ಹುಣಸೂರು: ಹುಣಸೂರಿನ ಹೊಸೂರಿನಿಂದ ರತ್ನಪುರಿಗೆ ಹೋಗುವ ರಸ್ತೆ ಕಾಳೇನಹಳ್ಳಿ ಬಳಿ ಸುಮಾರು ಒಂದು ಕಿಲೋಮೀಟರ್ ನಷ್ಟು ಕಿತ್ತು ಹೋಗಿ ಕೆಸರಿನ ರಾಡಿ ಆಗಿಬಿಟ್ಟಿದ್ದು ಈ ಹಳ್ಳಿಗಳ ಜನರ ಪಾಡು ಹೇಳಲಾಗುತ್ತಿಲ್ಲ.
ಈ ಭಾಗದಲ್ಲಿರುವುದೆಲ್ಲ ಕುರುಬರ ಹಾಡಿಗಳೇ ಹೆಚ್ಚು,ಈ ಹಾಡಿಯ ಮಕ್ಕಳು ಮತ್ತು ಕಾಳೇನಹಳ್ಳಿ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಎದ್ದು ಬಿದ್ದು ಶಾಲೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸುಮಾರು ಎರಡು ವರ್ಷಗಳಿಂದ ಈ ರಸ್ತೆಯ ಕಥೆ ಇದೇ ರೀತಿ ಇದೆ.ಆದರೆ ಮೂರು ತಿಂಗಳ ಹಿಂದೆ ತೇಪೆ ಕೆಲಸ ಮಾಡಿ ಹೋಗಿದ್ದಾರೆ. ಅದು ಕೂಡ ಕಳಪೆಯಾಗಿದೆ ಹಾಗಾಗಿ ರಸ್ತೆಯಲ್ಲಿ ಜಲ್ಲಿ ಕಲ್ಲುಗಳು ಮೇಲೆ ಎದ್ದಿವೆ.ಇದ್ದ ರಸ್ತೆ ಜೂಡಾ ಹಾಳಾಗಿದೆ. ಜನರ ತೆರಿಗೆ ದುಡ್ಡು ಈ ರೀತಿ ಸುಖ ಸುಮ್ಮನೆ ಹಾಳಾಗಿ ಹೋಗುತ್ತಿದೆ ಎಂದು ಹಾಡಿಗಳ ಜನರು ತೀವ್ರ ಬೇಸರ ವ್ಯಕ್ತಪಡಿಸುತ್ತಾರೆ
ಈಗ ಪ್ರತಿದಿನ ಮಳೆ ಬರುತ್ತಿರುವುದರಿಂದ ರಸ್ತೆ ನಿಜಕ್ಕೂ ಹೆಸರು ಗದ್ದೆಯಂತೆಯೇ ಮಾರ್ಪಾಡಾಗಿದೆ.
ಇದೇ ಕೆಟ್ಟ ರಸ್ತೆಯಲ್ಲಿ ಹಾಡಿಯ ಜನರು ಮತ್ತು ಹೊಸೂರಿನಿಂದ ರತ್ನಪುರಿಗೆ ಹೋಗುವವರು ರತ್ನಪುರಿ ಯಿಂದ ಹೊಸೂರಿಗೆ ಬರುವವರು ಮತ್ತು ಹುಣಸೂರಿನಿಂದ ಈ ಕಡೆ ಬರುವ ಜನರು ಹಾಗೂ ಕಾಳೇನಹಳ್ಳಿ ಜನ ಕಷ್ಟಪಟ್ಟು ಬರುತ್ತಿದ್ದಾರೆ.
ಇನ್ನು ವಾಹನ ಸವಾರರ ಗೋಳನ್ನಂತೂ ಕೇಳುವಂತೆಯೇ ಇಲ್ಲ. ಗುಂಡಿಗಳಲ್ಲಿ ನೀರು ತುಂಬಿಕೊಂಡು ರಾತ್ರಿ ವೇಳೆ ಗುಂಡಿ ಯಾವುದು ರಸ್ತೆ ಯಾವುದು ಎಂಬುದು ಕೂಡ ಕಾಣಿಸದಂತಾಗಿದೆ.
ಹಾಗಾಗಿ ಅಪಘಾತಗಳು ಹೆಚ್ಚಾಗಿವೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಕಿಡಿಕಾರಿದ್ದಾರೆ.
ಕೂಡಲೇ ಹುಣಸೂರು – ರತ್ನಪರಿ ರಸ್ತೆಯನ್ನು ಉತ್ತಮಪಡಿಸಬೇಕು, ರಸ್ತೆಗೆ ಜಲ್ಲಿ ಮಣ್ಣು ತುಂಬಿ ಸರಿಯಾದ ಡಾಂಬರೀಕರಣ ಮಾಡಬೇಕು ಎಂದು ಕಾಳೇನಹಳ್ಳಿ ಹಾಗೂ ಹಾಡಿ ಜನರ ಪರವಾಗಿ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಚಲುವರಾಜು ಆಗ್ರಹಿಸಿದ್ದಾರೆ.
