ಕರ್ನಾಟಕ ಸಂಸ್ಕೃತ ವಿವಿ ದತ್ತಿ ನಿಧಿಗೆ ದೇಣಿಗೆ

ಮೈಸೂರು: ಮೈಸೂರಿನ ಸತ್ಯವತಿ ವಿಜಯ ರಾಘವಾಚಾರ್ ಛಾರಿಟಬಲ್ ಟ್ರಸ್ಟ್ ವತಿಯಿಂದ, ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ದತ್ತಿ ನಿಧಿಗೆ ೨.೫ಲಕ್ಷ ರೂಗಳನ್ನು ದೇಣಿಗೆ ರೂಪದಲ್ಲಿ ನೀಡ ಲಾಯಿತು.

ಕನ್ನಡ ಸೇವೆ ದೇವರ ಸೇವೆ ಎಂಬ ಧ್ಯೇಯದೊಂದಿಗೆ ಹಲವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ, ಎಲೆಮರೆ ಕಾಯಿಯಂತೆ ಸಮಾಜಮುಖಿ ಚಟುವಟಿಕೆಗಳಲ್ಲಿ ಕಾರ್ಯಪ್ರವೃತ್ತರಾಗಿರುವ ಡಾ.ಎ.ಪುಷ್ಪ ಅಯ್ಯಂಗಾರ್ ಮತ್ತು ಎ.ವೈದೇಹಿ ಅಯ್ಯಂಗಾರ್ ಸಹೋದರಿಯರ ನೇತೃತ್ವದಲ್ಲಿ ದೇಣಿಗೆಯ ಚೆಕ್ ಅನ್ನು ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಎಸ್.ಅಹಲ್ಯಾ ಅವರಿಗೆ ಮೈಸೂರಿನ ಸರಸ್ವತಿಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಹಸ್ತಾಂತರಿಸಲಾಯಿತು.

ಈ ವೇಳೆ ಡಾ.ಎ.ಪುಷ್ಪ ಅಯ್ಯಂ ಗಾರ್ ಮತ್ತು ಎ.ವೈದೇಹಿ ಅಯ್ಯಂ ಗಾರ್ ಅವರು ಮಾತನಾಡಿ, ಕನ್ನಡ ಸೇವೆಗೆ ನಮ್ಮ ಜೀವನ ಮುಡಿಪಾಗಿದೆ. ಈವರೆಗೂ ನಮ್ಮ ತಂದೆ-ತಾಯಿ ಸತ್ಯವತಿ ಹಾಗೂ ವಿಜಯ ರಾಘ ವಾಚಾರ್ ಅವರ ಹೆಸರಿನಲ್ಲಿ ಇಂತಹ ಸೇವೆಗಳನ್ನು ಮಾಡಿಕೊಂಡು ಬರಲಾ ಗುತ್ತಿದೆ ಎಂದು ತಿಳಿಸಿದರು.

ಆಹಾರ, ಅಕ್ಷರ ಮತ್ತು ಆರೋಗ್ಯಕ್ಕೆ ಉತ್ತೇಜನ ನೀಡುವುದೇ ನಮ್ಮ ಮೂಲ ಉದ್ದೇಶವಾಗಿದ್ದು, ಯಾವುದೇ ಜಾತಿ-ಮತ ಬೇಧವಿಲ್ಲದೇ ಉತ್ತೇಜನ ನೀಡಿ, ಮುಂದಿನ ದಿನಗಳಲ್ಲೂ ಎಲ್ಲಾ ಸಂಘ ಸಂಸ್ಥೆಗಳಿಗೂ ಈ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ನುಡಿದರು.

ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾ ಲಯದ ಉಪಕುಲಪತಿ ಡಾ.ಎಸ್.ಅಹಲ್ಯಾ ಅವರು ಮಾತನಾಡಿ, ಈ ಇಳಿ ವಯಸ್ಸಿನಲ್ಲಿಯೂ ಇವರ ಕನ್ನಡ ಪ್ರೇಮ ಹಾಗೂ ನಿಸ್ವಾರ್ಥ ಸೇವೆ ನಿಜಕ್ಕೂ ಯುವ ಪೀಳಿಗೆಗೆ ಮಾರ್ಗದರ್ಶನವಾಗಿದೆ ಎಂದು ತಿಳಿಸಿದರು.

ಈ ವೇಳೆ ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಮತ್ತಿತರರು ಹಾಜರಿದ್ದರು.