ಕೊಳ್ಳೇಗಾಲ: ಪತ್ರಕರ್ತರು ಹಾಗೂ ಪಟ್ಟಣದ ಭೀಮನಗರದ ಯಜಮಾನರಾದ ಚಿಕ್ಕಮಾಳಿಗೆ ಅವರ ಮೇಲೆ ವ್ಯಕ್ತಿಯೊಬ್ಬ ಕ್ಷಲ್ಲಕ ವಿಚಾರಕ್ಕೆ ಹಲ್ಲೆ ಮಾಡಿ ಕೈ ಮುರಿದಿದ್ದು ಅವರು ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ.
ಪ್ರತಿನಿಧಿ ಪತ್ರಿಕೆಯ ತಾಲ್ಲೂಕು ವರದಿಗಾರಾದ ಚಿಕ್ಕಮಾಳಿಗೆ ಅವರು ಕೊಳ್ಳೇಗಾಲ ಪಟ್ಟಣದ ಭೀಮನಗರದ ದೊಡ್ಡ ಯಜಮಾನರು.

ರಾತ್ರಿ ಸುಮಾರು 8.30 ರಲ್ಲಿ ತಮ್ಮ ಪತ್ನಿಯೊಂದಿಗೆ ಪಟ್ಟಣದ ದೇವಾಂಗ ಪೇಟೆಯ ಹೋಟೆಲ್ ನಲ್ಲಿ ತಿಂಡಿ ತಿನ್ನಲು ಹೋಗಿದ್ದಾರೆ. ತಿಂಡಿ ತಿನ್ನುವಾಗಲೇ ಅಲ್ಲಿಗೆ ಬಂದ ತಾಲೂಕಿನ ಪಾಳ್ಯ ಗ್ರಾಮದ ರವಿನಾಯಕ ಎಂಬಾತ ನಾನು ಭೀಮನಗರದವನು ನನಗೆ ಬೇಗ ತಿಂಡಿ ಕೊಡು ಎಂದು ಹೋಟೆಲ್ ನವರೊಡನೆ ಕ್ಯಾತೆ ತೆಗೆದು ಗಲಾಟೆಗಳಿದ್ದಿದ್ದಾನೆ.
ಹೋಟೆಲ್ ಮಾಲಿಕ ಯಾಕಪ್ಪ ಭೀಮನಗರದ ದೊಡ್ಡ ಯಜಮಾನರು ಇಲ್ಲಿಯೇ ತಿಂಡಿ ತಿನ್ನುತ್ತಾ ಕುಳಿತಿದ್ದಾರೆ. ಸ್ವಲ್ಪ ತಾಳು ಎಂದು ಸಮಾಧಾನ ಮಾಡಲು ಮುಂದಾಗಿದ್ದಾರೆ.
ಆದರೆ ಆತ ಇನ್ನೂ ಗಲಾಟೆ ಹೆಚ್ಚು ಮಾಡಿದ.
ಈ ವೇಳೆ ಪಕ್ಕದಲ್ಲಿ ತಿಂಡಿ ತಿನ್ನುತ್ತಾ ಕುಳಿತಿದ್ದ ಚಿಕ್ಕಮಾಳಿಗೆ ಅವರು ಆತನನ್ನು ನೀನು ಭೀಮ ನಗರದಲ್ಲಿ ಯಾರ ಮಗ ಎಂದು ಪ್ರಶ್ನಿಸಿದ್ದಾರೆ. ನಾನು ಪಾಳ್ಯ ಗ್ರಾಮದ ನಾಯಕ ಸಮುದಾಯದವನು ಎಂದು ಆತ ಹೇಳಿದ್ದಾನೆ. ಇದಕ್ಕೆ ಚಿಕ್ಕಮಾಳಿಗೆ ಅವರು ನಾವು ಹಾಗೂ ನಾಯಕ ಜನಾಂಗದವರು ಅಣ್ಣ ತಮ್ಮಂದಿರಂತೆ ಇದ್ದೇವೆ ನೀನ್ಯಾಕೆ ಭೀಮ ನಗರದ ಹೆಸರು ಹೇಳಿಕೊಂಡು ದಬ್ಬಾಳಿಕೆ ಮಾಡುತ್ತಿದ್ದೀಯಾ ಎಂದಿದ್ದಾರೆ.
ಇದರಿಂದ ಕುಪಿತನಾದ ಆತ ಇದನ್ನು ಕೇಳಲು ನೀನು ಯಾರು ಎಂದು ಹಲ್ಲೆಗೆ ಮುಂದಾಗಿ ಅವರ ಕೈ ಹಿಡಿದು ಬಲವಾಗಿ ತಿರುವಿದ್ದಾನೆ.
ಇದರಿಂದ ಚಿಕ್ಕಮಾಳಿಗೆ ಅವರ ಕೈ ಮುರಿತಕ್ಕೊಳಗಾಗಿದೆ. ಕೂಡಲೇ ಅಲ್ಲಿದ್ದವರು ಜಗಳ ಬಿಡಿಸಿ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆ ಮೂಲಕ ಮುರಿತಕ್ಕೊಳಗಾಗಿದ್ದ ಕೈಯನ್ನು ಸರಿಪಡಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಈ ಸಂಬಂಧ ಪಟ್ಟಣ ಠಾಣೆ ಪಿಎಸ್ಐ ವರ್ಷ ಅವರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ನಂತರ ಜಾಮಿನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ವಿಷಯ ತಿಳಿದ ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪುಸೋಗೆ, ಉಪಾಧ್ಯಕ್ಷ ಡಿ ನಟರಾಜು, ಖಜಾಂಚಿ ರೇಣುಕೇಶ್, ಗಂಗಾಧರ್, ಎನ್ ರಾಜೇಶ್, ರಾಜ್ಯ ಸಮಿತಿ ಸದಸ್ಯ ಗೂಳಿಪುರ ನಂದೀಶ್, ತಾಲೂಕು ಕಾರ್ಯಕರ್ತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ ಸಿದ್ದರಾಜು, ಉಪಾಧ್ಯಕ್ಷ ಎಂ ಮರಿಸ್ವಾಮಿ, ಸದಸ್ಯರಾದ ಎಸ್.ರಾಜಶೇಖರ್, ಪ್ರೇಮ್ ಸಾಗರ್, ವಸಂತ್ ಕುಮಾರ್, ಪಿ. ಜಗದೀಶ್, ಶಂಕರ್, ಶ್ಯಾಮ್ ವೆಲ್, ಹನೂರು ಸಂಘದ ಗೌರವಾಧ್ಯಕ್ಷ ದೇವರಾಜ ನಾಯ್ಡು, ಕಾಮಗೆರೆ ಪ್ರಕಾಶ್ ಸೇರಿದಂತೆ ಅನೇಕರು ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಗೆ ತೆರಳಿ ಚಿಕ್ಕಮಾಳಿಗೆ ಅವರ ಯೋಗ ಕ್ಷೇಮ ವಿಚಾರಿಸಿ ಕುಟುಂಬದವರಿಗೆ ನೈತಿಕ ಧೈರ್ಯ ತುಂಬಿದರು.
ನಂತರ ಕೊಳ್ಳೇಗಾಲ ಡಿ ವೈ ಎಸ್ ಪಿ ಕಚೇರಿಗೆ ತೆರಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಡಿ ವೈ ಎಸ್ ಪಿ ಧರ್ಮೇಂದ್ರ ಅವರಿಗೆ ಮನವಿ ಮಾಡಲಾಯಿತು. ಇದಕ್ಕೆ ಪ್ರತಿಕ್ರಿಸಿದ ಧರ್ಮೇಂದ್ರ ರವರು ಗಾಯಾಳುವಿನ ಹೇಳಿಕೆ ಹಾಗೂ ವೈದ್ಯರ ಪ್ರಮಾಣ ಪತ್ರ ಪಡೆದು ಆರೋಪಿಯನ್ನು ಬಂಧಿಸಲಾಗುವುದು ಎಂದು ತಿಳಿಸಿದರು.
ಮಾಜಿ ಶಾಸಕ ಎನ್. ಮಹೇಶ್ ಅವರು ಕೂಡಾ ಆಸ್ಪತ್ರೆಗೆ ತೆರಳಿ ಚಿಕ್ಕಮಾಳಿಗೆ ಅವರ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದರು.