ಮೈಸೂರು: 2036ನೇ ಒಲಂಪಿಕ್ಸ್ ನಲ್ಲಿ ಭಾರತವು ಹೆಚ್ಚು ಪದಕಗಳನ್ನು ಗೆಲ್ಲುವ ದೇಶವನ್ನಾಗಿ ಮಾಡಲು ತರಬೇತಿ ನೀಡಿ ಭಾರತವನ್ನು ಕ್ರೀಡಾ ದೇಶವನ್ನಾಗಿ ಮಾಡುವ ಪಣ ತೊಡಬೇಕು ಎಂದು ಮೇಜರ್ ಧ್ಯಾನಚಂದ್ ಪ್ರಶಸ್ತಿ ಪುರಸ್ಕೃತೆ ತೃಪ್ತಿ ಮುರುಗುಂಡೆ ಹೇಳಿದರು.
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನವೆಂಬರ್ 10ರಂದು 36ನೇ ಅಖಿಲ ಭಾರತ ಅಂಚೆ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು ಭಾರತದಲ್ಲಿನ ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಬೆಂಬಲದ ಅಗತ್ಯವಿರುವುದನ್ನು ಉಲ್ಲೇಖಿಸಿದರು.
ಎಲ್ಲಾ ವಯೋಮಾನದ ಜನರು ಪಂದ್ಯಾವಳಿಗಳಲ್ಲಿ ಒಟ್ಟುಗೂಡುವುದು ಅಪರೂಪದ ಸಂದರ್ಭಗಳಲ್ಲಿ ಒಂದಾಗಿದ್ದು, ಗೆಲುವು ಸುಲಭವಾಗಿ ಸಿಗುವುದಿಲ್ಲ ಹಂತವಾಗಿ ಎಲ್ಲಾ ಸವಾಲನ್ನು ಎದುರಿಸಿದಾಗ ಗೆಲುವಿನ ಖುಷಿ ಸಿಗಲಿದೆ ಎಂದು ಅವರ ಸ್ವಂತ ಅನುಭವಗಳನ್ನು ಹೇಳಿದರು.
ದೇಶದ ಜನರ ಮನಸ್ಥಿತಿಯನ್ನು ಬದಲಾಯಿಸುವ ಅಗತ್ಯವಿದೆ, ಭಾರತವನ್ನು ನಿಜವಾದ ಕ್ರೀಡಾ ರಾಷ್ಟ್ರವಾಗಿಸಲು ಪಾಲಕರು ತಮ್ಮ ಮಕ್ಕಳನ್ನು ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಕ್ರೀಡಾ ಸಮುದಾಯವನ್ನು ಸಂಪರ್ಕಿಸಲು ಮತ್ತು ಪ್ರೇರೇಪಿಸಲು ಅಂಚೆ ಮಾಧ್ಯಮವು ಸೂಕ್ತ ಸಾಧನವಾಗಿದೆ ಎಂದು ಅವರು ಅಂಚೆ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚೀಫ್ ಪೋಸ್ಟ್ ಮಾಸ್ಟರ್ ಎಸ್ ರಾಜೇಂದ್ರ ಕುಮಾರ್ ಮಾತನಾಡಿ, ಅಂಚೆ ಇಲಾಖೆಯು ಕೇವಲ ಈ ಪಂದ್ಯಾವಳಿಯನ್ನು ಮಾತ್ರವಲ್ಲದೆ ಈ ವಾರ ನಡೆಯುತ್ತಿರುವ ಮಹಿಳಾ ಬೈಕ್ ರ್ಯಾಲಿಗೂ ಸಾಥ್ ನೀಡಿದೆ ಎಂದು ತಿಳಿಸಿದರು
ಅಂಚೆ ಪತ್ರ ಸ್ಪರ್ಧೆಯು ಡಿಸೆಂಬರ್ ಕೊನೆಯ ವಾರದ ತನಕ ನಡೆಯುತ್ತಿದ್ದು ಆಸಕ್ತರು ಪತ್ರ ಬರೆಯಬಹುದು ಎಂದು ಹೇಳಿದರು.
ದೇಶದ 21 ರಾಜ್ಯಗಳಿಂದ ಬಂದಿರುವ ಎಲ್ಲಾ ಕ್ರೀಡಾಪಟುಗಳಿಗೆ ಅವರು ಶುಭ ಕೋರಿದರು.
ಬೆಂಗಳೂರು ಎಚ್ ಕ್ಯೂ ರಿಜನಲ್ ಪೋಸ್ಟ್ ಮಾಸ್ಟರ್ ಜನರಲ್ ಎಲ್ ಕೆ ಡ್ಯಾಶ್ , ಉತ್ತರ ಕರ್ನಾಟಕ ಅಂಚೆ ವಲಯದ ಪೋಸ್ಟರ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲ್ ಕುಮಾರ್, ದಕ್ಷಿಣ ಕರ್ನಾಟಕ ಅಂಚೆ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಚಂದ್ರಶೇಖರ್ ಕಾಕುಮನು, ದಕ್ಷಿಣ ಕರ್ನಾಟಕ ಅಂಚೆ ವಲಯದ ನಿರ್ದೇಶಕ ಸಂದೇಶ್ ಮಹದೇವಪ್ಪ ಹಾಗೂ ಮೈಸೂರು ವಿಭಾಗದ ಅಂಚೆಯ ಎಲ್ಲಾ ಸಿಬ್ಬಂದಿ ಉಪಸ್ಥಿತರಿದ್ದರು.