ಬೆಂಗಳೂರು: ಭ್ರಷ್ಟ ಲೋಕಸೇವಾ ಆಯೋಗದ ಅಧಿಕಾರಿಗಳ ನಟ್ಟು ಮತ್ತು ಬೋಲ್ಟ್ ಗಳನ್ನು ಮೊದಲು ಸರಿ ಮಾಡಿ, ಇಲ್ಲದಿದ್ದಲ್ಲಿ ನಾವೆಲ್ಲ ಸೇರಿ ಯಾರ ನಟ್ಟು , ಬೋಲ್ಟ್ ಸರಿ ಮಾಡಬೇಕೆಂದು ತೀರ್ಮಾನಿಸುತ್ತೇವೆ ಎಂದು ಆಪ್ ರಾಜ್ಯಾಧ್ಯಕ್ಷ ಮುಖ್ಯ ಮಂತ್ರಿ ಚಂದ್ರು ಹೇಳಿದರು.
ಲೋಪ ದೋಷದ ಆಯೋಗ, ಲೂಟಿಕೋರರ ಆಯೋಗ, ಅಯೋಗ್ಯರ ಆಯೋಗವಾಗಿ ಮಾರ್ಪಟ್ಟಿರುವ ಲೋಕಸೇವಾ ಆಯೋಗವನ್ನು ಕೂಡಲೇ ರದ್ದು ಮಾಡಬೇಕು,ನೂತನ ಆಯೋಗವನ್ನು ರಚಿಸಬೇಕು,ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಆಟವಾಡಿ ತಪ್ಪು ಮಾಡಿರುವ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು
ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಟಿ.ಎ.ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡಕ್ಕೆ ಆದ್ಯತೆ ನೀಡದೆ ಭಾಷಾಂತರ ಮಾಡಿ, ಕೃಪಾಂಕ ನೀಡುವ ಮೂಲಕ ಜಾರಿಕೊಳ್ಳುತ್ತಿರುವ ಇಂತಹ ಅಧಿಕಾರಿಗಳಿಂದ ಪರೀಕ್ಷೆ ಬರೆಸಿದರು ಅವರು ಸಹ ನಾಲ್ಕೈದು ಬಾರಿ ಫೇಲ್ ಆಗುತ್ತಾರೆ. ಇಂತಹ ಅಯೋಗ್ಯರಿಂದಲೆ ಮತ್ತೆ ತಪ್ಪನ್ನು ಸರಿಪಡಿಸುವ ಮುಖ್ಯಮಂತ್ರಿಗಳ ಮಾತು ನಿಜಕ್ಕೂ ಹಾಸ್ಯಾಸ್ಪದ ಎಂದು ಟೀಕಿಸಿದರು.
ತಕ್ಷಣ ಅಮರಣಾಂತ ಉಪವಾಸ ಕೂತಿರುವ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು.