ಸ್ವದೇಶಿ ಸುರಕ್ಷಿತ ಅಭಿಯಾನ:ಕೆಎಂಪಿಕೆ ಟ್ರಸ್ಟ್ ನಿಂದ ಮಣ್ಣಿನ ದೀಪ ವಿತರಣೆ

Spread the love

ಮೈಸೂರು: ದೀಪಾವಳಿ ಹಬ್ಬದ ಅಂಗವಾಗಿ
ಕೆಎಂಪಿಕೆ ಟ್ರಸ್ಟ್ ವತಿಯಿಂದ ಮಣ್ಣಿನ ದೀಪಗಳನ್ನು ವಿತರಿಸಲಾಯಿತು.

ನಗರದ ದೇವರಾಜ ಮಾರುಕಟ್ಟೆ ಮುಂಭಾಗದಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಸ್ವದೇಶಿ ಸುರಕ್ಷಿತ ಅಭಿಯಾನದ ಭಾಗವಾಗಿ ಮಂಗಳವಾರ ಗ್ರಾಹಕರಿಗೆ ಮಣ್ಣಿನ ದೀಪಗಳನ್ನು ವಿತರಿಸಿ ಶುಭ ಕೋರಲಾಯಿತು.

ಈ ವೇಳೆ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಅವರು ಮಾತನಾಡಿ,
ಸ್ವದೇಶಿ ವಸ್ತುಗಳ ಬಳಕೆಯಿಂದ ದೇಶದ ಆರ್ಥಿಕತೆ ಬಲಪಡಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಆಟಿಕೆಗಳು, ಪಟಾಕಿಗಳು, ಗೊಂಬೆಗಳು, ಪೆನ್, ಪೆನ್ಸಿಲ್, ಮೊಬೈಲ್ ಸೇರಿದಂತೆ ಎಲ್ಲ ವಲಯಗಳಲ್ಲೂ ಚೀನಾ ಬ್ರಾಂಡ್‌ಗಳು ಮಾರುಕಟ್ಟೆ ಪ್ರವೇಶಿಸಿವೆ. ಇದರ ಪರಿಣಾಮವಾಗಿ ಚನ್ನಪಟ್ಟಣದ ಗೊಂಬೆ, ಇಳಕಲ್, ಮೊಳಕಾಲ್ಮುರು ರೇಷ್ಮೆ ಸೇರಿದಂತೆ ಸ್ವದೇಶಿ ಕುಶಲ ವಸ್ತುಗಳ ತಯಾರಿಕಾ ಘಟಕಗಳು ಮುಚ್ಚಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಆ ಕಾರಣಕ್ಕಾಗಿ ಈ ದೀಪಾವಳಿಯಲ್ಲಿ ಕುಂಬಾರರು ತಯಾರಿಸಿರುವ ಮಣ್ಣಿನ ದೀಪಗಳನ್ನು ಬಳಸಿ, ಸ್ವದೇಶಿ ಉತ್ಪನ್ನಗಳಿಗೆ ಬೆಂಬಲ ನೀಡೋಣ ಎಂದು ವಿಕ್ರಮ ಅಯ್ಯಂಗಾರ್ ಕರೆ ನೀಡಿದರು.

ಈ ಸಂದರ್ಭದಲ್ಲಿ ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್. ಎನ್. ರಾಜೇಶ್, ಚಾಮರಾಜ ಕ್ಷೇತ್ರದ ಬಿಜೆಪಿ ಸಂಚಾಲಕ ಸಚಿನ್ ನಾಯಕ್, ಮಹಾನ್ ಶ್ರೇಯಸ್, ದುರ್ಗಾ ಪ್ರಸಾದ್, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.