ಮೈಸೂರು: ಕುರುಬ ಸಮಾಜದ ಜನ ಇಷ್ಟು ವರ್ಷಗಳ ಕಾಲ ತಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಉದ್ದೇಶದಿಂದ ಎಸ್ಟಿಗೆ ಸೇರಿಸುವಂತೆ ಒತ್ತಾಯಿಸುತ್ತಿದ್ದಾರೆಯೇ ಹೊರತು ಯಾರ ತಟ್ಟೆಗೂ ಕೈಹಾಕಿಲ್ಲ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಕುರುಬರನ್ನು ಎಸ್ಟಿಗೆ ಸೇರಿಸುವ ಪ್ರಯತ್ನದಲ್ಲಿ ನಮ್ಮ ತಟ್ಟೆಯಲ್ಲಿರುವ ಅನ್ನ ಕಿತ್ತುಕೊಳ್ಳಲು ಹೋಗಬೇಡಿ ಎಂಬ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸುಬ್ರಹ್ಮಣ್ಯ, ಕುರುಬ ಸಮಾಜಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣ ತೆತ್ತವರು. ಕನಕದಾಸರು 7 ಕೊಪ್ಪರಿಕೆ ಚಿನ್ನ ಸಿಕ್ಕಿದಾಗಲೂ ಮನೆಗೆ ತರದೇ ದಾನ ಮಾಡಿದವರು ಅಂತಹ ಸಮಾಜ ಕುರುಬ ಸಮಾಜ ಎಂದು ಉದಾಹರಣೆ ನೀಡಿದ್ದಾರೆ.
ಕುರುಬ ಸಮಾಜ ಹಿಂದುಳಿದ ವರ್ಗವಾಗಿದ್ದು, ಸಾಕಷ್ಟು ವರ್ಷಗಳಿಂದ ಹಲವು ಸೌಲಭ್ಯಗಳಿಂದ ವಂಚಿತವಾಗಿದೆ. ರಾಜಕೀಯ ಮತ್ತು ಸರ್ಕಾರಿ ಸೌಲಭ್ಯಗಳಿಂದಲೂ ವಂಚಿತವಾಗಿದೆ. ಇದನ್ನ ಸರಿಪಡಿಸಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮುಂದಾಗಿದೆ. ಎಸ್ಟಿ ಸಮುದಾಯಕ್ಕೆ ಸವಲತ್ತು ಕೊಡುವುದು ಸಹ ಸರ್ಕಾರದಿಂದಲೇ,ಇದರಿಂದ ಯಾರಿಗೂ ವಂಚನೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ.
ಕುರುಬರನ್ನ ಎಸ್ಟಿಗೆ ಸೇರಿಸಿಲು ಕೇಂದ್ರ ಸರ್ಕಾರ ನಿರ್ಧರಿಸಿದರೆ ಎಸ್ಟಿಗೆ ನಿಗದಿ ಮಾಡಿರುವ ಮೀಸಲಾತಿಯನ್ನ ದುಪ್ಪಟ್ಟು ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ವಿಪಕ್ಷಗಳ ಕೆಲ ನಾಯಕರೂ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಹಾಗಾಗಿ ಕುರುಬರು ಯಾರ ತಟ್ಟೆಗೂ ಕೈಹಾಕಿಲ್ಲ,ಹಾಕುವುದೂ ಇಲ್ಲ, ಈಗ ನಮ್ಮ ಸಮಾಜಕ್ಕೆ ನಿಗದಿಪಡಿಸಿರುವ ಮೀಸಲಾತಿಯೊಂದಿಗೆ ಎಸ್ಟಿ ಸಮುದಾಯದ ಮೀಸಲಾತಿಯನ್ನೂ ಕೊಡಬೇಕು ಎಂದು ಸುಬ್ರಹ್ಮಣ್ಯ ಮನವಿ ಮಾಡಿದ್ದಾರೆ.
ವಕೀಲ ರಾಕೇಶ್ ಕಿಶೋರ್ನನ್ನ ಗಲ್ಲಿಗೇರಿಸಿ:
ಸುಪ್ರೀಂ ಕೋರ್ಟ್ ಸಿಜೆಐ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ಅಂತಹವರನ್ನ ಗಲ್ಲಿಗೇರಿಸುವ ಅಗತ್ಯವಿದೆ ಎಂದೂ ಸುಬ್ರಹ್ಮಣ್ಯ ಆಗ್ರಹಿಸಿದ್ದಾರೆ.
ಕೋರ್ಟ್ ಹಾಲ್ನಲ್ಲಿ ಸಿಜೆಐ ಮೇಲೆ ಶೂ ಎಸೆದಿದ್ದಲ್ಲದೇ ನನಗೆ ಈ ಬಗ್ಗೆ ಪಶ್ಚಾತಾಪವಾಗಲಿ, ವಿಷಾದವಾಗಲಿ ಇಲ್ಲ ಎಂದು ರಾಕೇಶ್ ಕಿಶೋರ್ ದರ್ಪ ತೋರಿದ್ದಾರೆ,ಇಂತಹವರನ್ನ ಗಲ್ಲಿಗೇರಿಸಬೇಕು ರಾಜ್ಯ ಸರ್ಕಾರ ಕೂಡ ಈ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.