಥೆ ತಳಮಟ್ಟದ ಅಭಿವೃದ್ಧಿಗೆ ಇಳಿಯುವುದರ ಬಗ್ಗೆ ವಿವರಿಸಿ, ಇದು ಅಸಾಧಾರಣ ಬದಲಾವಣೆ ತರಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಸಿಇಒ ಮೊನೋರೋಹಿತ್ ಪೊಲೀಸ್ ವರಿಷ್ಠಾಧಿಕಾರಿ ಕವಿತಾ, ಶಾಸಕ ನರೇಂದ್ರಸ್ವಾಮಿ, ಹನೂರು ಶಾಸಕ ಮಂಜುನಾಥ್, ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ, ಮತ್ತು ತಮಿಳುನಾಡಿನ ಶಾಸಕ ಎ.ಜಿ ವೆಂಕಟಾಚಲಂ (ಅಂಡಿಯೂರು), ಮತ್ತು ಸದಾಶಿವಂ (ಮೆಟ್ಟೂರು)ಕರ್ನಾಟಕ ಸರ್ಕಾರದ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಎ ಇ ಉಪಸ್ಥಿತರಿದ್ದರು.