ಮೈಸೂರು: ಅರಣ್ಯ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳು ಹಾಗೂ ಒತ್ತುವರಿಗಳನ್ನು ತಡೆಯಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಮೈಸೂರು ಭಾಗದಲ್ಲಿ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಲು ಕಾಡು ನಾಶ ಕಾರಣ, ಅಕ್ರಮ ಒತ್ತುವರಿ ಸಂಬಂಧ ಜನರ ಆಕ್ರೋಶ ಹೆಚ್ಚಾಗುವ ಮೊದಲು ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅರಣ್ಯ ವ್ಯಾಪ್ತಿಯಲ್ಲಿರುವ ರೆಸಾರ್ಟ್ಗಳಲ್ಲಿ ರಾತ್ರಿ ವೇಳೆ ಫೈರ್ ಕ್ಯಾಂಪ್ ಹಾಕುತ್ತಾರೆ. ಇದರಿಂದ ಪ್ರಾಣಿಗಳಿಗೆ ತುಂಬಾ ತೊಂದರೆ ಆಗುತ್ತಿದೆ. ಭಯದಿಂದಲೇ ಕಾಡುಪ್ರಾಣಿಗಳು ನಾಡಿನತ್ತ ಬರುತ್ತಿವೆ. ಇದಕ್ಕೆ ಅರಣ್ಯ ಇಲಾಖೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಎಲೆಕ್ಷನ್ ಕಮಿಷನರ್ ರಾಜಕೀಯ ಪುಡಾರಿ ರೀತಿ ವರ್ತನೆ ಮಾಡುತ್ತಿದ್ದಾರೆ ಎಂಬ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀವತ್ಸ, ಯತೀಂದ್ರ ಹೇಳಿಕೆಯನ್ನು ಖಂಡಿಸುತ್ತೇನೆ. ಯಾವ ಯಾವ ಸಮಯದಲ್ಲಿ ಸಂವಿಧಾನ ದುರುಪಯೋಗ ಆಯ್ತು ಎಂಬುದನ್ನು ಅವರೇ ಅರಿತುಕೊಳ್ಳಲಿ ಎಂದು ಟಾಂಗ್ ನೀಡಿದರು.
ನೀವು ಚುನಾವಣೆಯಲ್ಲಿ ಗೆದ್ದರೆ ಮತಗಳ್ಳತನ ಇಲ್ಲ. ಸೋತರೆ ಮಾತ್ರ ಮತಗಳ್ಳತನಾನ? ಈ ಬಗ್ಗೆ ನೀವೇ ಪರಾಮರ್ಶೆ ಮಾಡಬೇಕು ಎಂದು ಹೇಳಿದರು.
ಆರ್ಎಸ್ಎಸ್ ಬಗ್ಗೆ ಪ್ರಿಯಾಂಕ್ ಖರ್ಗೆ ಪದೇ ಪದೇ ಹೇಳಿಕೆ ಕೊಡುತ್ತಿದ್ದಾರೆ,ಅವರಿಗೆ ಯಾಕೆ ಅಷ್ಟು ಕೋಪ ಎಂದು ಶಾಸಕರು ಪ್ರಶ್ನಿಸಿದರು.
ಆರ್ಎಸ್ಎಸ್ ಚಟುವಟಿಕೆ ನಿಷೇಧಕ್ಕೆ ಸರ್ಕಾರ ಮುಂದಾಗಿದೆ. ಇಷ್ಟಾದರೂ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಒಂದೇ ಒಂದು ಮಾತು ಆಡಿಲ್ಲ. ತಮ್ಮ ಮಗ ಎಂಬ ಕಾರಣಕ್ಕೆ ಹೇಳಿಕೆ ಕೊಡುತ್ತಿಲ್ಲವೇ? ಆರ್ಎಸ್ಎಸ್ ಚಟುವಟಿಕೆ ಬಗ್ಗೆ ನಿಮಗೆ ಗೊತ್ತಿಲ್ಲವೆ ಎಂದು ಕಾರವಾಗಿ ಪ್ರಶ್ನೆ ಮಾಡಿದರು.
ಈಗಿನ ಪರಿಸ್ಥಿತಿ ನೋಡಿದ್ರೆ ಖಂಡಿತ ಕ್ರಾಂತಿ ಆಗುತ್ತದೆ,ಅಂತಹ ಬೆಳವಣಿಗೆಗಳು ಕಾಂಗ್ರೆಸ್ ನಲ್ಲಿ ಕಾಣುತ್ತಿವೆ, ಸಿಎಂ ಬದಲಾವಣೆ ಆಗುವಂತ ಕಾಣುತ್ತಿದೆ, ನವೆಂಬರ್ ಕ್ರಾಂತಿ ಆಗೇ ಆಗುತ್ತದೆ ಎಂದು ಶ್ರೀವತ್ಸ ಹೇಳಿದರು.

