ಮೈಸೂರು: ಕನ್ನಡ ಪದಗಳನ್ನು ಸರಿಯಾದ ರೀತಿಯಲ್ಲಿ ಬಳಸುವಂತೆ ಜಾಗೃತಿ ಮೂಡಿಸಲು ಅಭಿಯಾನ ಕರ್ನಾಟಕ ಹಿತರಕ್ಷಣಾ ವೇದಿಕೆ ನಗರದಲ್ಲಿ ಅಭಿಯಾನ ಹಮ್ಮಿಕೊಂಡಿದೆ.

ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬದ ಅಂಗವಾಗಿ ಈ ಅಭಿಯಾನವನ್ನು ಕರ್ನಾಟಕ ಹಿತರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದು,ಇಂದು ಡಿ ದೇವರಾಜ ಅರಸು ರಸ್ತೆ, ವಿನೋಬ ರಸ್ತೆ, ಶಿವರಾಂಪೇಟೆ ಸುತ್ತಮುತ್ತ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಗುಲಾಬಿ ಹೂ ನೀಡಿ ಕನ್ನಡ ಪದಗಳನ್ನು ಸರಿಯಾದ ರೀತಿಯಲ್ಲಿ ಬಳಸುವಂತೆ ಮನವಿ ಮಾಡಿ ಜಾಗೃತಿ ಮೂಡಿಸಲಾಯಿತು.

ಇತ್ತೀಚೆಗೆ ಹಬ್ಬಗಳ ಹೆಸರನ್ನು ಅಪಭ್ರಂಶ ಗೊಳಿಸುತ್ತಿರುವ ಉದಾಹರಣೆಗಳು ಹೆಚ್ಚುತ್ತಿವೆ.ಉದಾಹರಣೆಗೆ ದೀಪಾವಳಿಯನ್ನು ದಿವಾಳಿ ಎಂದು ಶುಭ ಕೋರುವುದು, ದಸರಾವನ್ನು ದುಸ್ಸೆರಾ ಎಂದು ತಪ್ಪಾಗಿ ಅನ್ಯ ಭಾಷೆ ಶೈಲಿಯಲ್ಲಿ ಪದಬಳಕೆ ಮಾಡಿ ಶುಭ ಕೋರುವುದು ಸರಿಯಲ್ಲ ಎಂದು ಖಂಡಿಸಲಾಯಿತು.

ಇಂತಹ ಪದ ಬಳಕೆ ಅರ್ಥವೇ ಬೇರೆಯಿರುತ್ತದೆ, ಹಾಗಾಗಿ ನಮ್ಮ ಕರ್ನಾಟಕ ಹಿತ ರಕ್ಷಣಾ ವೇದಿಕೆ ವತಿಯಿಂದ ಎಲ್ಲಾ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಗುಲಾಬಿ ನೀಡಿ ಈ ಮನವಿ ಮಾಡಿಕೊಳ್ಳಲಾಯಿತು.

ಕೆಲವು ಅಂಗಡಿ ಮುಂಗಟ್ಟುಗಳಲ್ಲಿ ದೀಪಾವಳಿಯನ್ನು ದಿವಾಳಿಯೆಂದು ಬರೆದು ಶುಭಕೋರುತ್ತಿರುವದನ್ನು ಖಂಡಿಸಿ ಅವರಿಗೆ ತಿಳಿಹೇಳಿ ಕನ್ನಡವನ್ನು ಸರಿಯಾಗಿ ಪ್ರಯೋಗಿಸಿ ಗೌರವಿಸಿ ಎಂದು ಮನವಿ
ಮಾಡಿದ್ದಾಗಿ ಕರ್ನಾಟಕ ಹಿತ ರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್ ತಿಳಿಸಿದರು.
ಹಬ್ಬದ ದಿನಗಳು ಹತ್ತಿರ ಬರುತ್ತಿದ್ದಂತೆ ಗ್ರಾಹಕರಿಗೆ ಶುಭಾಶಯ ತಿಳಿಸಲು ಹಲವಾರು ಉದ್ದಿಮೆಗಳು ಕನ್ನಡಿಗರಿಗೆ ಉತ್ತರ ಭಾರತದ ಭಾಷೆಯಲ್ಲೇ ದಿವಾಳಿ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಿವೆ.
ಬ್ಯಾಂಕ್ಗಳು ಅದರಲ್ಲೂ ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದ ಬ್ಯಾಂಕ್ಗಳು ದಿವಾಳಿ ಹಬ್ಬದ ಶುಭಾಶಯಗಳು ಎಂದು ಗ್ರಾಹಕರಿಗೆ ತಿಳಿಸುತ್ತಿರುವುದು ನೋಡಿದರೆ ಕನ್ನಡದ ಬಗ್ಗೆ ಇವರಿಗೆಷ್ಟು ಅಭಿಮಾನವಿದೆ, ಮಾಹಿತಿಯಿದೆ ಎಂಬುದರ ಬಗ್ಗೆ ಸಂದೇಹ ವ್ಯಕ್ತವಾಗುತ್ತದೆ ಎಂದು ವಿನಯ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ಕನ್ನಡದಲ್ಲಿ ದಿವಾಳಿ ಎಂದರೆ ಎಲ್ಲವನ್ನೂ ಕಳೆದುಕೊಳ್ಳುವುದು ಎಂದರ್ಥ,ದಿವಾಳಿ ಹಬ್ಬ ಎಂದರೆ ಕನ್ನಡಿಗರು ಏನೆಂದು ತಿಳಿದುಕೊಳ್ಳಬೇಕು ಅದರಲ್ಲೂ ಕನ್ನಡಿಗರು ಹಣ ಇಟ್ಟಿರುವ ಬ್ಯಾಂಕುಗಳೇ ಹೀಗೆ ಹಾರೈಸಿದರೆ ಹೇಗೆ.ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಅಭಿಯಾನದಲ್ಲಿ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಗುರುರಾಜ್ ಶೆಟ್ಟಿ, ಪ್ರಮೋದ್, ನಿತಿನ್, ರವಿಚಂದ್ರ, ವರುಣ ಮಹಾದೇವ್, ಮಂಜುನಾಥ್, ವಿಶಾಲ್, ಮಂಜು, ಫಾಲ್ಕನ್ ಮಾದೇಗೌಡ, ಸೋಮಶೇಖರ್ ಆಚಾರ್ ಮತ್ತಿತರರು ಪಾಲ್ಗೊಂಡಿದ್ದರು.


 
                     
                    