ಮೈಸೂರು:ಮಂಚೇಗೌಡನ ಕೊಪ್ಪಲು ಸರ್ಕಾರಿ ಶಾಲೆಯಲ್ಲಿ ಜೇಡಿಮಣ್ಣಿನಿಂದ ಪರಿಸರ ಸ್ನೇಹಿ ಜೀವ ಗಣೇಶ ಮೂರ್ತಿಗಳನ್ನು ತಯಾರಿಸುವಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.
ಶ್ರೀ ದುರ್ಗಾ ಫೌಂಡೇಶನ್ ಮಂಚೇಗೌಡನ ಕೊಪ್ಪಳಿನಲ್ಲಿರುವ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗಾಗಿ ಜೇಡಿಮಣ್ಣಿನಿಂದ ಪರಿಸರ ಸ್ನೇಹಿ ಜೀವ ಗಣೇಶ ಮೂರ್ತಿ ತಯಾರಿಸುವ ಶಿಬಿರ ಹಮ್ಮಿಕೊಂಡಿತ್ತು.
ಶಿಬಿರದಲ್ಲಿ 100ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ವಿಭಿನ್ನ ಶೈಲಿಯ ಗಣಪತಿ ಮೂರ್ತಿ ತಯಾರಿಸಿ, ಸಂಭ್ರಮಿಸಿದರು. ಮೂರ್ತಿಯೊಳಗೆ ಬೀಜ ಇಟ್ಟು ಜೀವ ಗಣಪತಿ ತಯಾರಿಸಿ ಖುಷಿಪಟ್ಟು ಮನೆಗಳಿಗೆ ತೆಗೆದುಕೊಂಡು ಹೋದರು.
ಈ ವೇಳೆ ಕಲಾವಿದರಾದ ಆರ್.ಲಕ್ಷೀ ಚಲಪತಿ ಮಾತನಾಡಿ,ಭಗವಂತನಿಗೆ ಭಕ್ತಿಯಿಂದ ನೆರವೇರಿಸುವ ಪೂಜೆ ಮುಖ್ಯವೇ ಹೊರತು ವಿಜೃಂಭಣೆ, ಆಡಂಬರವಲ್ಲ, ರಾಸಾಯನಿಕ ವಸ್ತುಗಳಿಂದ ತಯಾರಿಸಿದ ಗಣೇಶ ಮೂರ್ತಿಗಳು ಪರಿಸರಕ್ಕೆ ಹಾನಿಕಾರಕ ಜತೆಗೆ ಜಲಮಾಲಿನ್ಯ ಉಂಟಾಗುತ್ತಿದೆ, ಜೀವ ಜಂತುಗಳಿಗೂ ಹಾನಿ ಸಂಭವಿಸುತ್ತಿದೆ. ಶುದ್ಧ ಜೇಡಿಮಣ್ಣಿನಿಂದ ತಯಾರಿಸಿದ ಚಿಕ್ಕ ಗಣೇಶ ಮೂರ್ತಿಗಳನ್ನು ಇಟ್ಟು ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು ಎಂದು ಮಕ್ಕಳಿಗೆ ತಿಳಿಹೇಳಿದರು.
ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷರಾದ ಮಂಜೇಗೌಡನ ಕೊಪ್ಪಲು ರವಿ ಮಾತನಾಡಿ ಶಾಸ್ತ್ರಗಳ ಪ್ರಕಾರ ಕಲ್ಲು,ಮಣ್ಣು ಮತ್ತು ಲೋಹ ದಿಂದ ವಿಗ್ರಹವನ್ನು ತಯಾರಿಸ ಬೇಕು, ಇವುಗಳಲ್ಲಿ ಮಾತ್ರ ದೈವತ್ವದ ಶಕ್ತಿ ಇರುತ್ತದೆ, ಪಿಒಪಿಯಿಂದ ತಯಾರಿಸಿದ ಗಣೇಶಮೂರ್ತಿಗಳಲ್ಲಿ ದೈವಶಕ್ತಿ ಇರುವುದಿಲ್ಲ ಕೇವಲ ಪ್ರದರ್ಶನಕಷ್ಟೇ ಸೀಮಿತ ಎಂದು ತಿಳಿಸಿದರು.
ಶ್ರೀ ದುರ್ಗಾಪೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ಮಾತನಾಡಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಪೂಜಿಸಿ ಪರಿಸರ ರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಪರಿಸರ ಉಳಿಸಬೇಕಾದ್ದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಸಂತೋಷ್ ಕಿರಾಲು, ಅಶ್ವಿನಿ ಗೌಡ, ಶಾಲೆಯ ಮುಖ್ಯೋಪಾಧ್ಯಾಯರಾದ ಶುಭ, ಹಾಗೂ ಶಿಕ್ಷಕರು ಹಾಜರಿದ್ದರು.